Wednesday 1 November 2023

ಒಬ್ಬ ತರುಣ ಕವಿಗೆ - ಕೇತಕೀವನ - ಡಿವಿಜಿ

(ಆತನ ಮದುವೆಯ ಸಂದರ್ಭದಲ್ಲಿ)

ಸಿರಿವಂತ ತರುಣ ಕವಿ ಮದುವಣಿಗ ಕೇಳಿದನು,
ಸಿರಿಸೊಂಪದೊಂದುಮಿಲ್ಲದ ಗುಂಡು ರಗಳೆಯನು-

ಗೆಳೆಯ, ನೀಂ ಸ್ವೀಕರಿಪುದೆನ್ನ ಅಭಿನಂದನೆಯ
ನಿನ್ನಯಾಹ್ವಾನವೆನ್ನಯ ಹಸ್ತಚಿತ್ತಗಳ
ಮುಟ್ಟಿಹುದು; ಸಂತಸಂಬಟ್ಟು ನಾಂ ವಂದಿಪೆನು.

ಪರಿಶೆಯ ವಿಶೇಷ ಸಾಹಿತ್ಯೋತ್ಸವದ ದುಡಿತ-
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಾಯ್ತಾಗ.

ನೀನೀಗಳಾನುಮೀ ಹರಕೆಯನು ಕೊಳ್ಳುವೆಯ?
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು,
ಅದರ ತಳಿರಲರುಗಳ ಸವಿ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ.
ಅದರ ಮೆಲ್ಲುಲಿಯ ನಸುನಗೆಯ ಸೆಲೆಸೊಲ್ಲುಗಳು

ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ತಂದಿಡಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರ್ಮಗಳ
ಕಾಣುತ್ತೆ ಕೇಳುತ್ತೆ ಪೇಳುತ್ತಲಿಹುದೆಮಗೆ
ಆಲಿಸುತೆ ಬಾಳೊಳ್ಳಿತೆನುತೆ ನಾಂ ನಲಿಯುವೆವು.
ನಿನ್ನ ಕೊಳಲೊಡನೆ ಕೊರಲಿನ್ನೊಂದು ಸೇರಿಹುದು
ಅಂತಿನ್ನು ಹೊಸ ರಾಗದಿಂಬೊಂದು ಹೊಮ್ಮುವುದು
ಅದು ನಮ್ಮ ಕನ್ನಡದ ಬಾಳನ್ನು ತಣಿಸುವುದು.

No comments:

Post a Comment