Tuesday 16 January 2024

ಭಾಗ 11 & 12 - ಯುದ್ಧಕಾಂಡ–ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಭಾಗ 11 & 12 - ಯುದ್ಧಕಾಂಡ–ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಅಯೋಧ್ಯಾನಗರೀ ಧನ್ಯಾ
ಯಾ ದದರ್ಶ ಜಯೋಜ್ಜ್ವಲಮ್‍ ।
ಸೀತಾತೃಪ್ತಂ ಲಕ್ಷ್ಮಣಾಪ್ತಂ
ಶ್ರೀರಾಮಂ ಪುನರಾಗತಮ್‍ ॥

ಧನ್ಯಸ್ತಪಸ್ವೀ ಭರತಃ
ಸೌಭ್ರಾತ್ರಾವಿಷ್ಟಮಾನಸಃ ।
ರಾಜಪೀಠಮನಾರುಹ್ಯ
ಯೋಽಭೂದ್ರಾಜ್ಯಧುರಂಧರಃ ॥

ಪರಮಮಂಗಲನಿಧಿಯಾದ ಯಾವ ವಿಶ್ವಚೈತನ್ಯವು ವಾಲ್ಮೀಕಿಗಳ ಹೃದಯದಿಂದ ಕಾವ್ಯಪ್ರವಾಹವನ್ನು ಹೊರಹೊಮ್ಮಿಸಿತೋ, ಯಾವ ಮಹಾಚೈತನ್ಯವು ಕನ್ನಡ ಜನದ ಪ್ರಯೋಜನಕ್ಕಾಗಿ ಆ ಕಾವ್ಯ ಪ್ರವಾಹವನ್ನು ಹರಿಯಿಸಬೇಕೆಂದು ನಮ್ಮ ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರಲ್ಲಿ ಪ್ರೇರಣೆಯುಂಟು ಮಾಡಿತೋ, ಮತ್ತು ಯಾವ ದಿವ್ಯ ಚೈತನ್ಯವು ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮರವರ ಲೇಖನಿಯಲ್ಲಿ ಅನುಗ್ರಹ ತುಂಬಿತೋ ಆ ಭಗವಚ್ಚೈತನ್ಯದ ಕೃಪೆಯಿಂದ ಈಗ ನಾವು ಈ ಪರಮಪಾವನವಾದ ಪ್ರಯತ್ನದ ಉಪಾಂತ ಘಟ್ಟವನ್ನು ಮುಟ್ಟಿದ್ದೇವೆ. ಇಲ್ಲಿಯವರೆಗೆ ನಮ್ಮನ್ನು ಕಾಪಾಡಿ ನಡಸಿಕೊಂಡು ಬಂದಿರುವ ಶ್ರೀ ಸೀತಾರಾಮ ಭಗವಂತರ ಕರುಣೆ ಇನ್ನು ಮುಂದೆಯೂ ನಮ್ಮನ್ನು ನಡಸಿ ಉತ್ತರಕಾಂಡದ ಸಮಾಪ್ತಿಯನ್ನು ಮುಟ್ಟಿಸೀತೆಂದು ನಂಬಿ ಈಗ ನಮ್ಮ ಕೃತಜ್ಞತೆಯ ನಮಸ್ಕಾರಗಳನ್ನು ಸಲ್ಲಿಸೋಣ.

ಕಥಾಸ್ವಾರಸ್ಯ

ಯುದ್ಧಕಾಂಡದ ಪೂರ್ವಾರ್ಧದ ಕಥೆ ಸೇತುಬಂಧನದ ಪ್ರಕರಣದಿಂದ ಪ್ರಾರಂಭವಾಗಿ ಕುಂಭಕರ್ಣವಧೆಯವರೆಗೆ ಸಾಗಿದೆಯಷ್ಟೆ? ಈಗಿನ ಉತ್ತರಾರ್ಧ ಭಾಗದಲ್ಲಿ ಯುದ್ಧ ಪ್ರಸಂಗ ಮುಂದುವರಿಯುತ್ತದೆ. ಕಥಾಧಾರೆ ಏಕಪ್ರಕಾರವಾದ ಸಾರಸ್ಯದಿಂದ ತುಂಬಿ ಹರಿದಿದೆ. ವಾಲ್ಮೀಕಿಗಳದು ಕಥೆ ಹೇಳುವುದರಲ್ಲಿ ನಿಸ್ಸೀಮವಾದ ನಿಪುಣತೆ. ಕಥೆ ಹೇಳುವ ಅಜ್ಜನ ಸುತ್ತಮುತ್ತ ಚಿಕ್ಕಮಕ್ಕಳು ನೆರೆಯುವಂತೆ ನಾವು ಸರಳ ಹೃದಯರಾಗಿ ಸ್ವಸ್ಥಚಿತ್ತರಾಗಿ ಕಥೆ ಕೇಳಬೇಕು. ಯಾವ ಚಮತ್ಕಾರವನ್ನೂ ನಿರೀಕ್ಷಿಸಬಾರದು. ಯಾವ ಪ್ರಶ್ನೆಯನ್ನೂ ಎತ್ತಬಾರದು. ಯುದ್ಧ ವರ್ಣನೆಯಲ್ಲಿ ಸ್ವಾರಸ್ಯ ಕಾಣಬೇಕಾದರೆ ಈ ಸ್ವಾಭಾವಿಕವಾದ ಸರಳತೆಯೂ ಕೃತಕವಲ್ಲದ ಕುತೂಹಲವೂ ನಮ್ಮಲ್ಲಿರಬೇಕು. ಆಗ ನಮಗೆ ಅನುಭವವಾಗುತ್ತದೆ ವಾಲ್ಮೀಕಿಗಳ ಕೌಶಲ. ಹೇಗೆ ಕಥೆ ಹೇಳುತ್ತಾರೆ! ಕ್ಷಣಕ್ಷಣವೂ ನಮ್ಮ ಮನಸ್ಸು ಕೆರಳಿರುತ್ತದೆ. ಆ ಹೆಸರುಗಳನ್ನೇ ನೋಡಿರಿ: ದೇವಾಂತಕ, ನರಾಂತಕ, ಮಹೋದರ, ಮಹಾಪಾರ್ಶ್ವ, ಕುಂಭ, ನಿಕುಂಭ, ಅತಿಕಾಯ, ಮಹಾಕಾಯ. ವೀರರಸವನ್ನು ಕಲಕುವುದಕ್ಕೆ ಈ ಹೆಸರುಗಳೇ ಸಾಕು; ಆಮೇಲೆ ಅವರು ಬಿಡುವ ಅಸ್ತ್ರಪ್ರತ್ಯಸ್ತ್ರಗಳು: ಇತ್ತಕಡೆಯಿಂದ ಆಗ್ನೇಯಾಸ್ತ್ರ, ಅತ್ತಕಡೆಯಿಂದ ವಾರುಣಾಸ್ತ್ರ. ಇಲ್ಲಿಂದ ಐಂದ್ರಾಸ್ತ್ರ, ಅಲ್ಲಿಂದ ಪಾಶುಪತಾಸ್ತ್ರ. ಇವನು ಮೂರು ಬಾಣಗಳನ್ನು ಬಿಟ್ಟ; ಅವನು ಐದು ಬಾಣಗಳಿಂದ ಅದನ್ನು ಕತ್ತರಿಸಿದ. ಇವನು ಬಂಡೆ ತಂದು ಅಪ್ಪಳಿಸಿದ; ಅವನು ಮೋಡ ಕವಿಸಿ ಕುರುಡು ಮಾಡಿದ. ಹೀಗೆ ವರ್ಣನೆಗಳು ರಾಮಲಕ್ಷ್ಮಣರ ಬಾಣಗಳಂತೆ ಪುಂಖಾನುಪುಂಖವಾಗಿ ಹೊರಟು ನಮ್ಮನ್ನು ಬೆರಗುಗೊಳಿಸುತ್ತವೆ.

ಮಾಯಾಸೀತೆ

ರಾವಣನ ಮಗನಾದ ಇಂದ್ರಜಿತ್ತು ಮಾಯಾಯುದ್ಧಕ್ಕೆ ತೊಡಗುತ್ತಾನೆ. ಗಗನ ಮಂಡಲದಲ್ಲಿ ಮೋಡಗಳನ್ನು ಕವಿಸಿ ಅವುಗಳ ಮರೆಯಲ್ಲಿ ತಾನು ನಿಂತು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಈ ಘಳಿಗೆ ಈ ಕಡೆಯಿಂದ; ಇನ್ನೊಂದು ಘಳಿಗೆ ಬೇರೊಂದು ದಿಕ್ಕಿನಿಂದ; ಮತ್ತೊಂದು ಘಳಿಗೆ ಮಗದೊಂದು ದಿಕ್ಕಿನಿಂದ. ಹೀಗೆ ಅವನು ಎಲ್ಲಿದ್ದಾನೆ ಎಂದು ಗೊತ್ತು ಮಾಡುವುದೇ ರಾಮಲಕ್ಷ್ಮಣರಿಗೆ ಕಷ್ಟವಾಗುತ್ತದೆ. ಕಡೆಗೆ ಇಂದ್ರಜಿತ್ತು ಮಾಯಾಸೀತೆಯನ್ನು ತರುತ್ತಾನೆ.

ಮೋಹನಾರ್ಥಂ ತು ಸರ್ವೇಷಾಂ
ಬುದ್ಧಿಂ ಕೃತ್ವಾ ಸುದುರ್ಮತಿಃ ।
ಹನ್ತುಂ ಸೀತಾಂ ವ್ಯವಸಿತಃ
ವಾನರಾಭಿಮುಖೋ ಯಯೌ ॥ ಸರ್ಗ ೮೧, ಶ್ಲೋಕ ೬

ಆ ಸ್ಥಿತಿಯಲ್ಲಿ ಸೀತೆಯನ್ನು ನೋಡಿ,

ಬಾಷ್ಪಪರ್ಯಾಕುಲಮುಖಃ
ಹನೂಮಾನ್‍ ವ್ಯಥಿತೋಽಭವತ್‍ ॥ ಸರ್ಗ ೮೧, ಶ್ಲೋಕ ೧೨

ಹನುಮಂತನು ಮಿಕ್ಕ ವಾನರರಿಂದ ಕೂಡಿ ಇಂದ್ರಜಿತುವಿನ ಕಡೆಗೆ ನುಗ್ಗಿದ. ಇಂದ್ರಜಿತ್ತು ಸುಮ್ಮನಿದ್ದನೆ?

ತಾಂ ಸ್ತ್ರಿಯಂ ಪಶ್ಯತಾಂ ತೇಷಾಂ
ತಾಡಯಾಮಾಸ ರಾವಣಿಃ ॥ ಸರ್ಗ ೮೧, ಶ್ಲೋಕ ೧೬

ದೃಶ್ಯ ಕಣ್ಣಿಗೆ ಕಟ್ಟಿದಹಾಗಿದೆ. ಇಂದ್ರಜಿತ್ತು ಕೋಪೋದ್ರಿಕ್ತನಾಗಿ ಸೀತಮ್ಮನನ್ನು ಹೊಡೆದನಂತೆ. ಇವನ ಏಟು ಬಿದ್ದಂತೆ ಆಕೆ “ರಾಮ! ರಾಮ!” ಎಂದು ಕೂಗಿಕೊಂಡಳಂತೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಸೆಳೆದನಂತೆ. ಹನುಮಂತನು ಇಂದ್ರಜಿತ್ತುವನ್ನು ಕುರಿತು ಶಾಪವಿಡುತ್ತಾನೆ. ಇಂದ್ರಜಿತ್ತಾದರೋ ತನ್ನ ಹಟವನ್ನು ಬಿಡದೆ ಖಡ್ಗದಿಂದ ಸೀತೆಯನ್ನು ಹೊಡೆಯುತ್ತಾನೆ.

ಸಾ ಪೃಥಿವ್ಯಾಂ ಪೃಥುಶ್ರೋಣೀ
ಪಪಾತ ಪ್ರಿಯದರ್ಶನಾ ॥ ಸರ್ಗ ೮೧, ಶ್ಲೋಕ ೩೨

ಯಾವ ಹೆಂಗಸು ನೆಲಕ್ಕೆ ಬಿದ್ದರೂ ಅದು ದುಃಖಕಾರಕವೇ. ಸೀತೆಯಂಥ ಪರಮ ಸುಂದರಿ ಅಂಥ ಕ್ರೂರತೆಗೆ ತುತ್ತಾದಾಗ ಅದನ್ನು ಯಾರು ಸಹಿಸಿಯಾರು? ಇದನ್ನು ನೋಡಿದ ಎಲ್ಲರೂ ಭಯವಿಷಾದಗಳಿಗೆ ವಶರಾದರು. ಆಂಜನೇಯ ಮೊದಲಾದವರು ಇಂದ್ರಜಿತ್ತನ್ನು ಸಂಹಾರ ಮಾಡುವುದು ತಮಗೆ ಸಾಧ್ಯವಾಗದೆಂದು ಭಾವಿಸಿ, ಅದು ಹಾಗಿದ್ದರೂ ತಾವು ಹಿಮ್ಮೆಟ್ಟತಕ್ಕದ್ದಲ್ಲವೆಂದು ನಿಶ್ಚಯಿಸಿ ತಮ್ಮ ಪ್ರಾಣವನ್ನು ತ್ಯಜಿಸುವವರೆಗೂ ತಾವು ಹೋರಾಡತಕ್ಕದ್ದೇ ಸರಿ ಎಂದು ಪ್ರತಿಜ್ಞೆ ಮಾಡಿಕೊಂಡರು. ಇಂದ್ರಜಿತ್ತಾದರೋ ತನ್ನ ಪ್ರಯತ್ನ ಸಾಗುವುದು ಕಷ್ಟವೆಂದು ಕಂಡುಕೊಂಡು ಲಂಕಾಪಟ್ಟಣದ ನಿಕುಂಭಿಳಾದೇವಿಯ ಗುಹೆಯೊಳಗೆ ಆ ದೇವಿಯನ್ನೊಲಿಸಿಕೊಳ್ಳಲು ಹೋಮ ಮಾಡತೊಡಗಿದನು.

ಲಕ್ಷ್ಮಣನ ನಿರಾಶೆ

ಶ್ರೀರಾಮನಾದರೋ ಈ ವೃತ್ತಾಂತವನ್ನು ಕೇಳಿ ತನ್ನ ಮನಸ್ಸಿನ ಕಳವಳವನ್ನು ವಾನರ ನಾಯಕನಾದ ಜಾಂಬವಂತನಲ್ಲಿ ಹೇಳಿಕೊಂಡ. ಆ ದುಃಖ ಸಮಯದಲ್ಲಿ ಲಕ್ಷ್ಮಣನು ಹೇಳಿದ ಒಂದು ಮಾತು ಸ್ಮರಣಾರ್ಹವಾಗಿದೆ.

ಶುಭೇ ವರ್ತ್ಮನಿ ತಿಷ್ಠಂತಂ
ತ್ವಾಮಾರ್ಯ ವಿಜಿತೇಂದ್ರಿಯಮ್‍ ।
ಅನರ್ಥೇಭ್ಯೋ ನ ಶಕ್ನೋತಿ
ತ್ರಾತುಂ ಧರ್ಮೋ ನಿರರ್ಥಕಃ ॥ ಸರ್ಗ ೩, ಶ್ಲೋಕ ೧೪

ನಮಗೆಲ್ಲ ಹೀಗೆ ಪದೇ ಪದೇ ಅನ್ನಿಸುತ್ತಿಲ್ಲವೆ? “ಧರ್ಮೋ ನಿರರ್ಥಕಃ” –ಈ ಎರಡು ಸಣ್ಣ ಮಾತುಗಳಲ್ಲಿ ಎಷ್ಟು ಅಪಾರವಾದ ಉದ್ವೇಗ ಅಡಗಿದೆ!

ಧರ್ಮೋ ಭವತ್ಯಧರ್ಮಶ್ಚ
ಪರಸ್ಪರವಿರೋಧಿನೌ ॥
ಧರ್ಮೇಣೋಪಲಭೇದ್ಧರ್ಮಂ
ಅಧರ್ಮಂ ಚಾಪ್ಯಧರ್ಮತಃ ॥ ಸರ್ಗ ೮೩, ಶ್ಲೋಕ ೧೮, ೧೯

ಹೀಗೆ ಹತಾಶನಾದ ಲಕ್ಷ್ಮಣಸ್ವಾಮಿಯೇ ಇಂದ್ರಜಿತುವನ್ನು ಸಂಹಾರ ಮಾಡಿದ ಧೀರ. ಆತನು ಅಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಹೇಳುತ್ತಿದ್ದಾನೆ. ಆಗ ಅಲ್ಲಿಗೆ ಬಂದ ವಿಭೀಷಣನು ರಾಮನಿಗೆ ಹೇಳುತ್ತಾನೆ: “ಆ ಸೀತಾ ವಧೆಯು ನಿಜವಾದದ್ದಲ್ಲ. ಅದು ಮಾಯಾದೃಶ್ಯ. ಸೀತೆಯನ್ನು ಯಾರೂ ಕೊಂದಿಲ್ಲ. ಯಾರಿಂದಲೂ ಆಕೆಯನ್ನು ಕೊಲ್ಲಲಾಗದು. ಇಂದ್ರಜಿತ್ತು ಈ ಮಾಯೆಯಿಂದ ನಿಮಗೆ ಮೋಹ ಕವಿಸಿ ನಿಮ್ಮನ್ನು ಎದೆಗುಂದಿಸಿ, ತಾನು ನಿಕುಂಭಿಳೆಗೆ ಹೋಗಿ ಹೋಮ ಮಾಡುತ್ತಿದ್ದಾನೆ. ನಾನು ಈ ರಾವಣನ ಉಪಾಯವನ್ನು ಬಲ್ಲೆ. ನೀನು ನಮ್ಮನ್ನು ಲಕ್ಷ್ಮಣನೊಡನೆ ಕಳುಹಿಸು. ಲಕ್ಷ್ಮಣನು ಇಂದ್ರಜಿತುವನ್ನು ಸಂಹರಿಸಿಯಾನು.”

ಅದರಂತೆ ವಾನರಸೇನಾಸಮೇತನಾಗಿ ಲಕ್ಷ್ಮಣನು ಇಂದ್ರಜಿತುವನ್ನು ಎದುರಿಸಲು ಉದ್ಯುಕ್ತನಾಗಿ ನಿಕುಂಭಿಳೆಗೆ ಹೋಗುತ್ತಾನೆ. ಲಕ್ಷ್ಮಣನಿಗೂ ಇಂದ್ರಜಿತುವಿಗೂ ಯುದ್ಧ ಪ್ರಾರಂಭವಾಗಿದೆ. ಇಂದ್ರಜಿತುವಿನ ಪರಾಕ್ರಮವೆಂಥಾದ್ದೆಂಬುದನ್ನು ಲಕ್ಷ್ಮಣನು ಕಂಡುಕೊಂಡಿದ್ದಾನೆ. ಕೇವಲ ಶಸ್ತ್ರಾಸ್ತ್ರಗಳ ಶಕ್ತಿಯಿಂದ ಇಂದ್ರಜಿತುವನ್ನು ವಧಿಸಲಾಗದೆಂಬುದನ್ನು ಲಕ್ಷ್ಮಣನು ತಿಳಿದುಕೊಂಡಿದ್ದಾನೆ. ಶಸ್ತ್ರಬಲಕ್ಕಿಂತ ಮಹತ್ತರವಾದ ಬಲ ತನ್ನ ಕಾರ್ಯಕ್ಕೆ ಅವಶ್ಯವೆಂಬುದನ್ನು ಲಕ್ಷ್ಮಣನು ಮನಗಂಡು, ಅದಕ್ಕಾಗಿ ಮೊದಲು ತನ್ನ ಅಣ್ಣ ಶ್ರೀರಾಮನ ಬಳಿ ಹೋಗಿ ಆತನ ಪಾದಗಳನ್ನು ಸೇವಿಸುತ್ತಾನೆ.

ಬಳಿಕ ಯುದ್ಧಾರಂಭವಾಗುತ್ತದೆ. ಕೊಂಚ ಶಸ್ತ್ರಾಸ್ತ್ರಗಳ ವಿನಿಮಯ ನಡೆಯುತ್ತದೆ. ವಿಭೀಷಣನು ಲಕ್ಷ್ಮಣನಿಗೆ ಉಪಾಯ ಸೂಚನೆ ಮಾಡಿ ಅವನನ್ನು ಹುರಿದುಂಬಿಸುತ್ತಾನೆ. ಇಂದ್ರಜಿತುವಿಗೂ ಲಕ್ಷ್ಮಣನಿಗೂ ವಾಗ್ವಾದ ನಡೆಯುತ್ತದೆ. ಆ ವಿವಾದದಲ್ಲಿ ಸ್ವಾರಸ್ಯ ತುಂಬಿದೆ.

ಲಕ್ಷ್ಮಣನ ಶಪಥ

ಲಕ್ಷ್ಮಣನು ತನ್ನ ಕಟ್ಟಕಡೆಯ ಬಾಣವನ್ನು ಪ್ರಯೋಗಿಸುವಾಗ ಒಂದು ಶಪಥ ಮಾಡುತ್ತಾನೆ. ಇದು ಪ್ರಸಿದ್ಧವಾದದ್ದು. ಈ ವಾಕ್ಯದಲ್ಲಿ ಲಕ್ಷ್ಮಣನು ಶ್ರೀರಾಮನ ವಿಷಯದಲ್ಲಿ ಇಟ್ಟುಕೊಂಡಿದ್ದ ನಂಬಿಕೆ ಅಭಿವ್ಯಕ್ತವಾಗಿದೆ. ಅದು ಹೀಗೆ:

ಧರ್ಮಾತ್ಮಾ ಸತ್ಯಸಂಧಶ್ಚ
ರಾಮೋ ದಾಶರಥಿರ್ಯದಿ ।
ಪೌರುಷೇ ಚಾಪ್ರತಿದ್ವಂದ್ವಃ
ಶರೈನಂ ಜಹಿ ರಾವಣಿಮ್‍ ॥ ಸರ್ಗ ೯೧, ಶ್ಲೋಕ ೭೨

“ಶ್ರೀರಾಮನು (೧) ಧರ್ಮಾತ್ಮನಾಗಿದ್ದಲ್ಲಿ, (೨) ಸತ್ಯಸಂಧನಾಗಿದ್ದಲ್ಲಿ, (೩) ದಶರಥಪುತ್ರನಾಗಿದ್ದಲ್ಲಿ, (೪) ಪರಾಕ್ರಮದಲ್ಲಿ ಎದುರಾಳಿಯಿಲ್ಲದವನಾಗಿದ್ದಲ್ಲಿ, ಎಲೈ ಬಾಣವೆ, ನೀನು ರಾವಣಪುತ್ರನಾದ ಇವನನ್ನು ಹೊಡೆದು ಕೊಲ್ಲು.”

ಈ ವಾಕ್ಯದಲ್ಲಿ ನಾಲ್ಕು ಕರಾರುಗಳನ್ನು ಹೇಳಿದ್ದಾನೆ ಲಕ್ಷ್ಮಣ. ಇದರ ಮೇಲೆ ವ್ಯಾಖ್ಯಾನಕಾರರ ಯುಕ್ತಿ ಬೆಳೆಯಲು ಅವಕಾಶ ದೊರೆತಿದೆ. ಅವರ ತಕರಾರಿಗೆ ಮುಖ್ಯಾಧಾರವಾದದ್ದು “ರಾಮೋ ದಾಶರಥಿರ್ಯದಿ” ಎಂಬ ಪದಸಮುಚ್ಚಯ. ಈ ತಕರಾರನ್ನು ದಾಟಲು ಸುಲಭವಾದ ದಾರಿಯೊಂದುಂಟು. “ದಾಶರಥಿ” ಎಂಬುದನ್ನು ರಾಮ ಎಂಬ ಪದಕ್ಕೆ ವಿಶೇಷಣ ಮಾಡಿಕೊಂಡರಾಯಿತು. “ದಶರಥಪುತ್ರನಾದ ರಾಮನು” ಎಂದರ್ಥ. “ದಶರಥಪುತ್ರನಾದ” ಎಂದು ಹೇಳಬೇಕಾದದ್ದೇಕೆ ಎಂದರೆ ಭಾರ್ಗವರಾಮ ಮೊದಲಾದವರಿಂದ ಪ್ರತ್ಯೇಕವೆಂದು ತೋರಿಸುವುದಕ್ಕೆ.

ಹೀಗೆ ಮಾಡದೆ “ರಾಮನು ದಶರಥಪುತ್ರನಾಗಿರುವ ಪಕ್ಷದಲ್ಲಿ” ಎಂದು ಅರ್ಥಮಾಡುವುದು ಸಾಧ್ಯವಿದೆ. ಇದು ಲೋಕದಲ್ಲಿ ಶಪಥ ನುಡಿಯುವ ರೀತಿಯಾಗಿ ಪ್ರಸಿದ್ಧವಾಗಿದೆ. ಈಗಲೂ ಸಾಮಾನ್ಯ ಜನರು ರೋಷಾವೇಶದಲ್ಲಿ ಮಾತನಾಡುವಾಗ “ನಾನು ಇಂಥಾವನ ಮಗನಾಗಿ ಹುಟ್ಟಿ ಇಂಥಾವನ ಹೆಸರು ಹೇಳಿಕೊಂಡು” –ಹೀಗೆ ಆಣೆಯಿಡುವುದು ರೂಢಿಯಲ್ಲಿದೆ. ಈ ಲೋಕರೂಢಿಯನ್ನು ಲಕ್ಷ್ಮಣನು ಅನುಸರಿಸಿದನೆಂದು ಭಾವಿಸುವುದರಲ್ಲಿ ತಪ್ಪೇನಿದೆ? ಆ ಧೋರಣೆಯಲ್ಲಿ ಒಂದು ಧೀರತನ, ಒಂದು ದಿಟ್ಟತನ ಕಾಣುತ್ತದೆ. ಕುಲದ ಹೆಸರನ್ನು ಹೇಳಿಕೊಳ್ಳುವುದು ಒಂದು ಹೆಮ್ಮೆ.

ಇನ್ನೊಂದು ಪ್ರಶ್ನೆ. “ರಾಮೋ ದಾಶರಥಿರ್ಯದಿ” –ಇದರ ವಿಷಯದಲ್ಲಿ ಸಂದೇಹ ಉಂಟೇನು? ರಾಮಲಕ್ಷ್ಮಣಾದಿಗಳು ಯಜ್ಞಪುರುಷನು ಕೊಟ್ಟ ಪಾಯಸದ ಪ್ರಭಾವದಿಂದ ಹುಟ್ಟಿದವರಲ್ಲವೆ? ಹೌದು. ಪಾಯಸದಿಂದ ಕೌಸಲ್ಯೆ ಮೊದಲಾದವರಿಗೆ ಗರ್ಭಧಾರಣ ಯೋಗ್ಯತೆ ಬಂದಿತು. ಈ ಕಾರಣದಿಂದ ಕೌಸಲ್ಯಾದಿಗಳ ಮಕ್ಕಳು ದಶರಥನ ಔರಸಪುತ್ರರಲ್ಲವೆಂದು ಸಾಧಿಸಲಾಗುತ್ತದೆಯೆ? ಹಾಗಾಗಲಾರದು. ಇಷ್ಟರಮೇಲೆ ದಶರಥನ ಜನಕತ್ವವನ್ನು ಅಂಗೀಕರಿಸಿದ್ದರಿಂದ ತಾನೆ ಶ್ರೀರಾಮನಿಗೆ ಪಿತೃವಾಕ್ಯಪಾಲನೆಯ ಕರ್ತವ್ಯವು ವಿಹಿತವಾದದ್ದು? ಹೀಗೆ ಶ್ರೀರಾಮನ ಮಾತಿನಿಂದಲೇ ಆತನ ದಾಶರಥಿತ್ವ ಸಿದ್ಧವಾಗುತ್ತದೆ.

ಹಾಗಾದರೆ ಸಿದ್ಧವಿಷಯವನ್ನು ಲಕ್ಷ್ಮಣನು ಸಂದೇಹಾಸ್ಪದ ತೋರುವಂತೆ ನುಡಿದದ್ದೇಕೆ? ಲಕ್ಷ್ಮಣನಿಗೆ ತಾನು ಉಪಯೋಗಿಸಿದ ನಾಲ್ಕು ವಿಶೇಷಣಗಳಲ್ಲಿ ಯಾವುದರ ವಿಷಯದಲ್ಲೂ ಸಂದೇಹ ಕೊಂಚ ಮಾತ್ರವೂ ಇರಲಿಲ್ಲ. ಆತನಿಗೆ ಶ್ರೀರಾಮಚಂದ್ರನು ಧರ್ಮಾತ್ಮನೆಂಬುದು ಸ್ವತಸಿದ್ಧವಾದ ಮಾತು. ಹಾಗೆಯೇ ರಾಮನು ಸತ್ಯಸಂಧನೆಂಬ ಮಾತು. ಹಾಗೆಯೇ ರಾಮನು ದಶರಥಪುತ್ರನೆಂಬ ಮಾತು. ಹಾಗೆಯೇ ರಾಮನು ಅಪ್ರತಿಮವೀರನೆಂಬ ಮಾತು. ಹೀಗೆ ತನ್ನ ತಿಳಿವಳಿಕೆಗೆ ಸಿದ್ಧಾಂತವಾಗಿದ್ದದ್ದರಲ್ಲಿ ‘ಯದಿ’ ಎಂಬ ವಿಶೇಷಣದಿಂದ ಪ್ರಶ್ನಾವಕಾಶ ಕಲ್ಪಿಸಿರುವುದು ಆತನ ವೀರೋದ್ವೇಗದ ಧ್ವನಿ.

ಯಾವುದು ಪರಮಸತ್ಯವೋ ಅದನ್ನು ಕುರಿತು ಲಕ್ಷ್ಮಣನು ಪ್ರತಿಜ್ಞೆ ಮಾಡುತ್ತಾನೆ. “ನಾನು ಹೇಳುವ ನಾಲ್ಕು ಮಾತುಗಳೂ ನಿಸ್ಸಂದೇಹವಾದವು. ಆದದ್ದರಿಂದ ಆ ಸತ್ಯ ಪರೀಕ್ಷೆಗಾಗಿ ಈ ಬಾಣವನ್ನು ಬಿಡುತ್ತೇನೆ. ಸತ್ಯ ಗೆಲ್ಲುತ್ತದೆ. ಆದದ್ದರಿಂದ ಈ ನಾಲ್ಕು ಸತ್ಯಗಳನ್ನು ಹೇಳುತ್ತೇನೆ. ಶ್ರುತಿ ಹೇಳುತ್ತದೆ, ‘ಸತ್ಯಮೇವ ಜಯತೇ, ನಾನೃತಮ್‍’ ಎಂದು. ಪೂರ್ವಿಕರು ಹೇಳುತ್ತಾರೆ, ‘ಯತೋ ಧರ್ಮಸ್ತತೋ ಜಯಃ’ ಎಂದು. ಈ ವಾಕ್ಯಗಳು ನಿಜವಾಗಿರುವ ಪಕ್ಷಕ್ಕೆ ಸತ್ಯಧರ್ಮನಿಷ್ಠನಾದವನ ಹೆಸರನ್ನು ಹೇಳಿ ಈ ಬಾಣವನ್ನು ಬಿಡುತ್ತೇನೆ. ಅದು ನನ್ನ ಮಾತನ್ನು ಸುಳ್ಳುಮಾಡಲಾರದು” –ಹೀಗೆಂಬುದು ಲಕ್ಷ್ಮಣನ ಅಂತರ್ಭಾವ. “ನನ್ನ ಬಾಣವು ನನಗಾಗಿ ಗೆಲ್ಲಬೇಕಾಗಿಲ್ಲ. ಸತ್ಯಧರ್ಮಗಳಿಗಾಗಿ ಅದು ಗೆಲ್ಲಲಿ. ನನ್ನಲ್ಲಿ ಸತ್ತ್ವ ಸಾಲದಿದ್ದರೂ ರಾಮ ಮಹಿಮೆಯಿಂದ ಅದಕ್ಕೆ ಸತ್ತ್ವ ಬರಲಿ.” –ಹೀಗೆಂಬುದು ಲಕ್ಷ್ಮಣನ ಅಂತರಂಗ.

ಇನ್ನೂ ವಿಚಾರಮಾಡಿ ನೋಡುವುದಾದರೆ ಧರ್ಮಾತ್ಮಾ, ಸತ್ಯಸಂಧಃ ಎಂಬೆರಡು ಮಾತುಗಳೇ ಲಕ್ಷ್ಮಣಶಪಥದ ಜೀವಾಳ. “ರಾಮೋ ದಾಶರಥಿರ್ಯದಿ” ಎಂಬುದು ಅಷ್ಟು ಮುಖ್ಯವಲ್ಲ. “ಪೌರುಷೇ ಚಾಪ್ರತಿದ್ವಂದ್ವಃ” ಎಂಬುದೂ ಗೌಣವೇ. ರಾಮನ ಶೌರ್ಯವು ಇನ್ನೂ ಪರೀಕ್ಷೆಗೆ ಬರಬೇಕಾಗಿದ್ದದ್ದು; ಆ ಹೊತ್ತಿಗೆ ಅದು ಇನ್ನೂ ಸಿದ್ಧವಾಗಿ ಇದ್ದದ್ದಾಗಿರಲಿಲ್ಲ. ಆಗಿಗೆ ಅದು ಸಾಧ್ಯ ವಸ್ತು; ಉತ್ತರೋತ್ತರ ದೃಷ್ಟಾಂತಕ್ಕೆ ಬರಬೇಕಾಗಿದ್ದದ್ದು. ಲಕ್ಷ್ಮಣನು ಒಂದು ವಿಶ್ವಾಸದ ಧೈರ್ಯದಿಂದ ಆ ಮಾತನ್ನಾಡುತ್ತಾನೆ. ಆದರೆ ರಾಮನ ಧರ್ಮ ಶ್ರದ್ಧೆ, ಸತ್ಯಸಂಧತೆ-ಇವೆರಡೂ ಆ ವೇಳೆಗೆ ಹಿಂದೆ ಎಷ್ಟೋ ಸಾರಿ ಸಿದ್ಧವಾಗಿದ್ದ ಸಂಗತಿ. ಲೋಕಕ್ಕೆ ಅತ್ಯಂತ ಅವಶ್ಯವಾಗಿದ್ದ ಗುಣಗಳು ಅವೆರಡು. ರಾಮನ ಧರ್ಮನಿಷ್ಠೆ, ರಾಮನ ಸತ್ಯನಿಷ್ಠೆ, ರಾಮನ ವಿರಕ್ತಿ, ನಿಃಸ್ವಾರ್ಥತೆ, ಸತ್ತ್ವಶುದ್ಧಿ, ಭೂತಹಿತಶ್ರದ್ಧೆ, ಶೌರ್ಯೌದಾರ್ಯಗಳು–ಇವೆಲ್ಲ ಜನ್ಯಗುಣಗಳು. ಇವಕ್ಕೆಲ್ಲ ಜನಕಗುಣವಾದದ್ದು ಧರ್ಮಶ್ರದ್ಧೆ, ಸತ್ಯಶ್ರದ್ಧೆಗಳು.

ಇನ್ನೂ ಒಂದು ಮಾತು. “ರಾಮೋ ದಾಶರಥಿರ್ಯದಿ” ಎಂಬುದರ ಧ್ವನಿಯನ್ನು ನಾವು ಗಮನಿಸಬೇಕು. “ದಶರಥನು ಸತ್ಯಕ್ಕಾಗಿ ಬದುಕಿದವನು. ಯಾರು ಸತ್ಯಧರ್ಮಗಳಿಗಾಗಿ ತನ್ನ ಸರ್ವಸ್ವವನ್ನೂ ಮುಡುಪಾಗಿಟ್ಟಿದ್ದನೋ ಅಂಥ ದಶರಥನ ಮಗ ಶ್ರೀರಾಮ. ವಂಶಗುಣ ಪ್ರಬಲತರವಾದದ್ದು. ಅದು ಈಗ ಗೆಲ್ಲುತ್ತದೆ” –ಎಂಬುದು ಲಕ್ಷ್ಮಣನ ನಂಬಿಕೆ.

ಇಂದ್ರಜಿಧ್ವದೆ

ಲಕ್ಷ್ಮಣನು ಹೀಗೆ ವೀರಪ್ರತಿಜ್ಞೆ ಮಾಡಿ ಪ್ರಯೋಗಿಸಿದ ಬಾಣವು ವ್ಯರ್ಥವಾಗಲಿಲ್ಲ.

ಹತಸ್ತು ನಿಪಪಾತಾಶು ಧರಣ್ಯಾಂ ರಾವಣಾತ್ಮಜಃ । ಸರ್ಗ ೯೧, ಶ್ಲೋಕ ೭೭

ಇಂದ್ರಜಿತುವಿನ ಪತನದಿಂದ ಯುದ್ಧವನ್ನು ಮುಪ್ಪಾಗಪಾಲು ಗೆದ್ದಂತಾಯಿತು. ಈಗ ಉಳಿದಿದ್ದವನು ನಿಸ್ಸಹಾಯನಾದ ರಾವಣನೊಬ್ಬ. ಕಪಿ ಸಮೂಹಕ್ಕೆ ಸಂತೋಷವಾದದ್ದು ಹಾಗಿರಲಿ; ವಾಲ್ಮೀಕಿಗಳಿಗೇ ಮೈಮರೆತು ಹೋಯಿತು. ನೋಡಿ, ಹೇಗೆ ಹೇಳುತ್ತಾರೆ:

ಕ್ಷ್ವೇಲಂತಶ್ಚ ನದಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ॥
ಲಾಂಗೂಲಾನಿ ಪ್ರವಿಧ್ಯಂತಃ ಸ್ಫೋಟಯಂತಶ್ಚ ವಾನರಾಃ ॥
ಲಕ್ಷ್ಮಣೋ ಜಯತೀತ್ಯೇವಂ ವಾಕ್ಯಂ ವಿಶ್ರಾವಯಂಸ್ತದಾ । ಸರ್ಗ ೯೧, ಶ್ಲೋಕಗಳು ೯೫–೯೭

ನಮ್ಮ ಕಾಲದಲ್ಲಿ ಕಾಲ್ಚೆಂಡಾಟ (Football) ನಡೆಯುತ್ತಿರುವಾಗ ಆಟ ಆಡುತ್ತಿರುವವರ ರಭಸ ಹಾಗಿರಲಿ, ನೋಡುತ್ತಿರುವವರಲ್ಲಿ ಯಾರು ಯಾರೋ ತಮತಮಗೆ ಬೇಕಾದ ಆಟಗಾರನು ಮುನ್ನುಗ್ಗಿ ಚೆಂಡನ್ನು ಒದ್ದಾಗ ಹೇಗೆ ಕೂಗಿಕೊಳ್ಳುತ್ತಾರೆ? ಹಾಗೆ ಕೂಗಿಕೊಂಡರಂತೆ ಕಪಿಗಳು, ಲಕ್ಷ್ಮಣನ ಜಯವನ್ನು ಕುರಿತು.

ರಾವಣನ ಕೋಪ

ರಾವಣಾಸುರನಿಗೆ ಪುತ್ರನಾಶದ ವಾರ್ತೆಯನ್ನು ಕೇಳಿದಾಗ ದುಃಖವಾದದ್ದಕ್ಕಿಂತ ಹೆಚ್ಚಾಗಿ ಕೋಪ ಬಂತು.

ದಂತಾನ್‍ ವಿದಶತಸ್ತಸ್ಯ ಶ್ರೂಯತೇ ದಶನಸ್ವನಃ ॥ ಸರ್ಗ ೯೩, ಶ್ಲೋಕ ೨೪

ಹಲ್ಲುಗಳನ್ನು ಕಟಕಟಾಯಿಸಿದನಂತೆ.

ಸಂಕ್ರುದ್ಧಃ ಖಡ್ಗಮಾದಾಯ ॥

ಅಭಿದುದ್ರಾವ ವೈದೇಹೀಂ ರಾವಣಃ ಕ್ರೋಧಮೂರ್ಛಿತಃ । ಸರ್ಗ ೯೩, ಶ್ಲೋಕಗಳು ೪೦–೪೫

ರಾವಣನನ್ನು ಪರಿವಾರದವರು ತಡೆದರು, ಸೀತಾದೇವಿಯು “ರಾವಣನು ನನ್ನನ್ನು ವಧಿಸುವುದಕ್ಕಾಗಿ ಬರುತ್ತಿದ್ದಾನೋ ಅಥವಾ ರಾಮಲಕ್ಷ್ಮಣರನ್ನು ಸಂಹರಿಸುವುದಕ್ಕಾಗಿ ಬರುತ್ತಿದ್ದಾನೋ? ನನ್ನ ಕಾರಣದಿಂದ ಇಷ್ಟೊಂದು ಅನರ್ಥಗಳು ನಡೆಯುತ್ತಿವೆಯಲ್ಲ! ಹನುಮಂತನು ಅಂದು ಹೇಳಿದ ಮಾತಿನಂತೆ ನಾನು ಅವನ ಬೆನ್ನೇರಿ ಹೋಗಿದ್ದಿದ್ದರೆ ಆಗಿತ್ತೋ ಹೇಗೋ!” ಎಂದು ಪ್ರಲಪಿಸಿದಳು. ಅಷ್ಟರಲ್ಲಿ ಸುಪಾರ್ಶ್ವನೆಂಬ ರಾಕ್ಷಸನು ದಶಕಂಠನನ್ನು ಕುರಿತು–

ಕಥಂ ನಾಮ ದಶಗ್ರೀವ
ಸಾಕ್ಷಾದ್ವೈಶ್ರವಣಾನುಜ ॥
ವೇದವಿದ್ಯಾವ್ರತಸ್ನಾತಃ
ಸ್ವಕರ್ಮನಿರತಸ್ಸದಾ ॥

ಸ್ತ್ರಿಯಾಃ ಕಸ್ಮಾದ್ವಧಂ ವೀರ
ಮನ್ಯಸೇ ರಾಕ್ಷಸೇಶ್ವರ ॥ ಸರ್ಗ ೯೩, ಶ್ಲೋಕಗಳು ೬೨–೬೪

–ಎಂದು ಮೊದಲಾಗಿ ಹೇಳಿ, “ನಿನ್ನ ಕೋಪವನ್ನು ರಾಮನಲ್ಲಿ ತೀರಿಸಿಕೋ” (“ರಾಘವೇ ಕೋಪಮುತ್ಸೃಜ”) ಎನ್ನುತ್ತಾನೆ,

ಬಳಿಕ ರಾವಣನು ತನ್ನ ಪರಿಜನದ ಸಭೆಯನ್ನು ಕುರಿತು ಯುದ್ಧಸನ್ನದ್ಧರಾಗುವಂತೆ ಪ್ರೇರಿಸುತ್ತಾನೆ. ಅವರು ಯುದ್ಧಾರಂಭಮಾಡುತ್ತಾರೆ. ಶ್ರೀರಾಮನು ಧನುಸ್ಸನ್ನೆತ್ತಿ ಅವರ ಮೇಲೆ ಬಾಣಗಳನ್ನು ಮಳೆಗೆರೆಯುತ್ತಾನೆ. ಆ ಬಾಣಗಳಿಂದ ಪೆಟ್ಟು ತಿಂದು ಮೈ ಕೈ ಮುರಿದುಕೊಂಡ ರಾಕ್ಷಸರು ದಿಗ್ಭ್ರಾಂತರಾಗಿ ರಾಮನ ಆಕಾರವನ್ನು ಕಾಣಲಾರದವರಾಗಿ ತಮ್ಮ ತಮ್ಮಲ್ಲಿಯೇ ಒಬ್ಬರನ್ನೊಬ್ಬರು ರಾಮನೆಂದುಕೊಂಡು ಬಡಿದಾಡಿದರು.

ಯುದ್ಧ ಹೀಗೆ ಮುಂದೆ ಸಾಗಿತು. ಲಕ್ಷ್ಮಣನು ಏಳು ಬಾಣಗಳಿಂದ ರಾವಣನ ಧ್ವಜವನ್ನೂ ಸಾರಥಿಯ ತಲೆಯನ್ನೂ ಕುದುರೆಗಳ ತಲೆಗಳನ್ನೂ ತರಿದನು. ರಾವಣನನ್ನು ಐದು ಬಾಣಗಳಿಂದ ಗಾಯಪಡಿಸಿದನು. ರಾವಣನು ಅತ್ಯಂತ ಕ್ರುದ್ಧನಾಗಿ, ತನ್ನಮೇಲೆ ಗದಾಪ್ರಹಾರ ಮಾಡುತ್ತಿದ್ದ ವಿಭೀಷಣನ ಮೇಲೆ ಶಕ್ತ್ಯಸ್ತ್ರವನ್ನು ಪ್ರಯೋಗಿಸಿದನು. ಲಕ್ಷ್ಮಣನು ಮೂರು ಬಾಣಗಳಿಂದ ಆ ಅಸ್ತ್ರವನ್ನು ಕತ್ತರಿಸಿ ಹಾಕಿದನು. ರಾವಣನು–

ಇತ್ಯೇವಮುಕ್ತ್ವಾ ತಾಂ ಶಕ್ತಿಂ
ಅಷ್ಟಘಂಟಾಂ ಮಹಾಸ್ವನಾಮ್‍ ।
ಮಯೇನ ಮಾಯಾವಿಹಿತಾಂ
ಅಮೋಘಾಂ ಶತ್ರುಘಾತಿನೀಮ್‍ ।

ರಾವಣಃ ಪರಮಕ್ರುದ್ಧಃ
ಚಿಕ್ಷೇಪ ಚ ನನಾದ ಚ । ಸರ್ಗ ೧೦೧, ಶ್ಲೋಕಗಳು ೩೦–೩೧

ಈ ಶಕ್ತ್ಯಾಯುಧದಿಂದ ಲಕ್ಷ್ಮಣನು ಹೃದಯ ಭಾಗದಲ್ಲಿ ಏಟು ತಿಂದು ನೆಲದ ಮೇಲೆ ಬಿದ್ದನು. ರಾಮನು ಎದೆಗುಂದದೆ ಲಕ್ಷ್ಮಣನನ್ನು ತಬ್ಬಿಕೊಂಡು ಹನುಮಂತನನ್ನು ಕುರಿತು “ನೀವುಗಳೆಲ್ಲ ಲಕ್ಷ್ಮಣನನ್ನು ಸುತ್ತುಗಟ್ಟಿ ಸಲಹಿಕೊಂಡಿರಿ. ನಾನು ಮಿಕ್ಕೆಲ್ಲವನ್ನೂ ಬಿಟ್ಟು ರಾವಣನನ್ನು ಕೊನೆಗಾಣಿಸುತ್ತೇನೆ.”

ಅರಾವಣಮರಾಮಂ ವಾ
ಜಗದ್ದ್ರಕ್ಷ್ಯತ ವಾನರಾಃ ॥
ಅದ್ಯ ರಾಮಸ್ಯ ರಾಮತ್ವಂ
ಪಶ್ಯಂತು ಮಮ ಸಂಯುಗೇ ॥ ಸರ್ಗ ೧೦೧, ಶ್ಲೋಕಗಳು ೪೯–೫೫

ಇನ್ನು ಲೋಕದಲ್ಲಿ ರಾವಣನಿರುವುದಿಲ್ಲ, ಅಥವಾ ರಾಮನಿರುವುದಿಲ್ಲ. ಈ ನಿರ್ಣಾಯಕವಾದ ಯುದ್ಧವನ್ನು ಈಗ ಕಾಣುವಿರಿ. “ಈಗ ನೋಡಿರಿ ರಾಮನ ರಾಮತ್ವವನ್ನು” -ಎಂದು ಪ್ರತಿಜ್ಞೆ ಮಾಡುತ್ತಾನೆ.

ರಾವಣನ ಹಟ

ಇತ್ತ ರಾವಣನಾದರೋ ರಾಮಪರಾಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ಅಂತಃಪುರಕ್ಕೆ ಹೋಗಿ ತನ್ನ ಜ್ಯೇಷ್ಠಭಾರ್ಯೆಯಾದ ಮಂಡೋದರಿಯೊಡನೆ ತನ್ನ ವ್ಯಾಕುಲವನ್ನು ತೋಡಿಕೊಂಡ.

ರಾವಣನ ಕಣ್ಣಿಗೆ ಎಲ್ಲೆಲ್ಲಿಯೂ ರಾಮನೇ.

ಏಕಂ ರಾಮಸಹಸ್ರಾಣಿ
ಪಶ್ಯಾಮ್ಯದ್ಯ ಸುಮಧ್ಯಮೇ ।
ಅದ್ಯ ರಾಮಾಭಿಭೂತೋಽಹಂ
ದೃಷ್ಟ್ವಾ ವಿಷಮಲೋಚನಮ್‍ ।

“ಈಗ ನನಗಿರುವ ಗತಿ ಪರಮೇಶ್ವರನೊಬ್ಬನೇ. ಕೈಲಾಸಾಧಿಪತಿಯು ನನಗೆ ವರ ಪ್ರದಾನ ಮಾಡಿದ್ದಾನೆ, ‘ನೀನು ಹೋಮ ಮಾಡಿದಾಗ ಯಜ್ಞಕುಂಡದಿಂದ ರಥ ಉತ್ಪತ್ತಿಯಾಗುತ್ತದೆ. ಅದರಲ್ಲಿ ಕುಳಿತು ಯುದ್ಧ ಮಾಡಿದಲ್ಲಿ ಎಲ್ಲ ಶತ್ರುಗಳನ್ನೂ ಸಂಹರಿಸಲು ಸಮರ್ಥನಾಗುತ್ತೀಯೆ’ –ಎಂದು. ಆದದ್ದರಿಂದ ಶಿವಾಲಯಕ್ಕೆ ಹೋಗಿ ಶಿವಾರ್ಚನೆ ಮಾಡುತ್ತೇನೆ.”

ಮಂಡೋದರಿಯು ಗಂಡನಿಗೆ ಹಿತವಚನ ಹೇಳುತ್ತಾಳೆ: “ನಾಥ, ನೀನು ಎಲ್ಲ ದೇವತೆಗಳನ್ನೂ ದಿಕ್ಪಾಲಕರನ್ನೂ ಜಯಿಸಿದವನು. ಈಗ ಈ ದುಷ್ಟಾಲೋಚನೆಯನ್ನು ಬಿಟ್ಟುಬಿಡು.”

ಜಹೀದಂ ಲೋಕಗರ್ಹಿತಮ್‍ ।
ಚೌರ್ಯಕಮಾಣ್ಯಕಾರ್ಷೀಸ್ತ್ವಮ್‍ ।
ಮಾರೀಚಸ್ಯ ವಚಃ ಪಥ್ಯಂ
ನ ಕೃತಂ ತು ಮಹಾತ್ಮನಃ ।
ನ ಹಿ ಧರ್ಮವರಿಷ್ಠಂ ತತ್‍
ವಿಭೀಷಣವಚಃ ಕೃತಮ್‍ ॥

ಈ ಉಪದೇಶವನ್ನು ರಾವಣನು ಲಾಲಿಸಿಯಾನೆ?

ಹವಿರ್ಹುತ್ವಾ ಸುನಯನೇ
ಹನಿಷ್ಯೇ ರಾಘವಂ ರಣೇ ॥ *

ಲಕ್ಷ್ಮಣನ ಮೂರ್ಛೆ, ಚಿಕಿತ್ಸೆ

ಲಕ್ಷ್ಮಣನು ಶಕ್ತ್ಯಾಯುಧದ ಪೆಟ್ಟಿನಿಂದ ಮೂರ್ಛಿತನಾಗಿ ಬಿದ್ದಿದ್ದನಲ್ಲವೆ? ಶ್ರೀರಾಮನು ವ್ರಣಚಿಕಿತ್ಸೆಯಲ್ಲಿ ನಿಪುಣನಾದ ಸುಷೇಣನೆಂಬ ಕಪಿಶ್ರೇಷ್ಠನಲ್ಲಿ ತನ್ನ ದುಃಖವನ್ನು ಹೇಳಿಕೊಂಡ. ಸುಷೇಣನು ಚಿಕಿತ್ಸೆ ಮಾಡುವುದಕ್ಕಾಗಿ ಔಷಧಿಗಳನ್ನು ತರುವಂತೆ ಆಂಜನೇಯನನ್ನು ಬೇಡಿದನು. “ಜಾಂಬವಂತನು ಆ ಔಷಧಿಗಳು ಸಿಕ್ಕುವ ಸ್ಥಳಗಳನ್ನು ತಿಳಿಸಿಯಾನು. ನೀನು ಈ ರಾತ್ರಿ ಮುಗಿಯುವುದರೊಳಗಾಗಿ, ಸೂರ್ಯೋದಯಕ್ಕೆ ಮುಂಚೆ ಔಷಧಿಗಳನ್ನು ತರಬೇಕಾದದ್ದು” ಎಂದು ನಿಯಮಿಸಿದನು. ಆಗ ಶ್ರೀರಾಮನು ನುಡಿದನುಡಿ ನಾವು ಗಮನದಲ್ಲಿರಿಸಬೇಕಾದದ್ದಾಗಿದೆ.

ಗಚ್ಛ ಶೀಘ್ರಂ ಮಹಾಬಾಹೋ
ಭ್ರಾತೃಭಿಕ್ಷಾ ಪ್ರದೀಯತಾಮ್‍ ।
ಚತುರ್ಣಾಮೇವ ಭ್ರಾತೄಣಾಂ
ಅಸ್ಮಾಕಂ ಪಂಚಮೋ ಭವಾನ್‍ ।

ಇದರಂತೆ ಆಂಜನೇಯಸ್ವಾಮಿ ನಡಸಿಕೊಡುತ್ತಾನೆ. ಆ ಕಾರ್ಯಾವಸರದಲ್ಲಿ ಕಾಲನೇಮಿ ಎಂಬ ರಾಕ್ಷಸಸಂನ್ಯಾಸಿಯಿಂದ ಕಾಲಯಾಪನೆಯಾದದ್ದು, ಆಂಜನೇಯಪ್ರಭು ಅದನ್ನು ಸಕಾಲದಲ್ಲಿ ಕಂಡುಕೊಂಡು ಎಚ್ಚತ್ತದ್ದು, ಆತನು ತಂದ ದಿವ್ಯೌಷಧದಿಂದ ಪುನಃ ಪ್ರಜ್ಞೆ ಬಂದದ್ದು ಮನೋವೇಧಕವಾದ ಕಥೆ. ಆಂಜನೇಯನು ವಂಚಿತನಾದದ್ದು ನಮ್ಮ ಕಾಲದ ಕೆಲವು ರಾಜಕೀಯ ಪ್ರಸಂಗಗಳಂತಿದೆ. ನೀರು ಕುಡಿಯಲು ಹೋಗಿ ಮೊಸಳೆಯನ್ನು ಬಡಿದು ಹೊರಕ್ಕೆ ಬಂದದ್ದು–ಇವೆಲ್ಲ ಕುತೂಹಲಕಾರಿಗಳಾದ ಉಪಕಥೆಗಳು. ಆಗ ಆ ಹೆಣ್ಣುಮೊಸಳೆ ತನ್ನ ಪೂರ್ವಕಥೆಯನ್ನು ನಿರೂಪಿಸುವ ವ್ಯಾಜದಲ್ಲಿ ರಾವಣಾಸುರನ ಹಿಂದಿನ ಒಂದು ಅಪಕಾರ್ಯವನ್ನು ವಿವರಿಸುತ್ತಾಳೆ. ಪೂರ್ವಜನ್ಮದಲ್ಲಿ ಆಕೆ ಮಾಲಿನಿಯೆಂಬ ಅಪ್ಸರಃಸ್ತ್ರೀಯಾಗಿದ್ದಳು. ಆಕೆ ಒಂದು ದಿನ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ರಾವಣನು ಬಂದು ಆಕೆಯನ್ನು ಯಾಚಿಸಿದ.

ಆಗ ಆಕೆ ತಾನು ಬ್ರಾಹ್ಮಣಭಾರ್ಯೆಯೆಂದೂ ರಜಸ್ವಲೆಯಾಗಿ ಅಸ್ಪೃಶ್ಯಳೆಂದೂ ಹೇಳಿದಳು. ರಾವಣನು ಅದಕ್ಕೆ ಹೆದರಿಯಾನೆ?

ದೇವಾಂಗನಾಽಸಿ ಬಾಲೇ ತ್ವಂ
ಸರ್ವಲೋಕಸ್ಯ ಸಮ್ಮತಾ ।
ಪುಷ್ಪಿಣೀ ಚ ವಿಶೇಷೇಣ
ರೋಚತೇ ಮಮ ಭಾಮಿನಿ ।

ಇದನ್ನು ಆಕೆಯ ಪತಿ ತಿಳಿದು ಕೊಟ್ಟ ಶಾಪದ ಕಾರಣದಿಂದ ಅವಳಿಗೆ ಮೊಸಳೆಯ ಜನ್ಮ ಬಂದಿತು. ಆ ಶಾಪದಿಂದ ಈಗ ವಿಮೋಚನೆ.

ಹನುಮಂತನು ಅಲ್ಲಿಂದ ಹೊರಡುವುದಕ್ಕೆ ಮುಂಚೆ ಕಾಲನೇಮಿ ರಾಕ್ಷಸನು

ಗೃಹಾಣ ಮಮ ಮಂತ್ರಾಂಸ್ತು
ಶಿಷ್ಯೋ ಮೇ ಭವ ಪುತ್ರಕ ।

ಎಂದು ತನ್ನ ಗುರುಸ್ಥಾನೀಯತೆಯನ್ನು ಹೇಳಿಕೊಂಡ. ಆಂಜನೇಯನಾದರೋ

ಮಂತ್ರಾನಧೀತ್ಯ ಶಿಷ್ಯೇಣ
ದಾತವ್ಯಾ ಗುರುದಕ್ಷಿಣಾ ।
ಗೃಹಾಣ ದಕ್ಷಿಣಾಮೇತಾಂ
ಇತ್ಯುಕ್ತ್ವಾ ರೋಷತಾಂ ಗತಃ ॥
ಜಘಾನೋರಸಿ ರಾಕ್ಷಸಮ್‍ ।

ಆ ಮುಷ್ಟಿಪ್ರಹಾರವಾದ ಮೇಲೆ ಕಾಲನೇಮಿಯ ರಾಕ್ಷಸರೂಪ ಸ್ಪಷ್ಟವಾಯಿತು. *

ಇಂಥ ಉಪಕಥೆಗಳಿಂದ ಯುದ್ಧದ ಘೋರ ಪ್ರಕರಣವು ಸಾಧುಗಳಿಗೆ ಮನೋರಂಜಕವಾಗಿದೆ.

ರಾವಣನ ಹೋಮಭಂಗ

ರಾವಣಾಸುರನು ಇಂದ್ರಜಿದ್ವಧಾ ನಂತರ ದಿಕ್ಕೆಟ್ಟವನಾಗಿ ಪಾತಾಳ ಗುಹೆಯನ್ನು ಹೊಕ್ಕು ಮಾರಣಹೋಮ ಮಾಡುವುದಕ್ಕಾಗಿ ಹೊರಟ.

ಕಾಕಾನ್‍ ಗೃಧ್ರಾನ್‍ ವಯಶ್ಶ್ಯೇನಾನ್‍
ಭಲ್ಲೂಕಾನ್‍ ಕುಕ್ಕುಟಾನಪಿ ।...

ಹೀಗೆ ನಾನಾ ಜಂತುಗಳನ್ನು ಆಹುತಿ ಕೊಟ್ಟ.

ಹುತ್ವಾ ರೋಮಾಣಿ ಕೇಶಾಂಶ್ಚ

ಜುಹಾವ ರಣಕೋವಿದಃ ॥ ಈ ಭಯಂಕರ ಹೋಮದಿಂದ ವಿಭೀಷಣನಿಗೆ ಕೂಡ ತಲ್ಲಣವುಂಟಾಯಿತು. ಆ ಹೋಮವನ್ನು ಧ್ವಂಸ ಮಾಡಬೇಕೆಂದು ಚಿಂತಿಸಿದಾಗ ವಿಭೀಷಣನ ಹೆಂಡತಿ ಸರಮಾ ಎಂಬಾಕೆ ಆ ಹೋಮ ನಡೆಯುತ್ತಿದ್ದ ರಹಸ್ಯ ಸ್ಥಳವನ್ನು ಕೈಸನ್ನೆಯಿಂದ ತೋರಿಸಿದಳು. ಅಂಗದನು ಆಗ ಮಂಡೋದರಿಯ ಮುಂದಲೆ ಹಿಡಿದು ಆ ಕಡೆಗೆ ಎಳೆದು ತಂದ. ಮಂಡೋದರಿ ಅಳುತ್ತಾ ಗಂಡನನ್ನು ಕುರಿತು “ನಿನಗೆ ನಾಚಿಕೆಯಿಲ್ಲವೆ?” ಎಂದು ಮೂದಲಿಸಿದಳು. ಅದರಿಂದ ಉದ್ರಿಕ್ತನಾದ ರಾವಣನು ಖಡ್ಗ ಹಿಡಿದು ಅಂಗದನ ಮೇಲೆ ನುಗ್ಗಿದನು. ಹಾಗೆ ಹೋಮವಿಘ್ನವಾಯಿತು.

ರಾವಣನು ಮಂಡೋದರಿಗೆ ಸಾಂತ್ವವಚನಗಳನ್ನು ಹೇಳಿ ಹೀಗೆಂದನು: “ನಾನು ರಾಮಲಕ್ಷ್ಮಣರನ್ನೂ ಕಪೀಶ್ವರರನ್ನೂ ಸಂಹಾರ ಮಾಡುವವನಾಗಿದ್ದೇನೆ. ಹಾಗೆ ಆಗದೆ ರಾಮನು ನನ್ನನ್ನು ಬೀಳಿಸಿದ್ದೇ ಆದರೆ, ಆಗ ನೀನು ನನ್ನ ಉತ್ತರ ಕ್ರಿಯೆಗಳನ್ನು ಮಾಡಿಸತಕ್ಕದ್ದು. ಆಗ ನೀನು ವೈದೇಹಿಯನ್ನು ಸಮಾಧಾನಪಡಿಸಿ ನನ್ನೊಡನೆ ಸಾಯತಕ್ಕದ್ದು. ‘ಮರ್ತವ್ಯಂ ತು ಮಯಾ ಸಹ ।’”

ಹೀಗೆ ಮರ್ಮಭೇದಕವಾದ ರೀತಿಯಲ್ಲಿ ವಾಗ್ವಾದ ನಡೆಯುತ್ತದೆ. ರಾಮನು ಅವಧ್ಯನೆಂದು ಆಕೆ ಹೇಳುತ್ತಾಳೆ.

ಮರಣಂ ನ ಜರಾ ಚೈವ
ಕಥಂ ಯಾಮಿ ತ್ವಯಾ ಸಹ ।
ದಾಸೀ ಭವಾಮಿ ರಾಮಸ್ಯ
ವಿಭೀಷಣಗೃಹೇಽಥವಾ ।

ಹೀಗೆ ನಿರಾಸೆಯಿಂದ ವಿಲಪಿಸುತ್ತಿದ್ದವಳನ್ನು ಕುರಿತು ರಾವಣನು ಹೇಳಿದ: “ಹೇ ಮಂಡೋದರಿ, ನಿನ್ನಿಂದ ತಿರಸ್ಕರಿಸಲ್ಪಟ್ಟು ನಾನು ಹೇಗೆ ಬದುಕಲಿ?”

ಜೀವನೇ ಚ ನ ಮೇ ಸ್ಪೃಹಾ ॥
ವಿಮುಚ್ಯ ತ್ವಾಂ ಚ ಸಂಸಾರಂ
ಗಮಿಷ್ಯೇ ಮುಕ್ತಿವಲ್ಲಭಾಮ್‍ ।
ಚಿದಾನಂದಮಯೀ ಶುದ್ಧಾ
ಸೇವ್ಯತೇ ಯಾ ಮುಮುಕ್ಷುಭಿಃ ।
ತಾಂ ಗತಿಂ ತು ಗಮಿಷ್ಯಾಮಿ
ಹತೋ ರಾಮೇಣ ಸಂಯುಗೇ । *

ಎಂಥ ಮಾತು! ವೇದಾಂತಸಾರವನ್ನು ಇದರಲ್ಲಿ ಹಿಂಡಿದ್ದಾನೆ ರಾವಣ.

ದೈವ ವೈಕಟ್ಯ

ಇದು ರಾವಣನ ಹೃದಯವನ್ನು ಎತ್ತಿ ತೋರಿಸತಕ್ಕ ಮಾತು. ರಾವಣನು ವಾಸ್ತವವಾಗಿ ಅಸಂಸ್ಕೃತನಲ್ಲ. ಪುಣ್ಯಪಾಪವಿವೇಕದಲ್ಲದವನಲ್ಲ. ಮಹಾತೇಜಸ್ವಿ; ಬ್ರಹ್ಮಕುಲ ಸಂಭೂತನಾದವನು. ಅವನನ್ನು ಅವನ ಶಕ್ತಿಗೆ ಒಳಗಾಗದ ಯಾವುದೋ ಒಂದು ಕಾಮಚೋದನೆ ಪೀಡಿಸುತ್ತಿತ್ತು. ಆ ಕಾಮಚೋದನೆಯನ್ನು ದಮನ ಮಾಡಬೇಕೆಂದು ಅವನು ಎಷ್ಟೋ ಬಗೆಯಾಗಿ ಪ್ರಯಾಸಪಟ್ಟ; ತನಗೆ ತಾನೇ ಬುದ್ಧಿ ಹೇಳಿಕೊಂಡ. ಸಾವಿರಾರುಸಲ ತನ್ನ ಆಸೆ ಅಸಭ್ಯವಾದದ್ದೆಂದೂ ಕಲುಷಿತವಾದದ್ದೆಂದೂ ನೆನೆನೆನೆದುಕೊಂಡಿದ್ದ. ಅವನು ಎಷ್ಟು ಪಶ್ಚಾತ್ತಾಪಪಟ್ಟಿದ್ದರೂ, ಎಷ್ಟು ಆತ್ಮಸಂಯಮ ಪ್ರಯತ್ನ ಮಾಡಿದ್ದರೂ ಅವನ ಮನಸ್ಸಿನಲ್ಲಿದ್ದ ಕಾಮವು ಅವನ ವಿವೇಕಕ್ಕಿಂತಲೂ, ಅವನ ಆತ್ಮ ಸಂಯಮಕ್ಕಿಂತಲೂ ಪ್ರಬಲವಾಗಿ ಅವನನ್ನು ಬಾದಿಸುತ್ತಿತ್ತು. ಇದನ್ನು ರಾವಣನು ತಿಳಿದುಕೊಂಡು, ಆ ದೇಹವಿರುವವರೆಗೂ ತನಗೆ ಆ ಪಾಪದ ಬಾಧೆ ತಪ್ಪಿದ್ದಲ್ಲವೆಂದೂ ದೇಹಪಾತದಿಂದಲೇ ತನಗೆ ಪಾಪದಿಂದ ಬಿಡುಗಡೆಯೆಂದೂ ನಿಶ್ಚಯ ಮಾಡಿಕೊಂಡಿದ್ದ.

ಇದನ್ನೇ ಇಂಗ್ಲಿಷಿನಲ್ಲಿ ‘ಟ್ರಾಜಿಕ್‍ ಎಲಿಮೆಂಟ್‍’ (Tragic element) ದೈವ ವೈಕಟ್ಯಾಂಶವೆನ್ನುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ಮಹಾಪುರುಷನು ಸರ್ವ ಬಲೋಪೇತನಾದವನು, ಸರ್ವವಿದ್ಯಾಸಂಪನ್ನನಾದವನು ತನ್ನ ಜೀವನಕ್ಕೆ ಸಂಬಂಧಪಟ್ಟ ನೂರು ಅಂಶಗಳ ಪೈಕಿ ತೊಂಭತ್ತೊಂಭತ್ತರಲ್ಲಿ ಉದ್ದಾಮನಾಗಿದ್ದುಕೊಂಡು, ಮಹಾವೀರನಾಗಿದ್ದುಕೊಂಡು, ಯಾವುದೋ ಒಂದೇ ಒಂದು ಅಂಶದಲ್ಲಿ ಮಾತ್ರ ದುರ್ಬಲನಾಗಿರುತ್ತಾನೆ. ಆ ಒಂದು ಅಂಶವನ್ನು ಬಿಟ್ಟರೆ ಮಿಕ್ಕೆಲ್ಲದರಲ್ಲೂ ಅವನು ಧೀರ. ಆ ಒಂದು ಅಂಶದಲ್ಲಿ ಮಾತ್ರ ಅವನು ದುರ್ಬಲ. ಆ ಒಂದು ದೌರ್ಬಲ್ಯದ ಕಾರಣದಿಂದ ಅವನ ಮಿಕ್ಕೆಲ್ಲ ಗುಣಸಂಪತ್ತುಗಳೂ ಮಣ್ಣುಪಾಲಾಗುತ್ತವೆ. ಆನೆಯನ್ನು ಕಟ್ಟುವ ಕಬ್ಬಿಣದ ಸರಪಳಿಯಲ್ಲಿ ನೂರು ಕೊಂಡಿಗಳಿರುತ್ತವೆ. ಒಂದೇ ಒಂದು ಕೊಂಡಿ ಮಾತ್ರ ಸವೆದಿರುತ್ತದೆ. ಮಿಕ್ಕ ತೊಂಭತ್ತೊಂಭತ್ತು ಕೊಂಡಿಗಳು ಗಟ್ಟಿಯಾಗಿ ಪಟುವಾಗಿರುತ್ತವೆ. ಆದರೆ ಸವೆದ ಒಂದು ಕೊಂಡಿ ಗಟ್ಟಿಯಾದ ತೊಂಭತ್ತೊಂಭತ್ತು ಕೊಂಡಿಗಳಿಗೆ ಮೃತ್ಯುಪ್ರಾಯವಾಗುತ್ತದೆ. ಇದೇ ಟ್ರ್ಯಾಜಿಕ್‍ ಕಥಾನಾಯಕನ ಲಕ್ಷಣ. ಇದು ರಾವಣನಲ್ಲಿ ಕಾಣಬರುತ್ತದೆ. ಅವನ ಶೌರ್ಯ ಸಾಹಸಗಳೂ ವಿದ್ಯೆ ವಿವೇಕಗಳೂ ಅವನ ಒಂದೇ ಒಂದು ಅಂತರಂಗ ವೈಕಲ್ಯದಿಂದ ನಿರರ್ಥಕಗಳಾಗುತ್ತವೆ. ಆ ಅಂತರಂಗಪೀಡೆಯ ಬಲಿಷ್ಠತೆಯನ್ನು ರಾವಣನು ಮನಸಾ ಕಂಡುಕೊಂಡ ಘಳಿಗೆಯಲ್ಲಿ ಅವನ ಬಾಯಿಂದ ಹೊರಟ ಮಾತು ಇದು.

ಜೇತವ್ಯಮಿತಿ ಕಾಕುತ್ಸ್ಥಃ
ಮರ್ತವ್ಯಮಿತಿ ರಾವಣಃ ।

ದಶಕಂಠಪತನ

ಘೋರವಾದ ಯುದ್ಧ ನಡೆಯುತ್ತದೆ, ಅದನ್ನು ವರ್ಣಿಸುವುದು ವಾಲ್ಮೀಕಿಗಳಿಗೇ ಕಷ್ಟವೆಂದೂ ತೋರಿರಬೇಕು;

ಗಗನಂ ಗಗನಾಕಾರಂ
ಸಾಗರಸ್ಸಾಗರೋಪಮಃ ।
ರಾಮರಾವಣಯೋರ್ಯುದ್ಧಂ
ರಾಮರಾವಣಯೋರಿವ । ಸರ್ಗ ೧೧೦, ಶ್ಲೋಕಗಳು ೨೩–೨೪

ರಾಮನು ತನ್ನ ಬಾಣಗಳಿಂದ ದಶಮುಖನ ಶಿರಸ್ಸುಗಳನ್ನು ಛೇದಿಸುತ್ತಾನೆ. ಅದರಿಂದ ಆದದ್ದೇನು? ಒಂದು ಶಿರಸ್ಸು ಬಿದ್ದರೆ ಇನ್ನೊಂದು ಹುಟ್ಟಿತು; ಮತ್ತೊಂದು ಶಿರಸ್ಸು ಬಿದ್ದರೆ ಮತ್ತೊಂದು ಹುಟ್ಟಿತು. ಹೀಗೆ ರಾವಣಪರಂಪರೆ ಏಳುತ್ತಿರುವುದನ್ನು ನೋಡಿ ರಾಮನು ವಿಸ್ಮಿತನಾಗಿದ್ದಾಗ ರಾಮನ ಸಾರಥಿಯಾದ ಮಾತಲಿಯು ರಾಮನಿಗೆ ಜ್ಞಾಪಕ ಕೊಡುತ್ತಾನೆ, ಆತನಿಗೆ ಅಗಸ್ತ್ಯ ಮಹರ್ಷಿಗಳು ಕೊಟ್ಟಿದ್ದ ಬ್ರಹ್ಮಾಸ್ತ್ರದ ವಿಷಯವನ್ನು.

ರಾಮನು ಬ್ರಹ್ಮಾಸ್ತ್ರವನ್ನು ರಾವಣನ ಎದೆಯ ಮೇಲೆ ಪ್ರಯೋಗಿಸಿದ. ಆಗ ದಶಕಂಠಪತನವಾಯಿತು.

ದೇವತೆಗಳು ಸಂತೋಷಿಸಿ ಪುಷ್ಪವೃಷ್ಟಿ ಕರೆದರು.

‘ಆದಿತ್ಯಹೃದಯ’

ಈ ಪ್ರಕರಣದಲ್ಲಿ ಕುತೂಹಲವಾದ ಇನ್ನೊಂದು ಸಂಗತಿ–ಶ್ರೀರಾಮನಿಗೆ ಅಗಸ್ತ್ಯರು ‘ಆದಿತ್ಯಹೃದಯ’ ವನ್ನು ಉಪದೇಶಮಾಡಿದ್ದು. ಶ್ರೀರಾಮನು ಯುದ್ಧ ಶ್ರಮದಿಂದ ಬಳಲಿ ಬೇಸತ್ತಿದ್ದಾನೆ, ಜಯೋಪಾಯವನ್ನು ಕಾಣದೆ ಚಿಂತಾಕ್ರಾಂತನಾಗಿದ್ದಾನೆ. ಆಗ ಅಗಸ್ತ್ಯ ಮಹರ್ಷಿಗಳು ಅಲ್ಲಿಗೆ ಬಂದು ಸೂರ್ಯೋಪಾಸನೆಯಿಂದ ರಾಮನಿಗೆ ಜಯಲಾಭವಾಗುವುದೆಂದು ಭರವಸೆ ಕೊಟ್ಟು ಧೈರ್ಯ ತುಂಬುತ್ತಾರೆ. ಇದೇ ಆದಿತ್ಯಹೃದಯವೆಂಬ ಪ್ರಸಿದ್ಧ ಪ್ರಕರಣ. ಆ ಪ್ರಸಿದ್ಧಿ ಆ ಮಂತ್ರದ ಮಹಿಮೆಯನ್ನು ಅವಲಂಬಿಸಿದ್ದೆಂದು ಬಹುಮಂದಿ ತಿಳಿದುಕೊಂಡಿದ್ದಾರೆ. ಅದರಲ್ಲಿ ನನಗೇನೂ ದೋಷ ಕಾಣುವುದಿಲ್ಲ. ಆದರೆ ನನ್ನ ಮನಸ್ಸಿಗೆ ಈ ಶ್ಲೋಕಗಳ ಮಂತ್ರಮಹಿಮೆಗಿಂತ ಕಡಿಮೆಯಲ್ಲದ ಶಕ್ತಿ ಅದರ ಕಾವ್ಯ ಸೌಂದರ್ಯದ್ದು. ಇದಕ್ಕೆ ಸಮಾನವಾದ ಸೂರ್ಯಪ್ರಭೆಯ ವರ್ಣನೆ ವೇದನೆಗಳಿಂದ ಹೊರಗೆ ಇಲ್ಲವೆಂದು ನಾನು ತಿಳಿದುಕೊಂಡಿದ್ದೇನೆ. “ತಪ್ತಚಾಮೀಕರಾಭಾಯ”, “ತಮೋಽಭಿನಿಘ್ನಾಯ”, “ಲೋಕಸಾಕ್ಷಿಣೇ” –ಎಂಥ ಅರ್ಥಸಮೃದ್ಧವಾದ ಮಾತುಗಳು! ಎಂಥ ಪ್ರತ್ಯಕ್ಷೀಕಾರಕ ಉಪಮಾನಗಳು! ಪದಗಳ ಸೌಂದರ್ಯಕ್ಕಾಗಿಯಾದರೂ, ಭಾವಗಳ ಸೌಂದರ್ಯಕ್ಕಾಗಿಯಾದರೂ ಈ ಆದಿತ್ಯಹೃದಯ ಸ್ತೋತ್ರವನ್ನು ಜನ ಮುಖಸ್ಥ ಮಾಡಿಕೊಳ್ಳತಕ್ಕದಾಗಿದೆ. ಆದಿತ್ಯಹೃದಯವನ್ನು ನೂರಾರು ಮಂದಿ ನಿತ್ಯ ಪಾರಾಯಣದಲ್ಲಿರಿಸಿಕೊಂಡವರಿದ್ದಾರೆ. ಅವರ ಮುಖ್ಯ ಆಶಯವು ಮಂತ್ರ ವಿಷಯದ್ದಾಗಿದ್ದರೆ ಹಾಗಿರಲಿ. ಅದರ ಜೊತೆಗೆ ಅವರು ಸತ್ಕಾವ್ಯವನ್ನೂ ಅನುಭವಿಸುತ್ತಿದ್ದಾರೆ.

ಶ್ರೀರಾಮನು ಅಗಸ್ತ್ಯರಿಂದ ಉಪದೇಶ ಪಡೆದ ಬಳಿಕ

ತ್ರಿರಾಚಮ್ಯ ಶುಚಿರ್ಭೂತ್ವಾ
ಧನುರಾದಾಯ ವೀರ್ಯವಾನ್‍ । ಸರ್ಗ ೧೦೭, ಶ್ಲೋಕ ೨೯

ರಾಮನು ಮತ್ತೆ ಯುದ್ಧೋಪಕ್ರಮ ಮಾಡುವುದಕ್ಕೆ ಮುಂಚೆ ಶುಚಿಯಾದನಂತೆ; ಮೂರುಸಲ ಆಚಮನ ಮಾಡಿದನಂತೆ. ಯುದ್ಧಕಾರ್ಯ ಆತನಿಗೆ ಮಡಿಯ ಕೆಲಸ; ಪವಿತ್ರವಾದ ಕೆಲಸ. ಮೈಲಿಗೆಯಿಂದ ಮಾಡಲಾಗುವ ಕೆಲಸವಲ್ಲ. ಈ ಭಾವ ಅನೇಕ ಕಡೆ ದೊರೆಯುತ್ತದೆ. ಯುದ್ಧವೆಂಬುದು ಉಗ್ರವಾದ ಕರ್ತವ್ಯ; ಹಗುರದ ಆಟವಲ್ಲ. ಮನಸ್ಸು ಬಂದಂತೆ ಹಿಡಿದು ಹೊಡೆಯತಕ್ಕದ್ದಲ್ಲ. ಅದಕ್ಕೆ ನಿಯಮಗಳುಂಟು. ಹೀಗೆ ನಿಯಮವಿಧೇಯವಾಗಿದ್ದದ್ದು ಪೂರ್ವಯುಗಗಳ ಯುದ್ಧ. ಯಾರೆಂದರೆ ಅವರನ್ನು, ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಕೊಲ್ಲುವುದು ನರಹತ್ಯೆಯಾದೀತೇ ಹೊರತು ಯುದ್ಧವೆಂಬ ಗೌರವವನ್ನು ಪಡೆಯಲಾರದು. ಈ ವಿಷಯವನ್ನು ಇಂದಿನ ಐರೋಪ್ಯ ಯುದ್ಧಗಳ ರೀತಿಯೊಡನೆ ಹೋಲಿಸಿ ನೋಡುವುದು ಬೋಧವಾದೀತು.

ಯುದ್ಧವು ಒಂದು ಧರ್ಮಕ್ರಿಯೆ. ಅದು ಒಂದು ವಿಶೇಷಧರ್ಮ, ಸಾಮಾನ್ಯಧರ್ಮವಲ್ಲ. ಅದು ಮಹಾಪ್ರಾಣಕ್ಕೆ ಬೇಕಾಗುವ ಶಸ್ತ್ರಚಿಕಿತ್ಸೆಯ ಹಾಗೆ: ಭಯಂಕರ ಹೌದು, ಆದರೆ ಶುಭಂಕರವೂ ಹೌದು. ಅದರಲ್ಲಿ ಅಪಾಯವುಂಟು. ಆದರೆ ಸಮರ್ಥನ ಕೈಯಿಂದ ಆದಾಗ ಅಪಾಯವಾಗದೆ ಅನಪಾಯ ಕ್ಷೇಮಲಾಭವೇ ಆಗುತ್ತದೆ.

ರಾವಣಪತನಾನಂತರ ವಿಭೀಷಣ, ಮಂಡೋದರಿ ಮೊದಲಾದವರು ಪ್ರಲಾಪ ಮಾಡುತ್ತಾರೆ. ಶ್ರೀರಾಮನು ಅವರಿಗೆ ಸಮಾಧಾನ ಹೇಳುತ್ತಾನೆ.

ವಿಭೀಷಣನು ರಾವಣನಿಗೆ ಔರ್ಧ್ವದೇಹಿಕಗಳನ್ನು ಮಾಡದೆ ಹಿಂಜರಿದಾಗ ರಾಮನು ಉತ್ತರಕ್ರಿಯೆಗಳನ್ನು ಯಥಾಕ್ರಮವಾಗಿ ನಡೆಸುವಂತೆ ವಿಭೀಷಣನನ್ನು ಒಡಂಬಡಿಸುತ್ತಾನೆ.

ಕ್ರಿಯತಾಮಸ್ಯ ಸಂಸ್ಕಾರಃ

ಮಮಾಪ್ಯೇಷ ಯಥಾ ತವ ॥ ಸರ್ಗ ೧೧೨, ಶ್ಲೋಕ ೨೬

“ಈತನಿಗೆ ಉತ್ತರಕ್ರಿಯೆಗಳನ್ನು ನಡಸು. ಈ ರಾವಣನು ನಿನಗೆ ಹೇಗೋ ನನಗೂ ಹಾಗೆ ಗೌರವಾರ್ಹನು.”

ಇಲ್ಲಿ ಕಾಣುತ್ತದೆ ರಾಮನ ದೊಡ್ಡ ಮನುಷ್ಯತನ.

ಅನಂತರ ಶ್ರೀರಾಮನು ವಿಭೀಷಣನಿಗೆ ರಾಜ್ಯಾಭಿಷೇಕ ಮಾಡಿಸಬೇಕೆಂದು ಲಕ್ಷ್ಮಣನಿಗೆ ಆಜ್ಞೆ ಮಾಡಿದ. ವಿಭೀಷಣನಿಗೆ ಲಂಕೆಯಲ್ಲಿ ಕ್ರಮವಾಗಿ ಪಟ್ಟಾಭಿಷೇಕ ನಡೆಯಿತು.

ವಿಜಯವಾರ್ತೆಯ ನಿವೇದನೆ

ಆಮೇಲೆ ವಿಜಯವಾರ್ತೆಯನ್ನು ಸೀತಾದೇವಿಗೆ ತಿಳಿಸಬೇಕೆಂದು ಆಂಜನೇಯನನ್ನು ಶ್ರೀರಾಮನು ಬೇಡಿದ. ಆಂಜನೇಯನು ಆಕೆಯನ್ನು ನೋಡಿದಾಗ ಆಕೆಯ ಮುಖ ಸೌಮ್ಯದಿಂದ ಕೂಡಿತ್ತಂತೆ. ಆಂಜನೇಯನಿಂದ ಎಲ್ಲ ಸಂಗತಿಯನ್ನೂ ಕೇಳಿದಾಗ ಆಕೆಯ ಪ್ರತಿವರ್ತನೆ ಹೇಗಿತ್ತು? ಒಬ್ಬ ಸಾಧ್ವಿಯೂ ಆಕೆಯ ಪತಿಯೂ ಹದಿನಾಲ್ಕು ವರ್ಷ ಒಬ್ಬರಿಂದೊಬ್ಬರು ಅಗಲಿದ್ದು, ಅನಿರೀಕ್ಷಿತವಾಗಿದ್ದ ನಾನಾ ವಿಪತ್ತುಗಳನ್ನೂ ಸಂಕಟಗಳನ್ನೂ ಸಹಿಸಿ, ಆ ಬಳಿಕ, ದೈವಾನುಗ್ರಹದಿಂದ ಒಬ್ಬರನ್ನೊಬ್ಬರು ಮತ್ತೆ ಸೇರುವ ಅನುಕೂಲದಶೆ ಬಂದಾಗ, ಅವರಿಬ್ಬರ ಪರಸ್ಪರ ಚರ್ಯೆ ಹೇಗಿದ್ದೀತು? ನಮ್ಮ ಜೀವನದಲ್ಲಿ ಇಂಥ ಸಂದರ್ಭ ದಿನದಿನವೂ ಬರುವುದಿಲ್ಲ; ಬಹು ವಿರಳ. ಅಂಥ ಸಂದರ್ಭದಲ್ಲಿ ಮುಖ್ಯಪಾತ್ರಗಳ ಮನಸ್ಥಿತಿ ಎಂಥಾದ್ದು, ವರ್ತನೆ ಎಂಥಾದ್ದು–ಇದು ನಾವು ನೋಡಬೇಕೆನಿಸುವ ಸಂಗತಿ. ಸೀತಾದೇವಿಯಾದರೋ ಆಂಜನೇಯ ವಾಕ್ಯವನ್ನು ಕೇಳಿ ಏನ್ನನ್ನೂ ನುಡಿಯಲಿಲ್ಲವಂತೆ: “ವ್ಯಾಜಹಾರ ನ ಕಿಂಚನ.”

ಹೃದಯದಲ್ಲಿ ಭಾವದ ಒತ್ತಡ ಅತಿಶಯವಾದಾಗ ಮಾತು ಹೊರಡುವುದಿಲ್ಲ.

ಆಂಜನೇಯಸ್ವಾಮಿ– ಕಿಂ ನು ಚಿಂತಯಸೇ ದೇವಿ
ಕಿಂ ನು ಮಾಂ ನಾಭಿಭಾಷಸೇ ॥ ಸರ್ಗ ೧೧೬, ಶ್ಲೋಕ ೧೬

ಎಂದು ಕೇಳುತ್ತಾನೆ. ಆಕೆ ಹೇಳುತ್ತಾಳೆ:

ಪ್ರಹರ್ಷವಶಮಾಪನ್ನಾ
ನಿರ್ವಾಕ್ಯಾಸ್ಮಿಕ್ಷಣಾಂತರಮ್‍ ॥ಸರ್ಗ ೧೧೬, ಶ್ಲೋಕ ೧೮
 
ಸಂತೋಷ ಉಕ್ಕುಕ್ಕಿ ಬಂದಾಗ ಮಾತು ಹೊರಡಲಾರದು.

ಸೀತೆಯ ಔಚಿತ್ಯ ಪರಿಜ್ಞಾನ

ಆಗ ಆಂಜನೇಯಸ್ವಾಮಿ ಅಲ್ಲಿದ್ದ ರಾಕ್ಷಸಿಯರನ್ನು ನೋಡಿ ಅವರಿಂದ ಸೀತಾದೇವಿಗೆ ಹಿಂಸೆಯಾದದ್ದನ್ನು ನೆನೆಸಿಕೊಂಡು ಅವರನ್ನು ಒದೆದು ಕೊಲ್ಲುವೆನೆಂದು ಹೊರಟ,

ಇಚ್ಛಾಮಿ ವಿವಿಧೈರ್ಘಾತೈಃ
ಹಂತುಮೇತಾಸ್ಸುದಾರುಣಾಃ ।
ಘಾತೈರ್ಜಾನುಪ್ರಹಾರೈಶ್ಚ
ದಶನಾನಾಂ ಚ ಪಾತನೈಃ ।

ಭಕ್ಷಣೈಃ ಕರ್ಣನಾಸಾನಾಂ
ಕೇಶಾನಾಂ ಲುಂಛನೈಸ್ತಥಾ । ಸರ್ಗ ೧೧೬, ಶ್ಲೋಕಗಳು ೩೩–೩೪


ಸೀತಾದೇವಿ ಅದು ಕೂಡದೆನ್ನುತ್ತಾಳೆ. “ಆ ರಾಕ್ಷಸಿಯರು ತಮ್ಮ ಸ್ವಾಮಿಯ ಆಜ್ಞೆಯಂತೆ ನಡೆದರು. ಅದು ಅವರಿಗೆ ಯುಕ್ತವೇ ತಾನೆ?”

ರಾಜಸಂಶ್ರಯವಶ್ಯಾನಾಂ
ಕುರ್ವತೀನಾಂ ಪರಾಜ್ಞಯಾ ।
ವಿಧೇಯಾನಾಂ ಚ ದಾಸೀನಾಂ
ಕಃ ಕುಪ್ಯೇದ್ವಾನರೋತ್ತಮ । ಸರ್ಗ ೧೧೬, ಶ್ಲೋಕ ೩೮

ಇಲ್ಲಿ ನೋಡಿರಿ ದೊಡ್ಡತನವನ್ನ. ಎಂಥ ವಿವೇಕ! ಮತ್ತು ಎಷ್ಟು ಜಾಗರೂಕವಾದ ವಿವೇಕ!

ಆಂಜನೇಯಸ್ವಾಮಿ ಸೀತೆಯನ್ನು ಕುರಿತು “ನಿನ್ನಿಂದ ಶ್ರೀರಾಮನಿಗೆ ನಾನು ಹೇಳಬೇಕಾದ ಪ್ರತಿಸಂದೇಶವೇನು?” ಎಂದು ಕೇಳುತ್ತಾನೆ. ಆಕೆ “ದ್ರುಷ್ಟುಮಿಚ್ಛಾಮಿ ಭರ್ತಾರಮ್‍” ಎಂದು ಹೇಳುತ್ತಾಳೆ. ಹನುಮಂತನಿಂದ ಈ ವಾರ್ತೆಯನ್ನು ಶ್ರೀರಾಮನು ಕೇಳಿದ.

ಅಗಚ್ಛತ್‍ ಸಹಸಾ ಧ್ಯಾನಂ
ಈಷದ್ಬಾಷ್ಪಪರಿಪ್ಲುತಃ ।
ದೀರ್ಘಮುಷ್ಣಂ ವಿನಿಃಶ್ವಸ್ಯ
ಮೇದಿನೀಮವಲೋಕಯನ್‍ । ಸರ್ಗ ೧೧೭, ಶ್ಲೋಕಗಳು ೫–೬

ಕಣ್ಣಿನಲ್ಲಿ ಕಂಬನಿ ತುಂಬಿ ಬಂದಿತು. ಕಂಠ ಗದ್ಗದಿತವಾಯಿತು. ಉಸಿರು ಬಿಸಿಯಾಯಿತು. ನೆಲವನ್ನು ದಿಟ್ಟಿಸಿಕೊಂಡು ರಾಮಚಂದ್ರನು ಹೇಳಿದ, ಆಗ ಪಕ್ಕದಲ್ಲಿದ್ದ ವಿಭೀಷಣನಿಗೆ:

ದಿವ್ಯಾಂಗರಾಗಾಂ ವೈದೇಹೀಂ
ದಿವ್ಯಾಭರಣಭೂಷಿತಾಮ್‍ ।
ಇಹ ಸೀತಾಂ ಶಿರಃಸ್ನಾತಾಂ
ಉಪಸ್ಥಾಪಯ ಮಾ ಚಿರಮ್‍ । ಸರ್ಗ ೧೧೭, ಶ್ಲೋಕ ೭

“ಸೀತೆಯು ಅಭ್ಯಂಜನಸ್ನಾನ ಮಾಡಿ ಅಲಂಕೃತಳಾಗಿ ಬರಲಿ; ಬೇಗ ಕರೆದುಕೊಂಡು ಬಾ.” ಈ ಮಾತನ್ನು ವಿಭೀಷಣನು ಸೀತೆಗೆ ತಿಳಿಸಿದಾಗ ಆಕೆ ಏನೆನ್ನುತ್ತಾಳೆ?

ಅಸ್ನಾತಾ ದ್ರಷ್ಟುಮಿಚ್ಛಾಮಿ
ಭರ್ತಾರಂ ರಾಕ್ಷಸಾಧಿಪ । ಸರ್ಗ ೧೧೭, ಶ್ಲೋಕ ೧೧

ಈ ಮಾತಿಗೆ ವಿಭೀಷಣನು

ಯದಾಹ ರಾಜಾ ಭರ್ತಾ ತೇ
ತತ್ತಥಾ ಕರ್ತುಮರ್ಹಸಿ । ಸರ್ಗ ೧೧೭, ಶ್ಲೋಕ ೧೧

“ಸ್ವಾಮಿಯೂ ಪತಿಯೂ ಆದಾತನು ಏನು ಹೇಳಿದ್ದಾನೋ ಅದನ್ನು ನೀನು ಮಾಡಬೇಕಾದದ್ದು” ಎನ್ನುತ್ತಾನೆ. ಆಗ ಸೀತಾದೇವಿ ಒಪ್ಪಿಕೊಂಡಳು.

ತತಸ್ಸೀತಾಂ ಶಿರಃಸ್ನಾತಾಂ
ಯುವತೀಭಿರಲಂಕೃತಾಮ್‍ ।... ಸರ್ಗ ೧೧೭, ಶ್ಲೋಕ ೧೩

ಸ್ನಾನಮಾಡಿ ಅಲಂಕೃತಳಾಗಿ ಬರುತ್ತಾಳೆ.

ಒಂದು ವಿಚಾರಘಟ್ಟ

ಇಲ್ಲಿ ಕಾಣುತ್ತದೆ ವಿಚಾರಘಟ್ಟ. ಮೊದಲು ರಾಮನು, ಸೀತೆಯು ಸ್ನಾತಳಾಗಿ ಅಲಂಕೃತಳಾಗಿ ಬರಬೇಕೆಂದು ಹೇಳಿದಾಗ ಆತನ ಮನಸ್ಸಿನಲ್ಲೇನಿತ್ತು? ಸೀತೆ ಅಸ್ನಾತಳಾಗಿಯೇ ಪತಿದರ್ಶನ ಮಾಡುವೆನೆಂದಾಗ ಆಕೆಯ ಮನಸ್ಸಿನಲ್ಲೇನಿತ್ತು? ಇದನ್ನು ನಾವು ಮನುಷ್ಯನೈಜದ ದೃಷ್ಟಿಯಿಂದ ನೋಡಬೇಕೆಂದು ನನಗನ್ನಿಸುತ್ತದೆ. ಒಂದೇ ಸಂದರ್ಭದಿಂದ ಬೇರೆಬೇರೆ ಮನಸ್ಸುಗಳು ಬೇರೆಬೇರೆ ಪ್ರತಿವರ್ತನೆಗಳನ್ನು ಮಾಡಿಸುತ್ತವೆ. ಆ ಪ್ರತಿವರ್ತನೆಗಳು ಬಹುಶಃ ಸಮ್ಮಿಶ್ರಿತಗಳು. ಕರುಣೆ, ಜುಗುಪ್ಸೆ, ಪ್ರೀತಿ, ಕ್ರೋಧ, ಸಮಾಧಾನ, ಅತೃಪ್ತಿ–ಹೀಗೆ ನಾನಾ ಭಾವಗಳು ಬೆರೆತುಕೊಂಡಿರುತ್ತವೆ, ಒಂದಾನೊಂದು ಸಂದರ್ಭವಿಶೇಷದ ಕಾರಣದಿಂದ. ಮೇಲೆ ನೋಡಿದ್ದೇವಲ್ಲವೆ, ಭಾವಾತಿಶಯದ ಕಾರಣದಿಂದ ರಾಮನು ಮೂಕನಾಗಿದ್ದದ್ದನ್ನು? ಸಂಧಿಕ್ಷಣಗಳಲ್ಲಿ ಮಾತು ಹೊರಡಲಾರದು. ಹೃದಯವೇನೋ ಶೂನ್ಯನಲ್ಲ. ಅಲ್ಲಿ ಸಂವೇದನೆ ನಷ್ಟವಾಗಿರುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಂವೇದನೆ ಬಹುವಾಗಿರುತ್ತದೆ, ಜಡೆಜಡೆಯಾಗಿರುತ್ತದೆ, ಭರ್ತಿಯಾಗಿರುತ್ತದೆ. ಆಗ ಯಾವುದನ್ನು ಮೊದಲು ಹೇಳಬೇಕು? ಇದನ್ನು ನಮ್ಮ ವಾಕ್ಶಕ್ತಿ ಗೊತ್ತುಮಾಡಲಾರದು. ಯಾವುದೋ ಒಂದು ಭಾವವನ್ನು ನುಡಿಯಲು ಮೊದಲು ಮಾಡುತ್ತದೆ. ಆ ನುಡಿತ ಕೂಡ ಭಾವನೆಗಳ ಒತ್ತಡದಿಂದ ನಮ್ಮ ಎದೆಯೊತ್ತಿ ತಮ್ಮ ಭಾರವನ್ನು ಕೊಂಚವಾದರೂ ಹಗುರ ಮಾಡಿಕೊಂಡ ಹೊರತು ತಾನು ಅದನ್ನು ಸಹಿಸುವುದು ಇನ್ನು ಅಸಾಧ್ಯವೆಂದು ತೋರಿದಾಗ, ಆ ಒತ್ತಡದ ನಿರ್ಬಂಧದಲ್ಲಿ ತುಟಿಯಿಂದ ಒಂದು ಮಾತು ಹೊರಡುತ್ತದೆ. ಆ ಒಂದು ಮಾತೇ ನಮ್ಮ ಹೃದಯದ ಸರ್ವಸ್ವವಲ್ಲ. ನಮ್ಮ ಹೃದಯಭಾವ ಏಕೈಕವಲ್ಲ, ಅದು ಸಂಕೀರ್ಣವಾದದ್ದು. ಆದದ್ದರಿಂದ ಬಾಯಿನಿಂದ ಆಡಿದ ಒಂದು ಮಾತಿನಿಂದ ನಮ್ಮ ಅಂತರಂಗವೆಲ್ಲವೂ ಹೊರಪಟ್ಟಿತೆಂದು ತಿಳಿಯಲಾಗದು.

ಈಗ ಶ್ರೀರಾಮನ ಅಭಿಪ್ರಾಯವನ್ನು ಊಹಿಸೋಣ. ಅದು ಹೀಗಿರಕೂಡದೆ?:

“ಸೀತೆ ಬಹು ಖಿನ್ನಳಾಗಿರಬೇಕು. ಬಹು ದೀನಳಾಗಿರಬೇಕು. ಆ ಸ್ಥಿತಿಯಲ್ಲಿ ಆಕೆ ಇರುವಾಗ ನಾನು ಆಕೆಯನ್ನು ಏಕೆ ನೋಡಬೇಕು? ಆಕೆ ಗೆಲುಮುಖವನ್ನು ತೊಟ್ಟಿರುವಾಗ ನಾನು ಆಕೆಯನ್ನು ನೋಡುವುದು ಉಚಿತ.”

“ಸೀತೆ ರಾಕ್ಷಸಿಯರ ಮಧ್ಯದಲ್ಲಿದ್ದು ಬೇಸರಪಟ್ಟು ಮೈಲಿಗೆಯಲ್ಲಿದ್ದವಳು. ಈಗ ಆಕೆಯನ್ನು ನೋಡಿದರೆ ಆಕೆಯ ರೂಪಲಾವಣ್ಯಕ್ಕೆ ನ್ಯಾಯ ಮಾಡಿದಂತಾದೀತೆ? ಆಕೆ ಸುಸ್ನಾತಳಾಗಿ ತನಗೆ ಸ್ವಾಭಾವಿಕವಾದ ದಶೆಯಲ್ಲಿ ಬರಲಿ. ಆಕೆಗೆ ಸಮಾಧಾನವಾಗುತ್ತದೆ. ಅದು ನನಗೂ ಸಮಾಧಾನ.”

“ಸೀತೆ ಇಷ್ಟು ದಿನವೂ ಅಶೌಚದಲ್ಲಿದ್ದಂತಿದ್ದಾಳೆ. ಈಗ ಆ ಮಾಲಿನ್ಯವನ್ನು ಕಳೆದು ಸ್ವೀಕೃತಶುಭಳಾಗಿ ಬರಲಿ. ಅದು ನಮ್ಮಿಬ್ಬರಿಗೂ ಶುಭವಾಗುತ್ತದೆ,”

ಶ್ರೀರಾಮನ ಮನಸ್ಸಿನಲ್ಲಿ ಹೀಗೆ ಆಲೋಚನೆಗಳು ಪರಂಪರೆಯಾಗಿ, ತರಂಗ–ತರಂಗವಾಗಿ ಏಳುತ್ತಿದ್ದವೆಂದು ನಾವು ಭಾವಿಸಬಹುದು. ಆತನು ಆಲೋಚನೆಮಾಡಿ ಸೀತೆ ತನ್ನಲ್ಲಿಗೆ ಶುಭಲಕ್ಷಣಸಂಪನ್ನಳಾಗಿ ಬರುವುದು ಯುಕ್ತವೆಂದು ಸಿದ್ಧಾಂತ ಮಾಡಿರಬಹುದು.

ಇನ್ನು ಸೀತಮ್ಮನ ಮಾತು. ಆಕೆಯ ಮನಸ್ಸು ರೋಸಿಹೋಗಿತ್ತು. ಉತ್ಸಾಹ ಹಾರಿಹೋಗಿ ಎಷ್ಟೋ ದಿನವಾಗಿದ್ದಿರಬೇಕು. ಅಂಥಾದ್ದರಲ್ಲಿ ಹೀಗೆ ಯೋಚಿಸಿರಬಹುದು:

“ಈಗ ನನಗೇಕೆ ಸ್ನಾನಾಲಂಕಾರಗಳು? ಹೀಗೆಯೇ ಅವತಾರ ಮುಗಿಸಿಕೊಂಡೇನು. ನಾನು ಹೇಗಿದ್ದರೂ ನನ್ನ ತಾಯಿ ಭೂದೇವಿ ನನ್ನ ಕೈ ಬಿಡಲಾರಳು.”

“ಪತಿಯ ಮನಸ್ಸು ಹೇಗಿದೆಯೋ! ಅದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆಯೇ ನಾನು ಸ್ನಾನಾಲಂಕಾರಗಳಿಗೆ ಆತುರಪಡಲೇ?”

“ಶ್ರೀರಾಮನು ಇಂಗಿತಜ್ಞನಲ್ಲವೆ? ನಾನು ಆತನಿಗೆ ನನ್ನ ಸ್ನಾನಾಲಂಕಾರಗಳಿಂದ ಪ್ರಿಯಳಾಗಬೇಕೋ, ಅಥವಾ ನನ್ನ ನೈಜದಿಂದಲೇ ನಾನು ಆತನಿಗೆ ಪ್ರಿಯಳೊ? ಆತನನ್ನು ನೋಡಿದ ಮೇಲೆ ಆತನ ಮನಸ್ಸೆಂಥಾದ್ದೆಂದು ತಿಳಿದು ಬಂದೀತು.”

ಸೀತಾದೇವಿ ಬಾಹ್ಯಾಲಂಕಾರಗಳಿಗಿಂತ ಆತ್ಮಗುಣಕ್ಕೆ ಹೆಚ್ಚು ಬೆಲೆ ಸಲ್ಲುತ್ತದೆಂದು ನಿಶ್ಚಯಮಾಡಿಕೊಂಡಿದ್ದವಳು. ಈಗ ತಾನಿದ್ದ ಸ್ಥಿತಿಯಲ್ಲಿ ಸ್ನಾನಭೂಷಣಗಳಿಂದ ತನಗೆ ಆಗಬೇಕಾದದ್ದೇನು ಎಂದು ನಿರ್ವಿಣ್ಣಳಾಗಿದ್ದಿರಬಹುದು.

ಹೀಗೆ ಸೀತಾರಾಮರಿಗೆ ಹೃದಯಭಾವನೆಗಳ ದಾರಿ ಬೇರೆ ಬೇರೆಯಾಯಿತು. ಆದರೂ ಸಾಧ್ವಿಗೆ ಸಹಜವಾದಂತೆ ಸೀತೆ ನಡೆದುಕೊಂಡಳು.

ರಾಮನ ಮನಃಪ್ರತಿವರ್ತನೆ

ಸೀತೆಯನ್ನು ನೋಡಿದಾಗ ಶ್ರೀರಾಮನು ಧ್ಯಾನಾರೂಢನಾಗಿದ್ದನಂತೆ. ಏನೇನನ್ನೋ ಯೋಚಿಸುತ್ತಿದ್ದ. ಸೀತೆಯು ಬಂದದ್ದನ್ನು ಕೇಳಿದಾಗ ರಾಮನ ಮನಸ್ಸಿನಲ್ಲಿ ಏನಾಯಿತು? ವಾಲ್ಮೀಕಿಗಳು ಹೇಳುತ್ತಾರೆ:

ಹರ್ಷೋ ದೈನ್ಯಂ ಚ ರೋಷಶ್ಚ
ತ್ರಯಂ ರಾಘವಮಾವಿಷತ್‍ । ಸರ್ಗ ೧೧೭, ಶ್ಲೋಕ ೧೬

ರಾಮನ ಪ್ರತಿಭಾವನೆ ಒಂದಲ್ಲ; ಎರಡಲ್ಲ; ಮೂರು. ಹರ್ಷ, ದೈನ್ಯ, ರೋಷ.

ಹರ್ಷ ಬಂತು, ಸರಿ. ಸೀತೆಯನ್ನು ಕಂಡದ್ದಾಯಿತು. ರಾವಣನನ್ನು ವಧಿಸಿದ್ದಾಯಿತು. ಋಷಿಗಳಿಗೆ ಕೊಟ್ಟಿದ್ದ ವಚನವನ್ನು ನಡೆಸಿದ್ದಾಗಿತ್ತು.

ದೈನ್ಯವೇಕೆ? ವಂಚನೆಗೆ ತುತ್ತಾದೆನಲ್ಲ! ದೈವದ ಎದುರಿನಲ್ಲಿ ದುರ್ಬಲನಾದೆನಲ್ಲ! ಮತ್ತೊಬ್ಬರ ಸಹಾಯವನ್ನು ಅಪೇಕ್ಷಿಸಬೇಕಾಯಿತಲ್ಲ! ಬಹುಕಾಲ ತನ್ನ ಕೈ ಸಾಗದೆಹೋಯಿತಲ್ಲ! ಹೀಗೆ.

ರೋಷ. ಯಾರ ಮೇಲೆ? ದೈವದ ಮೇಲೆ. ವಿಧಿಯ ಮೇಲೆ. ಯಾರ ಮೇಲೆಂದು ಈಗ ನಿಷ್ಕರ್ಷೆಯಾಗಿ ಹೇಳುವಂತಿಲ್ಲ. ಅದು ಮೂಕರೋಷ. ಹೆಸರಿಲ್ಲದ ರೋಷ. ಲೋಕಾನುಭವವುಳ್ಳವರು ಅದರ ಸ್ವಭಾವವನ್ನು ಗುರುತಿಸಬಲ್ಲರು. ಅನುಭವ ಇಲ್ಲದವರಿಗೆ ಅದನ್ನು ತಿಳಿಸಲಾಗದು.

ಮನೆಯಲ್ಲಿ ಯಾವುದೋ ಪ್ರಮಾದ ನಡೆದಾಗ, ತಲೆನೋವು ಬಂದು ಸಹನೆ ಮೀರಿದಾಗ, ನಮಗೆ ಪ್ರಿಯರಾದವರನ್ನು ಮೃತ್ಯು ಕೊಂಡೊಯ್ದಾಗ, ವಿಧೇಯರಾಗಿರಬೇಕಾದವರು ಎದುರುನುಡಿ ನುಡಿದಾಗ ನಾವು ತಲೆತಲೆ ಚಚ್ಚಿಕೊಳ್ಳುತ್ತೇವೆ. ರೇಗಾಡುತ್ತೇವೆ. ಹುಚ್ಚುಹುಚ್ಚಾಗಿ ಕೂಗಾಡುತ್ತೇವೆ. ಯಾರ ಮೇಲೆ ರೇಗಾಟ? ಗೊತ್ತಿಲ್ಲ. ಗೊತ್ತಿಲ್ಲದ್ದನ್ನು ದೈವವೆನ್ನುತ್ತೇವೆ.

ಇದು ಸಾಮಾನ್ಯ ಮನುಷ್ಯನ ರೀತಿ. ಶ್ರೀರಾಮನದೂ ಒಂದು ಪರೀಕ್ಷೆಯ ನಿಮಿಷದಲ್ಲಿ ಅಂಥಾದಾಗಿತ್ತು, ಅದರಿಂದ ಆತ ಚೇತರಿಸಿಕೊಂಡ. ಸಾಮಾನ್ಯನು ಅದರಿಂದ ಇನ್ನೂ ಕೆಳಕ್ಕೆ ಬೀಳುತ್ತಾನೆ.

ಸೀತಾತಿರಸ್ಕಾರ

ಆದರೂ ರಾಮನ ಮಾತಿನಲ್ಲಿ ಉತ್ಸಾಹವಿಲ್ಲ. ಲಕ್ಷ್ಮಣ ಸುಗ್ರೀವ ಹನುಮಂತರು ಹೀಗೆ ಯೋಚಿಸಿದರು:

ಕಲತ್ರ ನಿರಪೇಕ್ಷೈಶ್ಚ
ಇಂಗಿತೈರಸ್ಯ ದಾರುಣೈಃ ।
ಅಪ್ರೀತಮಿತ ಸೀತಾಯಾಂ
ತರ್ಕಯಂತಿ ಸ್ಮ ರಾಘವಮ್‍ ॥ ಸರ್ಗ ೧೧೭, ಶ್ಲೋಕ ೩೨

ಸೀತೆಯಾದರೋ–

ಸಾ ವಸ್ತ್ರಸಂರುದ್ಧಮುಖೀ
ಲಜ್ಜಯಾ ಜನಸಂಸದಿ ।
ರುರೋದಾಸಾದ್ಯ ಭರ್ತಾರಂ
ಆರ್ಯಪುತ್ರೇತಿ ಭಾಷಿಣೀ । ಸರ್ಗ ೧೧೭, ಶ್ಲೋಕ ೩೪

ಎಂಥ ಹೃದಯವಿದ್ರಾವಕವಾದ ಸನ್ನಿವೇಶ! ಬಳಿಕ ರಾಮನು–

ಹೃದಯಾಂತರ್ಗತಕ್ರೋಧಃ
ವ್ಯಾಹರ್ತುಮುಪಚಕ್ರಮೇ ॥
ಪೌರುಷಾದ್ಯದನುಷ್ಠೇಯಂ
ತದೇತದುಪಪಾದಿತಮ್‍ ॥
ದೈವಸಂಪಾದಿತೋ ದೋಷಃ
ಮಾನುಷೇಣ ಮಯಾ ಜಿತಃ ॥ ಸರ್ಗ ೧೧೮, ಶ್ಲೋಕಗಳು ೧, ೨, ೫

ಈ ಮಾತುಗಳನ್ನು ಕೇಳಿ ಸೀತೆಯು ಕಂಬನಿತುಂಬಿದವಳಾದಳು. ರಾಮನ ಕೋಪವು ಇನ್ನೂ ಇಳಿಯಲಿಲ್ಲ.

ಪಶ್ಯತಸ್ತಾಂ ತು ರಾಮಸ್ಯ
ಭೂಯಃ ಕ್ರೋಧೋ ವ್ಯವರ್ಧತ । ಸರ್ಗ ೧೧೮, ಶ್ಲೋಕ ೧೧

ಯಾರಮೇಲೆ ಕ್ರೋಧ? ಸೀತೆಯಮೇಲೆಯೆ? ಹಾಗೆಂದು ಆಕೆಯನ್ನು ಬಾಯಿಬಿಟ್ಟು ಆಕ್ಷೇಪಿಸಲು ರಾಮನಿಗೆ ಕಾರಣವಿಲ್ಲ. ಹಾಗೆ ಮಾಡಲು ಆತನಿಗೆ ಬಾಯಿಲ್ಲ. ಆದರೂ ಏನೋ ಕೋಪ. ನಿಷ್ಠುರವಾದ ಮಾತನ್ನಾಡುತ್ತಾನೆ.

ವಿದಿತಶ್ಚಾಸ್ತು ತೇ ಭದ್ರೇ
ಯೋಽಯಂ ರಣಪರಿಶ್ರಮಃ ।
ಸ ತೀರ್ಣಃ ಸುಹೃದಾಂ ವೀರ್ಯಾತ್‍
ನ ತ್ವದರ್ಥಂ ಮಯಾ ಕೃತಃ । ಸರ್ಗ ೧೧೮, ಶ್ಲೋಕ ೧೫

ಏನು ನಿಷ್ಠುರ ಇದು! ಅಲ್ಲಿಗೆ ಮುಗಿಯಲಿಲ್ಲ ರಾಮನ ರೇಗಾಟ. ಆ ರೋಷ ತನ್ನಷ್ಟಕ್ಕೆ ತಾನೇ ಬೆಳೆಯಿತು. ಬೆಳೆಯುತ್ತ ಬೆಳೆಯುತ್ತ ಕಠೋರವಾಯಿತು. ಮೈಮೇಲೆ ಸ್ಮೃತಿ ತಪ್ಪಿತಂದೆನಿಸುವಷ್ಟು ಬೆಳೆಯಿತು. ಆಗ ಹೊರಟಿತು ರಾಮಮುಖದಿಂದ ಇಂಥ ಕ್ರೂರವಾದ ವಾಗ್ಬಾಣ ಪರಂಪರೆ!

ಪ್ರಾಪ್ತಚಾರಿತ್ರಸಂದೇಹಾ ॥
ಪ್ರತಿಕೂಲಾಸಿ ಮೇ ॥
ಗಚ್ಛ ಯಥೇಷ್ಟಂ ॥
ಪರಗೃಹೋಷಿತಾ ॥
ರಾವಣಾಂಕಪರಿಭ್ರಷ್ಟಾ ॥
ದೃಷ್ಟಾ ದುಷ್ಟೇನ ಚಕ್ಷುಷಾ ॥

ನಾಸ್ತಿ ಮೇ ತ್ವಯ್ಯಭಿಷ್ವಂಗಃ ॥ ಸರ್ಗ ೧೧೮, ಶ್ಲೋಕಗಳು ೧೭–೨೧

ಲಕ್ಷ್ಮಣೇ ಭರತೇ ವಾ ತ್ವಂ
ಕುರು ಬುದ್ಧಿಂ ಯಥಾಸುಖಮ್‍ ॥
ಸುಗ್ರೀವೇ ವಾನರೇಂದ್ರೇ ವಾ
ರಾಕ್ಷಸೇಂದ್ರೇ ವಿಭೀಷಣೇ ॥ ಸರ್ಗ ೧೧೮, ಶ್ಲೋಕಗಳು ೨೨–೨೩

ಒಂದು ನೆನಪು

ಈ ಸಂದರ್ಭದಲ್ಲಿ ಒಬ್ಬ ಹಳೆಯ ಸ್ನೇಹಿತನ ನೆನಪು ಬರುತ್ತದೆ. ಆತನ ಹೆಸರು ನರಸಿಂಹಾಚಾರಿ ಎಂದು. ಆತ ಸ್ಕೂಲ್‍ಮೇಷ್ಟರು. ತುಂಬ ಒಳ್ಳೆಯ ಮನುಷ್ಯ. ಒಂದು ಕಳಂಕವೂ ಇಲ್ಲದ ನಡತೆ ಆತನದು. ಆದರೆ ಒಂದು ವಿಶೇಷ. ಕಥೆಯನ್ನು ಕೇಳಿದರೆ ಅದು ಸ್ಪಷ್ಟವಾಗುತ್ತದೆ. ನರಸಿಂಹಾಚಾರಿ ಶ್ರೀವೈಷ್ಣವ. ಕೊಂಚ ಸಂಸ್ಕೃತ ತಿಳಿದಿತ್ತು. ವಿದ್ವಾಂಸರ ಮಗ. ಆಚಾರಸಂಪನ್ನ.

ಆತ ಒಂದು ದಿನ ಹನ್ನೊಂದು ಘಂಟೆಯ ಹೊತ್ತಿಗೆ ಮಾಮೂಲಿನಂತೆ ಮನೆಗೆ ಬಂದ. ತಲೆಬಾಗಿಲು ದಾಟಿ ಒಳಗೆ ಬರುತ್ತಲೇ ಹೆಂಡತಿ ಹೊರಗಾಗಿದ್ದಾಳೆಂದು ತೋರಿತು. ಅಡಿಗೆಮನೆಯೊಳಗೆ ನೋಡಿದ. ಆಕೆ ಒಲೆಯಮೇಲೆ ಪಾತ್ರೆಯಿಟ್ಟು ತಾನು ಹೊರಗಿದ್ದಳು. ಮನೆಯಲ್ಲಿದ್ದವರು ಅವರಿಬ್ಬರೇ. ಆದದ್ದರಿಂದ ಬೇರೆ ಯಾರೂ ಅಡಿಗೆ ಮಾಡುವವರಿರಲಿಲ್ಲ. ನರಸಿಂಹಾಚಾರಿಗೆ ಬಲು ಕೋಪ ಬಂತು. ಅಡಿಗೆಮನೆಯ ಬಾಗಿಲ ಹಿಂದಿದ್ದ ಪೊರಕೆ ಕಟ್ಟನ್ನು ತೆಗೆದುಕೊಂಡು ‘ಛೆ! ಕತ್ತೆ!’ ಎಂದು ಹೇಳುತ್ತ ಪೊರಕೆಯನ್ನು ಹೆಂಡತಿಯಮೇಲೆ ಜೋರಾಗಿ ಎಸೆದ. ಮತ್ತು ಅದರೊಡನೆ ಬಾಳೆನಾರನ್ನು ಆಕೆಯಮೇಲೆ ಎಸೆದು, ಪೊರಕೆಯಮೇಲಿನ ದಾರವನ್ನು ಬಿಚ್ಚಿ ಬಾಳೆನಾರನ್ನು ಸುತ್ತುವಂತೆ ಹೇಳಿದ. ಆಕೆ ಹಾಗೆ ಮಾಡಿ ಪೊರಕೆಯನ್ನು ಹಿಂದಕ್ಕೆಸೆದಳು. ಈತ ಮತ್ತೆ ಅದನ್ನು ಅವಳಮೇಲೆಸೆದ. ಮತ್ತೆ ಅವಳು ಹಿಂದಕ್ಕೆಸೆಯಬೇಕಾಯಿತು. ಮರಳಿ ಆಕೆಯ ಮೇಲೆಸೆದು ತನ್ನ ಕಡೆಗೆ ತರಿಸಿಕೊಂಡ. ಹೀಗೆ ನಾಲ್ಕೈದುಸಾರಿ ಬಾಳೆನಾರಿನಿಂದ ಸುತ್ತಿದ ಪೊರಕೆಯನ್ನು ಆಕೆಯಮೇಲೆ ಪ್ರಯೋಗಿಸಿದ. ಬಾಳೆನಾರು ಮಡಿ; ನೂಲು ಮೈಲಿಗೆ! ಹೀಗೆ ಮಡಿಯ ಪೊರಕೆಯನ್ನು ತನ್ನ ಕೈ ಸೋಲುವವರೆಗೂ ದಂಡಿಸಿದ್ದಾಯಿತು. ಇದು ನಡೆಯುತ್ತಿದ್ದಾಗ ಆಕೆ ಕೊಂಚ ಕೊಂಚ ನಗುತ್ತಿದ್ದಳು. ಇದು ನಾನು ಚೆನ್ನಾಗಿ ಬಲ್ಲ ಸಂಗತಿ. ನರಸಿಂಹಾಚಾರಿಗೆ ಹೆಂಡತಿಯ ಮೇಲಿದ್ದ ಪ್ರೀತಿಯೋ–ಮಾತುಗಳಿಂದ ಹೇಳಲಾಗದು. ಆಕೆಗೂ ಕೊಂಚವೂ ಆಯಾಸವಾಗಬಾರದು, ನೋವಾಗಬಾರದು, ಯಾವುದಕ್ಕೂ ಕೊರತೆಯಾಗಬಾರದು. ಆದರೆ ಕೋಪ ಬಂದಿದೆಯಲ್ಲ, ಹೊಟ್ಟೆ ಹಸಿವಿನ ಕಾರಣದಿಂದ.

ಇಂಥದು ಕೋಪದ ಸ್ವಭಾವ. ಅದು ಬಂದಾಗ ಕಾರ್ಯಕಾರಣವಿವೇಕ ನುಣುಚಿಕೊಂಡು ಹೋಗಿಬಿಡುತ್ತದೆ. ಆದದ್ದರಿಂದಲೇ ಮಹರ್ಷಿಗಳು ಕೋಪವನ್ನು ಒಂದು ದೈವವೆಂದೆಣಿಸಿದರು.

ನಮಸ್ತೇ ರುದ್ರ ಮನ್ಯವ
ಉತೋ ತ ಇಷವೇ ನಮಃ ।
ನಮಸ್ತೇ ಅಸ್ತು ಧನ್ವನೇ
ಬಾಹುಭ್ಯಾಮುತ ತೇ ನಮಃ ॥

“ಎಲೈ ರುದ್ರನೆ, ನಿನ್ನ ಕೋಪಕ್ಕೆ ನಮಸ್ಕಾರ, ನಿನ್ನ ಬಾಣಕ್ಕೆ ನಮಸ್ಕಾರ, ಧನುಸ್ಸಿಗೆ ನಮಸ್ಕಾರ, ನಿನ್ನ ಸರ್ವಾಂಗಗಳಿಗೂ ನಮಸ್ಕಾರ. ಯಾವ ಕ್ಷಣದಲ್ಲಿ ನೀನು ನಮ್ಮನ್ನು ಹೇಗೆ ನಡೆಸುತ್ತೀಯೋ!” ಎಂದು ಋಷಿಗಳು ಉದ್ಗರಿಸುತ್ತಾರೆ.

ಮನ್ಯುವು ಶ್ರೀರಾಮನನ್ನು ಬಿಡಲಿಲ್ಲ. ಆತನ ಬಾಯಿಂದ ಆಡಬಾರದ್ದನ್ನು ಆಡಿಸಿತು.

ಮನ್ಯುರಕಾರ್ಷೀನ್ನಮೋ ನಮಃ ॥

ಅಗ್ನಿಪ್ರವೇಶ

ಸೀತೆ ಈಗ ಏನು ಮಾಡಿಯಾಳು? ಕಣ್ಣೀರಿಟ್ಟಳು.

ಕಾಮಕಾರೋ ನ ಮೇ ತತ್ರ
ದೈವಂ ತತ್ರಾಪರಾಧ್ಯತಿ ॥
ಪರಾಧೀನೇಷು ಗಾತ್ರೇಷು
ಕಿಂ ಕರಿಷ್ಯಾಮ್ಯನೀಶ್ವರಾ ॥

ಮಮ ಭಕ್ತಿಶ್ಚ ಶೀಲಂ ಚ
ಸರ್ವಂ ತೇ ಪೃಷ್ಠತಃ ಕೃತಮ್‍ ॥ ಸರ್ಗ ೧೧೯, ಶ್ಲೋಕಗಳು ೮–೯–೧೬

ಹೀಗೆ ಹೇಳಿ ಲಕ್ಷ್ಮಣನನ್ನು ಕುರಿತು–

ಚಿತಾಂ ಮೇ ಕುರು ಸೌಮಿತ್ರೇ
ವ್ಯಸನಸ್ಯಾಸ್ಯ ಭೇಷಜಮ್‍ ।
ಮಿಥ್ಯಾಪವಾದೋಪಹತಾ
ನಾಹಂ ಜೀವಿತುಮುತ್ಸಹೇ ॥ ಸರ್ಗ ೧೧೯, ಶ್ಲೋಕ ೧೮

ಅನಂತರ ಅಗ್ನಿಪರೀಕ್ಷೆ ನಡೆಯಿತು. ಆ ಮಹಾತಾಯಿ ಅಗ್ನಿಪ್ರವೇಶ ಮಾಡುವಾಗ ಹೇಳುವ ಪ್ರಾರ್ಥನೆಯ ಮಾತುಗಳು ಕರುಣಾಜನಕಗಳಾಗಿವೆ. ಆ ಮಾತುಗಳನ್ನು ಶ್ರೀರಾಮ ಕೇಳಿ–

ದಧ್ಯೌ ಮುಹೂರ್ತಂ ಧರ್ಮಾತ್ಮಾ ಬಾಷ್ಪವ್ಯಾಕುಲಲೋಚನಃ ॥ ಸರ್ಗ ೧೨೦, ಶ್ಲೋಕ ೧

ಮಹಾದೇವನೂ ದೇವಾಧಿದೇವತೆಗಳೂ ಆ ಅದ್ಭುತವನ್ನು ನೋಡಿದರು. ಅವರೆಲ್ಲ ರಾಮನ ನಡವಳಿಕೆಯ ವಿಷಯದಲ್ಲಿ ಅಸಮಾಧಾನ ಸೂಚಿಸಿದರು.

ಉಪೇಕ್ಷಸೇ ಚ ವೈದೇಹೀಂ
ಮಾನುಷಃ ಪ್ರಾಕೃತೋ ಯಥಾ ॥ ಸರ್ಗ ೧೨೦, ಶ್ಲೋಕ ೧೦

ಇಷ್ಟೆಲ್ಲ ಆದಮೇಲೆ ರಾಮನು ಹೇಳುತ್ತಾನೆ:

ಪ್ರತ್ಯಯಾರ್ಥಂ ತು ಲೋಕಾನಾಮ್‍ ॥ ಸರ್ಗ ೧೨೧, ಶ್ಲೋಕ ೧೫

ಲೋಕಕ್ಕೆ ನಂಬಿಕೆಯುಂಟಾಗಬೇಕೆಂದು ಹಾಗೆ ಮಾಡಿದನಂತೆ!

ಈ ಸಬೂಬು ನನ್ನ ಮನಸ್ಸಿಗೆ ಕುಂಟುಸಬೂಬಾಗಿ ಕಾಣುತ್ತದೆ. ಶ್ರೀರಾಮನ ಬಾಯಿಂದ ಹೀಗೆ ಆಡಿಸಿದವರು ವಾಲ್ಮೀಕಿ ಮಹರ್ಷಿಗಳೋ, ಅಥವಾ ಬೇರೊಬ್ಬ ರಾಮ ಭಕ್ತರಾದ ಕವಿಗಳೋ ಎಂದು ನನ್ನ ಮನಸ್ಸಿನಲ್ಲಿ ಶಂಕೆ ಹುಟ್ಟುತ್ತದೆ.

ಅದು ಹೇಗಾದರಿರಲಿ. ಕಥೆಯ ಸಮಾಪ್ತಿಯೇನೋ ಚೆನ್ನಾಗಿದೆ.

ಸ್ವದೇಶಪ್ರೀತಿ

ಶ್ರೀ ಸೀತಾರಾಮರು ಲಂಕೆಯಿಂದ ಪುಷ್ಪಕವಿಮಾನದಲ್ಲಿ ಪ್ರಯಾಣ ಬೆಳೆಸಿ ಬರುತ್ತಿದ್ದಾಗ ಅಯೋಧ್ಯೆ ಕಣ್ಣಿಗೆ ಕಾಣಿಸಿದ ಕೂಡಲೇ ಶ್ರೀರಾಮನು ಹೀಗೆಂದನು:

ಏಷಾ ಸಾ ದೃಶ್ಯತೇ ಸೀತೇ ಸರಯೂರ್ಯೂಪಮಾಲಿನೀ ।
ನಾನಾತರುಲತಾಕೀರ್ಣಾ ಸಂಪ್ರಪುಷ್ಪಿತಕಾನನಾ ॥
ಏಷಾ ಸಾ ದೃಶ್ಯತೇಽಯೋಧ್ಯಾ ರಾಜಧಾನೀ ಪಿತುರ್ಮಮ ।
ಅಯೋಧ್ಯಾಂ ಕುರು ವೈದೇಹಿ ಪ್ರಣಾಮಂ ಪುನರಾಗತಾ ॥ ಸರ್ಗ ೧೨೬, ಶ್ಲೋಕಗಳು ೪೯–೫೧

ಇದು ಸ್ವದೇಶಪ್ರೀತಿಯ ಮಾತು.

ಭರತಸಮಾಗಮ

ಈ ಹೃದಯಮಂಥಿಯಾದ ಪ್ರಕರಣವಾದ ಬಳಿಕ ಅಯೋಧ್ಯೆಗೆ ಪುನರಾಗಮನ; ಭರತನೊಡನೆ ಪುನಸ್ಸಮಾಗಮ. ಭರತನು ನಂದಿಗ್ರಾಮದಲ್ಲಿ ತಪಸ್ವಿಯಾಗಿದ್ದನಷ್ಟೆ.

ಚೀರಕೃಷ್ಣಾಜಿನಾಂಬರಮ್‍ ॥
ಕೃಶಮಾಶ್ರಮವಾಸಿನಮ್‍ ॥
ಜಟಿಲಂ ಮಲದಿಗ್ಧಾಂಗಂ
ಭ್ರಾತೃವ್ಯಸನಕರ್ಶಿತಮ್‍ ।
ನಿಯತಂ ಭಾವಿತಾತ್ಮಾನಂ
ಬ್ರಹ್ಮರ್ಷಿಸಮತೇಜಸಮ್‍ ॥
ಪಾದುಕೇ ತೇ ಪುರಸ್ಕೃತ್ಯ

ಶಾಸತಂ ವೈ ವಸುಂಧರಾಮ್‍ ॥ ಸರ್ಗ ೧೨೮, ಶ್ಲೋಕಗಳು ೨೮–೨೯–೩೦

ಅನಂತರ ಅಣ್ಣತಮ್ಮಂದಿರ ಕುಶಲಸಂಭಾಷಣೆ. ಈ ಪ್ರಸಂಗದಲ್ಲಿ ಭರತನು ತನ್ನ ಅಣ್ಣನಿಗೆ ಸ್ವಾಗತ ನೀಡುವುದಕ್ಕಾಗಿ ಅಯೋಧ್ಯಾಪುರದ ರಸ್ತೆಗಳನ್ನು ಹೇಗೆ ಅಲಂಕಾರ ಮಾಡಿಸಿದ್ದನೆಂಬುದರ ವರ್ಣನೆ ಸೊಗಸಾಗಿದೆ.

ರಾಮನ ವಿಮಾನ ಕಾಣಿಸಿದ ಕೂಡಲೇ ಅಯೋಧ್ಯಾಪಟ್ಟಣದ ಜನ ಉತ್ಸಾಹಭರಿತರಾಗಿ ಜಯಘೋಷಣೆಗಳೊಡನೆ ಕೈಮುಗಿದರು. ಭರತನು ಅಣ್ಣನನ್ನು ಗೌರವಿಸಿದ್ದುದು ಹಾಗಿರಲಿ; ಸುಗ್ರೀವನನ್ನು ಕುರಿತು ಅವನು ಹೇಳಿದ್ದನ್ನು ನೋಡಿರಿ:

ತ್ವಮಸ್ಮಾಕಂ ಚತುರ್ಣಾಂತು
ಭ್ರಾತಾ ಸುಗ್ರೀವ ಪಂಚಮಃ । ಸರ್ಗ ೧೩೦, ಶ್ಲೋಕ ೪೩

ಆಮೇಲೆ ಭರತನು ಹೀಗೆ ಹೇಳಿದನಂತೆ:

ಅದ್ಯ ಜನ್ಮ ಕೃತಾರ್ಥಂ ಮೇ
ಸಂವೃತ್ತಶ್ಚ ಮನೋರಥಃ । ಸರ್ಗ ೧೩೦, ಶ್ಲೋಕ ೫೪

ಪೂಜಿತಾ ಮಾಮಿಕಾ ಮಾತಾ

ದತ್ತಂ ರಾಜ್ಯಮಿದಂ ಮಮ ।
ತದ್ದದಾಮಿ ಪುನಸ್ತುಭ್ಯಂ ಯಥಾ ತ್ವಮದದಾ ಮಮ ॥ ಸರ್ಗ ೧೩೧, ಶ್ಲೋಕ ೨

ರಾಜ್ಯಾಭಿಷೇಕ

ಈಗ ಸಮಾಪ್ತಿ. ಶ್ರೀ ಸೀತಾರಾಮರಿಗೆ ರಾಜ್ಯಾಭಿಷೇಕ. ಇತರ ಕವಿಗಳು ಇಂಥ ಪ್ರಸಂಗದಲ್ಲಿ “ಭೇರೀ ದುಂದುಭಿ ಶಂಖ ಢಕ್ಕಿಕಾ” ಹೀಗೆ ಒಂದು ನೂರು ವಾದ್ಯಗಳ ಘೋಷಣೆಯನ್ನು ಅನುಕರಿಸುವಂತೆ ನಾಲ್ಕು ಶಾರ್ದೂಲವೃತ್ತಗಳನ್ನೂ, ನಾಲ್ಕು ಮಹಾಸ್ರಗ್ಧರೆಗಳನ್ನೂ ಹೊಸೆದು ಆರ್ಭಟ ಮಾಡುತ್ತಿದ್ದರು. ವಾಲ್ಮೀಕಿಗಳು ನಿರಾಡಂಬರವಾಗಿ, ಬಹು ಸಾಮಾನ್ಯವಾದ ಪ್ರಸಂಗವೆಂಬಂತೆ ಸರಳವಾಗಿ ಮುಗಿಸಿದ್ದಾರೆ.

ಅಭ್ಯಷಿಂಚನ್ನ ರವ್ಯಾಘ್ರಂ
ಪ್ರಸನ್ನೇನ ಸುಗಂಧಿನಾ ।
ಸಲಿಲೇನ ಸಹಸ್ರಾಕ್ಷಂ
ವಸವೋ ವಾಸವಂ ಯಥಾ । ಸರ್ಗ ೧೩೧, ಶ್ಲೋಕ ೬೧

ಇದು ಸಾಲದೆನ್ನಿಸುತ್ತದೆ ನಮ್ಮ ಮನಸ್ಸಿಗೆ. ಇಂಥ ಮಹಾಕಥೆಗೆ ಇಂಥ ಸಾಮಾನ್ಯವಾದ ಸಮಾಪ್ತಿಯೆ? ಆಡಂಬರವೇ ಇಲ್ಲವಲ್ಲ!

ಮಾತಿನ ಆಡಂಬರ ಬೇಕಿಲ್ಲ. ಪರ್ಯವಸಾನದಲ್ಲಿ ಕಥೆ ಗದ್ದಲವನ್ನೆಬ್ಬಿಸತಕ್ಕದ್ದಲ್ಲ. ಶಾಂತಿಯನ್ನು ತಂದುಕೊಡಬೇಕಾದದ್ದು. ಮುಖ್ಯ ಮೂರ್ತಿಗಳು ತಪಸ್ವಿಗಳು. ನಿರಹಂಕಾರಿಗಳು. ನಾನು ಗೆದ್ದೆ, ನಾನು ಸಾಧಿಸಿದೆ–ಎಂಬ ರೀತಿಯ ಅಹಂತೆ ಅವರಲ್ಲಿರಲಿಲ್ಲ. ಅಂಥವರಿಗೆ ಗದ್ದಲವೇಕೆ? ನಡಸಬೇಕಾಗಿದ್ದ ಧರ್ಮವನ್ನು ನಡಸಿದ್ದಾಯಿತು. ಧರ್ಮಾಚರಣೆಯಿಂದ ಏನು ಫಲ? ಧರ್ಮ ಸಮಾಧಾನಫಲ. ಲೋಕಕ್ಕೆ ಬೇಕಾದ ಉಪದೇಶ ಅದು.

ಏವಮೇತತ್‍ ಪುರಾವೃತ್ತಂ
ಆಖ್ಯಾನಂ ಭದ್ರಮಸ್ತು ವಃ ।
ಪ್ರವ್ಯಾಹರತ ವಿಸ್ರಬ್ಧಂ
ಬಲಂ ವಿಷ್ಣೋಃ ಪ್ರವರ್ಧತಾಮ್‍ ॥ ಸರ್ಗ ೧೩೧, ಶ್ಲೋಕ ೧೨೨

ಈಗ ಫಲಶ್ರುತಿ.

ಕಾವ್ಯಪ್ರಯೋಜನ

ಶ್ರೀಮದ್ರಾಮಾಯಣವನ್ನು ಪುಣ್ಯಗ್ರಂಥವೆಂಬ ನಂಬಿಕೆಯಿಂದ ಪಾರಾಯಣ ಮಾಡುವುದು ಬಹುಕಾಲದಿಂದ ಬಂದಿರುವ ಪದ್ಧತಿ. ಅದು ಕಾಲವಶದಿಂದ ಕುಂದದೆ ಬೆಳೆಯುತ್ತಿರಲಿ. ನಮ್ಮ ಕಾಲದ ಅತಿಬುದ್ಧಿವಂತಿಕೆಯಿಂದ ಆ ಪವಿತ್ರ ಸಂಪ್ರದಾಯಕ್ಕೆ ನ್ಯೂನತೆ ಬಾರದಿರಲಿ. ಪಾರಾಯಣ ಮಾಡುವ ಭಕ್ತರಿಗೆ “ಐಶ್ವರ್ಯಂ ಪುತ್ರಲಾಭಶ್ಚ”, “ಕುಟುಂಬವೃದ್ಧಿರ್ಧನಧಾನ್ಯವೃದ್ಧಿಃ” –ದೀರ್ಘಾಯುಸ್ಸು, ಆರೋಗ್ಯ, ಕೀರ್ತಿ–ಇವು ಲಭ್ಯಗಳೆಂದು ಪ್ರಾಚೀನರ ನಂಬಿಕೆ. ಶ್ರೀ ಸೀತಾರಾಮರ ಕೃಪಾಮಹಿಮೆಯಿಂದ ಭಕ್ತರಿಗೆ ಈ ಬಹುವಿಧವಾದ ಭೋಗಭಾಗ್ಯಸಂಪತ್ತು ಲಭ್ಯವಾಗಲಿ.

ಆದರೆ ರಾಮಾಯಣ ಭಕ್ತರಲ್ಲಿ ಇನ್ನೊಂದು ವರ್ಗವುಂಟು. ಅದು ಕಾವ್ಯೋಪಾಸಕರದು. ಅವರು ಐಶ್ವರ್ಯ ಪುತ್ರಲಾಭಾದಿಗಳು ಬೇಡವೆನ್ನುವವರಲ್ಲ. ಆದರೆ ಅವರ ಮನಸ್ಸಿನಲ್ಲಿ ಬೇರೊಂದು ಉದ್ದೇಶವೂ ಇರುತ್ತದೆ. ಅದು ಎರಡು ಭಾಗಗಳುಳ್ಳದ್ದು:

(೧) ಮನೋರಂಜನೆ;(೨) ಜೀವನೋನ್ನತಿಯ ದರ್ಶನ.

ರಾಮಾಯಣಕಾವ್ಯದಿಂದ ಎಲ್ಲರಿಗೂ ಅವರವರ ಸಂಸ್ಕಾರಾನುಸಾರವಾಗಿ ಮನೋರಂಜನೆಯಾದೀತೆಂದು ನಾನು ತಿಳಿದುಕೊಂಡಿದ್ದೇನೆ. ಕಥನ ಚಮತ್ಕಾರದಲ್ಲಿ ವಾಲ್ಮೀಕಿಗಳು ಅಪ್ರತಿಮರು. ಆದರೂ ನಮ್ಮದು ಸಿನೆಮಾ ಯುಗ; ಪತ್ತೆದಾರಿ ಕಾದಂಬರಿಗಳ ಯುಗ; ಪ್ರಣಯ ಸಾಹಸಗಳ ಅಪೂರ್ವ ವಿನ್ಯಾಸಗಳ ಯುಗ. ಇಂಥ ನವೀನ ಸಾಹಿತ್ಯದಲ್ಲಿ ರುಚಿ ಕಂಡವರಿಗೆ ಈ ಹಳೆಯ ಕಂದಾಚಾರದ ಕಥೆ ಎಷ್ಟು ಮಾತ್ರ ರುಚಿಸೀತೋ ಅದನ್ನು ತಿಳಿಯುವುದು ನನ್ನಂಥ ಸಂಪ್ರದಾಯ ಜಡನಿಗೆ ಸುಲಭವಲ್ಲ. ಇದು “ಏವಮೇ ತತ್‍ ಪುರಾವೃತಂ.” ಪುರಾತನದಲ್ಲಿಯೂ ಸ್ವಾರಸ್ಯವಿರಬಹುದೆಂದು ಯಾರು ಒಪ್ಪಿಯಾರೋ ಅಂಥವರಿಗೆ ಕುತೂಹಲಕರವಾದ ಸಂದರ್ಭಗಳೂ, ಉಲ್ಲಾಸಕರಗಳಾದ ವರ್ಣನೆ ಸಂಭಾಷಣೆಗಳೂ, ರೋಮಾಂಚನಕಾರಿಗಳಾದ ಸನ್ನಿವೇಶಗಳೂ, ಹೃದಯವಿದ್ರಾವಕ ಘಟನೆಗಳೂ ಈ ಕಾವ್ಯದಲ್ಲಿ ಅಡಿಗಡಿಗೂ ಬರುತ್ತವೆ. ವಾಲ್ಮೀಕಿಗಳ ಮಾತೇ ಸೊಗಸು. ಅವರ ವಾಕ್ಯರಚನೆಯೇ ಸೊಗಸು. ನಮ್ಮ ಜನ ಈ ಅಮೇಯವಾದ ಸೊಗಸನ್ನು ಅನುಭವಿಸುವ ಶಕ್ತಿಯುಳ್ಳವರಾಗಲಿ.

ಇನ್ನು ಕಾವ್ಯದಿಂದಾಗುವ ಎರಡನೆಯ ಪ್ರಯೋಜನ. ಅದು ಜೀವನೌನ್ನತ್ಯದರ್ಶನ; ಸಮ್ಯಗ್ಜೀವನದರ್ಶನ ಜೀವನಸೌಂದರ್ಯದರ್ಶನ. ಮನುಷ್ಯಪ್ರಾಣಿ ತಾನು ಧರ್ಮವೆಂದು ನಂಬಿದ ಒಂದು ಧ್ಯೇಯಕ್ಕಾಗಿ ಎಷ್ಟನ್ನು ಎದುರಿಸಬಲ್ಲ? ಎಷ್ಟನ್ನು ತ್ಯಜಿಸಬಲ್ಲ? ಎಷ್ಟನ್ನು ಸಹಿಸಬಲ್ಲ? ಅವನ ಧೈರ್ಯ ಎಷ್ಟು ಮೇಲಕ್ಕೆ ಹೋಗಬಲ್ಲದ್ದು? ಅವನ ಸಹನೆ ಎಷ್ಟು ನಿರಂತರವಾದದ್ದು! ಅವನ ಶ್ರದ್ಧೆ ಎಷ್ಟು ದೃಢವಾದದ್ದು! ಇದನ್ನು ನಾವು ಶ್ರೀರಾಮಪ್ರಪಂಚದಲ್ಲಿ ಕಾಣಲಾಗುತ್ತದೆ. ಅದು ಮಾನುಷಸತ್ತ್ವದ ವಿಕಾಸ. ಈ ಕಥೆ ಈ ಸತ್ತ್ವೋದ್ರೇಕದರ್ಶನಕ್ಕೆ ಅವಕಾಶ ಕಲ್ಪಿಸುತ್ತದೆ. ರಾಮ, ಸೀತೆ, ಲಕ್ಷ್ಮಣ, ಭರತ, ಆಂಜನೇಯ–ಈ ನಾನಾ ವ್ಯಕ್ತಿಗಳು ಅವರವರಿಗೆ ಸೇರಿದ ಬೇರೆಬೇರೆ ದಾರಿಗಳಲ್ಲಿ ಧರ್ಮಪೋಷಣೆಗಾಗಿ ಎಷ್ಟೆಷ್ಟನ್ನು ತ್ಯಾಗಮಾಡಿದ್ದಾರೆ! ಎಷ್ಟೆಷ್ಟನ್ನು ಪಟ್ಟಿದ್ದಾರೆ! ಎಷ್ಟೆಷ್ಟನ್ನು ಸಾಧಿಸಿದ್ದಾರೆ!

ಈ ಭೋಗವಿರಕ್ತ ಲೋಕಕ್ಕೆ ಪ್ರತಿದ್ವಂದ್ವಿಯಾದದ್ದು ರಾವಣನ ಭೋಗ ಸಂಸಕ್ತ ಲೋಕ. ಸತ್ಯವೋ ಮಿಥ್ಯೆಯೋ, ಮರ್ಯಾದೆಯೋ ಉತ್ಕ್ರಾಂತಿಯೋ, ಹೇಗೋ ಸೇಡು ತೀರಿಸಿಕೊಂಡರೆ ಸರಿ; ಬೇಕೆನಿಸಿದ್ದನ್ನು ಗಿಟ್ಟಿಸಿಕೊಂಡರೆ ಸರಿ. ಹೀಗೆ ಭೋಗೈಶ್ವರ್ಯಪ್ರಸಕ್ತವಾದದ್ದು ರಾವಣಲೋಕ. ದೈವವೈಪರೀತ್ಯನಿರೂಪಣೆ

ಈ ಎರಡು ಲೋಕಗಳ ಘರ್ಷಣೆಯನ್ನು ನಾವು ನೋಡುವುದಾಗುತ್ತದೆ. ಈ ವ್ಯಾಜದಲ್ಲಿ ದೈವವು ತಂದೊಡ್ಡುವ ವಿಷಮ ಪರೀಕ್ಷೆಗಳು ನಮ್ಮ ಅನುಭವಕ್ಕೆ ಗೋಚರಿಸುತ್ತವೆ. ಶ್ರೀರಾಮಚಂದ್ರನು ಹೇಳುವಂತೆ

ಪೌರುಷಾದ್ಯದನುಷ್ಠೇಯಂ

ತದೇತದುಪಪಾದಿತಮ್‍ । ಸರ್ಗ ೧೧೮, ಶ್ಲೋಕ ೨

ಈ ಪರಮತತ್ವದ ನಿರೂಪಣೆಯೇ ನಮಗೆ ದೊರೆಯುವ ಮಹಾಫಲ. ಪಾಶ್ಚಾತ್ಯರಲ್ಲಿ ‘ಟ್ರ್ಯಾಜೆಡಿ’ (Tragedy) ಎಂಬ ಕಾವ್ಯಪ್ರಭೇದವು ಸರ್ವೋತ್ಕೃಷ್ಟವಾದದ್ದೆಂದು ಒಂದು ಮತವುಂಟು. ಒಬ್ಬ ಮನುಷ್ಯನು ಬಹುಸತ್ತ್ವ ಸಂಪನ್ನನಾಗಿ ಬಹುಪರಾಕ್ರಮಿಯಾಗಿ ತನ್ನ ಉದ್ದೇಶಸಾಧನೆಯಲ್ಲಿ ಶಿಖರಾಗ್ರಕ್ಕೇರುತ್ತಿರುವನೆಂದು ಜನ ನಿರೀಕ್ಷಿಸಿಕೊಂಡಿರುವಾಗ, ಅವನಲ್ಲಿ ಗೂಢವಾಗಿ ಅಡಗಿರುವ ಒಂದಾನೊಂದು ದೌರ್ಬಲ್ಯದ ಕಾರಣದಿಂದ, ಅವನು ಉನ್ನತ ಸ್ಥಾನದಿಂದ ಉರುಳಿ ಅಧಃಪಾತಾಳಕ್ಕೆ ಬಿದ್ದರೆ ಅದನ್ನು ‘ಟ್ರ್ಯಾಜೆಡಿ’ ಎಂದು ಪಾಶ್ಚಾತ್ಯರು ಕರೆಯುತ್ತಾರೆ. ಈ ಬಗೆಯ ಕಾವ್ಯನಾಟಕಗಳು ೨೫೦೦ ವರ್ಷಗಳ ಹಿಂದೆ ಗ್ರೀಸ್‍ ದೇಶದಲ್ಲಿ ಪ್ರಚಾರದಲ್ಲಿದ್ದವು. ಐಸ್ಕಿಲಸ್‍, ಸೋಫೊಕ್ಲೀಸ್‍, ಯೂರಿಪಿಡೀಸ್‍–ಇವರು ‘ಟ್ರ್ಯಾಜೆಡಿ’ ನಾಟಕಗಳ ರಚನೆಯಿಂದ ಪ್ರಸಿದ್ಧರಾದವರು. ಅನೇಕ ಮಂದಿ ಇಂಗ್ಲಿಷ್‍ ಕವಿಗಳು ಷೇಕ್‍ಸ್ಪಿಯರ್‍ ಮೊದಲುಗೊಂಡು–ಇಂಗ್ಲಿಷಿನಲ್ಲಿ ‘ಹ್ಯಾಮ್ಲೆಟ್‍’ ‘ಮ್ಯಾಕ್ಬೆತ್‍’ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಸೋಫೊಕ್ಲೀಸನ ‘ಏಜಾಕ್ಸ್‍’ ನಾಟಕದ ಆಧಾರದ ಮೇಲೆ ‘ಅಶ್ವತ್ತಾಮನ್‍’ ಎಂಬ ಶ್ರೇಷ್ಠವಾದ ಕೃತಿಯನ್ನು ರಚಿಸಿದ್ದಾರೆ.

ಶ್ರೀಕಂಠಯ್ಯನವರು ‘ಟ್ರ್ಯಾಜೆಡಿ’ ಎಂಬ ಮಾತಿಗೆ ‘ರುದ್ರನಾಟಕ’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಕೆಲವರು ಅದನ್ನು ‘ದುರಂತನಾಟಕ’ ಎಂದೂ ಕರೆದಿದ್ದಾರೆ. ನನ್ನ ಮನಸ್ಸಿಗೆ ಅದು ‘ವಿಧಿವೈಕಟ್ಯನಾಟಕ’, ‘ದೈವವೈಪರೀತ್ಯನಾಟಕ’ ಎಂದೆನಿಸುತ್ತದೆ. ವಿಧಿ ಒಬ್ಬ ಮನುಷ್ಯನಿಗೆ ತೊಂಭತ್ತೊಂಭತ್ತು ವರಗಳನ್ನು ಅನುಗ್ರಹಿಸಿ ಇನ್ನೊಂದು ವರವನ್ನು ಮಾತ್ರ ಕೊಡಲೊಲ್ಲದೆ, ಆ ತೊಂಭತ್ತೊಂಭತ್ತು ವರಗಳೂ ಅನರ್ಥಕಾರಿಯಾಗುವಂತೆ ಕೃತ್ರಿಮ ಮಾಡುತ್ತದೆ. ಸರ್ವಲಕ್ಷಣಸಂಪನ್ನರಾದ ಯುವಕ ಯುವತಿಯರನ್ನನುಗೂಡಿಸಿ ಮಾಂಗಲ್ಯ ಕಟ್ಟುವ ವೇಳೆಗೆ ವರನ ಕೈಬೆರಳು ಉಳುಕಿಯೋ ವಧುವಿನ ಕೊರಳು ಸೊಟ್ಟಾಗಿಯೋ ಮಾಂಗಲ್ಯದ ದಾರ ತುಂಡು ತುಂಡಾಗುವಂತೆ ಮಾಡುತ್ತದೆ. ಶುಭವಾಗಬೇಕಾಗಿದ್ದದ್ದು ಅಶುಭದಲ್ಲಿ ಪರ್ಯವಸಾನವಾಗುತ್ತದೆ. ಇದು ಟ್ರ್ಯಾಜೆಡಿ. ಅದರಲ್ಲಿ ಕಾರ್ಯಕಾರಿಯಾದದ್ದು ಅನಿರೀಕ್ಷಿತವಾದ ಯಾವುದೋ ಒಂದೇ ವಿಧಿಕೌಟಿಲ್ಯ. ಇದು ಟ್ರ್ಯಾಜೆಡಿಯ ಲಕ್ಷಣ. ರಾವಣನು ಈ ವಿಧಿಕೌಟಿಲ್ಯಕ್ಕೆ ಬಲಿಯಾದವನು.

ಜನ್ಮಬ್ರಹ್ಮಕುಲೇಽಗ್ರಜೋ ಧನಪತಿ-

ರ್ಯಃ ಕುಂಭಕರ್ಣಾಗ್ರಜಃ ।
ಸೂನುರ್ವಾಸವಜಿತ್ಸ್ವಯಂ ದಶಶಿರಾ
ದೋರ್ದಂಡಕಾ ವಿಂಶತಿಃ ।
ಅಸ್ತ್ರಂ ಕಾಮಗಮಂ ವಿಮಾನಮಜಯಂ
ಮಧ್ಯೇ ಸಮುದ್ರಂ ಪುರೀ ।
ಸರ್ವಂ ನಿಷ್ಛಲಮೇತದೇವ ನಿಯತಂ
ದೈವಂ ಪರಂ ದುರ್ಜಯಮ್‍ ॥

ಇಂಥ ಸನ್ನಿವೇಶಗಳನ್ನು ನಮ್ಮ ಮನಸ್ಸು ಚಿಂತಿಸಿ ಚಿಂತಿಸಿ ಅಂತರಂಗಕ್ಕೆ ಶೋಧನೆ ನಡೆದಂತೆಲ್ಲ ತತ್ತ್ವ ಮನದಟ್ಟುವಂತೆ ತಿಳಿದುಬರುತ್ತದೆ:

ಐಶ್ವರ್ಯಕ್ಕಿಂತ ದೊಡ್ಡದು ಧರ್ಮ. ದೈವದ ಮೇಲೆ ಎದ್ದುನಿಲ್ಲಬೇಕಾದದ್ದು ಪೌರುಷ. ಭೋಗಕ್ಕಿಂತ ಹೆಚ್ಚಿನದು ಶಾಂತಿ.

ಕುಂಭೋದ್ಭವಾದಿಸ್ತುತ್ಯಾಯ
ಕ್ಷೇಮಾಭ್ಯುದಯದಾಯಿನೇ ।
ಜೀವತಾರಕನಾಮ್ನೇಽಸ್ತು
ಜಗದೀಶಾಯ ಮಂಗಲಮ್‍ ॥

ಅಭಿನಂದನೆ

ಈಗ ನಮ್ಮ ಉಪಕಾರಿಗಳಿಗೆ ಅಭಿನಂದನೆ. ೧೯೬೪ರಲ್ಲಿ ಈ ಕಾರ್ಯವನ್ನು ಉಪಕ್ರಮಿಸಿದಾಗ ನಮ್ಮ ಮನಸ್ಸುಗಳಲ್ಲಿ ಉತ್ಸಾಹ ತುಂಬಿತ್ತು. ಚಿಂತೆಯೂ ತುಂಬಿತ್ತು. ನಾವು ಕೈಹಚ್ಚಿದ್ದ ಪ್ರಯತ್ನ ಮಹತ್ತರವಾದದ್ದು. ಇಂಥ ದೊಡ್ಡ ಕಾರ್ಯವನ್ನು ಸಾಧಿಸಲು ನಮ್ಮಿಂದ ಆದೀತೇ? ಇಷ್ಟಕ್ಕೆ ಬೇಕಾದ ಶಕ್ತಿ ಸಂಪತ್ತುಗಳನ್ನು ದೇವರು ನಮಗೆ ಅನುಗ್ರಹಿಸಿಯಾನೆ? ನಾವು ಅಷ್ಟು ಪುಣ್ಯವಂತರೆ? ಎಂದು ಆಗ ಪೇಚಾಡಿಕೊಂಡಿದ್ದೆವು. ಕೆಲವು ವಿಘ್ನಗಳೂ ಬಂದವು. ಭಗವಂತನ ಕಟಾಕ್ಷದಿಂದ ಆ ವಿಘ್ನಗಳು ಹೇಗೋ ನಿವಾರಣೆಯಾಗಿ ಹಿಡಿದ ಕೆಲಸ ಈಗ ಸಮಾಪ್ತಿಯ ಸಮೀಪಕ್ಕೆ ಬಂದಿದೆ. ಇದಕ್ಕಾಗಿ ಭಗವಂತನಿಗೆ ಸಹಸ್ರ ನಮಸ್ಕಾರಗಳು. ವಾಲ್ಮೀಕಿ ಸಮುದ್ರದಿಂದ ಭಗವದನುಗ್ರಹರೂಪವಾದ ಅಮೃತ ಹರಿದುಬರಲು ನಾಳಗಳಂತಿರುವ ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರಿಗೂ ಅವರ ಮಿತ್ರವರ್ಗಕ್ಕೂ ಕನ್ನಡ ಜನರಿಂದ ಅಭಿನಂದನೆ ಸಲ್ಲುತ್ತದೆ. ಶ್ರೀ ಸೀತಾರಾಮ ಭಗವಂತರ ಅನುಗ್ರಹ ಅವರಿಗೆ ಸರ್ವದಾ ಸಿದ್ಧವಾಗಿರುತ್ತದೆ.

ಇನ್ನು ವಿದ್ವಾನ್‍ ಶ್ರೀ ರಂಗನಾಥಶರ್ಮರವರ ಲೇಖನಿಗೆ ಅಭಿನಂದನೆ. ಗ್ರಂಥದ ಈ ಭಾಗವನ್ನೂ ನಾನು ಬಹು ಕಡೆ ಓದಿ ನೋಡಿದ್ದೇನೆ. ಇದು ಭಾಷಾಂತರವಲ್ಲ, ಸ್ವತಂತ್ರ ಕೃತಿ ಎನ್ನಿಸುವಷ್ಟು ಅಕೃತವಾಗಿ, ಗಂಭೀರವಾಗಿ, ಸಹಜಸುಂದರವಾಗಿ ಪ್ರವಹಿಸಿದೆ ಅವರ ಶೈಲಿ. ಅವರ ಬರವಣಿಗೆಯನ್ನು ಅದರ ಸೊಗಸಿಗಾಗಿಯೇ ನಮ್ಮ ಜನ ಓದಬೇಕೆಂದು ಬಿನ್ನಯಿಸುತ್ತೇನೆ. ರಂಗನಾಥಶರ್ಮರವರು ಪದವೈವಿಧ್ಯವನ್ನು ತೋರಿಸುವುದರಲ್ಲಿಯೂ ಮೂಲದ ನವುರುಗಳನ್ನು ಕನ್ನಡಕ್ಕಿಳಿಸುವುದರಲ್ಲಿಯೂ ಪರಿಣತರಾಗಿದ್ದಾರೆ. ಕನ್ನಡ ಮಹಾಜನರು ಅವರ ಈ ರಸವತ್ಪಾಂಡಿತ್ಯದ ಪ್ರಯೋಜನವನ್ನು ಪಡೆದು ಅವರಿಂದ ಸಂಸ್ಕೃತದ ಇತರ ಸಾಹಿತ್ಯ ರತ್ನಗಳನ್ನು ಕನ್ನಡಕ್ಕೆ ರೂಪಾಂತರ ಮಾಡಿಸಿ ಸಂತೋಷಿಸಲಿ ಎಂದು ಹಾರೈಸುತ್ತೇನೆ. ಪರಮಾತ್ಮನು ಅವರಿಗೆ ಸಮಸ್ತ ಶುಭಗಳನ್ನೂ ಕರುಣಿಸಲಿ.

ವಾಲ್ಮೀಕಿಗಿರಿಸಂಭೂತಾ
ರಾಮಸಾಗರಗಾಮಿನೀ ।
ಪುನಾತು ಭುವನಂ ಪುಣ್ಯಾ
ರಾಮಾಯಣಮಹಾನದೀ ॥ (೧೯೭೦)

No comments:

Post a Comment