Monday 15 January 2024

ಭಾಗ 10 - ಯುದ್ಧಕಾಂಡ–ಪೂರ್ವಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಅಭಿನಂದಾಮ ವೈದೇಹೀಂ
ಕಾರಾವಾಸತಪಸ್ವಿನೀಮ್‍ ।
ಯಾಂ ವಿಮೋಚಯಿತುಂ ಸೇತುಂ
ಕಾರಯಾಮಾಸ ರಾಘವಃ ॥

ಯುದ್ಧಕಾಂಡಗ್ರಂಥದ ಈ ಪ್ರಥಮ ಸಂಪುಟದಲ್ಲಿ ಸೇತು ನಿರ್ಮಾಣದಿಂದ ಕುಂಭಕರ್ಣವಧೆಯವರೆಗಿನ ಕಥಾಭಾಗ ಸೇರಿದೆ.

ಶ್ರೀಮದ್ರಾಮಾಯಣದ ಏಳು ಕಾಂಡಗಳಲ್ಲಿ ಯುದ್ಧಕಾಂಡ ಬಹು ದೊಡ್ಡದು. ಅಯೋಧ್ಯಾಕಾಂಡ ಕೂಡ ಗಾತ್ರದಲ್ಲಿ ಇಷ್ಟಿಲ್ಲ. ಬರಿಯ ಯುದ್ಧ ಕಥೆಗೆ ಇಷ್ಟು ದೊಡ್ಡ ಗ್ರಂಥವೆ? ಯುದ್ಧವೆಂದರೆ ಹೊಡೆತ, ಬಡಿತ, ಕಡಿಯೋಣ, ಕೊಲ್ಲೋಣ–ಇಷ್ಟು ತಾನೆ? ಆಗ್ನೇಯಾಸ್ತ್ರ, ಐಂದ್ರಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರ; ಇವನು ಬಿದ್ದ, ಅವನು ಸತ್ತ, ಮತ್ತೊಬ್ಬ ಮಡಿದ, ಇನ್ನೊಬ್ಬ ಓಡಿಹೋದ–ಇಷ್ಟು ತಾನೆ ವಿಷಯ? ಇಷ್ಟಲ್ಲದೆ ಬೇರೆ ಸಂಗತಿ ಏನಿದ್ದೀತು? ಇದು ಯಾರ ಮನಸ್ಸಿಗಾದರೂ ಮೊದಲು ಹೊಳೆಯುವ ಪ್ರಶ್ನೆ.

ಆದರೆ ಗ್ರಂಥದ ಒಳಹೊಕ್ಕ ಮೇಲೆ ಆ ಪ್ರಶ್ನೆಯ ಸುಳಿವಿರದು. ಗ್ರಂಥದಲ್ಲಿರುವುದೆಲ್ಲ ಅವಶ್ಯವಾದದ್ದೇ, ಎಲ್ಲ ಉಚಿತವಾದದ್ದೇ, ಎಲ್ಲ ಸ್ವಾರಸ್ಯವೇ–ಎಂದು ಆಗ ಮನದಟ್ಟು ಆಗುತ್ತದೆ. ವಾಲ್ಮೀಕಿಗಳು ಯಾವ ಸಂದರ್ಭವನ್ನೂ ಅನವಶ್ಯವಾಗಿ ಬೆಳಸಿಲ್ಲ; ಎಲ್ಲಿಯೂ ಕೃತಕವಾಗಿಲ್ಲ. ಎಲ್ಲಿ ಎಷ್ಟಿದ್ದರೆ ಪರಿಣಾಮಕಾರಿಯಾದೀತೋ ಅಷ್ಟು ಇದೆ; ಎಲ್ಲ ಸಮಂಜಸವಾಗಿದೆ.

ಆಂಗ್ಲ ಸಾಹಿತ್ಯ ವಿಮರ್ಶಕರಲ್ಲಿ ಹೆಸರಾದ ಕ್ವಿಲ್ಲರ್‍–ಕೌಚ್‍ (Quiller-Couch) ಎಂಬಾತನು ಕಾವ್ಯಕರ್ತನಿಗಿರುವ ಕಷ್ಟಗಳು ಎರಡು ಜಾತಿಯವೆನ್ನುತ್ತಾನೆ: (೧) ಪದ್ಯ ಲೇಖಕನಿಗೆ ಸಾಮಾನ್ಯ ಸಂದರ್ಭ; (೨) ಗದ್ಯ (ವಚನ) ಲೇಖಕನಿಗೆ ವಿಶೇಷ ಸಂದರ್ಭ–ಇರುವ ಕಷ್ಟ.

ನಮ್ಮ ದಿನಚರಿಯ ಸಾಮಾನ್ಯ ಸಂಗತಿಗಳು-ಊಟ, ನಿದ್ದೆ, ಹರಟೆ, ಪೇಟೆಯ ವ್ಯಾಪಾರ, ಲೇವಾದೇವಿ, ಕೊಂಡದ್ದು, ಮಾರಿದ್ದು, ಬೆಳಗಾದದ್ದು, ರಾತ್ರಿಯಾದದ್ದು, ಊರು ತಲಪಿದ್ದು, ಊರು ಬಿಟ್ಟಿದ್ದು – ಇಂಥ ಸಂಗತಿಗಳನ್ನು ರಸವತ್ತಾದ ಪದ್ಯಗಳಿಂದ ಹೇಳುವುದು ಕಷ್ಟ. ಅವು ಜನದ ಬಳಕೆಯ ಮಾತಿನ ವಿಷಯಗಳು, ವಚನಕ್ಕೆ ಸುಲಭವಾಗುತ್ತವೆ.

ಇಂಥ ಸಾಮಾನ್ಯ ಬಾಹ್ಯವ್ಯಾಪಾರಗಳಾಗದೆ, ವಿಶೇಷವಾಗಿ ಹೃದಯವನ್ನು ಮುಟ್ಟುವ ಸನ್ನಿವೇಶಗಳಾದರೋ–ರೋಷ, ಅಸೂಯೆ, ಪ್ರಣಯ, ಉತ್ಸಾಹ, ಭಯ–ಇಂಥ ಮನೋವಿಕಾರಾವೇಶಗಳು ಪದ್ಯಕ್ಕೆ ಸುಲಭ. ವಚನಲೇಖಕನಿಗೆ ಅವು ಅಷ್ಟು ಸುಲಭವಲ್ಲ.

ಯುದ್ಧ ಕಥೆಯ ಕಾವ್ಯಾರ್ಹತೆ

ಕಾವ್ಯವು ಮುಖ್ಯವಾಗಿ ರಸೋತ್ಪಾದಕವಾದ ವಾಕ್ಯ ರಚನೆ. ಅದನ್ನೋದಿದಾಗ ಓದುಗನ ಅಂತರಂಗದಲ್ಲಿ ಭಾವಗಳು ತರಂಗತರಂಗವಾಗಿ ಎದ್ದು ಚಲಿಸಬೇಕು. ಯುದ್ಧದ ವರದಿ ಹಾಗಿದ್ದೀತೆ? ಅದರಲ್ಲೆಲ್ಲಿದೆ ಭಾವೋದ್ದೀಪಕ ವಸ್ತು?

ವಾಲ್ಮೀಕಿಗಳ ರಚನೆಯನ್ನು ನೋಡೋಣವಾಗಲಿ. ಕ್ವಿಲ್ಲರ್‍–ಕೌಚನು ಹೇಳಿರುವ ಕಷ್ಟ ವಾಲ್ಮೀಕಿಗಳಿಗೆ ಇದ್ದಂತೆ ತೋರುವುದಿಲ್ಲ. ಅವರ ಆಖ್ಯಾಯಿಕೆಯಲ್ಲಿ ಎಲ್ಲಿ ನೋಡಿದರೂ ಗಲಭೆ, ಉದ್ರೇಕ, ಗುಡುಗಾಟ, ಗದ್ದಲ, ಉಭಯ–ಪಕ್ಷಗಳ ಸನ್ನಾಹಗಳು, ಉಪಾಯ ಚಿಂತನೆಗಳು, ಹಾರಾಟ ಓಡಾಟಗಳು. ಇದರಲ್ಲಿ ನಮ್ಮ ಮನಸ್ಸು ತೂಕಡಿಸುವುದಕ್ಕೆ ಅವಕಾಶವೇ ಇಲ್ಲ. ಮೊದಲಿನಿಂದ ಕಡೆಯವರೆಗೂ ಮನಸ್ಸಿನ ಹುರಿ ಸಡಿಲ ಬೀಳದೆ ಒಂದೇ ಬಿಕ್ಕಟ್ಟಿನಲ್ಲಿರುತ್ತದೆ. ಅಷ್ಟು ಸ್ವಾರಸ್ಯವನ್ನು ತುಂಬಿದ್ದಾರೆ ಬರಿಯ (Prosaic) ವಚನಮಾತ್ರಕ್ಕೆ ತಕ್ಕ ಒಣ ವಿಷಯವೆನಿಸಿದ ಯುದ್ಧರಂಗ ಪ್ರಕರಣದಲ್ಲಿ. ವಾಚಕರು ಶಬ್ದಶಬ್ದದ ಮೇಲೂ ಅಲ್ಲ, ಅಕ್ಷರ ಅಕ್ಷರದ ಮೇಲೂ ಗಮನವಿರಿಸಬೇಕು. ಭೋಜನಸುಖಿ ಕವಳವನ್ನು ಉಂಡುಂಡೆಯಾಗಿ ನುಂಗುವುದಿಲ್ಲ. ಅಗಳಗಳನ್ನೂ ಅಗಿದು ಸವಿಯುತ್ತಾನೆ. ಒಗ್ಗರಣೆಗೆ ಹಾಕಿದ ಕಡಲೆಯ ಬೇಳೆ ಉದ್ದಿನ ಬೇಳೆಯ ಕಾಳುಗಳನ್ನೂ ಅಗಿದು ಆ ಘಮಲನ್ನನುಭವಿಸುತ್ತಾನೆ. ಮಹಾಕಾವ್ಯವ್ಯಾಸಂಗಿ ಹಾಗೆ ಮಾತುಮಾತಿನಲ್ಲಿಯೂ ಭಾವಪುಷ್ಟಿಯನ್ನು ಸಂಪಾದಿಸುತ್ತಾನೆ.

ವಾಲ್ಮೀಕಿಗಳ ಸಮುದ್ರ ವರ್ಣನೆಯನ್ನು ನೋಡಿರಿ:

ಸಾಗರಂ ಚಾಂಬರಪ್ರಖ್ಯಂ
ಅಂಬರಂ ಸಾಗರೋಪಮಮ್‍ ।
ಸಾಗರಂ ಚಾಂಬರಂ ಚೇತಿ
ನಿರ್ವಿಶೇಷಮದೃಶ್ಯತ ॥ ಸ. ೪, ಶ್ಲೋ. ೧೨೦

ಸಮುದ್ರತೀರವರ್ಣನೆಯಲ್ಲಿ ನಾನಾ ತರುಲತೆಗಳ ಹೆಸರುಗಳು, ನಾನಾ ಜೀವಜಂತುಗಳ ಹೆಸರುಗಳು ಪಟ್ಟಿಪಟ್ಟಿಯಾಗಿ ಬರುತ್ತವೆ. ಸಮುದ್ರದ ಹೆಸರು ನಾಲ್ಕಾರು ಸಲ ಬರುತ್ತದೆ: ಅರ್ಣವಃ, ಮಹಾರ್ಣವಃ, ವರುಣಾಲಯಂ, ಮಕರಾಲಯಂ, ಸಲಿಲಾಶಯಃ ಜಲರಾಶಯಃ–ಹೀಗೆ ಪುನರುಕ್ತಿಗಳು ಬಂಡಿಬಂಡಿಯಾಗಿ ಬರುತ್ತವೆ. ಇದರ ಮರ್ಮವೇನು? ನನಗೆ ಎರಡು ಉತ್ತರಗಳು ತೋರುತ್ತವೆ:

ವಾಗ್ಧೋರಣೆ, ಆವರಣಕಲ್ಪನೆ

1) ಕವಿಯು ಪುಸ್ತಕದಿಂದ ಓದುತ್ತಿಲ್ಲ; ಸ್ವತಂತ್ರ ಮನಸ್ಸಿನಿಂದ ಹಾಡುತ್ತಿದ್ದಾನೆ. ಆಗಾಗ ಸಭೆಯ ಕಡೆ ನೋಡುತ್ತಾನೆ. ಅವರು ಕುತೂಹಲದಿಂದ ಕೇಳುತ್ತಿದ್ದಾರೆ. ಅವನಲ್ಲಿ ಕಾವೇರುತ್ತದೆ. ಆ ಆವೇಶದಲ್ಲಿ ಅವನ ಬಾಯಿಗೆ ಶಬ್ದಭಂಡಾರ ನುಗ್ಗಿಕೊಂಡು ಒದಗಿಬರುತ್ತದೆ. ಆತನು ವಿದ್ವಾಂಸ. ಆದದ್ದರಿಂದ ಅವನಿಗೆ ವಾಕ್ಯರಚನೆ ಒಂದು ಕಷ್ಟವಲ್ಲ. ಸನ್ನಿವೇಶಕ್ಕೆ ತಕ್ಕ ಶಬ್ದ ಸಂಚಯ ತಾನಾಗಿ ಮುನ್ನುಗ್ಗಿಕೊಂಡು ಬರುತ್ತದೆ. ಅವನು ಆ ವಾಕ್ಸಂಪತ್ತನ್ನು ಧೋರಣೆಯಿಂದ ಧಾರಾಳವಾಗಿ ಎಸೆದಾಡುತ್ತಾನೆ. ಹೀಗೆ ಪದವರ್ಷಣ, ಪುನರುಕ್ತಿ, ಮಹಾಪ್ರವಾಹ.

2) ಇದಕ್ಕೆ ಸಾರ್ಥಕ್ಯವುಂಟು. ರಾಶೀಕರಣದಿಂದ ವಾತಾವರಣವುಂಟಾಗುತ್ತದೆ. ಈ “ವಾತಾವರಣ” ಎಂಬ ರೂಪಕಪದವನ್ನು ನಾವು ಇಂಗ್ಲಿಷಿನಿಂದ ತೆಗೆದುಕೊಂಡಿದ್ದೇವೆ. “ಅಟ್ಮೊಸ್ಫಿಯರ್‍” (Atmosphere) ಎಂದರೆ ನಮ್ಮ ದೇಹವನ್ನು ಹತ್ತು ದಿಕ್ಕುಗಳಿಂದಲೂ ಸುತ್ತುಗಟ್ಟಿರುವ ಹವೆ ಅಥವಾ ವಾಯುಮಂಡಲ. ನಮ್ಮ ಮನಸ್ಸಿಗೂ ಇಂಥ ಸಂದರ್ಭ ಪರಿಸರವುಂಟು. ಅದೇ ವಾತಾವರಣ. ಈ ವಾತಾವರಣವನ್ನು ಕಟ್ಟುವುದು ಮಹಾಕವಿಯ ಮೊದಲ ಕೆಲಸ. ವಾತಾವರಣದಿಂದ ಭಾವೋದ್ದೀಪನ; ಅದರಿಂದ ರಸೋತ್ಪತ್ತಿ.

ಕಾದ ಲೋಹದ ಮೇಲೆ ಸುತ್ತಿಗೆಯ ಪೆಟ್ಟು ಬಿದ್ದು, ಪೆಟ್ಟಿನ ಮೇಲೆ ಪೆಟ್ಟು, ಇನ್ನೂ ಪೆಟ್ಟು, ಮತ್ತೂ ಪೆಟ್ಟು ಬಿದ್ದದ್ದಾದರೆ ಆಗ ಆ ಲೋಹದ ತುಂಡು ನಾವು ಬಯಸಿದ ರೂಪವನ್ನು ತಾಳುತ್ತದೆ. ಇಂಥ ಸಂಸ್ಕಾರವು ಮನಸ್ಸಿಗೂ ಅವಶ್ಯವಾಗುತ್ತದೆ. ಆದದ್ದರಿಂದ ಕವಿ ಯಾವುದೋ ಒಂದು ಶಬ್ದವನ್ನು ಅಥವಾ ಒಂದು ಭಾವವನ್ನು ಪುನಃ ಪುನಃ ಪದೇ ಪದೇ ನಮ್ಮ ಕಿವಿಗಳಲ್ಲಿ ತುಂಬುತ್ತಾನೆ. “ರಾಮಸ್ಸತ್ಯಪರಾಕ್ರಮಃ”, “ರಾಮೋರಾಜೀವಲೋಚನಃ”, “ರಾಮಶ್ಶಸ್ತ್ರಭೃತಾಂವರಃ”, “ಕೌಸಲ್ಯಾನಂದವರ್ಧನಃ”, “ಧರ್ಮಜ್ಞೋ ಧರ್ಮವತ್ಸಲಃ” -ಎಷ್ಟು ಸಾರಿ ಇದು, ಎಷ್ಟು ನೂರುಸಾರಿ! ಅದರ ಉದ್ದೇಶವು ವಾತಾವರಣಕಲ್ಪನೆ. ಒಂದೇ ಭಾವ ಮನಸ್ಸಿನ ಮೇಲೆ ಬಿದ್ದೂ ಬಿದ್ದೂ ಪರಿಣಾಮ ಮಾಡಬೇಕು. ಒಂದೇ ಒಂದು ಮರದಿಂದ ಕಾಡಾಗುವುದಿಲ್ಲ. ಕಾಡಿನ ಕಲ್ಪನೆ ನಮ್ಮ ಮನಸ್ಸಿನಲ್ಲಿ ಬರಬೇಕಾದರೆ ಹತ್ತಾರು ಜಾತಿಯ ಮರಗಳ ಹೆಸರುಗಳು, ಆ ಮರಗಳ ಹತ್ತಾರು ಗುಂಪುಗಳು ನಮ್ಮ ಮನಸ್ಸಿನಲ್ಲಿ ಕಲ್ಪಿತವಾಗಬೇಕು. ಭಗವನ್ನಾಮ ಸಂಕೀರ್ತನೆ ಭಜನೆಗಳ ಮರ್ಮವೂ ಇದೇ–ಮನಸ್ಸಿನ ಮೃದೂಕರಣ, ಮನಸ್ಸಿನ ರೂಪಾಂತರಗ್ರಹಣ ಸಿದ್ಧತೆ.

ಪೌನಃಪುನ್ಯದ ಔಚಿತ್ಯ

ಕಾವ್ಯವು ಸೂತ್ರ ಗ್ರಂಥವಲ್ಲ. ಶಾಸ್ತ್ರವ್ಯಾಸಂಗಿಗೆ ಒಂದು ವಿಷಯವನ್ನು ಒಂದುಸಾರಿ ಹೇಳಿದರೆ ಸಾಕು. ಅದೂ ಅಡಕವಾದ ಸಣ್ಣ ಮಾತಿನಲ್ಲಿ ಹೇಳಿದರೆ ಸಾಕು. ಅದೇ ಸೂತ್ರ. ಕಾವ್ಯಶ್ರೋತನಿಗೆ-ಕಿವಿಯಿಂದ ಕೇಳುವವನಿಗೆ ಹಾಗಾಗದು. ಅವನಿಗೆ ಅನ್ಯಮನಸ್ಕತೆ, ಅನವಧಾನ ಮೊದಲಾದ ಎಷ್ಟೋ ಅಪಾಯಗಳಿರುವುದರಿಂದ ಅವನ ವಿಷಯದಲ್ಲಿ ಪೌನಃಪುನ್ಯವು ಎಷ್ಟೋ ಸಂದರ್ಭಗಳಲ್ಲಿ ದೋಷವಾಗದೆ ಗುಣವೇ ಆದೀತು.

ಆದರೆ ಪೌನಃಪುನ್ಯದಿಂದ ಬೇಸರವಾಗದೆ? ಅದು ಅತಿಯಾಗದೆ? ಅದಕ್ಕೆ ಒಂದು ಮಿತಿ ಇರಬೇಡವೆ?

ಹೌದು. ಅತಿಯಾದರೆ ಬೇಸರವುಂಟು ಮಾಡೀತು. ಇಲ್ಲಿ ಎರಡು ಸಂಗತಿ:

1) ಸನ್ನಿವೇಶದ ಸ್ವಾರಸ್ಯವು ಮಾತಿನ ಅತಿಯನ್ನು ದೃಷ್ಟಿಗೆ ತಾರದೆ ಮರೆಯಿಸೀತು.

2) ಔಚಿತ್ಯ ವಿವೇಕವು ಕವಿಗಿರುವ ಕರ್ತವ್ಯಗಳಲ್ಲಿ ಮುಖ್ಯವಾದದ್ದು. ಎಲ್ಲಿ ಅತಿಯಾಯಿತು, ಎಲ್ಲಿ ತಕ್ಕಷ್ಟು ಆಗಿದೆ–ಎಂಬುದನ್ನು ಗೊತ್ತು ಮಾಡುವುದರಲ್ಲಿರುತ್ತದೆ ಅವನ ವಿವೇಕ.

ನನ್ನಂಥ ಅಲ್ಪನ ಅನುಭವಕ್ಕೆ ವಾಚಕರು ಬೆಲೆ ಕೊಡುವುದಾದರೆ ಇದು ನಿಜ:- ನಾನು ವಾಲ್ಮೀಕಿ ರಾಮಾಯಣವನ್ನು ಆಗಾಗ ನೋಡುವುದುಂಟು. ನಾಲ್ಕು ಸಾರಿ ಐದುಸಾರಿ ಓದಿದ ಭಾಗವನ್ನೇ ಆರನೆಯ ಸಾರಿ ಏಳನೆಯಸಾರಿ ಓದುತ್ತೇನೆ. ಒಂದೊಂದು ಸಾರಿಯೂ ನನಗೆ ಸ್ವಾರಸ್ಯ ಕಾಣುತ್ತದೆಯೇ ಅಲ್ಲದೆ, –ಬೇಸರವೆಷ್ಟು ಮಾತ್ರವೂ ತೋರಿಲ್ಲ.

ಇನ್ನೊಂದು ವಿಚಾರಕ್ಕೆ ಹೋಗುವ ಮುನ್ನ ವಾಲ್ಮೀಕಿಗಳು ಸ್ವಾರಸ್ಯ ಹುದುಗಿಸಿರುವುದರ ರೀತಿಯ ಉದಾಹರಣೆಯೊಂದನ್ನು ನೋಡೋಣ. ಚೆಲುವೆಯ ಅಗಲವಾದ ಹಣೆಯ ನಡುವೆ ಇಟ್ಟ ಕುಂಕುಮದ ಬೊಟ್ಟಿನಂತೆ, ಅವಳ ಭಾರೀ ಕರಿತುರುಬಿನ ನಡುವಣ ಏಳುಸುತ್ತಿನ ಮಲ್ಲಿಗೆಯ ಒಂದು ಹೂವಿನಂತೆ, ಮಹಾಸಮುದ್ರದ ತೆರೆಗಳ ಚಲನ ವಲನಗಳ ವರ್ಣನೆಯ ಮಧ್ಯೆ ಈ ಸೌಂದರ್ಯ ಕಂಗೊಳಿಸುತ್ತದೆ.

ಚಂಡನಕ್ರಗ್ರಹಂ ಘೋರಂ
ಕ್ಷಪಾದೌ ದಿವಸಕ್ಷಯೇ ।
ಹಸನ್ತಮಿವ ಫೇನೌಘೈಃ
ನೃತ್ಯನ್ತಮಿವ ಚೋರ್ಮಿಭಿಃ॥
ಚಂದ್ರೋದಯಸಮುದ್ಧೂತಂ
ಪ್ರತಿಚಂದ್ರಸಮಾಕುಲಮ್‍ ।
ಪಿನಷ್ಟೀವ ತರಂಗಾಗ್ರೈಃ
ಅರ್ಣವಃ ಫೇನಚಂದನಮ್‍ ॥
ತದಾದಾಯ ಕರೈರಿಂದುಃ
ಲಿಂಪತೀವ ದಿಗಂಗನಾಃ ॥ ಸರ್ಗ ೪, ಶ್ಲೋಕ ೧೧೩, ೧೧೫

ವಾಲ್ಮೀಕಿಗಳು ಋಷಿಗಳು, ಹಾಗೆಯೇ ಸರಸಿಗಳು. ಮಡಿಯುಟ್ಟಿದ್ದಾಗಲೂ ಅವರು ಅರಳುತ್ತಿರುವ ಹೂಮೊಗ್ಗನ್ನು ನೋಡೆನೆನ್ನರು.

ಇಲ್ಲಿ ಹೀಗೆ ಸೊಗಯಿಸುವ ರೂಪಕವು ಕ್ಷುದ್ರಕವಿಯ ಪ್ರಯೋಗದಲ್ಲಿ ಕೃತಕಸೃಷ್ಟಿ (Conceit) ಆದೀತು. ಶ್ರೀರಾಮನ ಕೈಯಲ್ಲಿ ಕೋದಂಡವಾದದ್ದನ್ನು ಸಣ್ಣಪ್ಪಣ್ಣನು ಕೈಗೆ ತೆಗೆದುಕೊಂಡಾಗ ಅದು ಸೊಟ್ಟ ಕಟ್ಟಿಗೆಯಾಗಬಹುದು. ಯಾವುದಕ್ಕೂ ಅಧಿಕಾರ ಯೋಗ್ಯತೆ ಇರಬೇಕಲ್ಲವೆ?

ಈಗ ಕಥೆಗೆ ತಿರುಗೋಣ.

ಶ್ರೀರಾಮನ ಚಿಂತಾಕುಲತೆ

ಶ್ರೀರಾಮಚಂದ್ರನು ಸಮುದ್ರವನ್ನು ನೋಡಿ ಚಿಂತಾಕ್ರಾಂತನಾದ. ಸೀತೆಯನ್ನು ರಾವಣನು ಸೆರೆಯಲ್ಲಿಟ್ಟಿದ್ದನ್ನು ಹನುಮಂತನು ಪತ್ತೆ ಮಾಡಿದ್ದೇನೋ ಆಯಿತು. ರಾಮನ ಗುರುತನ್ನು ಆಕೆಗೂ ಆಕೆಯ ಗುರುತನ್ನು ಆತನಿಗೂ ತಂದುಕೊಟ್ಟಿದ್ದ. ಅಷ್ಟರಿಂದ ಏನು ಸಾಧಿಸಿದ ಹಾಗಾಯಿತು? ಮಹಾಸಮುದ್ರವಿದೆಯಲ್ಲ ಅಡ್ಡವಾಗಿ! ಅದನ್ನು ದಾಟುವವರಾರು? ಇದು ಅಸಾಧ್ಯವಾದ ಸಾಹಸ.

ಸಾಗರಂ ತು ಸಮಾಸಾದ್ಯ

ಭೂಯೋ ನಷ್ಟಂ ಮನೋ ಮಮ ॥ ಸ. ೧, ಶ್ಲೋ. ೧೭

ಇಂಥ ನಿರಾಸೆಯ ಸಮಯದಲ್ಲಿ ರಾಮನು ಆಂಜನೇಯನನ್ನು ನೆನಸಿಕೊಂಡ. ಆಗ ಸುಗ್ರೀವಾಂಜನೇಯರು ಧೈರ್ಯ ಹೇಳಿ ಭರವಸೆ ಕೊಟ್ಟ ಬಳಿಕ ಮುಂದಿನ ಕಾರ್ಯ.

ವಾನರಸೈನ್ಯ ಸಮುದ್ರ ತೀರಕ್ಕೆ ಬಂದಿದೆ. ತೆರೆಗಳ ಹೊಡೆತವನ್ನೂ ಮೊರೆತವನ್ನೂ ನೋಡಿ ಕಪಿಗಳು ವಿಸ್ಮಯಗೊಂಡಿದ್ದಾರೆ. ಶ್ರೀರಾಮನಿಗಾದರೋ ಕ್ಷಣೇ ಕ್ಷಣೇ ತವಕ ಹೆಚ್ಚುತ್ತಿದೆ.

ವಾಹಿ ವಾತ ಯತಃ ಕಾಂತಾ
ತಾಂ ಸ್ಪೃಷ್ಟ್ವಾ ಮಾಮಪಿ ಸ್ಪೃಶ ॥ ಸ. ೫, ಶ್ಲೋ. ೬

“ಎಲೆ ಗಾಳಿಯೆ, ನನ್ನ ಪ್ರಾಣಕಾಂತೆಯೆಲ್ಲಿದ್ದಾಳೋ ಅಲ್ಲಿಂದ ಬೀಸಿಕೊಂಡು ಬಾ; ಆಕೆಯನ್ನು ಸೋಕಿ ಬಂದು ನನ್ನನ್ನು ಸೋಕು.”

ಹೀಗಿತ್ತು ರಾಮಚಂದ್ರನ ಕಾತರ. ತಾನೂ ತನ್ನ ಸೈನ್ಯವೂ ಲಂಕೆಗೆ ಹೋಗಲು ದಾರಿ ಬಿಟ್ಟುಕೊಡೆಂದು ಸಮುದ್ರನನ್ನೇ ತಾನು ಬೇಡತಕ್ಕದ್ದೆಂದು ನಿಶ್ಚಯಿಸಿ, ಸಮುದ್ರತೀರದಲ್ಲಿ ದರ್ಭೆಯ ಹಾಸುಗೆಯ ಮೇಲೆ ಮಲಗಿ ಶಪಥ ಮಾಡಿದನು:

ಅದ್ಯ ಮೇ ಮರಣಂ ವಾಽಥ
ತರಣಂ ಸಾಗರಸ್ಯ ವಾ ॥ ಸ. ೨೧, ಶ್ಲೋ. ೮

ಸೇತು ನಿರ್ಮಾಣ

ಮೂರು ರಾತ್ರಿ ಕಳೆಯಿತು. ಉತ್ತರ ಬರಲಿಲ್ಲ. ಆಗ ರೋಷಾವೇಶದಲ್ಲಿ–

ಸಮುದ್ರಂ ಶೋಷಯಿಷ್ಯಾಮಿ
ಪದ್ಭ್ಯಾಂ ಯಾಂತು ಪ್ಲವಂಗಮಾಃ ॥ ಸ. ೨೧, ಶ್ಲೋ.೨೨

“ಈ ಸಮುದ್ರವನ್ನು ಬತ್ತಿಸಿಬಿಡುತ್ತೇನೆ. ಕಪಿಗಳು ಲಂಕೆಗೆ ಕಾಲಿನಿಂದ ನಡೆದು ಹೋಗಲಿ” –ಎಂದು ಗರ್ಜಿಸಿ ಸಮುದ್ರದ ಮೇಲೆ ಬಾಣವನ್ನು ಪ್ರಯೋಗಿಸಿದ. ಸಮುದ್ರ ಅದಿರಿತು; ಅದರಲ್ಲಿಯ ಮಕರ ಮೀನ ನಾಗಾದಿಗಳು ತಲ್ಲಣಿಸಿ ಕಂಗೆಟ್ಟವು. ಸಮುದ್ರ ರಾಜನು ಶ್ರೀರಾಮನ ಮುಂದೆ ಬಂದು ನಿಂತು, “ದೇವಾ, ಸೈರಿಸಬೇಕು. ನನ್ನನ್ನು ನೀನು ಶೋಷಣೆ ಮಾಡಿದರೆ ನನ್ನಲ್ಲಿರುವ ಅಸಂಖ್ಯಾತಗಳಾದ ಜಲಜಂತುಗಳ ಗತಿಯೇನು? ಲಂಕೆಗೆ ಹೋಗಲು ಸೇತುವೆಯನ್ನು ಕಟ್ಟು. ನಲನೆಂಬ ವಾನರನು ಹಾಕಿದ ಕಲ್ಲು ನೀರಿನಲ್ಲಿ ಮುಳುಗಲಾರದೆಂದು ಅವನಿಗೆ ವರವಿದೆ. ಅವನ ಮೂಲಕ ಸೇತುವೆಯ ನಿರ್ಮಾಣವಾಗಲಿ” ಎಂದು ಉಪಾಯ ಸೂಚನೆ ಮಾಡಿದ. ಆ ಮೇರೆಗೆ ಸೇತುವೆಯ ನಿರ್ಮಾಣವಾಯಿತು. ಕಪಿಸೈನ್ಯವು ಬೆಟ್ಟಗಳನ್ನೂ ಬಂಡೆಗಳನ್ನೂ ಮರಗಳನ್ನೂ ಕೊಂಬೆರೆಂಬೆಗಳನ್ನೂ ತಂದು ತಂದು ತುಂಬಿದವು. ಸೇತುವೆ ಸಿದ್ಧವಾಯಿತು.

ವಿಭೀಷಣ ಶರಣಾಗತಿ

ಈ ಸಮಾಚಾರವನ್ನು ರಾವಣಾಸುರನು ತನ್ನ ಚಾರರಿಂದ ತಿಳಿದುಕೊಂಡು, ತನ್ನ ಸಿದ್ಧತೆಯನ್ನು ಆಲೋಚಿಸಿದ. ಅಲ್ಲಿಯೂ “ಡೆಮಾಕ್ರೆಸಿ” ತಾನೆ? ಮಂತ್ರಿ ಮಿತ್ರರುಗಳ ಸಭೆ, ಭಾಷಣಗಳು, ಚರ್ಚೆಗಳು, ಅಭಿಪ್ರಾಯ ವಿನಿಮಯ; ಆಮೇಲೆ ನಿರ್ಣಯ. ರಾವಣನ ಮೂಗಿಗೆ ನೇರವಾಗಿ ಮಾತನಾಡಿದವರು ಬಹುಮಂದಿ. ಅಡ್ಡ ಮಾತಾಡಿದವರಲ್ಲಿ ಮುಖ್ಯನು ವಿಭೀಷಣ-ರಾವಣನ ತಮ್ಮ.

ಪ್ರದೀಯತಾಂ ದಾಶರಥಾಯ ಮೈಥಿಲೀ ॥

ಇದೊಂದೇ ಅವನ ಪಲ್ಲವಿ. ಇದನ್ನು ಹತ್ತಾರು ಕಾರಣಗಳೊಡನೆ ಹತ್ತಾರು ರೀತಿಗಳಲ್ಲಿ ಹೇಳಿದ. ರಾವಣನು ಒಪ್ಪಿಯಾನೆ? ಒಪ್ಪಿಕೊಂಡಿದ್ದಿದ್ದರೆ ಅವನು ರಾವಣನಾಗುತ್ತಿದ್ದನೆ? ಅವನಿಗೆ ತನ್ನ ಮಗ ಇಂದ್ರಜಿತ್ತು ಮೊದಲಾದ ಕ್ರೋಧಪರವಶರಾದವರು ಹೇಳಿದ್ದೇ ದೊಡ್ಡದಾಯಿತು. ಆಗ ವಿಭೀಷಣನು ತನಗೆ ಇನ್ನು ಮುಂದೆ ಲಂಕೆಯಲ್ಲಿ ಸ್ಥಳವಿರಲಾರದೆಂದು ಕಂಡುಕೊಂಡು ರಾವಣಸಹವಾಸವನ್ನು ಪರಿತ್ಯಜಿಸಿ ರಾಮನಲ್ಲಿ ಮೊರೆಹೊಕ್ಕ.

ಇಲ್ಲಿಯೂ–ಶ್ರೀರಾಮನ ಶಿಬಿರದಲ್ಲಿಯೂ ಒಂದಷ್ಟು “ಡೆಮಾಕ್ರೆಸಿ.” ಸುಗ್ರೀವ ಮೊದಲಾದವರ ಸಂಗಡ “ಕುಂಸಲ್ಲು” (Council) ನಡೆಯಿತು. ಕಡೆಗೆ ಶ್ರೀರಾಮನು ವಿಭೀಷಣನನ್ನು ಅಂಗೀಕರಿಸತಕ್ಕದ್ದೆಂದು ನಿಶ್ಚಯಿಸಿದನು.

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ:

1) ವಿಭೀಷಣನ ಮನಸ್ಸಿನಲ್ಲಿದ್ದುದೇನು?
a) ಪಾಪವಿರೋಧವೆ?
b)ಪ್ರಾಣಭೀತಿಯೆ?
c)ಧರ್ಮಸಹಾಯಬುದ್ಧಿಯೆ?

2) ಶ್ರೀರಾಮನ ಮುಖ್ಯತಾತ್ಪರ್ಯವೇನು?
a) ಉಪಾಯಚಿಂತನೆಯೆ?
b) ಆರ್ತರಕ್ಷಣೆಯೇ?

ವಿಭೀಷಣನ ಇಂಗಿತ

ವಿಭೀಷಣನು ಪಾಪವಿರೋಧಿಯೆಂದು ಅವನಾಡಿದ ಮಾತುಗಳಿಂದ ವ್ಯಕ್ತಪಡುತ್ತದೆ. ಅವನಿಗೆ ದುಷ್ಟಾಲೋಚನೆಯ ವಿಷಯದಲ್ಲಿ ಅಸಮ್ಮತಿ ಮಾತ್ರವಲ್ಲದೆ ಕುಲಗೌರವದ ಮೇಲೆಯೂ ದೃಷ್ಟಿಯಿತ್ತು. ಆದದ್ದರಿಂದ ಅವನು ರಾವಣನನ್ನು ತ್ಯಜಿಸುವುದು ಅನಿವಾರ್ಯವಾಯಿತು.

ಹಾಗೆ ಮಾಡಿದರೂ ರಾಮನಲ್ಲಿ ಮರೆಹೋಗಬೇಕಾದದ್ದೇಕೆ? ತಟಸ್ಥನಾಗಿರಬಹುದಾಗಿತ್ತಲ್ಲ? ಮತ್ತೆಲ್ಲಾದರೂ ಹೋಗಬಹುದಾಗಿತ್ತಲ್ಲ?

ರಾವಣನು ಛಲವಂತ. ತನ್ನನ್ನು ಅನುಮೋದಿಸದೆ ವಿರೋಧಿಸಿದವರನ್ನು ಅವನು ಸುಮ್ಮನೆ ಬಿಡುತ್ತಿರಲಿಲ್ಲ. ಸೇಡು ತೀರಿಸಿಯೇ ತೀರಿಸಿಕೊಳ್ಳುತ್ತಿದ್ದ. ಈ ಭಯವಿದ್ದದ್ದರಿಂದ ವಿಭೀಷಣನಿಗೆ ಬಲವತ್ತರವಾದ ಆಶ್ರಯ ಬೇಕೆನಿಸಿತು.

ಅದಕ್ಕಾಗಿ ರಾಮನಲ್ಲಿ ಬಂದ.

ಪಾಪಕ್ಕೆ ಪ್ರತೀಕಾರಮಾಡಿಸುವುದೂ ವಿಭೀಷಣನ ಉದ್ದೇಶದಲ್ಲಿದ್ದಿರಬೇಕು. ಅಧರ್ಮ–ಅಸಹನೆಯ ಜೊತೆಗೆ ಧರ್ಮಸಂರಕ್ಷಣೆ ಸೇರಿರಬೇಕು. ರಾವಣನ ಬಲವನ್ನು ತಗ್ಗಿಸುವುದರ ಜೊತೆಗೆ ರಾವಣಪ್ರತ್ಯರ್ಥಿಯನ್ನು ಬಲಪಡಿಸಬೇಕು. ಇದು ವಿಭೀಷಣನ ಮನೋಗತ.

ಶ್ರೀರಾಮನ ಇಂಗಿತ

ಇನ್ನು ಶ್ರೀರಾಮನ ಇಂಗಿತವೇನಿದ್ದಿರಬಹುದು?

1) ಆರ್ತತ್ರಾಣ: ಮರೆಹೊಕ್ಕು ಬಂದವರನ್ನು ಕಾಪಾಡುವುದು. ಇದು ಕ್ಷತ್ರಿಯನಿಗೆ ಆರ್ಷೇಯವಾಗಿ ಬಂದಿರುವ ಧರ್ಮ. ಇದನ್ನು ಅನುಸರಿಸಿಯೇ ಶ್ರೀರಾಮನು “ಯದಿ ವಾ ರಾವಣಃ ಸ್ವಯಂ” ಎಂದು ಹೇಳಿದ್ದು. ಯಾರು “ನೀನೇ ನನಗೆ ಗತಿ, ಬೇರೆ ದಿಕ್ಕಿಲ್ಲ” ಎಂದು ಶರಣಾಗತನಾಗಿ ಬರುತ್ತಾನೋ ಅವನನ್ನು ಕಾಪಾಡುವುದು ಧರ್ಮ. ಇದು ವಿಭೀಷಣನೊಬ್ಬನಿಗೆ ಮಾತ್ರವೇ ಅನ್ವಯಿಸಿದ್ದೇನೂ ಅಲ್ಲ. ಯಾರು ಹಾಗೆ ಬಂದಿದ್ದರೂ ಅವರಿಗೆ ಅಭಯಕೊಡತಕ್ಕವನು ರಾಮ.

2) ಲೌಕಿಕೋಪಾಯ: ಆರ್ತತ್ರಾಣ ಧರ್ಮದ ಜೊತೆಗೆ ಲೌಕಿಕೋಪಾಯ ಸೇರಿರಲಿಲ್ಲವೆ? ಸುಗ್ರೀವಸಖ್ಯದಲ್ಲಿ ಸ್ವಕಾರ್ಯೋಪಾಯ ಚಿಂತನೆ ಸೇರಿದ್ದದ್ದು ಸ್ಪಷ್ಟವಾಗಿದೆ. ತಾನು ಯುದ್ಧಕ್ಕೆ ಹೊರಟವನು. ಶತ್ರುಪಕ್ಷದ ಕಡೆಯಿಂದ ತನ್ನ ಕಡೆಗೆ ಯಾರಾದರೂ ಬಂದರೆ ಅದರಿಂದ ಶತ್ರುಬಲ ಕೊಂಚ ಕಡಮೆಯಾಗುವುದೂ ತನ್ನ ಬಲ ಹೆಚ್ಚುವುದೂ ಸ್ಪಷ್ಟವಾಗಿಯೇ ಇದೆ. ಶ್ರೀರಾಮನ ಮನಸ್ಸಿನಲ್ಲಿ ಇಂಥ ಯೋಚನೆ ಇದ್ದಿದ್ದರೆ ಅದನ್ನು ಯಾರೂ ಅಸಂಗತವೆನ್ನಲಾರರು. ಈ ಕಾರಣದಿಂದಲೂ ಶ್ರೀರಾಮನು ವಿಭೀಷಣನಿಗೆ ಆಶ್ರಯ ಕೊಟ್ಟಿರಬಹುದು.

“ವಿಭೀಷಣ ನೀತಿ”

ಈಗಿಗೆ ಅರವತ್ತೈದು ವರ್ಷಗಳ ಹಿಂದೆ–ಬಹುಶಃ ೧೯೦೫–೬ ರಲ್ಲಿ–ವಿಭೀಷಣನ ಹೆಸರು ಇಂಡಿಯಾದ ರಾಜಕೀಯದಲ್ಲಿ ಒಂದು ಪಕ್ಷಕ್ಕೆ ಅವಹೇಳನದ ಮಾತಾಗಿತ್ತು. ಆ ಕಾಲದಲ್ಲಿ ಎರಡು ಪಕ್ಷಗಳಿದ್ದವಷ್ಟೆ? ಒಂದು ಅತಿವಾದಿಗಳ (Extremists) ಪಕ್ಷ. ಇನ್ನೊಂದು ಮಿತವಾದಿಗಳ (Moderates) ಪಕ್ಷ. ಎರಡು ಪಕ್ಷಗಳ ಉದ್ದೇಶವೂ ದೇಶ ಸ್ವಾತಂತ್ರ್ಯವೇ ಆಗಿದ್ದರೂ, ಕಾರ್ಯೋಪಾಯಗಳ ವಿಷಯದಲ್ಲಿ ಭೇದವಿತ್ತು.

ಅತಿವಾದ ಪಕ್ಷದವರು ಜನರಲ್ಲಿ ಚಳವಳಿ ಹೂಡಿ ದೊಂಬಿ ಧಾಳಿಯನ್ನೆಬ್ಬಿಸಿ ಬ್ರಿಟಿಷರು ಇಲ್ಲಿರುವುದು ಅಸಾಧ್ಯವಾಗುವಂತೆ ಮಾಡಬೇಕೆಂದರು. ಈ ಪಕ್ಷದ ಮುಖ್ಯ ನಾಯಕರು ಬಾಲಗಂಗಾಧರ ತಿಲಕರು.

ಮಿತವಾದಿಗಳು ಈ ದಾರಿ ಸರಿಯಲ್ಲವೆಂದರು. ದೊಂಬಿ ಧಾಳಿಗಳನ್ನು ಬ್ರಿಟಿಷರು ಆಗಗೊಡರು. ಅವರು ಪ್ರತಿಬಂಧಕ ಒಡ್ಡುವುದು ಮಾತ್ರವಲ್ಲದೆ ದೊಂಬಿಯನ್ನು ನೆವ ಮಾಡಿಕೊಂಡು ಜನರನ್ನು ತುಳಿದು ಹಾಕಿಯಾರು. ದೇಶದ ಸ್ಥಿತಿ ಇನ್ನೂ ಕೆಟ್ಟೀತು. ನಿಷ್ಠುರ ಮಾರ್ಗಕ್ಕೆ ಹೋಗದೆ, ಈಗ ಬ್ರಿಟಿಷರು ಒದಗಿಸಿರುವ ಅಲ್ಪಸ್ವಲ್ಪದ ಅವಕಾಶಗಳನ್ನು ಉಪಯೋಗಿಸಿಕೊಂಡು ಇನ್ನೂ ಹೊಸ ಹೊಸ ಅವಕಾಶಗಳನ್ನು ಸಂಪಾದಿಸಿಕೊಂಡು ನಮ್ಮ ಶಕ್ತಿ ಸಂಪತ್ತುಗಳನ್ನು ಬೆಳಸಿಕೊಳ್ಳೋಣ. ನಮ್ಮ ಸ್ವಂತದ ಬಲ ಬೆಳೆದಂತೆ ಬ್ರಿಟಿಷರಿಗೆ ಇಲ್ಲಿ ನಿಲ್ಲಲು ಕಾರಣವಿಲ್ಲದೆ ಹೋಗುತ್ತದೆ. ಅವರ ಹಿಡಿತ ಸಡಿಲುತ್ತದೆ. ನಾವು ಅವರನ್ನು ಹೊರಟು ಹೋಗಿರೆಂದು ಹೇಳುವುದಕ್ಕಿಂತ, ಅವರು ತಾವಾಗಿಯೇ ಹೊರಟು ಹೋಗುವಂತೆ ಮಾಡುವುದು ಮೇಲು. ಸಾಮೋಪಾಯವೇ ನಮಗೆ ಉಪಾಯ. ಇದು ಮಿತವಾದಿಗಳ ಪಕ್ಷ. ಈ ಪಕ್ಷದ ನಾಯಕರಲ್ಲೊಬ್ಬರು ಗೋಪಾಲಕೃಷ್ಣ ಗೋಖಲೆಯವರು.

ಗೋಖಲೆಯವರು ಹೀಗೆ ಸ್ನೇಹ ಮಾರ್ಗವನ್ನೂ ಸೌಮ್ಯ ನೀತಿಯನ್ನೂ ಎತ್ತಿ ಹಿಡಿದಿದ್ದ ಕಾರಣದಿಂದ ಅವರನ್ನು ಪ್ರತಿಪಕ್ಷದವರು ವಿಭೀಷಣಪಂಥಿಯೆಂದು ಕರೆದರು. ವಿಭೀಷಣನು ಸ್ವಪಕ್ಷವನ್ನು ತೊರೆದು ಶತ್ರುಪಕ್ಷದಲ್ಲಿ ಸೇರಿಕೊಂಡವನಷ್ಟೆ? ಗೋಖಲೆಯವರು ಅದೇ ರೀತಿ ಸ್ವದೇಶಾಭಿಮಾನವನ್ನು ತೊರೆದು ಸ್ವದೇಶ ವಿರೋಧಿಗಳಲ್ಲಿ ಸ್ನೇಹದಿಂದ ವರ್ತಿಸಬೇಕೆನ್ನುತ್ತಾರೆ. ಅದು ವಿಭೀಷಣನೀತಿ. ಹೀಗೆ ಅತಿವಾದಿ ಪಕ್ಷದವರ ಅವಹೇಳನೆ. ಈ ಅಪವಾದಕರ್ತರಲ್ಲಿ ತಿಲಕರು ಮುಖ್ಯರೆಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ. ರಾಜಕೀಯದಲ್ಲಿ ಪಕ್ಷ–ಪ್ರತಿಪಕ್ಷಗಳ ಉದ್ವೇಗಾವೇಶಗಳು ಎಂಥವರ ಬಾಯಿಂದಲೂ ಆಡಬಾರದ್ದನ್ನು ಆಡಿಸುವುದುಂಟು. ಅಂಥ ಮಾತನ್ನು ಹೆಚ್ಚು ಗಮನಿಸತಕ್ಕದ್ದಲ್ಲ. ಗೋಖಲೆಯವರ ನೀತಿ ವಿಭೀಷಣ ನೀತಿಯೆಂಬುದಾದರೆ, ಗೋಖಲೆಯವರು ತ್ಯಜಿಸಿದ ಪಕ್ಷ ರಾವಣಪಕ್ಷವೆನ್ನಬೇಕಾದೀತು.

ಅತಿವಾದಿಗಳು ಮಾಡಿದ ಅವಹೇಳನದಿಂದ ಗೋಖಲೆಯವರಿಗೂ ಅವರ ಸ್ನೇಹಿತರಿಗೂ ಕೊಂಚ ಬೇಸರವಾದದ್ದರ ಹೊರತು ಬೇರೆ ಯಾವ ಲಾಭವೂ ಯಾರಿಗೂ ಆಗಲ್ಲಿ.

ಅದು ಹಾಗಿರಲಿ.

ಈಗ ವಿಭೀಷಣ ನೀತಿಯ ಯುಕ್ತಾಯುಕ್ತಗಳನ್ನು ಸ್ವತಂತ್ರವಾಗಿ ವಿಚಾರ ಮಾಡೋಣ–ಸಾಧ್ಯವಿರುವ ಮಟ್ಟಿಗೆ.

ವಿಭೀಷಣ–ಭೀಷ್ಮ

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ವಿಭೀಷಣನ ಪಕ್ಕದಲ್ಲಿ ನಿಂತು ಹೋಲಿಸಿಕೊಳ್ಳಲು ಅರ್ಹನಾದ ಇನ್ನೊಬ್ಬ ಮಹಾಪುರುಷನು ಭೀಷ್ಮಾಚಾರ್ಯ.

ವಿಭೀಷಣ, ಭೀಷ್ಮ–ಶಬ್ದಾರ್ಥದಲ್ಲಿ ಎರಡೂ ಒಂದೇ. ಇಬ್ಬರನ್ನೂ ಭಗವದ್ಭಕ್ತ ಶ್ರೇಣಿಯಲ್ಲಿ ಎಣಿಸಿದ್ದಾರೆ. ಇಬ್ಬರ ಎದುರಿಗೂ ಒಂದೇ ಬಗೆಯ ಧರ್ಮಸೂಕ್ಷ್ಮದ ಪ್ರಶ್ನೆ ಎದ್ದು ಕಾಣಿಸಿತು. ಆದರೆ ಅವರು ಕೊಟ್ಟ ಉತ್ತರಗಳು ಬೇರೆ ಬೇರೆ ಬಗೆಯಾಯಿತು. ಪ್ರಶ್ನೆ ಹೀಗೆ:

(೧) ಸ್ವಾಮಿಯು ದುಷ್ಟನಾದರೆ ಸಾತ್ತ್ವಿಕ ಸೇವಕನು ಏನು ಮಾಡಬೇಕಾದದ್ದು?

(೨) ರಾಜ " ಮಂತ್ರಿ " (೩) ಪತಿ " ಪತ್ನಿ

(೪) ಪತ್ನಿ ದುಷ್ಟಳಾದರೆ ಪತಿ "

ಮೂರು ದಾರಿಗಳು ಸಾಧ್ಯ ತೋರುತ್ತವೆ:

1) ಪರಿತ್ಯಜಿಸುವುದು; ತ್ಯಜಿಸಿ ತಟಸ್ಥನಾಗಿರುವುದು.

2) ತ್ಯಜಿಸಿ ವಿರೋಧಿಸುವುದು.

3) ತ್ಯಜಿಸದೆ ಸಹಿಸಿಕೊಂಡು ನಿಯತ ಕರ್ತವ್ಯವನ್ನು ಮಾಡುವುದು.

ವಿಭೀಷಣನು ಎರಡನೆಯ ದಾರಿ ಹಿಡಿದ; ಭೀಷ್ಮನದು ಮೂರನೆಯ ದಾರಿ.

ಶಾಶ್ವತ ವಿಶ್ವಧರ್ಮ ನಿಷ್ಠೆಯೇ ದೊಡ್ಡದೆನಿಸಿತು ವಿಭೀಷಣನಿಗೆ.

ಸ್ವಾಮಿ–ಭೃತ್ಯ ಋಣವೇ ದೊಡ್ಡದಾಯಿತು ಭೀಷ್ಮದ್ರೋಣರಿಗೆ.

ಈ ಧರ್ಮತಾರತಮ್ಯನಿರ್ಣಯ ಅವರವರ ಅಂತಃಪ್ರೇರಣೆಯಿಂದ. ಮನುಗಳು “ಹೃದಯೇನಾಭ್ಯನುಜ್ಞಾತಃ” ಎಂದು ಹೇಳಿದ್ದಾರೆ. ಧರ್ಮಸೂಕ್ಷ್ಮ ಪ್ರಶ್ನೆಗಳಿಗೆ ಬಾಹ್ಯ ನಿರ್ಣಯವಿಲ್ಲ. ಅಂತರಂಗ ನಿರ್ಣಯವೇ ನಿರ್ಣಯ; “ಮನೋಜಯಂ ತು ಮಾಂಡವ್ಯಃ” ಎಂದಹಾಗೆ. ಆಳವಾಗಿ ನೋಡಿದರೆ ಸ್ವಾಮಿ–ಭೃತ್ಯ ಋಣಸೂತ್ರವೂ ಶಾಶ್ವತ ವಿಶ್ವಧರ್ಮದ ಒಂದು ಅಂಶವೇ ಅಲ್ಲವೆ? ವಿಭೀಷಣ–ಭೀಷ್ಮರಿಬ್ಬರೂ ಒಂದೇ ವಿಶ್ವಧರ್ಮವನ್ನು ಬೇರೆಬೇರೆ ಕೋನಗಳಿಂದ ನೋಡಿದರು. ವಿಭೀಷಣನು ಸಮಗ್ರದ ದೃಷ್ಟಿಯಿಂದ; ಭೀಷ್ಮರು ವ್ಯಕ್ತಿ ದೃಷ್ಟಿಯಿಂದ.

ಪ್ರಪತ್ತಿಯ ಘೋಷಣೆ

ವಿಭೀಷಣಪ್ರಕರಣವನ್ನು ಭಕ್ತಿ ಪಂಥಿಗಳು ಶರಣಾಗತಿಶಾಸ್ತ್ರವೆಂದು ಕರೆಯುವುದುಂಟು. ಭಗವಂತನ ಅಪಾರವಾದ ಶರಣಾಗತ ವಾತ್ಸಲ್ಯಕ್ಕೆ ವಿಭೀಷಣಚರಿತ್ರೆ ನಿದರ್ಶನವೆಂದು ಅವರ ಭಾವನೆ.

ಸಕೃದೇವ ಪ್ರಪನ್ನಾಯ
ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯಃ
ದದಾಮ್ಯೇತದ್ವ್ರತಂ ಮಮ ॥

ಆನಯೈನಂ ಹರಿಶ್ರೇಷ್ಠ
ದತ್ತಮಸ್ಯಾಭಯಂ ಮಯಾ ।
ವಿಭೀಷಣೋ ವಾ ಸುಗ್ರೀವ
ಯದಿ ವಾ ರಾವಣಃ ಸ್ವಯಮ್‍ ॥ ಸರ್ಗ ೧೮, ಶ್ಲೋಕ ೩೩–೩೫

ಇದು ಪ್ರಪತ್ತಿಮತದ ಜಯಘೋಷಣೆ.

ಇದರ ಮೇಲೂ ಒಂದು ಕೋಟಿಯುಂಟು. ಪ್ರಹ್ಲಾದಕಥೆ, ಗಜೇಂದ್ರಕಥೆ ಮೊದಲಾದ ಪುರಾಣ ಪ್ರಕರಣಗಳು ಶರಣಾಗತಿಯ ಮಹಿಮೆಯನ್ನು ಹೇಳುತ್ತವಲ್ಲವೆ? ಮೇಲಾಗಿ, ಯುದ್ಧ ಪ್ರವೃತ್ತನಾಗಿರುವಾತನು ಶತ್ರುಪಕ್ಷದಿಂದೊಬ್ಬನು ತನ್ನ ಪಕ್ಷಕ್ಕೆ ಬಂದರೆ ಅವನನ್ನು ಸ್ವಾಗತಿಸಿ ಪ್ರೋತ್ಸಾಹಿಸುವುದು ಸ್ವಕಾರ್ಯ ಸಾಧನೆಯ ನೀತಿಯೇ ಅಲ್ಲವೆ? ಅದರಲ್ಲಿ ಶರಣಾಗತ ರಕ್ಷಣೆಯೆಂಬ ವಿಶೇಷವೆಲ್ಲಿದೆ? ಎಲ್ಲ ಲೌಕಿಕರೂ ಅನುಸರಿಸುವ ಕಾರ್ಯೋಪಾಯವೇ ಅದಲ್ಲವೆ?

ಹೀಗೆ ಅಭಿಪ್ರಾಯವುಳ್ಳವರು ಶರಣಾಗತಿಯಲ್ಲಿ ನಂಬಿಕೆಯಿಲ್ಲದವರೆಂದಾಗಲಿ, ಶ್ರೀರಾಮನ ಶರಣಾಗತರಕ್ಷಣೆಯಲ್ಲಿ ನಂಬಿಕೆಯಿಲ್ಲದವರೆಂದಾಗಲಿ ಅನುಮಾನಿಸಲಾಗದು. ಅವರೂ ಪೂರ್ಣವಾಗಿ ರಾಮಭಕ್ತರೇ. ಆದರೆ ವಿಭೀಷಣ ಪ್ರಕರಣವು ಸುಗ್ರೀವ ಪ್ರಕರಣದಂತೆ, ಶ್ರೀರಾಮನ ನಯಕುಶಲತೆಯನ್ನೂ ಉಪಾಯಜ್ಞತೆಯನ್ನೂ ತೋರಿಸುತ್ತದೆ ಎಂಬುದು ಅವರ ಮನೋಗತ.

ಧರ್ಮಸೂಕ್ಷ್ಮ ವಿಚಾರದಲ್ಲಿ ನಿರ್ಣಯ ಹೇಗೋ ಕಾವ್ಯ ಸಂದರ್ಭದ ಆಶಯ–ನಿರ್ಧಾರವೂ ಹಾಗೆ ಬಹುಮಟ್ಟಿಗೆ ನಮ್ಮ ನಮ್ಮ ಅಂತರಂಗ ಪ್ರವೃತ್ತಿಗಳನ್ನವಲಂಬಿಸಿಕೊಂಡಿರುತ್ತದೆ.

ಕಪಿಲೋಕ

ರಾಮಾಯಣ ಪ್ರಪಂಚದೊಳಕ್ಕೆ ಕವಿಯು ಕಪಿಗಳನ್ನೇಕೆ ತಂದಿದ್ದಾನೆ? ಈ ಪ್ರಶ್ನೆಯನ್ನು ಸುಂದರಕಾಂಡದ ಮುನ್ನುಡಿಯಲ್ಲೆತ್ತಿದ್ದೇನೆ. ಆ ಪ್ರಶ್ನೆಗೆ ಸಮಾಧಾನವು ಯುದ್ಧಕಾಂಡದ ಸೇತುಬಂಧಪ್ರಕರಣದಲ್ಲಿ ದೊರೆಯುತ್ತದೆ. ಇಲ್ಲಿ ಸೇತುವೆಯಾಗಬೇಕಾಗಿದ್ದದ್ದು ಕಾಲುವೆಗಲ್ಲ, ಹೊಳೆಗಲ್ಲ, ನದಿಗಲ್ಲ; ಮಹಾಸಮುದ್ರಕ್ಕೆ. ಈ ಸೇತುವೆಗೆ ಬೇಕಾಗಿದ್ದ ಸಾಮಗ್ರಿ ಒಡೆದ ಕಲ್ಲಲ್ಲ, ಇಟ್ಟಿಗೆಯಲ್ಲ, ಮರಳೂ ಮಣ್ಣೂ ಅಲ್ಲ. ಇಲ್ಲಿ ಬೆಟ್ಟ ಗುಡ್ಡಗಳನ್ನೂ ಬಂಡೆ ಗುಂಡುಗಳನ್ನೂ ರಾಶಿರಾಶಿಯಾಗಿ ತಂದು ತುಂಬಬೇಕು. ಮತ್ತು ಬೇಗಬೇಗ ತುಂಬಬೇಕು. ಅದು ಮನುಷ್ಯರಿಂದ ಆಗುವ ಕೆಲಸವೆ? ಸಾವಿರ ಮಂದಿ ಮನುಷ್ಯರನ್ನು ತಂದಿಟ್ಟರೆ ಎಷ್ಟು ಕಾಲ ಬೇಕಾಗುತ್ತಿತ್ತು? ಆ ಮನುಷ್ಯರಿಗೆ ಅನ್ನವಸತಿಗಳ ಏರ್ಪಾಟು ಮಾಡುವವರಾರು? ಶಾಖಾಮೃಗಗಳಿಗಾದರೆ ಆ ಭೋಜನ ವಸತಿಗಳ ಚಿಂತೆಯಿಲ್ಲ. ಅವು ತಮ್ಮ ಜೀವನವನ್ನು ತಾವೇ ಹೇಗೆಹೇಗೋ ನಡೆಸಿಕೊಂಡು, ಸೇತು ಕಾರ್ಯಕ್ಕೆ ಸಿದ್ಧವಾಗಿಬರುತ್ತವೆ. ಬೆಟ್ಟ ಬೆಟ್ಟಗಳನ್ನೇ ಹೊತ್ತು ತಂದು ಸಮುದ್ರದಲ್ಲಿ ಉರುಳಿಸಿ ಬಿಡುತ್ತವೆ; ಎಲೆ ಕೊಂಬೆ ಕಲ್ಲು ಮರಳುಗಳನ್ನು ಹಾಕಿ ಗಟ್ಟಿ ಮಾಡುತ್ತವೆ. ಈ ಅವಶ್ಯಕತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ವಾಲ್ಮೀಕಿಗಳು ಕಪಿ ಲೋಕವನ್ನು ಬರ ಮಾಡಿಕೊಂಡಿದ್ದಾರೆ.

ವಿನೋದಾವಕಾಶ

ಒಂದಿಷ್ಟು ವಿನೋದಾವಕಾಶ ಕಲ್ಪನೆಯೂ ವಾಲ್ಮೀಕಿಗಳ ಉದ್ದೇಶದಲ್ಲಿದ್ದಿರಬೇಕು. ಅವರು ಋಷಿಗಳಾದರೂ ಹುಬ್ಬು ಗಂಟಿಕ್ಕಿ ಗುರುಗುರ್ರೆಂದು ಗದ್ದರಿಸುತ್ತಿದ್ದವರಲ್ಲ; ಮನಸಾರ ನಗುತ್ತಿದ್ದವರು. ಕಾವ್ಯದ ಗಂಭೀರ ಸಂದರ್ಭಗಳು ಮನಸ್ಸಿಗೆ ಉಂಟು ಮಾಡಿದ ಚಿತ್ರಕಥಾ ಸಂಕಲಿತಂ

ಮಾಣವಕಾಮೋದಯುತಮ್‍ ॥

ಹೀಗೆ ಇನ್ನೆಷ್ಟೋ ಮಂದಿ ಕಲ್ಪನಾಚತುರರು ಕುಂಭಕರ್ಣನನ್ನು ಚಿತ್ರಿಸಿದ್ದಾರೆ.

ಕುಂಭಕರ್ಣನ ಧರ್ಮಪ್ರಜ್ಞೆ

ಆಕಾರಚರ್ಯೆಗಳಲ್ಲಿ ಕುಂಭಕರ್ಣನು ಇಷ್ಟು ವಿಪರೀತನಾಗಿದ್ದರೂ ವಿವೇಕಶಕ್ತಿಯಲ್ಲಿ ಅವನು ಸರ್ವಶೂನ್ಯನಾಗಿರಲಿಲ್ಲ. ಅವನು ಮೊದಲು ಯುದ್ಧೋತ್ಸಾಹಿಯಾಗಿರಲಿಲ್ಲ. ರಾವಣನು ವಿಚಾರ ಮಾಡದೆ ದುಡುಕಿದನೆಂದೇ ಅವನ ಅಭಿಪ್ರಾಯ. “ಅಹಿತಂ ಚ ಹಿತಾಕಾರಂ” –ಉಪದೇಶಿಸುವವರ ಮಾತನ್ನು ರಾವಣನು ಗೌರವಿಸಿದನೆಂದು ಆಕ್ಷೇಪಣೆ ಮಾಡಿದ. ಆದರೆ ರಾವಣನು ಒಪ್ಪಿಯಾನೆ? ಇಲ್ಲ, ಸರ್ವಥಾ ಇಲ್ಲ. ಮತ್ತಷ್ಟು ರೋಷಾವಿಷ್ಟನಾದ. ಅದರ ಅರ್ಥವನ್ನು ಕುಂಭಕರ್ಣನು ಗ್ರಹಿಸಿದ. ಋಷಿಶಾಪ ಸುಳ್ಳಾಗದು; ಪಾಪದ ಫಲವನ್ನು ತಪ್ಪಿಸಿಕೊಳ್ಳಲಾಗದು; ಅಣ್ಣನು ಆಪತ್ತಿಗೆ ಸಿಕ್ಕಿದ್ದಾನೆ, ತನ್ನಿಂದಾದಷ್ಟು ಸಹಾಯವನ್ನು ತಾನು ಮಾಡಿದರಾಯಿತು–ಎಂದು ಚಿಂತಿಸಿ ಗತ್ಯಂತರ ಕಾಣದ ಹತಾಶೆಯಿಂದ (desperate) ಯುದ್ಧಕ್ಕೆ ನಿಂತ. ತಕ್ಕದ್ದು ಆಯಿತು. ಅದರಲ್ಲೊಂದು ಸುಯೋಗ: ರಾಮಬಾಣದಿಂದ ಸಾವು; ಸಣ್ಣದ್ದರಿಂದ ಅಲ್ಲ.

ತಸ್ಮಿನ್‍ ಹತೇ ಬ್ರಾಹ್ಮಣದೇವಶತ್ರೌ
ಗುಹಾಬಲೇ ಸಂಯತಿ ಕುಂಭಕರ್ಣೇ ।
ಚಚಾಲ ಭೂರ್ಭೂಮಿಧರಾಶ್ಚ ಸರ್ವೇ
ಹರ್ಷಾಚ್ಚ ದೇವಾಸ್ತುಮುಲಂ ಪ್ರಣೇದುಃ ॥ ಸರ್ಗ ೬೭, ಶ್ಲೋಕ ೧೮೬

ಶ್ರೀ ಡಿ. ಸಿ. ಅನಂತರಾಮಯ್ಯನವರು ರಾಮಾಯಣ ಪ್ರಕಟನೆಯ ಸಂಕಲ್ಪವನ್ನು ಮನಸ್ಸಿನಲ್ಲಿ ಮಾಡಿಕೊಂಡಾಗ ಅದು ಸಾಹಸವೆಂದು ಬಹುಮಂದಿಗೆ ತೋರಿತು. ಭಗವಂತನ ಕೃಪೆಯಿಂದ ಒಳ್ಳೊಳ್ಳೆಯ ಸ್ನೇಹಿತರು ಅವರೊಡನೆ ಏಕೀಭವಿಸಿ ಸಹಕಾರ ಕೊಡುವವರಾದರು. ಶ್ರೀ ಸೀತಾರಾಮರ ಕಟಾಕ್ಷದಿಂದ ಆ ಕೆಲಸ ಈಗ ಮುಪ್ಪಾಗಪಾಲು ನಡೆದಂತಾಯಿತು. ಈಗ ಮಿಕ್ಕಿರುವುದು ಯುದ್ಧಕಾಂಡದ ದ್ವಿತೀಯ ಭಾಗ ಮತ್ತು ಉತ್ತರಕಾಂಡ. ಈಶ್ವರಾನುಗ್ರಹದಿಂದ ಈ ಭಾಗವೂ ತೃಪ್ತಿಕರವಾಗಿ ಮುಗಿದು ಪೂರ್ಣಗ್ರಂಥ ಮಹಾಜನರ ಕೈಸೇರಲಾದೀತೆಂದು ನಾನು ನಿರೀಕ್ಷಿಸಿಕೊಂಡಿದ್ದೇನೆ.

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾರವರ ಪಾಂಡಿತ್ಯವೂ ರಸಸೂಕ್ಷ್ಮಜ್ಞತೆಯೂ ಭಾಷಾಂತರ ಲೇಖನದಲ್ಲಿ ಪ್ರತಿಬಿಂಬಿತವಾಗಿವೆ. ಅವರು ಈ ಕಾರ್ಯದಲ್ಲಿ ಎಂಥ ಶ್ರದ್ಧೆ, ಎಂಥ ಉತ್ಸಾಹವನ್ನು ತೋರಿಸಿದ್ದಾರೆ, ಮತ್ತು ಎಷ್ಟು ಶ್ರಮಪಟ್ಟಿದ್ದಾರೆ, ನಾನಾ ವ್ಯಾಖ್ಯಾನಗಳನ್ನು ಪರಿಶೀಲಿಸಿ ಅರ್ಥವಿವೇಚನೆ ಮಾಡಿದ್ದಾರೆ–ಎಂಬುದನ್ನು ನಾನು ಅಷ್ಟಿಷ್ಟು ಕಂಡುಕೊಂಡಿದ್ದೇನೆ. ಅವರು ಮಾಡಿರುವ ಸಾಹಿತ್ಯ ಸೇವೆಗಾಗಿ ಕನ್ನಡ ಮಹಾಜನರು ಕೃತಜ್ಞರಾಗಿರುವರೆಂದು ನಂಬಿದ್ದೇನೆ.

ಗ್ರಂಥ ಪ್ರಕಟನ ಸಮಿತಿಗೂ ಭಾಷಾಂತರಕರ್ತರಿಗೂ ವಾಚಕ ಮಹಾಶಯರಿಗೂ ಶ್ರೀ ಸೀತಾರಾಮರ ಕರುಣೆ ಸರ್ವದಾ ದೊರೆತಿರಲಿ ಎಂದು ಹಾರೈಸುತ್ತೇನೆ. ಇತಿ ಶಿವಂ.

ಇಂತು ಸಜ್ಜನವಿಧೇಯ (೧೯೬೯)

No comments:

Post a Comment