Tuesday 12 March 2024

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಬಹುಕಾಲದಿಂದ ನನ್ನ ಮನಸ್ಸಿನಲ್ಲಿ ಮಿಡಿಯುತ್ತ ಉಳಿದುಕೊಂಡಿದ್ದ ಒಂದು ಪ್ರಶ್ನೆಗೆ ಸಮಾಧಾನವೆಂದು ನನ್ನ ಬುದ್ಧಿಗೆ ಈಚೀಚೆಗೆ ತೋರಿದ ಉತ್ತರವನ್ನು ಈ ಗ್ರಂಥದಲ್ಲಿ ರೂಪಗೊಳಿಸಿದ್ದಾಗಿದೆ. ಸಹೃದಯರು ಒಪ್ಪಿಸಿಕೊಳ್ಳಬೇಕೆಂದು ಬೇಡುತ್ತೇನೆ.

ಕೆಲವು ವರ್ಷಗಳಿಂದ ನಾನು ಅರೆಕುರುಡ; ಅರೆಯುಸಿರಿನವನು. ಈ ಅವಸ್ಥೆಯಲ್ಲಿ ನಿದ್ದೆಬಾರದಾಗ, ಆಯಾಸವಾದಾಗ, ತೋರಿಬಂದ ಭಾವನೆಗಳನ್ನು ಆಗ್ಗೆ ಒದಗಿಬಂದ ಮಾತಿನಲ್ಲಿ, ಆ ಸಮಯಕ್ಕೆ ಸಿಕ್ಕಿದ ಕಾಗದದ ಚೂರಿನಲ್ಲಿ, ಆಗ ಕೈಗೆ ದೊರೆತ ಲೇಖನಿಯಿಂದ ಗುರುತು ಮಾಡಿದ್ದಾಯಿತು. ಆದರೆ ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಬೇಕೆಂದು ನೋಡಿದಾಗ ನಾನು ಗೀಚಿದ್ದ ಗೀಟುಗಳು ನನಗೆ ಅರ್ಥವಾಗದೆಹೋಯಿತು. ಈ ಕಷ್ಟಸ್ಥಿತಿಯಲ್ಲಿ ನನ್ನ ಗುರುತುಚೀಟಿಗಳ ಸಿಕ್ಕು ಬಿಡಿಸಿ ಓದಲಾಗುವಂತೆ ಮಾಡಿದವರು ನಾಲ್ವರೈವರು ಸ್ನೇಹಿತರು. ಅವರಲ್ಲಿ ನಾನು ಹೇಳಲೇಬೇಕೆಂದು ಗೊತ್ತುಮಾಡಿಕೊಂಡಿರುವ ಹೆಸರುಗಳು ಎರಡು : ಚಿ ॥ ಬಿ.ಎಸ್‍. ಸುಬ್ಬರಾಯರು. ಚಿ ॥ ಡಿ.ಆರ್‍. ವೆಂಕಟರಮಣನ್‍. ಈ ಸ್ನೇಹಿತರು ನನ್ನ ಕರಡುಗಳನ್ನು ಕೊಂಚಮಟ್ಟಿಗೆ ಅಳವಡಿಸಿಕೊಟ್ಟಮೇಲೆ ಬರವಣಿಗೆಯನ್ನೆಲ್ಲ ಆಮೂಲಾಗ್ರವಾಗಿ ಓದಿ ವಿರಳ ವಿರಳವಾಗಿ ನಕಲು ಬರೆದುಕೊಟ್ಟವರು ಚಿ ॥ ಎಸ್‍.ಆರ್‍. ರಾಮಸ್ವಾಮಿ. ಈತ ಅಂದವಾದ ನಕಲನ್ನು ತಯಾರುಮಾಡಿದ್ದಷ್ಟೇ ಅಲ್ಲ; ಬಿಡಿಬಿಡಿಯಾಗಿ ಬಿದ್ದಿದ್ದ ಪದ್ಯಗಳನ್ನು ಒಂದು ಸಮಂಜಸವಾದ ಕ್ರಮದಲ್ಲಿ ಜೋಡಿಸಿ, ಅರ್ಥ ಸುಲಭವಾಗುವಂತೆ ಅಣಿಮಾಡಿಕೊಟ್ಟಿದ್ದಾರೆ, ಮತ್ತು ಪ್ರಕರಣ ವಿಭಾಗಮಾಡಿ ಶೀರ್ಷಿಕೆಗಳನ್ನು ಬರೆದು ಸಾಂಗೋಪಾಂಗವಾಗಿ ಮುದ್ರಣಕ್ಕೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಅರ್ಥಕೋಶವನ್ನೂ ಕರಂಡಗಳನ್ನು ಕುರಿತ ಅನುಬಂಧವನ್ನೂ ರಚಿಸಿಕೊಟ್ಟಿದ್ದಾರೆ. ಈ ಚಿರಂಜೀವಿಯ ಕೆಲಸವನ್ನು ಪೂರ್ತಿಯಾಗಿ ವಿವರಿಸುವುದು ಸಾಧ್ಯವಲ್ಲದ ಕೆಲಸ.

ಶ್ರೀ ಚಿದಂಬರಂ ಅವರ ಶ್ರದ್ಧೆ ಉತ್ಸಾಹ ಕಾರ್ಯಪಟುತ್ವಗಳನ್ನು ಈಗ ಕನ್ನಡ ದೇಶವೆಲ್ಲ ಬಲ್ಲದು.

ಈ ಗ್ರಂಥಕ್ಕೆ ಕೆಲವು ಚಿತ್ರಗಳನ್ನು ಬರೆದುಕೊಟ್ಟ ಕಲಾನಿಪುಣರು ಶ್ರೀ ಟಿ.ಕೆ. ರಾವ್‍ ಅವರನ್ನು ಮನಸಾರ ವಂದಿಸುತ್ತೇನೆ. ಇತರ ಚಿತ್ರಗಳನ್ನು ಒದಗಿಸಿಕೊಟ್ಟ ಸ್ನೇಹಿತರಿಗೂ ನನ್ನ ವಂದನೆ.

ಭಸ್ಮಕರಂಡದ ಚಿತ್ರಗಳಿಗಾಗಿ ಈ ಕೆಳಗಿನ ಮಹಾಶಯರಿಗೆ ನಾನು ಋಣಿಯಾಗಿದ್ದೇನೆ:

(1) Keats-Shelley Memorial Association, London, —ಈ ಸಂಸ್ಥೆಯ ಅಧಿಕಾರಿಗಳು;

(2) Keats-Shelley Memorial House, Rome —ಈ ಸಂಸ್ಥೆಯ ಅಧಿಕಾರಿಗಳು;

(3) ಲಂಡನ್ನಿನ Observer ವಾರಪತ್ರಿಕೆಯ ಸಂಪಾದಕರು, ಈ ಪತ್ರಿಕೆಯ ಫೆಬ್ರುವರಿ ೨೮, ೧೯೬೫ರ ಸಂಚಿಕೆಯಲ್ಲಿ Keats ಭಸ್ಮಕರಂಡವನ್ನು ಕುರಿತು Noel Machin ಅವರು ಸಚಿತ್ರ ಲೇಖನ ಬರೆದಿದ್ದಾರೆ.

ಈ ಸಂಸ್ಥೆಗಳ ಆದರಣೆ ಔದಾರ್ಯಗಳು ಸ್ಮರಣೀಯವಾಗಿವೆ. ಜಗದೀಶ್ವರನ ಕೃಪೆ ಈ ಎಲ್ಲ ಉಪಕಾರಿಗಳಿಗೂ ನಿರಂತರವಾಗಿ ಲಭಿಸಲಿ.

ಸರ್ವಂ ಶಿವಂ
ಬೆಂಗಳೂರು, ಅಕ್ಟೋಬರ್‍ ೧೯೭೦
ಡಿ.ವಿ.ಜಿ.

Saturday 9 March 2024

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

(ಗೋಖಲೆಯವರ ದೇಶಸೇವಕ ಸಂಘದ ನಿಬಂಧನೆಗಳಿಂದ)

ಎನ್ನಯ ಮಾನಸ ಭವನದೊ– ।
ಳುನ್ನತ ವೇದಿಯಲಿ ದೇಶಮಾತೆಯನಿರಿಸು– ।
ತ್ತೆನ್ನಯ ಸರ್ವಸ್ವಮನಾ ।
ಪುಣ್ಯೋರ್ವೀದೇವಿಯಂಘ್ರಿಗರ್ಪಿಸಿ ಮಣಿವೆಂ ॥ ೧

ಭಾರತರೊಳ್‍ ವಂಶಮತಾ– ।
ಚಾರಂ ನೂರಿರೆಯುಮವರದೊಂದೆ ಕುಟುಂಬಂ ॥
ಬೇರೆಣಿಕೆಗಳವರೆಡೆಯೊಳ್‍ ।
ತೋರದವೊಲ್‍ ಸೋದರೈಕ್ಯಮಂ ನೆಲೆವಡಿಪೆಂ ॥ ೨

ಕಲಹಿಸೆನಾರೊಳಮ್‍ ಅರ್ಥದ ।
ಕಲುಷಂಗಳ ದೂರವಿಟ್ಟು ಧೀರಸ್ಮೃತಿಯಂ ॥
ತಳೆದುರದೊಳವರ ಚರಿತೆಯ ।
ಬೆಳಕಿಂದಾಂ ನಡೆದು ಬಾಳ ನೋಂಪಿಯ ಮಾಳ್ಪೆಂ ॥ ೩

ರಾಜಕಟಾಕ್ಷ ಮನುಂ ಜನ– ।
ತಾಜಲ್ಪಶ್ಲಾಘನೆಗಳನುಂ ಗಣಿಸದೆ ನಾಂ ॥
ಭೂಜನನಿಯನೊಮ್ಮನದಿಂ ।
ಪೂಜಿಸುವೆಂ ಸತ್ಯಧರ್ಮಸಂಯಮವಿಧಿಯಿಂ ॥ ೪

ಜನಪದಸೇವೆಯೆ ದೈವಾ ।
ರ್ಚನೆಯದು ನಮಗಾತ್ಮಭಾವವಿಸ್ತಾರನಯಂ ॥
ಅನುಗೊಳುವೆಂ ರಾಷ್ಟ್ರಿಕ ಜೀ– ।
ವನ ಕಾರ್ಯಂಗಳ್ಗೆ ದೀಕ್ಷಿತೋಚಿತ ಮತಿಯಿಂ ॥ ೫

ಮಾನವ ಸಂಸ್ಕಾರಕ ಧ ।
ರ್ಮಾನುವ್ರತಮಕ್ಕೆ ಸಾರ್ವಜನಿಕ ವಿಚಾರಂ ॥
ಜ್ಞಾನಿಯಿನಕ್ಕುಂ ಶುಭ ಸಂ– ।
ಧಾನಂ ರಾಜ್ಯಾದಿಲೌಕಿಕ ವ್ಯವಹೃತಿಯೊಳ್‍ ॥ ೬

Friday 8 March 2024

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ


ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥

ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್‍ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್‍ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥

Thursday 7 March 2024

ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ














ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ

ಇಂದ್ರಿಯಂಗಳ ಜಯಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ರೋಷವ ವರ್ಜಿಸಿ ।
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥

ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥

Wednesday 6 March 2024

ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ

ಮೋಕ್ಷಗುಂಡಂ ವಿಶ್ವೇಶ್ವರಯ್ಯ  - ವಸಂತ ಕುಸುಮಾಂಜಲಿ - ಡಿವಿಜಿ

ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥

ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ‍್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥

ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥

Tuesday 5 March 2024

‍ಜಗದೀಶ ಚಂದ್ರ ಬೋಸ್‍ - ವಸಂತ ಕುಸುಮಾಂಜಲಿ - ಡಿವಿಜಿ

‍ಜಗದೀಶ ಚಂದ್ರ ಬೋಸ್‍  - ವಸಂತ ಕುಸುಮಾಂಜಲಿ - ಡಿವಿಜಿ




ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ 
ಲೋಕದೊಳ್‍ ವಿಸ್ತರಿಪ ಕುವರನೆನಿಸಿ । 
ಕಪಿಲ ಕಾಣಾದಾದಿ ಸದಸದ್ವಿಚಾರಕರ 
ಕುಲದ ಕೀರ್ತಿಗೆ ರನ್ನಗಲಶವೆನಿಸಿ । 
ನರನವೊಲೆ ತರುಗಳುಂ ಸುಖದುಃಖಗಳನರಿವ 
ಪರಿಯ ತೋರುವ ಯಂತ್ರಚಯವ ರಚಿಸಿ । 
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ 
ಮರ್ಮವಂ ಲೋಚನಕೆ ವಿಷಯಮೆನಿಸಿ ॥ 

ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ । 
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ । 
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ । 
ಮೆರೆವನೀ ಜಗದೀಶನಾರ್ಯಕುಲತೋಷಂ ॥ 

ಪರತತ್ತ್ವವನರಿವೊಡೆಯುಂ । 
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥ 
ಅರಿಭೀತಿಯ ಕಳೆವೊಡೆಯುಂ । 
ತಿರೆಯೊಳ್‍ ವಿಜ್ಞಾನಮೊಂದೆ ಸಾಧನಮಲ್ತೇ ॥ 

ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– । 
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥ 
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್‍ ಶುಭಂಬೊಂದಲೆಂ– । 
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥

Monday 4 March 2024

ರವೀಂದ್ರನಾಥ ಠಾಕೂರ್‍ - ವಸಂತ ಕುಸುಮಾಂಜಲಿ - ಡಿವಿಜಿ

ರವೀಂದ್ರನಾಥ ಠಾಕೂರ್‍  - ವಸಂತ ಕುಸುಮಾಂಜಲಿ - ಡಿವಿಜಿ




































ರವಿಯರಿಯದ ಮರ್ಮಗಳಂ । 
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥ 
ರವಿ ಬೆಳಗೆ ಬಾಹ್ಯಲೋಕವ । 
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥ 

ಋಷಿಬಲಮಿಲ್ಲದವಂ ಕವಿ । 
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥ 
ಋಷಿಹೃದ್ಗತ ಚಿನ್ಮೂರ್ತಿಯ । 
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥ 

ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ । 
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥ 
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್‍ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥ 

ಜೀವಲೋಕದೊಳಳ್ತಿಯಿಂ ಸಮ । 
ಭಾವದಿಂದಲಿ ವರ್ತಿಸುತ ಪರ । 
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥ 

ಸಾವಧಾನದಿ ವರ್ಣಿಸುತಲದ । 
ತೀವಿದಾನಂದದಲಿ ತನ್ನೊಳು । 
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥ 

ತಾನೆ ಜಗಂಗಳ ಕಲ್ಪಿಸುತುಂ ಸ್ವಾ । 
ಧೀನತೆಯೊಳ್ಮುದಮೊಂದುತಲೆಂದುಂ ॥ 
ಜ್ಞಾನಧನಂ ಕವಿ ಧೀರನುದಾರಂ । 
ಮಾನಸರಾಜ್ಯಕೆ ರಾಜನೆನಿಪ್ಪಂ ॥

Sunday 3 March 2024

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ
 


ತಾಮಸಾವೃತರಾಗಿ ನಿಜಜನರ್‍ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್‍ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್‍ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥

ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ ॥

Saturday 2 March 2024

ಗೋಪಾಲ ಕೃಷ್ಣ ಗೋಖಲೆ - ವಸಂತ ಕುಸುಮಾಂಜಲಿ - ಡಿವಿಜಿ

ಗೋಪಾಲ ಕೃಷ್ಣ ಗೋಖಲೆ  - ವಸಂತ ಕುಸುಮಾಂಜಲಿ - ಡಿವಿಜಿ














ವರಗುಣಭೂಷಿತನೀತಂ । 
ಪರಹಿತದೊಳೆ ತನ್ನ ಹಿತವ ಕಂಡವನೀತಂ ॥ 
ಗುರುವೀತಂ ನಮಗೆಂಬುದ । 
ಮರೆವುದೆ, ಹಾ ವಿಧಿಯೆ, ನೀನದೇಂ ನಿರ್ದಯನೋ ॥ 

ಧೀರಾಗ್ರಣಿಯಹ ಸುತನಂ । 
ಬೇರೊಂದಂ ಬೇಡದಿರ್ದ ಭಕ್ತಾಗ್ರಣಿಯಂ । 
ಕ್ರೂರಿಯಮಂ ಕರೆದೊಯ್ದಿರೆ । 
ಭಾರತಭೂಮಾತೆಯೆಂತು ಸೈಸುವಳಕಟಾ ॥ 

ಮನ್ನಣೆಯಂ ಸ್ವಾತಂತ್ರ್ಯಮ– । 
ನುನ್ನತಿಯಂ ಭ್ರಾತೃಭಾಮವಂ ವಿದ್ಯೆಯುಮಂ ॥ 
ನಿನ್ನವರೊಳ್‍ ನೆಲೆಗೊಳಿಪಾ । 
ಜನ್ನದ ದೀಕ್ಷೆಯನು ಬಿಟ್ಟು ಪೋದೆಯ, ಸಖನೇ ॥ 

ತ್ಯಜಿಸಿದೊಡಂ ನಿಜತನುವಂ । 
ಸುಜನರ್‍ ಸತ್ಕೀರ್ತಿಕಾಯರಾಗಿರ್ಪುದರಿಂ ॥ 
ನಿಜರೂಪಮದಿಲ್ಲದೊಡಂ । 
ನಿಜಯಶದಿಂ ಬಾಳ್ವನಲ್ತೆ ಗೋಖಲೆಯೆಂದುಂ ॥ 

ದಿನಮಣಿಯಸ್ತಮಿಸಿದೊಡಂ । 
ಪುನರುದಯವನೊಂದಿ ಲೋಕಮಂ ಬೆಳಗುವವೊಲ್‍ ॥ 
ಘನನಹ ಗೋಖಲೆಯುಂ ತಾಂ । 
ಪುನರುದಯವನೊಂದಿ ಬಾರದಿರ್ಪನೆ ನಮ್ಮೊಳ್‍ ॥

Friday 1 March 2024

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ಪುಣ್ಯಭೂಮಿಯೆ, ನಿನ್ನ ಪುಣ್ಯಗಂಧವನಖಿಲ
ಭುವನದೊಳ್‍ ಪಸರಿಸುತ ನಲಿವುದೆಂದು ।
ಆರ್ಯಕುಲಜರೆ, ನಿಮ್ಮ ನಿಜಧರ್ಮದೀಪಮಂ
ಮರಳಿ ಬೆಳಗಿಸಿ ಗುರುತೆವಡೆವುದೆಂದು ।
ವೇದಜನನಿಯೆ, ನಿನ್ನ ದಿವ್ಯಗಾನವ ಕೇಳೆ ।
ಜಗವೆಲ್ಲ ತಲೆವಾಗಿ ಬರುವುದೆಂದು ।
ವೇದಾಂತಕೇಸರಿಯೆ, ನಿದ್ರೆಯಂ ತೊರೆದು ನೀಂ
ಗುಹೆಯಿಂದ ಪೊರಮಟ್ಟು ಮೆರೆವುದೆಂದು 

ಇಂತು ನಿಜಜನಪದವನೆಳ್ಚರಂಗೊಳಿಸುತನಿಶಂ ।
ಭರತಮಾತೆಯ ಜೈತ್ರಯಾತ್ರೆಯೊಳ್‍ ಪ್ರಮುಖನೆನಿಸಿ ।
ವಿಬುಧವಂದಿತನಾಗಿ ಲೋಕಸಂಮಾನ್ಯನಾಗಿ ।
ಶ್ರೀ ವಿವೇಕಾನಂದನೆಸೆದನಂದು ॥