Tuesday 21 November 2023

ಚೋದ್ಯ - ಕೇತಕೀವನ - ಡಿವಿಜಿ

ಹಾಡಿನೊಳಗಿಂಪಿಹುದು; 
ಮೋಡದೊಳು ತಂಪಿಹುದು 
ಆದೊಡಿದು ಚೋದ್ಯಂ. 

ಹಾಡು ಬರುವುದು ತುಟಿಗೆ 
ತುಟಿ ದೊರೆಯದಂದು 
ಮೋಡ ಸುರಿವುದು 
ಧರೆಗೆ ದಿವ ಕರಗುವಂದು 
ಭೇದವಿದು ಹೃದ್ಯಂ.

************************

ಕವಿಸೃಷ್ಟಿಯಾದ ಕಾವ್ಯದೊಳಗೆ ಇಂಪು ಹುದುಗಿರುತ್ತದೆ. ಗಾಯಕನ ಕಂಠದಿಂದ ಹಾಡಾಗಿ ಹೊರಹೊಮ್ಮಿದಾಗ ಕಾವ್ಯದೊಳಗಿನ ಇಂಪು ಕೇಳುಗನಿಗೆ ಅನುಭವವೇದ್ಯ! 
 ವರುಣನ ಕೃಪೆಯಿಂದ ಗಗನವೇರಿದ ಮೋಡದೊಳಗೆ ತಂಪಿದೆ ಎಂಬುದು ಯಾರಿಗೂ ಅನುಭವವಾಗದು. 

ಆಗಸದ ಮೋಡವು ಕರಗಿ ಮಳೆಯಾಗಿ ಭೂಮಿಯನು ಸ್ಪರ್ಶಿಸಿದಾಗ ಮೋಡದೊಳಗಿನ ತಂಪಿನ ಸಾಕ್ಷಾತ್ಕಾರವಾಗುತ್ತದೆ.  ಇದು ಸೋಜಿಗವಲ್ಲವೇ! 

ತುಟಿಗಳ ಸಂಸ್ಪರ್ಶದಿಂದ ಹಾಡು ಜೀವಚೈತನ್ಯದ ಸೃಷ್ಟಿಯಾಗುತ್ತದೆ. ಇಂಪಿನ ಅನುಭವ ಸಾಕ್ಷಾತ್ಕಾರವಾಗುತ್ತದೆ.

ಮಂತ್ರಕ್ಕೆ ಮಾವು ಉದುರುವುದಿಲ್ಲ. ಹಾಡುವುದರಿಂದ ಮೋಡ ಕರಗಿ ಮಳೆಯಾಗಿ ಧರೆಯನ್ನು ತಂಪಾಗಿಸುವುದಿಲ್ಲ. ಮೋಡವು ಮಳೆಯಾಗುವ ಬಗೆಗೆ ಅದೆಷ್ಟು ಬಣ್ಣಿಸಿದರೂ,     ಮಳೆಯಾಗಿ ಸುರಿಯಲಾರದು. ಮೋಡವು ಮಿಂಚಿನ ಸಂಸ್ಪರ್ಷದಿಂದ ಮಳೆಯಾಗಿ ಸುರಿಯುವುದು. ತುಟಿಮೀರಿದ  ಅನುಭವದಿಂದ ದಿವ ಕರಗಿ ಧರೆಗೆ ಸುರಿಯುವುದು‌.
 
ಇನಿಯ ಇನಿಯೆಯರ ಮಾತುಮೀರಿದ ದಿವ್ಯ  ಸಂಸ್ಪರ್ಶದಿಂದ ಮೋಡ ಕರಗುವುದು. ಮಳೆಯು ಸುರಿಯುವುದು. ಅನುಭವೈಕಗೋಚರದಿಂದ ಚೈತನ್ಯವೊಂದರ ಸೃಷ್ಟಿಯಾಗುವುದು ಕೌತುಕವಲ್ಲವೇ! 
ಮೋಡ ಕರಗಿ ಮಳೆಯಾಗಿ ಸುರಿಯುವುದು ದೈವಕೃಪೆ!
 
ದೈವಸಂಬಂಧದ ಕೃಪೆಯಾಗಿ ಮಾತಿಗೆ ಮೀರಿದ ಜೀವಸೃಷ್ಟಿಯೂ ಕೌತುಕವಲ್ಲವೇ!            

ಮಳೆ ಸುರಿಯುವ ನಿಸರ್ಗದ ಪ್ರತಿಮೆಯಿಂದ ಜೀವಸೃಷ್ಟಿಯ  ಕೌತುಕವನ್ನು ಡಿವಿಜಿಯವರು ಅದ್ಭುತವಾಗಿ  ಕಟ್ಟಿಕೊಟ್ಟಿದ್ದಾರೆ. ಕವಿಯ ಕಾವ್ಯಸೃಷ್ಟಿ, ಇಳೆಗೆ ಮಳೆ ಹಾಗೂ ಜೀವಸೃಷ್ಟಿಗಳ ಹಿಂದೆ ದೈವಕೃಪೆಯನ್ನು ಕವಿತೆಯು ಧ್ವನಿಸಿದೆ
     
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment