Thursday 16 November 2023

ನರ-ಹರಿ - ಕೇತಕೀವನ - ಡಿವಿಜಿ

ನರಗೆರಡು ವರಗಳನು 
ಕರುಣಿಸಿಹನೀಶ್ವರನು; 
ಕೊರಗುವೆದೆಯೊಂದು, 
ಒರೆವ ಬಾಯೊಂದು- 
ಎಡೆಬಿಡದ ಕೊರಗು, 
ಸುಡುನುಡಿಯ ಬುರುಗು. 

ಈ ವರಗಳುಳಿದಾವ 
ಜೀವಿಗಣಕುಮಭಾವ. 
ಎಂಥ ವರದ ಹೊರೆ! 
ಅಂತದಾಗದಿರೆ, 
ಹರಿಯ ಹೆಸರನದಾರು 
ಧರೆಯೊಳೆತ್ತ್ಯಾರು? 
ನರನಾರ್ತಭಾಷೆ

**************

ಪರಮಕರುಣಾಳುವಾದ ಜಗದೀಶ್ವರನು ಮನುಷ್ಯನಿಗೆ ಅನನ್ಯವಾದ ಎರಡುವರಗಳನ್ನು ನೀಡಿರುವನು. ಕೊರಗುವ ಹೃದಯವನ್ನೂ ನೀಡಿದನು. ಜೊತೆಗೆ ಮಾತನಾಡುವ ನಾಲಿಗೆಯುಳ್ಳ ಬಾಯನ್ನೂ ನೀಡಿದನು. ಕೊರಗು ಎಂದರೆ ಚಿಂತೆ, ಚಿಂತನೆ, ಕೊರತೆಯಬಗೆಗೇ ಮನದಂಗಳವನ್ನು ಕೊರೆಯುವಂತೆ ದುಃಖಿಸುವುದು.

   ಶ್ರೀಹರಿಯು  ತನ್ನ ಸಂರಕ್ಷಣೆಗಾಗಿ ನೀಡಿದ ವರವನ್ನು ಅರ್ಥ ಮಾಡಿಕೊಳ್ಳುವಲ್ಲಿ  ಈ ನರನು ಸೋತವನಾಗಿ ವರವನ್ನು ಶಾಪವೋ ಎಂಬಂತೆ ಅವರಿವರೊಡನೆ ತನ್ನನ್ನು ಹೋಲಿಸಿಕೊಂಡು  'ಇಲ್ಲ ಇಲ್ಲ' ಎಂದು ತನ್ನ ಮನಸ್ಸನ್ನು ಇಲ್ಲದ ಸಂತೆಯೊಳಗೆ ತಳ್ಳಿ ಸದಾ ಚಿಂತೆಯಲ್ಲೇ ಮುಳುಗಿ ಕಾಲಹರಣಮಾಡುತ್ತಾನೆ. ಚಿಂತೆಯು  ಚಿತೆಗಿಂತ ಬಲುಘೋರ!  ಚಿಂತೆಯಕುಲುಮೆಯೊಳಗೆ ಬೇಯುತ್ತಿರುವ ಈ ನರನು 'ನರಹರಿ'ಯನ್ನು ಅರಿಯುವಲ್ಲಿ ಎಡವಿದವನಾಗಿ ದೇವನನ್ನು ಪ್ರಾರ್ಥಿಸುವ ಬದಲಾಗಿ    ತನ್ನ ನರನಾಡಿಗಳು ಹರಿದುಹೋಗುವಂತೆ ಭಗವಂತನ್ನೇ  ಸುಡುನುಡಿಗಳಿಂದ ನಿಂದಿಸತೊಡಗುತ್ತಾನೆ. ಬೇರೆಯ ಜೀವಿಗಳಿಗಿಲ್ಲದ ಅಮೂಲ್ಯವಾದ ಚಿಂತನೆಯಿಂದ ಸರಿಯಾದ ದಾರಿಯನ್ನು ಕಂಡುಕೊಳ್ಳುವುದನ್ನು ಮಾಡದೆ ಎಲ್ಲರನ್ನೂ ನಿಂದಿಸುತ್ತಾನೆ.  ಪ್ರಾಣ ಸಂಕಟದ ಕ್ಷಣಗಳಲ್ಲೂ ಶ್ರೀಹರಿಯ ಧ್ಯಾನವನ್ನೇ ಉಸಿರಾಗುಳ್ಳ  ಭಕ್ತ ಪ್ರಹಲ್ಲಾದನನ್ನು ಮತ್ತು ಅವನನ್ನು ಸಂರಕ್ಷಿಸಿದ ಶ್ರೀವಿಷ್ಣುವಿನ ಮಹಿಮೆಯನ್ನರಿಯದೆ, ದೇವನನ್ನು ಮತ್ತು ಭಕ್ತನನ್ನು ಇಬ್ಬರನ್ನೂ ನಿಂದಿಸುತ್ತಾ ಅಮೂಲ್ಯವಾದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆ. ಕಾಮಕ್ರೋಧಗಳನ್ನು ಬಿಡದೆ ಕೊರಗಿನಿಂದ ಸುಡುನುಡಿಯ ಬುರುಗಿನಿಂದ ತನ್ನ  ಜೀವನಸೌಧಕ್ಕೆ ತಾನೇ ಕೊಳ್ಳಿಯಿಡುವುದನ್ನು ಅರಿಯದೆ ಕಂಗೆಡುತ್ತಿದ್ದಾನೆ‌.

   ಬೇರಾವ ಜೀವಿಗಳಿಗೂ ನೀಡದ ಅಮೂಲ್ಯವಾದ ವಿವೇಕ, ಚಿಂತನಶೀಲಬುದ್ಧಿ ಹಾಗೂ  ಮಾತನಾಡುವ ಅನನ್ಯ ಶಕ್ತಿಯನಾಲಿಗೆಯನ್ನು  ನಾರಾಯಣನು ನರನಿಗೆ ಕರುಣಿಸಿದ್ದಾನೆ. ಇನ್ನುಳಿದ ಚರಾಚರಗಳಿಗೆ ಈ ವರವನ್ನು ನರಹರಿಯು ಕರುಣಿಸಿಲ್ಲ.
ಆದರೆ ವರಗಳನ್ನೇ ಹೊರೆಯೆಂಬಂತೆ ಈ ಹುಲುಮಾನವನು ಹರಿಯನ್ನೇ ದೂಷಿಸುವಂತೆ ಬಡಬಡಿಸವನೇ! ನಿಂದಿಸುವನೇ?
 
   ದೇವನು ಕರುಣಿಸಿದ ವರಗಳನ್ನು ಅರಿತಿದ್ದರೆ   ಮನುಷ್ಯರು ಸಂಕಟದ ಸಮಯದಲ್ಲಾದರೂ ಭಗವಂತನನ್ನು ಭಕ್ತಿಯಿಂದ ಮೊರೆಯಿಟ್ಟು ಕೂಗಿಕರೆಯುತ್ತಿದ್ದನು!? 
ಕಡುಸಂಕಟದ ಸಮಯದಲ್ಲಿ ನರನು ನಾರಾಯಣನನ್ನು ಆರ್ತನಾದದಿಂದ ಕೂಗಿಕರೆಯುತ್ತಾನೆ. ಭಕ್ತಪ್ರಹಲ್ಲಾದ, ದ್ರೌಪದಿ, ಮೊಸಳೆಯ ಹಲ್ಲುಗಳಲ್ಲಿ ಬಂದಿಯಾದ ಗಜೇಂದ್ರನಂತೆ ಸಂಕಟದ ಕ್ಷಣಗಳಲ್ಲದರೂ ಏಕೋಭಕ್ತಿಯಿಂದ ಕೂಗಿಕರೆಯುವ ನರನ್ನು ನರಹರಿಯು ಕೈವಿಡಿದು ಸಂರಕ್ಷಿಸುತ್ತಾನೆ. 

 ಕೊರಗದೆ ನಾರಾಯಣನನ್ನು ನಿರಂತರ ಧ್ಯಾನಿಸೋಣ! 
ಚಿಂತೆ ಬೇಡ, ಚಿಂತನೆಯಿರಲಿ! ಚಿಂತನೆಯ ಬೆಳಕಿನಲ್ಲಿ  ನಾಲಿಗೆಯ ಮಾತುಗಳು ಬೆಳಗುತ್ತಿರಲಿ ಎಂಬುದು ಡಿ.ವಿ.ಜಿ.ಯವರ ಆಶಯ
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment