Monday 23 July 2018

'ಡಿವಿಜಿ ಸಾರಸಂಗ್ರಹ' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ (ಜುಲೈ 23,2018)

'ಡಿವಿಜಿ ಸಾರಸಂಗ್ರಹ' ಪುಸ್ತಕ ಬಿಡುಗಡೆ

'ಡಿವಿಜಿ ಸಾರಸಂಗ್ರಹ' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗ್ಗೆ ರಾಮಚಂದ್ರ ಹೆಗಡೆ ಅವರಿಂದ ವರದಿ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ 'ಡಿವಿಜಿ ಸಾರಸಂಗ್ರಹ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಸ್ಮರಣೀಯವಾಗಿತ್ತು. ಡಾ. ಎಸ್. ಎಲ್ ಭೈರಪ್ಪ, ಡಾ. ಶತಾವಧಾನಿ ಆರ್. ಗಣೇಶ್ , ಶ್ರೀ ಎಸ್. ಆರ್. ರಾಮಸ್ವಾಮಿ ಅವರನ್ನು ಒಂದೇ ವೇದಿಕೆಯಲ್ಲಿ ಕಾಣುವುದು, ಅವರ ಮಾತು ಕೇಳುವುದು ಒಂದು ಸುಯೋಗವೇ.

ಅದರಲ್ಲೂ ನನಗೆ ತುಂಬಾ ಪ್ರೀತಿಪಾತ್ರರಾದ ಡಿವಿಜಿಯವರ ಕುರಿತು ನಮ್ಮ ಕಾಲದ ಧೀಮಂತರಲ್ಲಿ ಒಬ್ಬರಾದ ಭೈರಪ್ಪನವರು ಏನು ಮಾತನಾಡಬಹುದು ಎಂಬ ಕುತೂಹಲವಿತ್ತು.

ಭೈರಪ್ಪನವರ ನಿನ್ನೆಯ(ಜುಲೈ 22, 2018) ಭಾಷಣ ಅತ್ಯಪೂರ್ವ, ಸಂಗ್ರಹಯೋಗ್ಯ, ಮನಸ್ಸಿಗೆ ತುಂಬಾ ಹಿತವನ್ನು ಕೊಟ್ಟ ಮಾತುಗಳು. ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು, ಸಾರ್ವಜನಿಕ ಜೀವನದಲ್ಲಿ ಮರೆಯಾಗುತ್ತಿರುವ ನೈತಿಕತೆ, ಈ ಸಂದರ್ಭದಲ್ಲಿ ಡಿವಿಜಿಯವರ ಬದುಕು ಬರಹ ಹೇಗೆ ಪ್ರಸ್ತುತ, ಡಿವಿಜಿ ಅವರೊಂದಿಗೆ ತಮ್ಮ ಭೇಟಿ, ನಮ್ಮ ಕಾಲದ ಋಷಿಗಳಂತೆ ಬದುಕಿದ ಡಿವಿಜಿ ಹಾಗೂ ವಿಶ್ವೇಶ್ವರಯ್ಯ ನವರ ಬದುಕಿನ ಹಿರಿಮೆ, ಅವರ ಬದುಕಿನ ಆದರ್ಶಗಳು ಹೀಗೆ ಅನೇಕ ವಿಷಯಗಳ ಕುರಿತು ಭೈರಪ್ಪನವರು ವಿಸ್ತಾರವಾಗಿ ಮಾತನಾಡಿದರು.


ಶತಾವಧಾನಿ ರಾ. ಗಣೇಶ್ ಹಾಗೂ ಡಿವಿಜಿಯವರ ಒಡನಾಡಿ ನಾಡೋಜ ರಾಮಸ್ವಾಮಿ ಅವರ ಮಾತುಗಳು ಕೂಡಾ ಮನಸ್ಸಿಗೆ ಮುದನೀಡಿದವು. ಕೊರ್ಗಿ ಉಪಾಧ್ಯಾಯರ ಕಂಚಿನ ಕಂಠದ ನಿರೂಪಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಡಿವಿಜಿ ಸಾರಸಂಗ್ರಹ ಪುಸ್ತಕದ ಸಹಲೇಖಕರಲ್ಲಿ ಒಬ್ಬರಾದ ಶ್ರೀ ಬಿ.ಎನ್ ಶಶಿಕಿರಣ್ ಅವರ ಮಾತುಗಳು ಬಹಳ ಇಷ್ಟವಾಯ್ತು. ಸಾಹಿತ್ಯದ ಕುರಿತು, ಡಿವಿಜಿ ಅವರ ಬದುಕು ಬರಹದ ಕುರಿತು ಬಹಳ ಅಧಿಕಾರಯುತವಾಗಿ ಮಾತನಾಡಬಲ್ಲ ಪಾಂಡಿತ್ಯ ಅವರದು. ಶತಾವಧಾನಿಗಳ ಶಿಷ್ಯರಾಗಿರುವ ಅವರು ಸಾಹಿತ್ಯಲೋಕದ ಹೊಸ ಭರವಸೆ.

ಕಾರ್ಯಕ್ರಮ ಆರಂಭವಾಗುವ ಒಂದು ಘಂಟೆ ಮೊದಲೇ ಸಭಾಂಗಣ ಭರ್ತಿಯಾಗುವುದು ಒಂದು ಅಚ್ಚರಿಯೇ. ಸಭಾಂಗಣದ ಹೊರಗೆ 3 ದೊಡ್ಡ ಸ್ಕ್ರೀನ್ ಹಾಕಿ ಕಾರ್ಯಕ್ರಮ ನೋಡಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲೂ ಕೂಡಾ ಜನ ಭರ್ತಿಯಾಗಿ, ನೂರಾರು ಜನ ನಿಂತು ಕಾರ್ಯಕ್ರಮ ನೋಡಿದರು. ನಿಲ್ಲಲೂ ಜಾಗವಿಲ್ಲದೆ ನೂರಾರು ಜನ ವಾಪಸ್ ತೆರಳಬೇಕಾಯ್ತು.

ಡಿವಿಜಿ ಅವರ ಕುರಿತು ತಿಳಿಯಲು, ಭೈರಪ್ಪನವರ ಭಾಷಣ ಕೇಳಲು ಬಂದವರು ನಿಜಕ್ಕೂ ಜನಸಾಗರ. ಡಿವಿಜಿ ಅವರು ಇಲ್ಲವಾಗಿ 40 ವರ್ಷಗಳ ನಂತರವೂ ಅವರ ಪುಸ್ತಕ ಬಿಡುಗಡೆಗೆ ಇಷ್ಟೊಂದು ದೊಡ್ಡ ಸಂಖ್ಯೆಯ ಜನ ಸೇರುತ್ತಾರೆಂದರೆ ಅದು ಆ ಧೀಮಂತ ವ್ಯಕ್ತಿತ್ವದ, ನುಡಿದಂತೆ ನಡೆದ, ನಡೆದಂತೆ ನುಡಿದ ಆ ಋಷಿಸದೃಶ ಚೇತನದ ಹೆಗ್ಗಳಿಕೆ.

ಬಿಡುಗಡೆಯಾದ ಪುಸ್ತಗಳನ್ನು ಜನ ಮುಗಿಬಿದ್ದು ಖರೀದಿಸಿದ್ದು ಡಿವಿಜಿ ಬರಹದ ಶಕ್ತಿ. ಅವರ ಲೋಕಪ್ರಿಯತೆಗೆ ಸಾಕ್ಷಿ. ಡಿವಿಜಿ ಸಾರಸಂಗ್ರಹ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಎಸ್. ಎಲ್. ಭೈರಪ್ಪನವರ ಪೂರ್ತಿ ಭಾಷಣವನ್ನು ಇಲ್ಲಿ ಕೇಳಬಹುದು. ಒಂದು ಅದ್ಭುತ ಭಾಷಣ. ತಪ್ಪದೇ ಕೇಳಿ. ಭೈರಪ್ಪನವರ ಭಾಷಣವನ್ನು ರೆಕಾರ್ಡ್ ಮಾಡಿ ಅಪ್ಲೋಡ್ ಮಾಡಿ ಹಂಚಿಕೊಂಡ ಗೆಳೆಯ ವೆಂಕಟೇಶ್ ಮೂರ್ತಿ ಅವರಿಗೆ ಧನ್ಯವಾದ.

Listen to Sri SL Bhyrappa's speech - Release of "DVG Saarasangraha" by Venkatesha Murthy : SL Bhyrappa speech during DV Gundappa book release