Monday 8 January 2024

* ಭಾಗ 3 - ವೇದವು ಕಾವ್ಯವಲ್ಲವೆ? * (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ವಾಲ್ಮೀಕಿಮಹರ್ಷಿ ಯಾವ ಕಾಲದಲ್ಲಿದ್ದವನು, ಯಾವ ಪ್ರದೇಶದವನು ಮೊದಲಾದ ಜೀವನವೃತ್ತಾಂತವಿವರಗಳನ್ನು ನಿಷ್ಕರ್ಷೆಯಾಗಿ ತಿಳಿಯಲು ಆಧಾರಗಳಿಲ್ಲ. ಶ್ರೀರಾಮಾವತಾರವು ತ್ರೇತಾಯುಗದಲ್ಲಿ ಆದದ್ದು. ವಾಲ್ಮೀಕಿಯು ರಾಮಸಮಕಾಲಿಕನೆಂದು ರಾಮಾಯಣದಿಂದ ಗೊತ್ತಾಗುತ್ತದೆ.

ಶ್ರೀರಾಮಾವತಾರಕಾಲದಿಂದ ಇಂದಿನವರೆಗೆ–ಎಂದರೆ ಕ್ರಿಸ್ತಶಕ ೧೯೬೬ಕ್ಕೆ ಸರಿಯಾದ ವಿಶ್ವಾವಸು ಸಂವತ್ಸರದ ವೇಳೆಗೆ–ಎಂಟು ಲಕ್ಷ ತೊಂಬತ್ತೊಂಬತ್ತು ಸಾವಿರದ ಅರುವತ್ತಾರು ವರ್ಷಗಳಷ್ಟು ಕಾಲ ಆಗಿದೆಯೆಂದು ನಮ್ಮ ಸಾಂಪ್ರದಾಯಿಕವಾದ ಲೆಕ್ಕ. ಅದು ಹೀಗೆ:

ತ್ರೇತಾಯುಗದ ಅವಶಿಷ್ಟ ೩೦, ೦೦೦ ವರ್ಷ
ದ್ವಾಪರಯುಗ ೮, ೬೪, ೦೦೦ ವರ್ಷ 
ಕಲಿಯುಗ ೫, ೦೬೬ ವರ್ಷ 
ಒಟ್ಟು ೮, ೯೯, ೦೬೬ ವರ್ಷ

ಪಾಶ್ಚಾತ್ಯ ಶೋಧಕರು ರಾಮಾಯಣ ಅಷ್ಟು ಪ್ರಾಚೀನವೆಂದು ಒಪ್ಪಲಾರರು. ತಮ್ಮ ಸಂಸ್ಕೃತಿ ನಾಗರೀಕತೆಗಳಿಗಿಂತ ಇಂಡಿಯದ್ದು ಬಹು ಪುರಾತನವೆನ್ನಲು ಅವರಿಗೆ ಮನಸ್ಸು ಬಾರದು. ಅವರು ರಾಮಾಯಣ ಮಹಾಭಾರತ ಗ್ರಂಥಗಳ ರಚನೆಯ ಕಾಲವು ಕ್ರಿಸ್ತಪೂರ್ವದ ೫೦೦ರಿಂದ ಕ್ರಿಸ್ತಾನಂತರದ ೨೦೦ರ ಒಳಗೆ ಎಂದು ಅಂದಾಜು ಮಾಡಿದ್ದಾರೆ. ಈ ಏಳು ಶತಾಬ್ದಗಳಲ್ಲಿ ರಾಮಾಯಣದ ರಚನೆ ಮೊದಲು ಆಯಿತೆಂದೂ ಭಾರತವು ಆಮೇಲಿನದೆಂದೂ ಒಂದು ಊಹೆ. ವಿಂಟರ್‍ನಿಟ್ಸ್‍ (Winternitz) ಪಂಡಿತನು ಹೀಗೆ ಹೇಳಿದ್ದಾನೆ:

“It is probable that the Ramayana had its present extent and contents as early as towards the close of the second century A.D... It is probable that the original Ramayana was composed in the third century B.C. by Valmiki on the basis of ancient ballads.”

ಏನೋ ಇದ್ದೀತು ಇರಲಾರದುಗಳ ಅರೆಮರೆಯ ಅಂದಾಜು ಇದು. ಇದನ್ನು ನಾವು ಒಪ್ಪಿಕೊಳ್ಳಲೇಬೆಕೆಂದೆನ್ನಿಸುವಷ್ಟರ ಪ್ರಮಾಣ ಕಾರಣಗಳೇನೂ ಇಲ್ಲ. ಪ್ರಶ್ನೆ ಎಷ್ಟು ಅಸಾಧ್ಯವೆಂಬುದನ್ನು ತೋರಿಸಲು ಅದನ್ನಿಲ್ಲಿ ಪ್ರಸ್ತಾವಿಸಿದ್ದಾಗಿದೆ. ನಮ್ಮ ದೇಶದ ಪೂರ್ವಚರಿತ್ರೆಯ ಆಧಾರಸಾಮಾಗ್ರಿ ಎಷ್ಟೊ ಭಾಗ ಭೂಮಿಯಲ್ಲೂ ಸಮುದ್ರದಲ್ಲೂ ಆಳವಾಗಿ ಮುಚ್ಚಿಹೋಗಿವೆ. ಅದನ್ನೆಲ್ಲ ಎತ್ತಿ ತೆಗೆದು ಶೋಧಿಸುವ ಕೆಲಸ ಈಚೀಚೆಗೆ ಕೊಂಚಕೊಂಚ ನಡೆದಿದೆ. ಹರಪ್ಪ ಮೊಹೆಂಜೊದಾರೋ ಪ್ರದೇಶಗಳ ಪೂರ್ವಾವಶೇಷಗಳು ಕ್ರಿಸ್ತಪೂರ್ವ ೩೦೦೦ಕ್ಕೆ ಹಿಂದೆ ಹೋಗುತ್ತವೆ. ಇಂಥ ಶೋಧನೆ ನಡೆದಂತೆಲ್ಲ ನಮ್ಮ ನಾಗರಿಕತೆಯ ಪ್ರಾಚೀನತೆ ಹೆಚ್ಚೆನಿಸುವ ಸೂಚನೆ ಬರುತ್ತದೆ. ಕಾದು ನೋಡೋಣ.

ವಾಲ್ಮೀಕಿಯ ಆಶ್ರಮವಿದ್ದದ್ದು ತಮಸಾನದಿಯ ಬಳಿ, ಗಂಗಾನದಿಯ ಪ್ರದೇಶದಲ್ಲಿ ಎಂದು ರಾಮಾಯಣದಿಂದಲೇ ಗೊತ್ತಾಗುತ್ತದೆ.

ಆತ ಪ್ರಚೇತಸನೆಂಬ ಋಷಿಯ ವಂಶದಲ್ಲಿ ಹುಟ್ಟಿದವನಾದದ್ದರಿಂದ ಪ್ರಾಚೇತಸನೆಂದು ಹೆಸರು ಪಡೆದಿದ್ದನು. ಆ ಋಷಿಯು ಸೃಷ್ಟಿಕರ್ತಬ್ರಹ್ಮನಿಂದ ಮೊದಲು ಉತ್ಪನ್ನರಾದ ಹತ್ತುಮಂದಿ ಋಷಿಗಳಲ್ಲೊಬ್ಬ.

ಪತೀನ್‍ ಪ್ರಜಾನಾಮಸೃಜಂ ಮಹರ್ಷೀನಾದಿತೋ ದಶ ॥
ಮರೀಚಿಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್‍ ।
ಪ್ರಚೇತಸಂ ವಸಿಷ್ಠಂ ಚ ಭೃಗುಂ ನಾರದಮೇವ ಚ ॥ (ಮನುಸ್ಮೃತಿ: ೧–೩೫)

ಹರಿಕಥೆ ಮಾಡುವವರು–ಬಹುಶಃ ಕನ್ನಡಿಗರು–ವಾಲ್ಮೀಕಿಯನ್ನು ಕುರಿತು ಕಟ್ಟಿರುವ ಒಂದು ಕಥೆ ಪ್ರಚಾರದಲ್ಲಿದೆ. ವಾಲ್ಮೀಕಿ ಹೇಗೋ ಕಳ್ಳರ ಸಹವಾಸಕ್ಕೆ ಬಿದ್ದು, ದಾರಿ ಹೋಕರನ್ನು ಹಿಡಿದು ಬಡಿದು ಸುಲಿಗೆ ಮಾಡಿ ಹೊಟ್ಟೆ ಹೊರಕೊಳ್ಳುತ್ತಿದ್ದ. ಒಂದು ದಿನ ನಾರದರು ಅವನ ಕೈಗೆ ಸಿಕ್ಕಿಬಿದ್ದಾಗ ಅವನಲ್ಲಿ ಕನಿಕರವುಳ್ಳವರಾಗಿ, ಅವನು ಮಾಡುತ್ತಿದ್ದ ಪಾಪವನ್ನು ಅವನ ತಿಳಿವಳಿಕೆಗೆ ತಂದು, ಅವನು ಪಶ್ಚಾತ್ತಾಪಪಟ್ಟು ಕ್ಷಮೆ ಬೇಡಿದಾಗ, ಅವನಿಗೆ ಒಂದು ಮರವನ್ನು ತೋರಿಸಿ ‘ಇದನ್ನು ನಂಬಿ ಜಪಿಸು’ ಎಂದು ಉಪದೇಶಿಸಿದರು. ಅವನು ಅದರಂತೆ ‘ಮರಾ, ಮರಾ’ ಎಂದು ಜಪಿಸುತ್ತಿದ್ದಾಗ ‘ರಾಮ, ರಾಮ’ ಎಂದು ಅವನ ಮನಸ್ಸಿಗೆ ಹೊಳೆಯಿತಂತೆ! ಹಾಗೆ ಅವನು ರಾಮನನ್ನು ಧ್ಯಾನಿಸಿದ್ದರಿಂದ ಅವನಿಗೆ ರಾಮನು ಪ್ರತ್ಯಕ್ಷನಾದ. ಬಳಿಕ ಅವನು ರಾಮಾಯಣಕವಿಯಾದ. ಇದು ಕಥೆ. ವಾಲ್ಮೀಕಿಯೂ ನಾರದರೂ ಮಾತನಾಡಿದ್ದು ಯಾವ ಭಾಷೆಯಲ್ಲಿ? ಸಂಸ್ಕೃತದಲ್ಲಾದರೆ ಆ ಭಾಷೆಯಲ್ಲಿ ವೃಕ್ಷಕ್ಕೆ ‘ಮರ’ ಎಂಬ ಪರ್ಯಾಯ ಪದವಿಲ್ಲ. ಬೆಳೆದ ಗಿಡ ಎಂಬರ್ಥದಲ್ಲಿ ‘ಮರ’ ಎಂಬ ಮಾತಿರುವುದು ಕನ್ನಡದಲ್ಲಿ, ತಮಿಳಿನಲ್ಲಿ; ತೆಲುಗಿನಲ್ಲಲ್ಲ, ಹಿಂದಿಯಲ್ಲಿಯೂ ಅಲ್ಲ. ವಾಲ್ಮೀಕಿ ನಾರದರು ಕನ್ನಡಿಗರೋ, ತಮಿಳರೋ? ಕಥೆಯನ್ನು ಕಥೆಯೆಂದುಕೊಂಡು ಅಲ್ಲಿಗೆ ಬಿಡಬಹುದು.

ಕವಿಯ ಕಾಲದೇಶಾದಿ ಜೀವನಸಂಗತಿಗಳನ್ನು ಕುರಿತು ಹೆಚ್ಚು ಶ್ರಮಪಡುವುದು ಪಾಶ್ಚಾತ್ಯ ಶೋಧಕರ ಪದ್ಧತಿ. ನಮಗೆ ಕವಿಗಿಂತ ಕಾವ್ಯ ಮುಖ್ಯ. ಕಾವ್ಯ ಕಾರಣದಿಂದ ಕವಿ ಬೇಕಾದವನೇ ಹೊರತು ಕವಿಯ ಕಾರಣದಿಂದ ಕಾವ್ಯ ಬೇಕಾದದ್ದೆಂದಲ್ಲ.

ವಾಲ್ಮೀಕಿಯ ವಾಸಸ್ಥಲವೆನಿಸಬಯಸುವ ಊರುಗಳು ನೂರಿವೆ. ಮುಳಬಾಗಲು ಬಳಿಯ ಆವನಿಯ ಜನ ಅದೇ ಅವಂತೀಕ್ಷೇತ್ರವೆಂದೂ ಅಲ್ಲಿಯೇ ಸೀತಮ್ಮ ಬಾಣಂತಿಯಾಗಿದ್ದದ್ದೆಂದೂ ಹೇಳಿ, ಗುಡ್ಡದಲ್ಲಿ ಒಂದು ಹೊಂಡವನ್ನು ತೋರಿಸಿ ಅದೇ ಆಕೆ ಮಕ್ಕಳ ಬಟ್ಟೆ ಒಗೆಯುತ್ತಿದ್ದ ಜಾಗವೆನ್ನುತ್ತಾರೆ. ಅದು ಅವರ ಸ್ವಸ್ಥಲಾಭಿಮಾನ. ನಮಗೆ ಸಂತೋಷ. ಅದನ್ನು ಹಾಗಲ್ಲವೆನ್ನದೆ, ನಕ್ಕು ಒಪ್ಪಿಕೊಂಡಂತೆ ಇದ್ದರೆ ಅದರಿಂದ ನಮ್ಮ ಕಾವ್ಯಾನುಭವಕ್ಕೆ ಎಷ್ಟು ಮಾತ್ರವೂ ಭಂಗಬಾರದು. ವಾಲ್ಮೀಕಿ ಆವನಿಯವನಲ್ಲ. ಮದ್ರಾಸ್‍ ಬಳಿಯ ವನ್ಮಿಯೂರಿನವನು ಎನ್ನುತ್ತಾರೆ ಅಲ್ಲಿಯವರು. ಹಾಗೂ ಆಗಲಿ. ವಾಲ್ಮೀಕಿ ಎಲ್ಲಿಯವನಾದರೂ ನಮ್ಮವನೇ–ನಮಗೆ ಅವನ ಕಾವ್ಯ ಬೇಕೆನಿಸಿದ ಪಕ್ಷದಲ್ಲಿ. ಶ್ರೀಮದ್ರಾಮಾಯಣದ ಗ್ರಂಥಗಾತ್ರವು ಅದು ಈಗ ಪ್ರಚಾರದಲ್ಲಿರುವಷ್ಟೆಲ್ಲ- ಮೊದಲಿನಿಂದ ಕೊನೆಯವರೆಗೂ ಒಂದೊಂದಕ್ಷರವೂ–ವಾಲ್ಮೀಕಿಯಿಂದ ಬಂದದ್ದೆ? ಅಥವಾ ಮಾಲ್ಮೀಕಿಯಿಂದ ಮೊದಲು ಒಂದಷ್ಟು ಗ್ರಂಥ ಬಂದಿದ್ದು, ಬಳಿಕ ಈಚಿನವರು ಯಾರುಯಾರೋ ಆ ಮೂಲಾಂಶಕ್ಕೆ ತಮ್ಮ ತಮ್ಮ ಕೈಕೆಲಸವನ್ನು ಸೇರಿಸಿದ್ದಾರೆಯೇ? ಇತರರ ಕೈವಾಡ ಅಷ್ಟಿಷ್ಟು ಸೇರಿದ್ದರೂ ಇರಬಹುದು.

ಗ್ರಂಥದ ಪ್ರಚಾರವಾದದ್ದು ಲಿಖಿತಪುಸ್ತಕದಿಂದ ಅಲ್ಲ, ಬಾಯ ಹಾಡಿಕೆಯಿಂದ. ಲವಕುಶರ ತರುವಾಯ ಸೂತಪುರಾಣಿಕರು ತಾವಿದ್ದ ಕಡೆ, ತಾವು ಹೋದ ಕಡೆ ರಾಮಾಯಣವನ್ನು ಹಾಡುತ್ತಿದ್ದರು. ಕೆಲಕೆಲ ಕಡೆ ಕೆಲಕೆಲ ದಿವಸ ಹೊಸ ಶ್ರೋತರು ಬರುತ್ತಿದ್ದರು. ಅಂಥವರ ಪ್ರಯೋಜನಕ್ಕಾಗಿ ಹಿಂದಿನ ಸಾರಿ ಹೇಳಿದ್ದನ್ನು ಸಂಗ್ರಹಿಸಿ ಪುನರಾವರ್ತನ ಮಾಡಬೇಕಾಗಿತ್ತು. ಹಳೆಯ ಶ್ರೋತೃಗಳಿಗೆ ಹೊಸ ರುಚಿ ತೋರಿಸುವುದಕ್ಕಾಗಿ ಒಂದೆರಡು ವಾಕ್ಯಗಳನ್ನು ಹೊಸದಾಗಿ ಸೇರಿಸಿದರೆ ಕಳೆಯೇರೀತೆಂದು ಪುರಾಣಿಕರಿಗೆ ತೋರಿರಬಹುದು. ಕಥೆ ಹೇಳುವವರಿಗೆ ಅಭ್ಯಾಸ ಹೆಚ್ಚಿದಂತೆಲ್ಲ ಹೊಸಹೊಸ ಸೊಗಸುಗಳು ತೋರಿ ಕುಸುರಿಯ ಕೆಲಸ ನಡೆದಿರಬಹುದು. ಇದು ನಮಗೆಲ್ಲ ಅನುಭವದಲ್ಲಿರುವುದು ತಾನೆ? ಕಥೆ ಹೇಳ ಹೇಳ ಅದರ ಕೈ ಕಾಲು ಬೆಳೆಯುತ್ತದೆ. ಹೋಮರ್‍ ಕವಿಯ “ಇಲಿಯಡ್‍” ಮಹಾಕಾವ್ಯ ಹೀಗೆ ಬೆಳದದ್ದೆಂದು ವಿದ್ವಾಂಸರು ಅನುಮಾನಿಸಿದ್ದಾರೆ. ಅದರಂತೆ ವಾಲ್ಮೀಕಿಗಳ ಕೃತಿಯು ಪುರಾಣಿಕರು ಹಾಡಿಹಾಡಿದಂತೆ ಕಾಲಾಂತರದಲ್ಲಿ ಗಾತ್ರವೃದ್ಧಿ ಪಡೆದಿರಬಹುದು.

ಜನಪ್ರಿಯವಾದ ಕಥೆಯಲ್ಲಿ ಭಕ್ತಿಬೋಧನೆಗೆ ಅವಕಾಶ ಚೆನ್ನಾಗಿರುತ್ತದೆ. ಶ್ರಿರಾಮನು ಸಾಕ್ಷಾದ್ವಿಷ್ಣುವೆಂದು ನಂಬಿದ್ದವರು ಆ ನಂಬಿಕೆಯನ್ನು ಪರಿಪೋಷಿಸುವುದಕ್ಕಾಗಿ ಇಲ್ಲೊಂದು ಅಲ್ಲೊಂದು ವಾಕ್ಯ ಸೇರಿಸಿರಬಹುದು. ಒಟ್ಟಿನಲ್ಲಿ ಬಾಲಕಾಂಡದ ಬಹುಭಾಗವೂ ಉತ್ತರಕಾಂಡದ ಎಲ್ಲವೂ ಪ್ರಕ್ಷಿಪ್ತಗಳೆಂದು ಕೆಲಮಂದಿಯ ಮತ. ಹಾಗಾಗಿದ್ದರೆ ಅದಿದ್ದುಕೊಳ್ಳಲಿ. ಪ್ರಕ್ಷಿಪ್ತಗಳೆಂದು ಹೇಳುವ ಗ್ರಂಥಭಾಗಗಳನ್ನು ಪ್ರಕ್ಷಿಪ್ತಗಳೇ ಎಂದು ಸಾಧಿಸುವುದು ಸುಲಭವಲ್ಲ. ಅದೆಲ್ಲ ಸಂದೇಹ–ಭೂಮಿ. ನಮಗೆ ವಿವಾದ ಬೇಕಿಲ್ಲ. ನಾವು ಕಾವ್ಯರಸೈಕದೃಕ್ಕುಗಳು. ಶ್ಲೋಕವು ರಮ್ಯವಾಗಿದ್ದರೆ ಅದು ಅಲ್ಲಿ ಹೇಗೆ ಬಂತೆಂದು ನಾವು ಕೇಳಬೇಕಾಗಿಲ್ಲ. ವಾಕ್ಯರಚನೆ ಸುಂದರವಾಗಿದೆಯೆ? ಭಾವ ಉಚಿತವಾಗಿದೆಯೇ? ಹಾಗಿದ್ದರೆ ಬೇರೆ ತಕರಾರು ನಮಗೆ ಬೇಕಿಲ್ಲ.

No comments:

Post a Comment