Thursday 2 November 2023

ಕಲ್ಯಾಣಮುನಿಯ ಪಶ್ಚಾತ್ತಾಪ - ಕೇತಕೀವನ - ಡಿವಿಜಿ

ಪುಣ್ಯದೇಶವ ತೊರೆದು ಧನ್ಯಚರಿತೆಯ ಮರೆತು
ದೂರ ಬಂದೆ
ವೇದಬಾಹಿರನಾಗಿ ಸಾಧುವರ್ಜಿತನಾಗಿ
ಜಾರಿ ನಿಂದೆ

ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್‍

ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ

ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.

No comments:

Post a Comment