Thursday 18 January 2024

ಭಾಗ 13 - ಉತ್ತರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)



ಶ್ರೀ ಸೀತಾರಾಮ ಭಗವಂತನ ಕೃಪೆಯಿಂದ ಸನ್ಮಿತ್ರರಾದ ಶ್ರೀಮಾನ್‍ ಡಿ. ಸಿ. ಅನಂತರಾಮಯ್ಯನವರೂ ಅವರ ಸ್ನೇಹಿತರೂ ಶ್ರೀಮದ್ರಾಮಾಯಣ ಪ್ರಕಾಶನ ಸಮಿತಿಯ ಮೂಲಕ ಪ್ರಾರಂಭ ಮಾಡಿದ ಮಹಾಕಾರ್ಯವು ಈಗ ಸಾಂಗವಾಗಿ ನೆರವೇರಿತು. ಈ ಉತ್ತರಕಾಂಡದ ಪ್ರಕಟನೆಯಿಂದ ಅದು ಸಾರ್ಥಕವಾಗಿ ಸಮಾಪ್ತಿ ಪಡೆದಿದೆ. ಇದಕ್ಕಾಗಿ ಸಮಿತಿಯವರಿಗೆ ಕನ್ನಡ ಮಹಾಜನರ ಅಭಿನಂದನೆ, ಕೃತಜ್ಞತೆಗಳು ಸಲ್ಲುತ್ತವೆ. ಭಗವಂತನು ಶ್ರೀಮದ್ರಾಮಾಯಣ ಪ್ರಕಾಶನ ಸಮಿತಿಯವರಿಗೆ ಆಯುರಾರೋಗ್ಯ ಐಶ್ವರ್ಯಾದಿ ಸಕಲ ಶುಭಗಳನ್ನೂ ಅನುಗ್ರಹಿಸಲಿ.

ವಿದ್ವನ್ಮಿತ್ರರಾದ ಶ್ರೀ ರಂಗನಾಥ ಶರ್ಮಾರವರ ಉಪಕಾರವನ್ನು ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಬೇರೆ ಸಂದರ್ಭವೊಂದು ನಡೆಯದಿದ್ದರೆ, ನಮ್ಮ ಸಂತೋಷವನ್ನೂ ಕೃತಜ್ಞತೆಯನ್ನೂ ಅರ್ಪಿಸುವುದರಲ್ಲಿ ಗಂಟಲು ಕಟ್ಟುತ್ತಿರಲಿಲ್ಲ. ಅವರಿಗೆ ಈಚೆಗೆ ಉಂಟಾಗಿರುವ ನಷ್ಟ ಬಹುದೊಡ್ಡದು. ಅವರ ಪತ್ನಿಯವರು ವಾಸ್ತವವಾಗಿ ಈ ಸಾರಸ್ವತ ಕಾರ್ಯದಲ್ಲಿ ಅವರಿಗೆ ನೆರವಾಗಿ ಸಹಧರ್ಮಿಣಿ ಎಂಬ ವಿಶೇಷಣವನ್ನು ಸಾರ್ಥಕ ಮಾಡುವವರಾಗಿದ್ದರೆಂಬುದನ್ನು ನಾನು ವೈಯಕ್ತಿಕವಾಗಿ ಬಲ್ಲೆ. ದೈವವು ಇಂಥ ವಿದ್ವಾಂಸರನ್ನೂ ಪರಿಶುದ್ಧ ಚರಿತ್ರರನ್ನೂ ಕೂಡ ಬಿಟ್ಟಿಲ್ಲವಲ್ಲ–ಎಂಬುದು ನನ್ನ ಕೊರತೆ.

ಆದರೆ, ದೈವವು ಯಾರನ್ನು ಬಿಟ್ಟಿದೆ? ಶ್ರೀರಾಮನನ್ನೂ ಶ್ರೀಕೃಷ್ಣನನ್ನೂ ಸಹ ಅದು ಪರೀಕ್ಷಿಸದೆ ಬಿಟ್ಟಿಲ್ಲ. ಶ್ರೀರಾಮನಿಗೆ ಎರಡು ಸಲ ವಿರಹಪ್ರಾಪ್ತಿಯಾದದ್ದೂ, ಇತರ ಕಷ್ಟಗಳು ಒದಗಿದ್ದೂ ಪ್ರಸಿದ್ಧವಾಗಿವೆ. ಶ್ರೀಕೃಷ್ಣನೂ ಸಹ ರೋಗಪೀಡಿತನಾಗಿದ್ದದ್ದು, ಆಂಗಿರಸ ಮಹರ್ಷಿಯು ಆತನನ್ನು ಕಂಡು ಹಿತೋಪದೇಶ ಮಾಡಿದ್ದು ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿದೆ.

ಹೀಗೆ ಸತ್ತ್ವಪರೀಕ್ಷೆ ಮಾಡುವುದು ದೈವದ ಕಾರ್ಯ.

ಶ್ರೀಮಾನ್‍ ರಂಗನಾಥಶರ್ಮಾ ಅವರು ಇಂಥ ನಿಷ್ಠುರ ಪ್ರಸಂಗವನ್ನು ಮನಸ್ಸಿಗೆ ತಂದುಕೊಳ್ಳದೆ ಧೈರ್ಯವನ್ನವಲಂಬಿಸಬೇಕೆಂದು ನನ್ನ ವಿಜ್ಞಾಪನೆ.

ಈಗ ಗ್ರಂಥವಿಚಾರ.

ಶ್ರೀಮದ್ರಾಮಾಯಣದ ‘ಉತ್ತರಕಾಂಡ’ ವೆಂಬುದು ಪ್ರಕ್ಷಿಪ್ತಭಾಗವೆ? ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಲ್ಲವೆ?–ಈ ಪ್ರಶ್ನೆಯನ್ನು ಎಷ್ಟೋ ಮಂದಿ ಹಾಕಿದ್ದಾರೆ. ನಮ್ಮ ಹೈಕೋರ್ಟಿನ ಜಡ್ಜಿಯಾಗಿದ್ದ ಒಬ್ಬ ಸ್ನೇಹಿತರು ಈ ಪ್ರಶ್ನೆಯನ್ನು ಕೇಳಿದರು. ಅವರ ಶಂಕೆಗೆ ಕಾರಣವೇನೆಂದು ವಿಚಾರಿಸಲಾಗಿ:

1. "ಉತ್ತರಕಾಂಡದಲ್ಲಿ ಶ್ರೀರಾಮನು ಶ್ರೀ ಸೀತಾದೇವಿಯ ವಿಷಯದಲ್ಲಿ ಅಷ್ಟು ನಿಷ್ಕರುಣಿಯಾಗಿ ನಡೆದುಕೊಂಡಿದ್ದಾನೆ–ಎಂದು ಹೇಳಿದೆ.

2. ಅದಲ್ಲದೆ ಯಾವ–ಯಾವ ಕಥೆಗಳೋ ಉತ್ತರಕಾಂಡದಲ್ಲಿ ಸೇರಿಕೊಂಡಿವೆ.

3. ಗ್ರಂಥದ ಶೈಲಿ ಕೂಡಾ ವಾಲ್ಮೀಕಿಗಳದ್ದಾಗಿಲ್ಲ.

–ಈ ಕಾರಣಗಳಿಂದ ಶಂಕೆ” ಎಂದು ಹೇಳಿದರು ಅವರು.

ಈ ಮೇಲೆ ಹೇಳಿದ ಸ್ನೇಹಿತರು ಸಂಸ್ಕೃತದ ಮೂಲಗ್ರಂಥವನ್ನು ನೋಡಿದವರಲ್ಲ; ಇಂಗ್ಲಿಷಿನಲ್ಲಿ ಯಾರು–ಯಾರೋ ಬರೆದಿದ್ದ ಟೀಕೆಗಳನ್ನು ಮಾತ್ರ ಓದಿದ್ದವರು. ಇದರ ನ್ಯೂನತೆಯನ್ನು ನಾನು ಅವರಿಗೆ ತೋರಿಸಿಕೊಟ್ಟೆ. ಆ ಚರ್ಚೆಯ ಮಾತು ಹಾಗಿರಲಿ.

ಶ್ರೀಮದ್ರಾಮಾಯಣದ ಮುಖ್ಯ ಪಾತ್ರಗಳಲ್ಲಿ ಸೀತಾದೇವಿಯೊಬ್ಬಳಷ್ಟೆ. ಶ್ರೀರಾಮನ ತರುವಾಯು ಮುಖ್ಯತೆ ಸಲ್ಲತಕ್ಕದ್ದು ಆಕೆಗೆ. ಇದನ್ನು:

... ಸೀತಾಯಾಶ್ಚರಿತಂ ಮಹತ್‍... ಬಾಲಕಾಂಡ, ೪–೭

[ಮಹತ್ವಪೂರ್ಣವಾದ ಸೀತಾದೇವಿಯ ಚರಿತ್ರೆ]

–ಎಂಬ ವಾಲ್ಮೀಕಿ ವಚನವೇ ಸ್ಪಷ್ಟಪಡಿಸುತ್ತದೆ. ಬ್ರಹ್ಮದೇವನು ವಾಲ್ಮೀಕಿಗಳಿಗೆ ಕಥೋಪದೇಶ ಮಾಡಿದ ಸಂದರ್ಭದಲ್ಲಿಯೇ ಸಂಗ್ರಹವಾಗಿ ಹೇಳಿದ್ದಾನೆ:

ರಾಮಾಭೀಷೇಕಾಭ್ಯುದಯಂ ಸರ್ವಸೈನ್ಯವಿಸರ್ಜನಮ್‍ ।
ಸ್ವರಾಜ್ಯರಂಜನಂ ಚೈವ ವೈದೇಹ್ಯಾಶ್ಚ ವಿಸರ್ಜನಮ್‍ ॥

....................................

ತಚ್ಚಕಾರೋತ್ತರೇ ಕಾವ್ಯೇ ವಾಲ್ಮೀಕಿರ್ಭಗವಾನೃಷಿಃ ॥ ಬಾಲಕಾಂಡ, ೩–೩೮, ೩೯

ಸೀತಾದೇವಿಯ ಮಹತ್ವವೇನು? ಆಕೆಯನ್ನು ದೈವ ಪರೀಕ್ಷಿಸಿದ್ದು, ಆಕೆ ಆ ಪರೀಕ್ಷೆಯಲ್ಲಿ ಉತ್ತೀರ್ಣಳಾದದ್ದು. ಆಕೆಯ ವ್ರತನಿಷ್ಠೆ ಮತ್ತು ಧೈರ್ಯ.

ಪುನಃ ಬ್ರಹ್ಮದೇವನು ವಾಲ್ಮೀಕಿಗಳಿಗೆ ಆದೇಶ ಕೊಡುವ ಸಂದರ್ಭದಲ್ಲಿ, ಹೀಗೆನ್ನುತ್ತಾನೆ:

ರಾಮಸ್ಯ ಚರಿತಂ ಕೃತ್ಸ್ನಂ... ।

.................... ವೈದೇಹ್ಯಾಶ್ಚೈವ ಯದ್ವೃತ್ವಂ ಪ್ರಕಾಶಂ ಯದಿ ವಾ ರಹಃ || ಬಾಲಕಾಂಡ, ೨–೩೨, ೩೪

ಎಂದರೇನಾಯಿತು? ವಾಲ್ಮೀಕಿಗಳಿಂದ ಉದ್ದಿಷ್ಟವಾದದ್ದು ರಾಮಚರಿತ್ರೆ ಮಾತ್ರವೇ ಅಲ್ಲ; ಸೀತಾಚರಿತ್ರೆ ಸಹ. ಸೀತಾಚರಿತ್ರೆ ಎಂದರೆ ಏನು? ಸೀತಾದೇವಿಯ ಬಾಲ್ಯದ ಅನಂತರದ ಕಥೆಯಲ್ಲಿ ಎರಡು ಘಟ್ಟಗಳು ದೊಡ್ಡವು. ಮೊದಲನೆಯದು: ರಾವಣನಿಂದಾದ ಮೋಸ; ಎರಡನೆಯದು ಜನವಾಕ್ಯ ಕಾರಣದಿಂದ ಶ್ರೀರಾಮಚಂದ್ರನೇ ಮಾಡಬೇಕಾಗಿ ಬಂದ ವಿವಾಸನ. ಈ ಎರಡನ್ನು ಬಿಟ್ಟರೆ ‘ಚರಿತಂ ಮಹತ್‍’ ಎಂಬುದಕ್ಕೆ ಅರ್ಥವಿಲ್ಲ.

ಸೀತೆಯ ಜೀವನ ಅರ್ಥವತ್ತಾಗಿ ನಮ್ಮ ಮೆಚ್ಚುಗೆಗೂ ಅನುಕರಣೆಗೂ ಪಾತ್ರವಾಗತಕ್ಕದ್ದು ಆಕೆಯ ವಿವಾಸನ ಕಥೆಯಿಂದ. ಆಕೆಯ ಮಹತ್ವ ತೋರುವುದು ಅಲ್ಲಿ.

ರಾವಣನು ಬಲಾತ್ಕಾರದಿಂದ ಆಕೆಯನ್ನು ಸೆರೆಯಲ್ಲಿಟ್ಟ. ಆಕೆ ಅದನ್ನು ಸಹಿಸದೆ ಏನು ಮಾಡಿಯಾಳು? ವಿವಾಸನವಾದರೋ ಆಕೆ ಬೇಡವೆನ್ನಬಹುದಾಗಿದ್ದದ್ದು. ಆದರೂ ತನ್ನ ಕರ್ತವ್ಯ ಸ್ಮರಣೆಯಿಂದ ಆಕೆ ಒಪ್ಪಿಕೊಂಡಳು.

ಯಥಾಪವಾದಂ ಪೌರಾಣಾಂ ತಥೈವ ರಘುನಂದನ ।
ಪತಿರ್ಹಿ ದೇವತಾ ನಾರ್ಯಾಃ ಪತಿರ್ಬಂದುಃ ಪತಿರ್ಗುರುಃ ॥
ಯಥಾ ಭ್ರಾತೃಷು ವರ್ತೇಥಾಸ್ತಥಾ ಪೌರೇಷು ನಿತ್ಯದಾ ।
ಪರಮೋ ಹ್ಯೇಷ ಧರ್ಮಸ್ತೇ ತಸ್ಮಾತ್‍ ಕೀರ್ತಿರನುತ್ತಮಾ ॥
ಯತ್ತು ಪೌರಜನೋ ರಾಜನ್‍ ಧರ್ಮೇಣ ಸಮವಾಪ್ನುಯಾತ್‍ ।
ಅಹಂ ತು ನಾನುಶೋಚಾಮಿ ಸ್ವಶರೀರಂ ನರರ್ಷಭ ॥

ಉತ್ತರಕಾಂಡ, ಸರ್ಗ ೪೮; ಪುಟ ೩೬೦–೩೬೧

ಇದು ಆಕೆಯ ಮನಃಸ್ಥೈರ್ಯವನ್ನೂ ದೃಢನಿಷ್ಠೆಯನ್ನೂ ತೋರಿಸುತ್ತದೆ. ಹೀಗೆ ಇದು ಮಹತ್ತಾದದ್ದು.

ದೈವ ನಡೆಸಿದ ಸತ್ತ್ವಪರೀಕ್ಷೆಯಲ್ಲಿ ಸೀತಾದೇವಿಯು ಉತ್ತೀರ್ಣಳಾದಳು. ಇದು ಅಪೂರ್ವ ಸಂದರ್ಭ. ಶ್ರೀರಾಮಚಂದ್ರನ ಶೌರ್ಯವು ಎಷ್ಟು ಮೆಚ್ಚತಕ್ಕದ್ದೋ ಶ್ರೀ ಸೀತೆಯ ಸಹನೆ ಅದಕ್ಕಿಂತ ಕಡಮೆಯಿಲ್ಲದೆ ನಮ್ಮ ಮನ್ನಣೆಗೆ ಪಾತ್ರವಾಗತಕ್ಕದ್ದು; ಮತ್ತು ಇದು ರಾಮಚರಿತೆಯ ಅಂಗವೆಂಬದನ್ನು–ಮುಖ್ಯಾಂಗವೆಂಬುದನ್ನು – ವಾಲ್ಮೀಕಿಗಳ ಮೇಲಿನ ಮಾತು ತೋರಿಸುತ್ತದೆ. ಹೀಗಿರುವಲ್ಲಿ ಉತ್ತರಕಾಂಡವು ಪ್ರಕ್ಷಿಪ್ತವೆಂದು ಹೇಳುವುದರಿಂದ ಧೃಷ್ಟತನ ವ್ಯಕ್ತವಾಗುತ್ತದೆ.

ರಾಮಾಯಣಕ್ಕೆ ಮುಖ್ಯವಲ್ಲದೆ ಇದ್ದರೂ ರಾಮಾಯಣದ ಪಾತ್ರಗಳಿಗೆ ಸಂಬಂಧಪಟ್ಟ ಕೆಲವು ಉಪಪಾತ್ರಗಳ ವೃತ್ತಾಂತವು ಉತ್ತರಕಾಂಡದಲ್ಲಿದೆ. ಈ ಕಥೆಗಳನ್ನು, –ಉದಾಹರಣೆಗಾಗಿ;

ರಾವಣೋತ್ಪತ್ತಿ, ಮೈತ್ರಾವರುಣ ಜನನ, ಲವಕುಶರ ಅವತಾರ, ಶತ್ರುಘ್ನನನ್ನು ಬೇರೆ ರಾಜ್ಯದಲ್ಲಿ ಸ್ಥಾಪಿಸಿದ್ದು, ಲವಣಾಸುರ ಮಥನ, ಇತ್ಯಾದಿ, –

ನಾವು ಗ್ರಂಥದ ಪರಿಶಿಷ್ಟ ಭಾಗ (Appendix) ಎಂದು ಸ್ವೀಕರಿಸಬಹುದೇ ವಿನಾ ವಾಲ್ಮೀಕೀಯವಲ್ಲವೆನ್ನಲು ಕಾರಣ ಸಾಲದು.

ಇನ್ನು ಶೈಲಿಯ ವಿಚಾರ. ಉತ್ತರಕಾಂಡದ ಶೈಲಿಯು ರಾಮಾಯಣದ ಇತರ ಕಾಂಡಗಳಿಗಿಂತ ವಿಲಕ್ಷಣವಾದದ್ದೆಂದು ಯಾರಿಗೆ ತೋರುತ್ತದೆಯೋ ಅವರ ಅನುಭವ ವಿಚಿತ್ರವಾಗಿದ್ದಾಗಿರಬೇಕು. ಇದುವರೆಗೆ ವ್ಯಾಖ್ಯಾನ ಬರೆದಿರುವ ಮಹೇಶತೀರ್ಥ, ಗೋವಿಂದರಾಜ, ಮಾಧವಯೋಗಿ–ಮೊದಲಾದವರಿಗೆ ಕಾಣಬಾರದೆಹೋದ ಶೈಲಿಯ ಭೇದ ಕಂಡುಬರಬೇಕಾದರೆ, ಅವರ ವೇದನಶಕ್ತಿ, ಗ್ರಹಣಶಕ್ತಿಗಳು ಅತಿಸೂಕ್ಷ್ಮವಾದವಾಗಿರಬೇಕು. ನನಗೆ ಹಾಗಿಲ್ಲ. ಕಥೆಯ ವರ್ಣನೆಯಿರುವ ಭಾಗದಲ್ಲಿ ರಾಮಾಯಣದ ಉತ್ತರಕಾಂಡವು ಮಿಕ್ಕೆಲ್ಲ ಕಾಂಡಗಳಂತೆಯೇ ಇದೆ. ಇಲ್ಲಿ, ರಾಮ–ಸೀತೆಯರ ಕಥೆಯಲ್ಲದೆ ಬೇರೆ ಬೇರೆ ವಿಷಯ ಹೇಳುವಲ್ಲಿ, ಕೊಂಚ ವಿಸ್ತಾರ ಕಡಮೆಯಾಗಿದೆ; ಅವಸರ–ಅವಸರವಾಗಿ ಹೇಳಿದೆ. ಇದು ಹೊರತು ಶೈಲಿಯ ವ್ಯತ್ಯಾಸ ಕಾಣಬರುವುದಿಲ್ಲ. ಎಲ್ಲವೂ ಒಂದೇ ಆಗಿದೆ.

ಉಳಿದ ಭಾಗಕ್ಕೂ, ಈ ಉತ್ತರಕಾಂಡಕ್ಕೂ ವಿರೋಧವಾಗಲಿ, ಅಸಾಮಂಜಸ್ಯವಾಗಲಿ ಕಾಣುವುದಿಲ್ಲ.

ಶ್ರೀರಾಮಚಂದ್ರನ ನಿರ್ಮಲ ಕೀರ್ತಿಗೆ ಕಳಂಕವಂಟಿಸುವ ಪ್ರಯತ್ನಕ್ಕೆ ಎರಡನೆಯ ವ್ಯಾಜವಿರುವುದು ಶಂಬೂಕನ ಕಥೆಯಲ್ಲಿ.

ಶಂಬೂಕನ ಅಪರಾಧವೇನು? ಸಂಪ್ರದಾಯ ವಿರೋಧ; ಸಮಾಜ ಸಂಕ್ಷೋಭೆ; ವ್ಯವಸ್ಥಾ ಭಂಗ; ಈ ಕಾಲದ ಭಾಷೆಯಲ್ಲಿ ಕ್ರಾಂತಿ (Revolution). ಒಬ್ಬ ಪ್ರಜ್ಞೆ ತನಗೆ ಆಧಿಕಾರವಿಲ್ಲದ ಕಾರ್ಯಕ್ಕೆ ಕೈಯಿಟ್ಟ. ತಪಸ್ಸಿಗೆ ಅರ್ಹನಲ್ಲದವನು ತಪಸ್ಸು ಮಾಡಹೊರಟ.

ಅಬ್ರಾಹ್ಮಣಸ್ತದಾ ರಾಜನ್ನ ತಪಸ್ವೀ ಕಥಂಚನ ಉತ್ತರಕಾಂಡ, ಸರ್ಗ ೭೪; ಪುಟ ೪೭೯

ಅದರಿಂದ ಆಗಿನ ಸಮಾಜ ಅಲುಗಿತು; ಒಬ್ಬ ಬ್ರಾಹ್ಮಣನ ಮಗ ತೀರಿಕೊಂಡ. ಆದುದರಿಂದ ಶ್ರೀರಾಮನು ಆ ಅಕ್ರಮಕ್ಕೆ ದಂಡನೆ ಮಾಡಬೇಕಾದದ್ದು ವಿಹಿತವಾಯಿತು. ಇದೇನು ಸಂತೋಷದ ಕೆಲಸವಲ್ಲ. ರಾಮನು ಕ್ರೂರಿಯಲ್ಲ, ಕರುಣಾಳು. ಆದರೆ, ಕರ್ತವ್ಯದ ಮುಂದೆ ಅವನ ವೈಯಕ್ತಿಕ ಹೃದಯಾವೇದನೆ ಕೆಲಸ ಮಾಡತಕ್ಕದ್ದಲ್ಲ. ಶ್ರೀರಾಮನು ತನಗೆ ಇಷ್ಟವಿಲ್ಲದಿದ್ದರೂ ಕರ್ತವ್ಯವಾದದ್ದನ್ನು ಮಾಡಬೇಕಾಯಿತೆಂಬುದು ಭವಭೂತಿಯ ಈ ಕೆಳಗಿನ ರಾಮವಾಕ್ಯದಿಂದ ನಮಗೆ ಹೃದಯವೇಧಕವಾಗುವಂತೆ ಇದೆ:

ಹೇ! ಹಸ್ತ ದಕ್ಷಿಣ ಮೃತಸ್ಯ ಶಿಶೋರ್ದ್ವಿಜಸ್ಯ
ಜೀವಾತವೇ ವಿಸೃಜ ಶೂದ್ರಮುನೌ ಕೃಪಾಣಮ್‍ ॥
ರಾಮಸ್ಯ ಬಾಹುರಸಿ ನಿರ್ಭರಗರ್ಭಖಿನ್ನ
ಸೀತಾವಿವಾಸನಪಟೋಃ ಕರುಣಾ ಕುತಸ್ತೇ ॥ ಉತ್ತರರಾಮಚರಿತೆ, II – ೯

[ಎಲೈ ಬಾಹುವೇ! ಬ್ರಾಹ್ಮಣಸುತನನ್ನು ಪುನಃ ಬದುಕಿಸುವುದಕ್ಕಾಗಿ ಶೂದ್ರಮುನಿಯನ್ನು ಹೊಡೆ. ರಾಮನ ತೋಳಲ್ಲವೇ ನೀನು? ರಾಮನಾದರೋ ಗರ್ಭಭಾರದಿಂದ ನೊಂದಿರುವ ಸೀತೆಯನ್ನು ಕಾಡಿಗೆ ಕಳಿಸಿದನಲ್ಲವೇ? ಅಂಥವನಿಗೆ ಕರುಣೆಯುಂಟೆ? ನಿನಗೆಲ್ಲಿಯದು ಕರುಣೆ!]

ಶ್ರೀರಾಮಚಂದ್ರನು ಕರುಣಿಯೂ ಹೌದು, ನಿಷ್ಕರುಣಿಯೂ ಹೌದು; ಸಂದರ್ಭಕ್ಕೆ ತಕ್ಕ ನ್ಯಾಯವಾಗುವಂತೆ, ಅದಕ್ಕೆ ಸಂಬಂಧಪಟ್ಟವರಿಗೆ ಹಿತವಾಗುವಂತೆ. ಮೂವತ್ತು ವರ್ಷದವನಿಗೆ ಸಲ್ಲತಕ್ಕದು ಮೂರು ವರ್ಷದವನಿಗೆ ಸಲ್ಲತಕ್ಕದ್ದಲ್ಲ; ಮೂರು ವರ್ಷದವನಿಗೆ ಪ್ರಯೋಜಕವಾಗತಕ್ಕದು ಮೂವತ್ತು ವರ್ಷದವನಿಗಲ್ಲ. ಹೀಗೆ ವಿವೇಚಿಸುತ್ತಾನೆ ಧಮಿಷ್ಠ.

ವಜ್ರಾದಪಿ ಕಠೋರಾಣಿ
ಮೃದೂನಿ ಕುಸುಮಾದಪಿ
ಲೋಕೋತ್ತರಾಣಾಂ ಚೇತಾಂಸಿ
ಕೋ ಹಿ ವಿಜ್ಞಾತುಮರ್ಹತಿ ॥

ಇದು ಶ್ರೀರಾಮಚಂದ್ರನ ತತ್ತ್ವ.

ಮೃದುವೋ ಕಟುವೋ ಹಿತ ಮುಖ್ಯ, ನ್ಯಾಯ ಮುಖ್ಯ.

ಮೇಲೆ ಹೇಳಿದ ಶಂಬೂಕ ವೃತ್ತಾಂತಕ್ಕೆ ಸಂಬಂಧಪಟ್ಟ ಶಾಸ್ತ್ರವಾಕ್ಯವು ತ್ರೇತಾ ಯುಗಕ್ಕೆ ಅನ್ವಯಿಸತಕ್ಕದ್ದು,

ಅಬ್ರಾಹ್ಮಣಸ್ತದಾ ರಾಜನ್ನ ತಪಸ್ವೀ ಕಥಂಚನ ಉತ್ತರಕಾಂಡ, ಸರ್ಗ ೭೪; ಪುಟ ೪೭೯

ಇದರ ತತ್ತ್ವ ಸರಿಯಾದದ್ದೇ?–ಎಂಬುದು ನಾವು ಚರ್ಚಿಸಬೇಕಾದ ವಿಷಯವಲ್ಲ. ಪ್ರಜಾಜನ ಈ ವಿಧಿಯನ್ನಂಗೀಕರಿಸಿದ್ದರು ಎಂಬುದಷ್ಟೇ ನಮಗೆ ಇಲ್ಲಿ ಪ್ರಯುಕ್ತವಾದದ್ದು. ಶ್ರೀರಾಮನು ಆ ಮೃತಶಿಶುವಿನ ತಂದೆಯ ಆರ್ತನಾದವನ್ನು ಕೇಳಿದ:

ರಾಮಸ್ಯ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ಉತ್ತರಕಾಂಡ, ಸರ್ಗ ೭೩; ಪುಟ ೪೭೫

ಏನು ಮಾಡಿದ? ಮಂತ್ರಿಗಳ ಮತ್ತು ಋಷಿಗಳ ಉಪದೇಶವೇನೆಂದು ಕೇಳಿದ. ಆಗ ಅಲ್ಲಿದ್ದ ಎಂಟು ಮಂದಿ ಋಷಿಗಳ ಪರವಾಗಿ ನಾರದರು: “ಕೃತಯುಗದ ಧರ್ಮವು ತ್ರೇತಾಯುಗಕ್ಕೆ ಅನ್ವಯಿಸದು. ತ್ರೇತಾಯುಗದಲ್ಲಿ ಬ್ರಾಹ್ಮಣನೊಬ್ಬನಿಗೇ ತಪಸ್ಸಿಗೆ ಅಧಿಕಾರ. ಅಬ್ರಾಹ್ಮಣನೊಬ್ಬನು ನಿನ್ನ ರಾಜ್ಯದಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ತೋರುತ್ತದೆ. ಅದೇ ಈ ಬ್ರಾಹ್ಮಣ ಬಾಲಕನ ಮರಣಕ್ಕೆ ಕಾರಣ. ಇದು ಎಲ್ಲಿ ನಡೆದಿದೆಯೆಂದು ನೀನು ಕಂಡುಹಿಡಿದು, ಆ ಅನಧಿಕಾರಿಯಾದ ತಪಸ್ವಿಯನ್ನು ಶಿಕ್ಷಿಸು. ಆಗ ಆ ಬ್ರಾಹ್ಮಣ ಬಾಲಕನು ಮತ್ತೆ ಜೀವಿಸುವನು” ಎಂದು ಹೇಳಿದರು.

ಇದರಿಂದ ಸ್ಪಷ್ಟಪಡುತ್ತದೆ, ರಾಮನು ಸ್ವತಂತ್ರಿಸಿ ನಡೆಯಲಿಲ್ಲವೆಂಬುದು. ನಾರದರು ಹೇಳಿದ ವಿಧಿ ಸರಿಯಾದದ್ದೆ? ಶೂದ್ರನಿಂದ ಯಾರಿಗಾದರೂ ಕೇಡಾಯಿತೆ? ಶಂಬೂಕನು ನಿರಪರಾಧಿಯಲ್ಲವೆ? –ಇತ್ಯಾದಿ ಪ್ರಶ್ನೆಗಳನ್ನು ವಿಚಾರಿಸುವುದು ರಾಮನಿಗೆ ಕರ್ತವ್ಯವಲ್ಲ. ಆ ರಾಜ್ಯದ ಪ್ರಜೆಗಳು, ಅವರಲ್ಲಿ ವಿದ್ಯೋತ್ತಮರು ಸಹ, ಆ ವಿಧಿಯನ್ನು ಒಪ್ಪಿಕೊಂಡಿದ್ದರು. ಅದರಿಂದ ಅದರ ಪಾಲನೆ ಶ್ರೀರಾಮನಿಗೆ ಕರ್ತವ್ಯವಾಯಿತು.

ಹೀಗೆ ಶ್ರೀ ಸೀತಾ ವಿವಾಸನ ವಿಷಯದಲ್ಲಿಯೂ, ಶಂಬೂಕವಧೆಯ ವಿಷಯದಲ್ಲಿಯೂ ಶ್ರೀರಾಮನು ಅನುಸರಿಸಿದ್ದು ಪ್ರಜಾಭಿಪ್ರಾಯವನ್ನು. ಅದು ಡೆಮಾಕ್ರೆಸಿ (Democracy) – ಪ್ರಜಾಪ್ರಭುತ್ವ.

ಇದನ್ನು ನಾವು ಗಮನಿಸಬೇಕು. ಗ್ರೀಸ್‍ ದೇಶದಲ್ಲಿ ಪ್ರಜಾಪ್ರಭುತ್ವವು ಸಾಕ್ರಟೀಸ್‍ (Socrates) ತತ್ತ್ವಜ್ಞನನ್ನು ನುಂಗಿತು. ಅದಕ್ಕಿಂತ ಎಷ್ಟೋ ಸಹಸ್ರ ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಪ್ರಜಾರಾಜ್ಯವು ಶ್ರೀ ಸೀತಾದೇವಿಯನ್ನು ಗಡೀಪಾರು ಮಾಡಿಸಿತು; ಶಂಬೂಕನಿಗೆ ಮೃತ್ಯುವನ್ನು ತಂದಿತು.

ಅಲ್ಲಿಂದೀಚೆಗೆ ನಮ್ಮ ದೇಶದಲ್ಲಿ ಡೆಮಾಕ್ರೆಸಿ ಪುನಃ ಪ್ರಬಲಿಸುತ್ತಿದೆ. ಆದಕಾರಣ ಸತ್ತ್ವಾಭಿಮಾನಿಗಳು ಜಾಗ್ರತೆಯಿಂದಿರಬೇಕಾದದ್ದು.

ಶ್ರೀಮದುತ್ತರಕಾಂಡವು ಹಿಂದಿನ ಕಾಂಡಗಳಂತೆಯೇ ಓದತಕ್ಕದ್ದಾಗಿದೆ. ಎಲ್ಲಿ ನೋಡಿದರೂ ವಾಲ್ಮೀಕಿಗಳ ಮಹೋದಾರವಾದ ಕವಿತ್ವ. ಸನ್ನಿವೇಶಗಳು ಮರ್ಮಭೇದಕವಾದವು. ಮಾತುಗಳು ಅರ್ಥವತ್ತಾದವು; ಶಬ್ದಗಳು ಶ್ರವಣ ಮೋಹಕವಾದವು. ಓದಿ ರಸವನ್ನು ಸವಿಯಬೇಕು; ಮಾತುಗಳಿಂದ ಹೇಳಲಾಗುವುದಿಲ್ಲ. ಇಲ್ಲಿ ಸ್ವಾನುಭವವೇ ಪ್ರಮಾಣ.

ಸ್ವಾನುಭೂತ್ಯೇಕಮಾನಾಯ

—ಎಂಬುದು ಪರಬ್ರಹ್ಮ ವಿಷಯದಲ್ಲಿ ಹೇಳಿದ ಮಾತು. ಬ್ರಹ್ಮಾನಂದವು ಮುಖ್ಯವಾದದ್ದು ಶ್ರೀಮದ್ರಾಮಾಯಣದಲ್ಲಿ.

ಕಾವ್ಯದಲ್ಲಿ ಸ್ವಾರಸ್ಯ ಸ್ಥಾನಗಳು ಮೂರು; ಹೀಗೆ:

ಮೊದಲು ಅಕ್ಷರ. ಇದು ಕಿವಿಯನ್ನು ನಲಿಸಿ ಒಲಿಸಿಕೊಳ್ಳುತ್ತದೆ. ಈ ಶ್ರವಣಾಕರ್ಷೆಯೇ ಕಾವ್ಯಾನುಭವದಲ್ಲಿ ಮೊದಲನೆಯ ಮೆಟ್ಟಿಲು.

ಅನಂತರ, ಅಕ್ಷರ ಸಮೂಹವಾದ ಪದವು ಮನಸ್ಸಿಗೆ ರಸದ ರುಚಿಯನ್ನು ಕೊಡುತ್ತದೆ.

ಹೀಗೆ ಕಿವಿಯ ಮೇಲಿನ ಹಿಡಿತ ಸ್ಥಿರಪಡುತ್ತದೆ. ಆಮೇಲೆ, ಮೂರನೆಯದಾಗಿ, ಪದಬಂಧವಾದ ವಾಕ್ಯವು ಬುದ್ಧಿಗೆ ಅರ್ಥವನ್ನು ಪೂರ್ಣ ಮಾಡುತ್ತದೆ; ನಮ್ಮ ಅನುಭವವು ಪೂರ್ತಿಯಾಗುತ್ತದೆ.

ಕಿವಿ, ಮನಸ್ಸು, ಬುದ್ಧಿ–ಇವು ಕಾವ್ಯಾನುಭವ ಸ್ಥಾನಗಳು.

ಈ ಮರ್ಮವನ್ನು ತಿಳಿದ ಮಹಾನುಭಾವನು, ಯಾರೋ ಪೂರ್ವಿಕನು, ಹೇಳಿದ:

ಕೂಜಂತಂ ರಾಮರಾಮೇತಿ
ಮಧುರಂ ಮಧುರಾಕ್ಷರಮ್‍ ।
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಮ್‍ ॥

ಹೀಗೆ ಅಕ್ಷರದ ಸೊಬಗನ್ನು ನಮ್ಮ ಅನುಭವಕ್ಕೆ ತರುವವರು ವಾಲ್ಮೀಕಿಗಳು. ಜಯದೇವ ಮೊದಲಾದ ಕವಿಗಳು ಪದದ ಮತ್ತು ವಾಕ್ಯದ ಸೌಭಾಗ್ಯವನ್ನು ತೋರಿಸಿದ್ದಾರೆ; ವಾಲ್ಮೀಕಿಗಳಂತೆ ಪ್ರತ್ಯಕ್ಷರ ಸೌಭಾಗ್ಯವನ್ನು, —ಅದರ ಕಾಂತಿಯನ್ನು, ವೀರ್ಯವನ್ನು, ನಿದರ್ಶನಪಡಿಸಿರುವ ಕವಿಗಳು ವಿರಳ. ಅವರ ಅಕ್ಷರಗಳು, ಮಧುರವಾಗಿ, ತೇಜೋವಂತವಾಗಿ, ಕೋಮಲವಾಗಿ, ಇರುವುದರಿಂದ ರಾಮಾಯಣವು ಎಲ್ಲೆಲ್ಲಿಯೂ ಸುಂದರವಾಗಿದೆ. ರಾಮಾಯಣದ ಮುಖ್ಯಗುಣ ಕೋಮಲತೆ.

ನನ್ನ ಪೂಜ್ಯ ಸ್ನೇಹಿತರಾದ ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾ ಅವರ ಕನ್ನಡ ಅನುವಾದದ ವಿಷಯವಾಗಿ ಒಂದು ಮಾತನ್ನು ವಿಶೇಷವಾಗಿ ಹೇಳಲು ಇದು ಅವಕಾಶ. ಅವರ ಅನುವಾದವು ಸ್ವತಂತ್ರ ರಚನೆಯೋ—ಎಂಬಷ್ಟು ಮನೋಹರವಾಗಿದೆ. ಕನ್ನಡದ ಭಾಷಾ ಮರ್ಯಾದೆಯನ್ನು ಎಲ್ಲೆಲ್ಲಿಯೂ ಪಾಲಿಸಿದ್ದಾರೆ. ಎಷ್ಟೋ ಮಂದಿ ಸಂಸ್ಕೃತ ಬಲ್ಲವರಿಗೂ ಇವರ ಅನುವಾದವು ಉಪಕಾರಕವಾದೀತು. ನಮ್ಮ ಸ್ಕೂಲು–ಕಾಲೇಜುಗಳಲ್ಲಿ ಯಾವಯಾವುದೋ ಅಸಂಬದ್ಧ ಲೇಖನಗಳನ್ನು ಪಠ್ಯಪುಸ್ತಕಗಳನ್ನಾಗಿಡುತ್ತಿದ್ದಾರೆ. ಅವುಗಳಿಗೆ ಬದಲಾಗಿ ಈ ಕನ್ನಡ ರಾಮಾಯಣದ ಯಾವುದಾದರೂ ಒಂದು ಭಾಗವನ್ನು ಪಠ್ಯಪುಸ್ತಕವನ್ನಾಗಿ ನಿಯಮಿಸಿದರೆ, ಈ ವ್ಯಾಜದಿಂದಲಾದರೂ ದೇಶದ ಚರಿತ್ರೆ, ಭಾಷೆ ಎರಡನ್ನೂ ನಮ್ಮ ಯುವಕರಿಗೆ ಪರಿಚಯ ಮಾಡಿಸಿದಂತಾಗುವುದು. ಈ ರಾಮಾಯಣದ ಕನ್ನಡ ವಿಷಯದಲ್ಲಿ ನಾನು ತುಂಬ ಹೆಮ್ಮೆಪಟ್ಟುಕೊಂಡಿದ್ದೇನೆ. ನನ್ನಂತೆ ಗ್ರಂಥವನ್ನೋದಿದವರು ಅದನ್ನು ಒಪ್ಪಿಯಾರು–ಎಂಬ ನಂಬಿಕೆ ನನಗೆ ದೃಢವಾಗಿದೆ.

ಕನ್ನಡ ಮಹಾಜನರು ಶ್ರೀಮದ್ರಾಮಾಯಣವನ್ನು ಆಮೂಲಾಗ್ರವಾಗಿ ಪಾರಾಯಣ ಮಾಡಿ ಸಂತೋಷಿಸಲೆಂದೂ, ಶ್ರೀ ಸೀತಾರಾಮಾನುಗ್ರಹದಿಂದ ಅವರು ಯಶಸ್ವಿಗಳಾಗಿ ಶ್ರೀಯಸ್ಸಂಪನ್ನರಾಗಲೆಂದೂ ಆಶಿಸುತ್ತೇನೆ.

ಇಂತು ಸರ್ವಂ ಶಿವಂ (೧೯೭೪)

No comments:

Post a Comment