Thursday 21 December 2023

ಕಟ್ಟೆದಾಟು (Tennyson’ s “Crossing the Bar") - ಕೇತಕೀವನ - ಡಿವಿಜಿ

ರವಿಯಸ್ತಮಯ ಶುಕ್ರನುದಯ ಜೊತೆಗೂಡಿರಲು
ಸ್ಫುಟದಿ ಕರೆಯೆನಗೆ ಬರಲಿ;
ಕಡಲೊಳೆನ್ನಯ ಹಡಗನಾಗ ನಾಂ ತೇಲ್ಬಿಡಲು
ಕಟ್ಟೆಯೆಡೆ ಮುಲುಗದಿರಲಿ.

ಪಾರವಿಲ್ಲದ ಕಡಲಿನಿಂದುಕ್ಕಿ ಬಂದ ನೆರೆ
ತನ್ನೆಡೆಗೆ ಮರಳಿ ಸಾರ್ಗುಂ;
ನೊರೆಮೊರೆತಗಳಿಗೆಡೆಯ ಬಿಡದಷ್ಟು ತುಂಬುನೆರೆ
ಭರದಿ ನಿದ್ರೆಯನು ಪೋಲ್ಗುಂ.

ಸಂಜೆ ಬೆಳಕಾಗ; ದೇಗುಲದಿ ಘಂಟೆಯ ಮೊಳಗು;
ಆ ಬಳಿಕ ಕತ್ತಲಿರುಳು;
ಕೇಳ ಬರದಿರಲೆನಗೆ, ನಾಂ ಪೊರಮಡುವ ಘಳಿಗೆ,
ಬೀಳ್ಕೊಟ್ಟು ಕಳುಹುವಳಲು.

ಸ್ಥಲ ಕಾಲಗಳ ನಮ್ಮ ದಡದಿಂದ ನೆರೆಯೆನ್ನ
ಬಲು ದೂರಕೊಯ್ಯಬಹುದು;
ಕಟ್ಟೆಯನು ದಾಟಿ ನಾನೆಮ್ಮ ನೌನಾಯಕನ
ಸಮ್ಮುದಿ ನಿಲ್ಲಲಹುದು.

********************************

Sunset and evening star,
      And one clear call for me!
And may there be no moaning of the bar,
      When I put out to sea,

   But such a tide as moving seems asleep,
      Too full for sound and foam,
When that which drew from out the boundless deep
      Turns again home.

   Twilight and evening bell,
      And after that the dark!
And may there be no sadness of farewell,
      When I embark;

   For tho' from out our bourne of Time and Place
      The flood may bear me far,
I hope to see my Pilot face to face
      When I have crost the bar.

*****************************
(ಆಲ್ಫ್ರೆಡ್ ಲಾರ್ಡ್ ಟೆನಿಸನ್ ಅವರ 'ಕ್ರಾಸಿಂಗ್ ದಿ ಬಾರ್' ಆಂಗ್ಲ ಕವನದ ಅನುವಾದ) 
ಕವಿ ಟೆನಿಸನ್ ಜನನ: ೧೮೦೯
ಕವನ ರಚನೆ: ೧೮೮೯
ಕವಿ ಟೆನಿಸನ್ ನಿಧನ: ೧೮೯೨
~~~~~~~~~~~~~
ಆಂಗ್ಲಕವಿ ಆಲ್ಫ್ರೆಡ್ ಟೆನಿಸನ್ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮುಂಗಾಣ್ಕೆಯ ಮರಣವನ್ನು  ನಿರಾಕರಿಸದೆ, ಸಮಾಧಾನದ ಚಿತ್ತದಿಂದ   ಪಯಣದ ಹಡಗಿನ ಪಯಣಿಗನಾಗಿ ಭರವಸೆಯಿಂದ ಸ್ವಾಗತಿಸುತ್ತಾರೆ.

ಸೂರ್ಯನು ಅಸ್ತಮಿಸುವ ಇಳಿಸಂಜೆಯ ಕಾಲ ಸಮೀಪಿಸಿದೆ. ಸೂರ್ಯನು ಮುಳುಗಿದ ಮೇಲೆ ಎಲ್ಲೆಡೆ ಕತ್ತಲಾವರಿಸುತ್ತದೆ. ಆದರೆ, ರವಿಯು ಅಸ್ತಮಿಸುವ ಸಮಯದಲ್ಲಿ ಆಗಸದಲ್ಲಿ ಬೆಳ್ಳಿಚಿಕ್ಕೆಯಾಗಿ ಶುಕ್ರನ ಉದಯವಾಗುತ್ತದೆ. ಕತ್ತಲಾವರಿಸು ಸಮಯ ಬೆಳಕಿನ ರೇಖೆಯೊಂದು ಆಕಾಶದಲ್ಲಿ ಮೂಡುತ್ತದೆ.

       ರವಿಯು ಅಸ್ತಮಿಸುವ ಸಮಯದಲ್ಲಿ ಬೆಳ್ಳಿ‌ಮೂಡುವ ಸಮಯದಲ್ಲಿ  ತನಗೆ ಹಡಗಿನ ಪಯಣಕ್ಕೆ ಕರೆಬರಲಿ ಎಂದು ಬಯಸುತ್ತಾರೆ. ಅಸ್ತಮಾನವು ಕವಿಯ ಇಳಿವಯಸ್ಸು ಹಾಗೂ ಬಾಳುವೆಯ ಅಂತಿಮಚರಣವನ್ನು ಸಂಕೇತಿಸುತ್ತದೆ.  ಹಡಗಿನ ಪಯಣದ ಕರೆಯು ಮರಣವನ್ನು ಸಂಕೇತಿಸುತ್ತದೆ. ಅನಿಶ್ಚಿತವಾದ ಬದುಕಿನಲ್ಲಿ  ಅನಿವಾರ್ಯವಾದ ಮರಣವು ಯಾವಾಗ ಬರುವುದೆಂದು ಮನುಷ್ಯನಿಗೆ ತಿಳಿದಿಲ್ಲ. ಆದರೆ, ನಿಶ್ಚಿತವಾಗಿ ಬರಲಿರುವ ಮರಣವನ್ನು ನಿರಾಕರಿಸದೆ, ಬೇಸರಿಸದೆ ಸಮಾಧಾನದ ಚಿತ್ತದಿಂದ ಸ್ವಾಗತಿಸಲು ಸಿದ್ಧನಾಗಿರಬೇಕೆಂದು ಸಂದೇಶ ನೀಡುತ್ತಾರೆ.

ವಿಷಾದವನ್ನೂ ಬೆಳ್ಳಿಯಂತಹ ಸಮಾಧಾನಚಿತ್ತದಿಂದ ಸ್ವೀಕರಿಸಬೇಕೆನ್ನುತ್ತಾರೆ‌.
ಬದುಕೆಂಬುದು ಪರಮಾತ್ಮನ‌ಲೀಲೆ. ಅವನ ಸನ್ನಿಧಿಗೆ  ನೌಕೆಯಲ್ಲಿ ಪಯಣಿಸುವುದು ಸಂತೋಷವೇ ವಿನಾ ವಿಷಾದವಲ್ಲ. ಪಯಣವು ಕಡಲಲ್ಲಿ ತೆರೆಗಳ ಏರಿಳಿತಗಳೊಡನೆ ತೊನೆದಾಡುತ್ತಾ ಸಾಗಬೇಕಿದೆ.  ರವಿಅಸ್ತಮಿಸುವ ವೇಳೆಗೆ ಶುಕ್ರನು ಬೆಳ್ಳಿಬೆಳಕಾಗಿ ಮಿನುಗಿದಾಗ  ಹಡಗನ್ನು ಕಡಲಲ್ಲಿ ತೇಲಿಬಿಡಲು ಕವಿ ಬಯಸುತ್ತಾರೆ. ವಿಷಾದವಿಲ್ಲದೆ, ಬೇಸರವಿಲ್ಲದೆ ಮಂದಹಾಸವನ್ನು ಬೀರುತ್ತಾ ಕಡೆಯಪಯಣವನ್ನು  ಬಯಸುತ್ತಾರೆ. ಮರಣವನ್ನು ನಿರಾಕರಿಸುವುದಿಲ್ಲ.  ಅನಿಶ್ಚಿತವಾದ ಬದುಕಿನಲ್ಲಿ ಅನಿವಾರ್ಯವಾದ ಮರಣವನ್ನು  ಸಮಾಧಾನಚಿತ್ತದಿಂದ ಮಂದಹಾಸದಿಂದ ಬರಮಾಡಿಕೊಳ್ಳಬೇಕೆಂದು ಕವಿಯ ಆಶಯ. ಜೀವನಪಯಣದ ಹಡಗನ್ನು ಕಟ್ಟೆಯಿಂದಾಚೆ ಕಳುಹುವಾಗ  ವೇದನೆಯೇಕೆ!  ವ್ಯಸನವೇಕೆ! ಪಯಣವು ಶುಭದಾಯಕವೆಂಬ  ಭರವಸೆಯ ಆಶಾಭಾವನೆ ಇರಬೇಕು.

  ಈ ಹಡಗು ಸಾಗುವ ಜೀವನವೆಂಬ‌ ಕಡಲಿನ ಆಳ ಪರಮಸೀಮೆಯನ್ನು ಕಂಡವರಿಲ್ಲ. ಆದರೆ ಕಡಲ ಮೇಲೆ ತೆರೆಗಳು ಅಬ್ಬರಿಸಿ ದೂರದಿಂದ ಬಂದು ಕಡಲತೀರದಲ್ಲಿ ನಿಂತ ಹಡಗಿನ ಕಟ್ಟೆಗೆ ಅಪ್ಪಳಿಸುತ್ತದೆ, ದೂರಸಾಗುತ್ತದೆ. ಮತ್ತೆಮತ್ತೆ ತೆರೆಗಳಬ್ಬರದ ಸುಯ್ಲು ಹಾರಾಡುತ್ತಲೇ ಇರುತ್ತದೆ. ಭೋರ್ಗರೆಯುತ್ತಾ ಬಂದಪ್ಪಳಿಸುವ ಹೆದ್ದರೆಗಳು ಬಂದಂತೆಯೇ  ಹಿಂತಿರುಗುತ್ತವೆ. ತೆರೆಯ ಏರಿಳಿತಗಳಿಗೆ ಕೊನೆಮೊದಲಿಲ್ಲ. ಎಡೆಬಿಡದ ನೆರೆಮೊರೆತಗಳಿಗೆ ಎಡೆಯಿಲ್ಲ, ತಡೆಯಿಲ್ಲ. ಜೀವನದಲ್ಲಿ ನಿರಂತರವಾಗಿ ಬರುವ ಏರಿಳಿತಗಳಿಗೆ ವಿರಾಮವಿಲ್ಲ.  ನೀರಸುಳಿಯ ಸುಳಿವಿನಕೇಂದ್ರವು ಆವೇಗದ ಮೌನನಿದ್ರೆಯಲ್ಲಿರುವಂತೆ, ಏರಿಳಿತಗಳ ಸುಳಿಯು ನಿದ್ರಿಸುವಂತೆ ಭಾಸವಾಗುತ್ತದೆ. ಜೀವನಸುಳಿಯಲ್ಲಿ ಅದೆಷ್ಟೋ ಜನರು ಸುಳಿಯೊಳು ಮುಳುಗುತ್ತಾರೆ.

     ಸಂಜೆಯ ವೇಳೆಗೆ ಸೂರ್ಯಮುಳುಗಿದ ಮೇಲೆ ಮನೆಮನೆಗಳಲ್ಲಿ, ಮಂದಿರಗಳಲ್ಲಿ ದೀಪಗಳು ಬೆಳಗುತ್ತವೆ. ಕತ್ತಲೆಯನ್ನು ದೂರಸರಿಸುತ್ತವೆ. ದೇವಮಂದಿರಗಳಲ್ಲಿ ಮೊಳಗುವ ಘಂಟೆಗಳ ಮಂಗಳಧ್ವನಿಯು  ಜನರನ್ನು ಭಗವಂತನ ಸನ್ನಿಧಿಗೆ ಕೂಗಿ ಕರೆಯುತ್ತವೆ.  ಗಂಟೆಗಳ ದನಿ ನಿಂತಮೇಲೆ ನೀರವ ಕಾರಿರುಳು! 

ಪಯಣಕ್ಕಾಗಿ ಹಡಗನ್ನೇರಿ ಸನ್ನದ್ಧನಾದ ಕವಿಗೆ ದೇಗುಲದ ಮಂಗಲಧ್ವನಿಯು ದೂರದ ಪಯಣದ ಕರೆಯಾಗಿ ಕೇಳಿಸುತ್ತದೆ. ಆದ್ದರಿಂದ ಈ ಗಂಟೆಗಳ ದನಿಮೂಡುವಲ್ಲಿಗೆ ಹೋಗಬಯಸುವುದಿಲ್ಲ. ತಾನು ಹೊರಡುವ ಸಮಯ ಸನ್ನಿಹಿತವಾಗಿದೆ.   ಬೀಳ್ಕೊಡಲು ಬರುವವರ ಅಳಲನ್ನು ಕವಿಯು ಕೇಳಬಯಸುವುದಿಲ್ಲ.  ಸಂಸಾರಿಕ ವ್ಯಾಮೋಹದಿಂದ ಬಿಡಲಾರೆ ಎಂಬ ದುಃಖ ಕಣ್ಣೀರು ವಿಷಾದ ಅಳಲುಗಳನ್ನು ಕವಿಯು ನಿರಾಕರಿಸುತ್ತಾರೆ. ತುಟಿಯಂಚಿನಲ್ಲಿ ಬೆಳ್ಳಿ ರೇಖೆಯಂತೆ ನಸುನಗುತ್ತಾ ಸಮಾಧಾನಚಿತ್ತದಿಂದ ಪಯಣಿಸಲು ಬಯಸುತ್ತಾರೆ.

             ಸಮುದ್ರದ ದಂಡೆಯಿಂದ ಕಟ್ಟೆದಾಟಿ ಅಂತಿಮ‌ಪಯಣವು ಆರಂಭವಾಗುವುದು. ಪಯಣ ಆರಂಭವಾಗುವ ನಿಗದಿಯಾದ ಸಮಯ ತಿಳಿದಿಲ್ಲ. ಢಣ್ ಎಂದು ಗಂಟೆ ಬಾರಿಸಿತೆಂದರೆ  ಹಡಗಿನ ನಾವಿಕನು ಹಡಗಿನ ಪಯಣಕ್ಕೆ ಚಾಲನೆ ನೀಡುವನು. ತಾನು ನಾವಿಕನ ಆಣತಿಯಂತೆ ಸಂತೋಷದಿಂದ ಅವನು ತೋರಿದ ದಾರಿಯಲ್ಲಿ ತಡಬಡಿಸದೆ ಸಮಾಧಾನಚಿತ್ತದಿಂದ ಆನಂದದಿಂದಲೇ ಪಯಣಿಸಬೇಕು. ಪಯಣವು ಅನಿವಾರ್ಯ. ಪಯಣದ ಕರೆಗಾಗಿ ಸಿದ್ಧರಾಗಿರುವುದು ಅನಿವಾರ್ಯ. 
ಕವಿಯು ಮರಣವನ್ನು ಸಮಾಧಾನಚಿತ್ತದಿಂದ ಸ್ವಾಗತಿಸುತ್ತಾ ೧೮೮೯ರಲ್ಲಿ ಕವನವನ್ನು ಬರೆದರು.೧೮೯೨ರಲ್ಲಿ ಅಂತಿಮಕರೆ ಬಂತು ಗೊಣಗಾಡದೆ ಸಮಾಧಾನಚಿತ್ತದಿಂದ ಅಂತಿಮ ಪಯಣದ ವಾಹನವನ್ನೇರಿದರು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment