Tuesday 5 December 2023

ಒಂದು ಪತ್ರಪ್ರಸಂಗ - ಕೇತಕೀವನ - ಡಿವಿಜಿ

I. ಕವಿ ಬೆನಕನಿಗೆ

ಗೆಳೆಯ,

ಅನ್ನ ಹಳಸುವುದುಂಟು; 
ಹಣ್ಣು ಕೊಳೆಯುವುದುಂಟು; 
ಕನ್ನೆ ಮುದಿಯಹುದುಂಟು; 
ಕೆಳೆಗೆ ಕುಂದುಂಟೆ? 
ಹೂವು ಬಾಡುವುದುಂಟು; 
ಮಾವು ಹುಳಿಯುವುದುಂಟು; 
ದೈವ ಮುಳಿವುದುಮುಂಟು; 
ಕೆಳಗೆ ಕುಂದುಂಟೆ? 

ಏನೊ ಹವ್ಯಾಸದಲಿ, 
ಏನೊ ಹಂಗರಣದಲಿ, 
ಏನೊ ಬೇಸರದಲ್ಲಿ, 
ಏನೊ ಬಳಲಿಕೆಯಲ್ಲಿ 
ಮರೆತುದುಂಟು, 
ಬರೆಯದಿದ್ದುದುಂಟು. 

ಎನಿತು ದಿನವಂತಿಹುದು- 
ನೆನಪೆನಿತು ನಿದ್ರಿಪುದು? 
ಎಚ್ಚರದೆ ನೆನಪು- 
ಚುಚ್ಚದೇ ಮನವ? 
ಇಂದೆನಗೆ ಹಾಗಾಯ್ತು, 
ಚೆಂದ ಮನಕಾಯ್ತು. 

ಹಳೆಯ ದಫ್ತರಗಳೊಳದೇನನೋ ಹುಡುಕುತಿರೆ, 
ಹೊಳೆಯಿತೊಂದೋಲೆ ನೀಂ ಬರೆದಿದ್ದುದೆನಗೆ 
ಏನೊಲವು ಬರಹವದು, ಏನು ಆ ನಲುಮೆ! 
ಆನಂದವುಕ್ಕಿಪಾಳದ ತಿಳಿಯ ಚಿಲುಮೆ! 

ನೆನಪುಕ್ಕಿತಾಗ, 
ಮನವಳುಕಿತಾಗ, 
ಅಳುಕು ಮರುನಿಮಿಷದಲಿ 
ಇಳಿದು ಮರೆಯಾಯ್ತು. 
ಭರವಸೆಯು ತಲೆದೋರಿ 
ಹರುಷ ತುಂಬಾಯ್ತು. 

ಹರುಷದಾ ಲೆಕ್ಕಣಿಕೆ 
ಕೆಳೆಯ ದೌತಿಯಲಿ 
ಮುಳುಮುಳುಗಿ ಭರದಿಂದ 
ಬರೆಯಿಸಿಹುದಿದನು- 
ಸರಸಪತ್ರವೊ ಎನಿಪ ತರ
ಗು ಪತ್ರೆಯನು. 

ಮನ್ನಿಸೈ ನೀನಿದನು ಕವಿದೃಷ್ಟಿಯಿಡುತ, 
ಕನ್ನಡದ ಕವಿ ಬೆನಕ, ರಸಕವಳವೆನುತ 

ಬೆಂಗಳೂರು,೪ ಸೆಪ್ಟಂಬರ್‍ ೧೯೪೧ 

II. ಪ್ರಿಯ ಡಿ.ವಿ.ಜಿ. ಯವರಲ್ಲಿ 

ಉನ್ನತಾದ್ರಿ ಶೃಂಗಶಿಲೆಗೆ 
ಲ್ಲಿ ನೋಡು! ಇಳೆಗೆ 
ಪಾವಕವನು ತಂದ ವೀರ 
ಪ್ರಮಿಥೀಯಸ್‍ನಿವನು ಧೀರ 
ನವೆಯುತಿಹನು ಸೆರೆಯಲಿ 
ಪ್ರೀತಿಯಿವನ ಪೊರೆಯಲಿ. 
ಗರುಡನಂಥ ಮಹಾಚಿಂತೆ 
ಎದೆಯ ತಿನ್ನುತಿರಲು, ನಿಂತೆ 
ಗೊಮ್ಮಟನಂತಳುಕದೆ, 
ಶೋಕ ತುಂಬಿ ತುಳುಕದೆ. 
ಅನ್ನ, -ವಾಯುದೇವನುಸಿರು. 
ವರುಣ ತಂದ ಮಳೆಯೆ ನೀರು. 

ಬನ್ನ ಬಡುವ ಕುವರನನ್ನು 
ಹಗಲಿರುಳೂ ಕಟ್ಟಿಕೊಂಡು 
ಬಗೆಗಾಣದ ಬಯಲಿನಲ್ಲಿ 
ಶೂನ್ಯದಾ ಶ್ಮಶಾನದಲ್ಲಿ 
ಸುತ್ತುತಿಹಳು ಬೊಗರೆಯಂತೆ 
ಬೆದರಿ ನೋಡಿ ಚಿಗರೆಯಂತೆ; 
ಕಣ್ಣು ಬಿಡುವ ತಾರೆಗಳಿಗೆ 
ಕರುಣೆಪಡುವ ಗ್ರಹಂಗಳಿಗೆ 
ಮೊರೆಯಿಡುವಳು ಧಾರುಣಿ, 
ಆ ತ್ರಿಲೋಕತಾರಿಣಿ! 

ಇಂತು ತೊಳಲ್ವ ಪ್ರಮಥಗಾವ 
ಸುಖವು ಕೇಳು? ಆವ ಕಾವ? 
ಇಳೆಯ ತೋರ್ವ ಚೆಲುವ ಬಣ್ಣ 
ತಂಪುವಡಿಸುತಿಹುದು ಕಣ್ಣ. 
ಮಿಂಚಿನಂತೆ ಗುಪ್ತ ಸುಪ್ತ- 
ಭೂಮಿ ವ್ಯೋಮಗಳಲಿ ವ್ಯಾಪ್ತ- 
ವಾದೊಲವಿನ ಭರವಸೆ 
ಮುಗ್ಗಿದೆದೆಯ ತುಂಬಿಸೆ 
ಲೋಕಕೆ ಸುಖ-ಸ್ವಾತಂತ್ರ್ಯ, 
ನಾಡಿಗೆ ಸುಖ-ಸ್ವಾತಂತ್ರ್ಯ, 
ವೈಷಮ್ಯಕೆ ಪಾರತಂತ್ರ್ಯ, 
ಬರುವ ದಿವ್ಯ ಸಂಜ್ಞೆಯಿರೆ 
ನೆಲ ಮುಗಿಲದ ಸಾರುತಿರೆ 
ಹೃದಯವದಕೆ ಹಿಗ್ಗುತಿರೆ, - 
ಸ್ವರ್ಣಯುಗದ ಕಹಳೆಯೂದಿ 
ದ್ವೇಷದೂಷಣೆಗಳ ಬೂದಿ 
ದಿಕ್ಕು ದಿಕ್ಕಿನಲ್ಲಿ ಚೆಲ್ಲಿ 
ಪ್ರೇಮವು ಹೊಂದೇರಿನಲ್ಲಿ 
ಬರುವ ತನಕ-ಯಾವ ಸುಖ? 
ಪೂರ್ವಸಂಜ್ಞೆಯೊಂದೆ ಸುಖ, 
ಇಂದಿದೇ ವಿಮೋಚನೆ. 
ಇದಕೆ ಬೇಡ ಯೋಚನೆ. 

ನಮ್ಮ ಪ್ರಮಥರಲ್ಲಿ ಪ್ರಥಮ 
ಗಣ ನಿನ್ನದು. ನಿನ್ನ ತಮ್ಮ- 
ನಾಗಿ ಬೆಳೆದೆ ಕೇಳೊ! ಅಣ್ಣ! 
ನಿನ್ನಾತುಮನೊಲುಮೆಗಣ್ಣ 
ಬೆಳಕಿನಲ್ಲಿ. ನಿನ್ನ ಹರಕೆ 
ಕಾಯಲೆಂಬುದೊಂದೆ ಅರಿಕೆ. 
ಕೆಳೆಯಂಬುವ ಮಹಾಮಂತ್ರ- 
ವಿರೆ ಸ್ವತಂತ್ರ, ಸರ್ವತಂತ್ರ 
ಎದೆಬೀಣೆಯ ನುಡಿಯಿಸೆ 
ಮನದ ಕೊಂಬ ಹಿಡಿಯಿಸೆ, 
ಅದರ ನಾದದಲ್ಲಿ ಕೂಡಿ 
ಬೆಳೆಯಿತೆಮ್ಮ ಗಣವು ಹಾಡಿ.

ನಾನಾಡಿದ ತೊದಲುಮಾತು 
ಇರಲಿ ನಿನ್ನ ಮನದಿ ಹೂತು. 
ನಾನಾಡಿದುದೆಲ್ಲ ತೊದಲು, 
ನನ್ನ ಸುತ್ತಲಿಹುದು ಹುದುಲು. 
ತಾರೆಯೆಂತು ದಿಗ್ವಲಯದಿ 
ಮಿನುಗಿತಂತು ಮಮ ನಿಲಯದಿ 
ನಿನ್ನ ನಚ್ಚಿನೋಲೆಯೂ 
ಮತ್ತೆ ಮೇಲೆ ಮೇಲೆಯೂ 
ಸೆರೆಯಾಳನು ಮುಕ್ತಿಯ ಚೆಲು 
ಗನಸೆಲ್ಲಿಯು ಮುತ್ತಿದವೊಲು 
ನಿನ್ನ ನೇಹದಾಳದಲ್ಲಿ 
ಮುಳುಗಿ ಪಡೆದ ಸವಿಯದಿಲ್ಲಿ 
ಉಕ್ಕೇರಿತು. ಆದರೇನು? 
ಸುತ್ತಲಿರುವ ಹುದುಲಿಗೇನು? 
ಕೆಸರನೆಲ್ಲ ಬದಿಗೆ ಸರಿಸಿ 
ಒಂದು ನಿಮಿಷವೆಲ್ಲ ಮರೆಸಿ 
ನಿನ್ನ ಪ್ರೀತಿಸರಸೆಯಲ್ಲಿ 
ಜೀವಹಂಸ ನೆಗೆದಿತಿಲ್ಲಿ! 
ನೆಗೆದು ನಭಕೆ ಹಾರಿತು, 
ಇಳಿದು ಬಳಿಗೆ ಸಾರಿತು. 
ನಿನ್ನ ಕ್ಷಮೆಯ ಹೊಂದಿತು. 
ಓಲೆಯಿದನು ತಂದಿತು! 

೧೪ ಸೆಪ್ಟೆಂಬರ್‍ ೧೯೪೧ - ಬೆನಕ

**************************

ಅನ್ನ ಹಳಸಿ ಕೆಡಬಹುದು. ಹಣ್ಣುಗಳು  ಕಾಲವಶದಿಂದ ಕೊಳೆತು ಹೊಲಸಾಗುವುದೂ ಇದೆ. ಸುಂದರಿಯಾದ ಕನ್ಯೆಯು ಕಾಲವಶದಿಂದ  ಮುದಿಯಾಗಿ  ತೊಗಲು ಬಿದ್ದವಳಾಗಿ ಜನರಿಂದ ದೂರವಾಗುವ ಸಾಧ್ಯತೆ ಇದೆ. ಗೆಳೆಯಾ!  ಅಪ್ಪಟ ಗೆಳೆತನದಲ್ಲಿ  ಕುಂದುಕೊರತೆಗಳಿಗೆ ಅವಕಾಶವಿಲ್ಲ.
ಹೂವು ಬಾಡೀತು. ಮಾವು ಹುಳಿಯಾಗುವುದೂ ಇದೆ. ಕೆಲವೊಮ್ಮೆ ದೈವವೂ ಮುನಿಸಬಹುದು.
ಆದರೆ ಗೆಳೆತನಕ್ಕೆ ಕುಂದಾಗದು. ಪ್ರಕೃತಿಯೇ ಏರುಪೇರಾದರೂ ನಿಜವಾದ ಗೆಳೆತನಕ್ಕೆ ಯಾವುದೇ ರೀತಿಯ ಊನವಾಗದು.

    ಯಾವದೋ ಒತ್ತಡದಿಂದ ಮರೆತಿರುವುದು ಇದ್ದಿರಬಹುದು. ಹವ್ಯಾಸಗಳ ಒತ್ತಡ, ಯಾವದೋ ಹಗರಣ, ಯಾವದೋ ಬಳಲಿಕೆ, ಬೇಸರಗಳಿಂದ ‌ಮರೆತಿರಬಹುದು. ಓಲೆ ಬರೆಯಲು ಮರೆತಿರಬಹುದು.
ಒಂದೊಮ್ಮೆ ಮರೆತೆನೆಂದರೆ ಮರೆವು ಶಾಶ್ವತವಲ್ಲ. ನಿದ್ದೆಗೊಂಡವನು ಎಚ್ಚರವಾಗಲೇ ಬೇಕಲ್ಲವೇ? ಎಚ್ಚರವಾದಾಗ ನೆನಪುಗಳು ಮನಸ್ಸನ್ನು ಕಾಡುತ್ತವೆ.

    ಕೆಲವು  ದಿನಗಳ ಹಿಂದೆ ನೀನು ನನಗೊಂದು ಓಲೆಯನ್ನು ಬರೆದುದು ನೆನಪಾಯಿತು. ಒಲವುತುಂಬಿದ ಓಲೆಯದು. ಆ ಓಲೆಯ ಬರಹದಲ್ಲಿ ಅನುಪಮ ನಲುಮೆಯದು ಸೂಸುವುದು! ಆನಂದವನ್ನೇ ಚಿಮ್ಮಿಸುವ ಚಿಲುಮೆಯದು! 

   ಆ ನಲುಮೆಯ ಪತ್ರವನು ಮತ್ತೆ ಕಂಡಾಗ ನೆನಪುಗಳು ಕಾಡುತ್ತಾ ಸಕಾಲದಲ್ಲಿ ಸ್ಪಂದಿಸದುರುವ ಬಗೆಗೆ ಒಳಗೊಳಗೇ ಅಳುಕಿದೆನು. ಗೆಳೆತನದಲ್ಲಿ ಅಳುಕಿಗೆ ಅವಕಾಶವಿಲ್ಲ ಎಂದಯ ಮುಕ್ಷಣದಲ್ಲಿ   ಸುಧಾರಿಸಿಕೊಂಡೆ. ಗೆಳೆಯಾ, ಭರವಸೆಯಿಂದ ಹರುಷವಾಯಿತು ಮನಕೆ.

  ಹರ್ಷಗೊಂಡ ಮನಸ್ಸು ಕೈಗೆ ಲೆಕ್ಕಣಿಕೆಯನ್ನು ಹಿಡಿಸಿತು. ಗೆಳೆಯಾ, ನಾನಲ್ಲ ನಿನ್ನ ಗೆಳೆತನವೇ ಈ ಮಾರೋಲೆಯನ್ನು ಬರೆಯಿಸಿತು. ಮಸಿಕುಡಿಕೆಯೊಳಗೆ ಮುಳುಮುಳುಗಿ  ಲಗುಬಗೆಯಿಂದ ಈ ಸರಸಪತ್ರವನ್ನು ಗೆಳೆತನವೇ ಬರೆಯಿಸಿತು.

ಈ ಒಣಹಾಳೆಗಳಿಗೆ ಗೆಳೆತನದ ಒಲವಿನ ಪತ್ರವೇ ಜೀವಚೈತನ್ಯವನ್ನು ಮೂಡಿಸಿದೆ.
ಕವಿವರ ಕನ್ನಡದ ಬೆನಕ!  ಕವಿದೃಷ್ಟಿಯುಳ್ಳವನು ನೀನು. ರಸಗವಳವೆಂದು  ಸ್ವೀಕರಿಸಿ ಎನ್ನ ಮರೆಗುಳಿತನವನ್ನು  ಮನ್ನಿಸುವುದು!

****

ಪ್ರಮೀತಿಯಸ್ ಎಂಬುದು ಗ್ರೀಕ್ ದೇವತೆಯೊಬ್ಬನ ಹೆಸರು. ಜೆಯಾಸನು ಮಾನವರ ಬಳಕೆಯ ಬೆಂಕಿಯನ್ನು ಕಿತ್ತುಕೊಂಡನಂತೆ. ಪ್ರಮೀತಿಯಸನು  ಗೆಳೆಯನಿಗಾಗಿ ಬೆಂಕಿಯನ್ನು ಜಿಯಾಸನ ಹಿಡಿತದಿಂದ ಕದ್ದು  ತಂದು ಭೂಮಿಗೆ ತಂದು ಗೆಳೆಯನ ಬಂಧನವನ್ನು ಬಿಡಿಸಿದವನು ಎಂಬ ದಂತಕತೆಯೊಂದು ಹೇಳುತ್ತದೆ. ಪ್ರಮೀತಿಯಸನು ಮಾಡಿದ ಅಪರಾಧಕ್ಕಾಗಿ ಅವನನ್ನು ಪರ್ವತದ ಕೋಡುಗಲ್ಲಿಗೆ ಸರಪಣಿಗಳಿಂದ ಬಿಗಿದು ರಣಹದ್ದಿನಿಂದ ಅವನ ಯಕೃತ್ತಿನ ಮಾಂಸವನ್ನು ಕಿತ್ತು ಕಿತ್ತು ತಿನ್ನುವ ಶಿಕ್ಷೆ ವಿಧಿಸಲಾಯಿತು.  ಅವನ ಯಕೃತ್ತು ಮತ್ತಮತ್ತೆ ಬೆಳೆಯುತ್ತಿತ್ತು ಎಂದು ಕತೆಯ ಉಲ್ಲೇಖ.
'ಕವಿ ಬೆನಕನಿಗೆ' ಹೆಸರಲ್ಲಿ ಬರೆದ  ಓಲೆಗೆ  ಹತ್ತು ದಿನಗಳ ಅನಂತರ ಗೆಳೆಯನ ಮಾರೋಲೆ. ( ಮಾರುತ್ತರದ ಓಲೆ) 

ಎತ್ತರವಾದ ಗಿರಿಶಿಖರದ  ಕೋಡುಗಲ್ಲಿಗೆ ಗೆಳೆಯನಿಗಾಗಿ ಜೀವವನ್ನು  ಪಣವಿಟ್ಟ ಪ್ರಮೀತಿಯಸನ್ನು ಸರಪಣಿಯಿಂದ ಬಿಗಿದರು. ಈ ಭೂಮಿಯನ್ನು ಪಾವನಗೊಳಿಸುವ ಬೆಂಕಿಯನ್ನು  ತಂದ ಪ್ರಮೀಥಿಯಸ್ ಧೀರನು. ಈ ನನ್ನ ಗೆಳೆಯನು ಸೆರೆಯಲ್ಲಿ ನವೆಯುತ್ತಿದ್ದಾನೆ. ಗೆಳೆಯನ ಪ್ರೀತಿಯು ಪ್ರೀತಿಯನ್ನೂ ಗೆಲ್ಲಿಸಲಿ. ಗೆಲುವು  ನಮ್ಮ ಗೆಳೆತನವನ್ನೂ ಗೆಲ್ಲಿಸಲಿ. ಪ್ರಮೀಥಿಯಸ್ಸನ ಎದೆಬಗೆಯುತ್ತಿದ್ದ ಗರುಡನಂತೆ ಮಹಾಚಿಂತೆಯು  ಎದೆಯ ಕೊರೆಯುತ್ತಿದೆ. ಆದರೂ, ಅಂಜದೆ ಅಳುಕದೆ, ನಿಶ್ಚಲವಾಗಿ ನಿಂತ ಗೊಮ್ಮಟನಂತೆ ಅಚಲವಾಗಿ ನಿಂತೆ. ವಾಯುವೇ ಅನ್ನ. ಸುರಿವ‌ಮಳೆಯೇ ನೀರು. ಸಂಕಟಗಳನ್ನು ಎದುರಿಸುವ ಕುಮಾರನನ್ನು ಕಟ್ಟಿಕೊಂಡು ಹಗಲಿರುಳೂ  ಮುಂದುಗಾಣದ ಬಯಲಲ್ಲಿ ಶೂನ್ಯ ಮಸಣದಲ್ಲಿ‌ ಎಂಬಂತೆ ಗುರಿಯಿಲ್ಲದ ಬುಗುರಿಯಂತೆ,  ಬೆದರಿದ ಚಿಗರೆಯಂತೆ ಪಿಳಿಪಿಳಿ ಕಣ್ಣುಬಿಡುತ್ತದ್ದೇನೆ.

ಕಣ್ಣುಬಿಡುವ ತಾರೆಗಳಿಗಳಲ್ಲಿ, ಕರುಣೆ ಪಡುವ ಗ್ರಹಗಳಿಗಳಲ್ಲಿ  ಲೋಕಸಂರಕ್ಷಕಳಾದ ಧಾರಿಣಿಯೇ ಅಸಹಾಯಕಳೋ ಎಂಬಂತೆ ಮೊರೆಯಿಡುತ್ತಿದ್ದಾಳೆ.

ಈ ರೀತಿಯಲ್ಲಿ ತೊಳಲಾಡುತ್ತಿರುವ ಶಿವಭಕ್ತ ಪ್ರಮಥನಂತಹ ಗೆಳೆಯನಿಗೆಲ್ಲಿಯ ಸುಖ!? ಗೆಳೆಯನನ್ನು ಹಾಗೂ  ಗೆಳೆತನವನ್ನು ಕಾಪಾಡುವವರು ಯಾರು!?  ಗೆಳೆತನವೇ ಈ ವಸುಂಧರೆಯ ಚೆಲುವನ್ನು ಸಿರಿಸಂಪದವನ್ನು ತೆರೆದು ತೋರಿಸುವುದು. ಈ ಕಣ್ಣುಗಳಿಗೆ ತಂಪನ್ನು ನೀಡುವ ಗೆಳೆತನವು ಅಂತರಂಗದ ಕಣ್ಣುಗಳನ್ನು ತೆರೆಸಲು ಕಾರಣ‌.

ಬಾನಲ್ಲಿ ಮೂಡುವ ಮಿಂಚಿನೊಳಗೆ ಅಮೋಘವಾದ ವಿದ್ಯುತ್ಸಂಚಾರದ ಶಕ್ತಿ ಅಡಗಿರುತ್ತದೆ. ಹಾಗೆಯೇ,  ದಿಗಂತವನ್ನು ಮೀರಿ ವಿಸ್ತರಿಸುವ ಗೆಳೆತನವು  ಒಲವಿನ ಆಕರ್ಷಣೆಯ ಶಕ್ತಿಯಿಂದ ಮುದುಡಿದ ಎದೆಯಲ್ಲಿ ಭರವಸೆಯ ಜೀವಸಂಚಲನವನ್ನುಂಟುಮಾಡುತ್ತದೆ. ಮುಗ್ಗಿದೆದೆಯಲ್ಲಿ ಒಲವನ್ನು ತುಂಬಿಸುವದರಿಂದ ಲೋಕದಲ್ಲಿ ಸುಖ ಸ್ವಾತಂತ್ರ್ಯ ! ನಾಡಿನಲ್ಲಿ  ಸುಖ ಸ್ವಾತಂತ್ರ್ಯವನ್ನು  ಮೂಡಿಸಲು ಗೆಳೆತನವು ಕಾರಣವಾಗಬಲ್ಲದು‌. 

ಪರಸ್ಪರ ವೈಷಮ್ಯವಿಲ್ಲಿ   ಸ್ವಾತಂತ್ರ್ಯಕ್ಕೆ  ಅವಕಾಶವಿಲ್ಲ. ಪಾರತಂತ್ರ್ಯವೇ ಗತಿ! 
ಗೆಳೆಯನ ಆಗಮನದ ದಿವ್ಯ ಸೂಚನೆ ಸಿಕ್ಕರೆ, ಹೃದಯವೇ ಆಗಸದಂತೆ ಹಿಗ್ಗಿ ಮುಗಿಲೆತ್ತರ ಗೆಳೆಯನ ಆಗಮನದ ಸಂತಸವನ್ನು  ಬಿತ್ತರಿಸುತ್ತ ಹಿಗ್ಗಿ ಹೀರೇಕಾಯಾಗುತ್ತಾನೆ.

 ಸುವರ್ಣಯುಗ ಕೂಡಿಬಂತೆಂದು  ಕಹಳೆಯೂದುವವನು, ನೀನೆ ಗೆಳೆಯ!  ಗೆಳೆಯನಿರುವಲ್ಲಿ ದ್ವೇಷ ಅಸೂಯೆಗಳು ಬೂದಿಯಾಗಿ  ದಿಗ್ದಿಗಂತಗಳಾಚೆ ಚೆಲ್ಲುತ್ತೆ. ಪ್ರೇಮದೋಲೆಯು ಹೊನ್ನಿನ ತೇರೇರಿಲಿ ಬರುವುದನ್ನೇ ಎದುರು ನೋಡಯತ್ತಾನೆ. ಯಾವಾಗ ಓಲೆ ಕೈಗಾನಿಸುವುದೋ ಎಂದು ಗೋಣೆತ್ತಿ ನೋಡುತ್ತಾ  ಸವೆಯುತ್ತಾನೆ. ಗೆಳೆಯನ ಓಲೆಯ ಸುಳಿವೊಂದು ಸಿಕ್ಕಿದರೆ ಅದೂ ಕೂಡ ಒಳ್ಳೆಯ  ಸೂಚಿಸಿದರೂ ಅದೇ ಒಂದುರೀತಿಯ ಸುಖದ ಸಗ್ಗ.    ಗೆಳೆಯಾ, ನಮ್ಮ ಗಣಪ್ರವರರಲ್ಲಿ ನೀನೇ ಗಣಪತಿಯಂತೆ ಪ್ರಥಮವಂದ್ಯ ಪ್ರಮಥನಾಯಕ ಬೆನಕದೇವ! ಗೆಳೆಯಾ ನಾನಿನ್ನ ತಮ್ಮನಾಗಿ ಬೆಳೆದೆ. ನಿನ್ನ ಆತ್ಮೀಯ ಒಲವಿನ ಬೆಳಕಿನಲ್ಲಿ ನಾನು ಬೆಳೆದೆನು ಬೆಳಗುತ್ತಿರುವೆನು. ಅಣ್ಣಾ! ನಿನ್ನ ಹರಕೆಯು ನಿನ್ನ‌ ಆತ್ಮದೊಲವಿನ‌ ಬೆಳಕಲ್ಲಿ ಬೆಳಗಿ ನಿನ್ನನ್ನು ಕಾಪಾಡಲಿ ಎಂದು ಎಂಬುದೇ ನನ್ನ ಅರಿಕೆ.
ಗೆಳೆತನವು ಮಹಾಮಂತ್ರ. ಗೆಳೆತನದ ಮಹಾಮಂತ್ರವು ಸಿದ್ಧಿಸಿದರೆ ಸರ್ವರೂ ಸ್ವತಂತ್ರರು. ಹೃದಯವೆಂಬ ವೀಣೆಯನ್ನು  ಭಾವವೆಂಬ ತಂತಿಯಿಂದ‌ ಮಿಡಿದಾಗ ಅದರ ದಿವ್ಯ ನಾದದಲ್ಲಿ ಬೆನಕನ ಗಣಗಳಾದ ನಾವು ಒಂದುಗೂಡಿ ತಾಳ ಹಾಕುತ್ತ ಕುಣಿಯುತ್ತೇವೆ.

ಗೆಳೆಯ, ನಾನಾಡಿದ ಮಾತುಗಳು ಬರಿಯ ತೊದಲುನುಡಿಗಳು ನಿನ್ನ‌ಮನದೊಳಗೆ ಹುದುಗಿ ನಿಂತಿರಲಿ.
ನನ್ನ ಸುತ್ತಮುತ್ತ ಕೆಸರಿನಂತಹ  ಬೇನೆಬೇಸರಗಳು ಆವರಿಸಿವೆ. ಕತ್ತಲಿನ ಆಕಾಶದಲ್ಲಿ ಮಿನುಗುಮಿಂಚಿನ ತಾರೆಯೊಂದು  ಹೊಳೆದಂತೆ  ನನ್ನ ಮನೆಯಲ್ಲಿ ನಿನ್ನ ನೆಚ್ಚಿನ ಓಲೆಯನ್ನು ಕಂಡೆನು. ಸೆರೆಯಾಳು  ಸೆರೆಯಿಂದ ಬಿಡುಗಡೆ ಕಂಡಂತೆ ಈ ನಿನ್ನ ಮೆಚ್ಚಿನೋಲೆಯು ನನ್ನನ್ನು ಬೇನೆ ಬೇಸರಗಳ ಬಂಧನದಿಂದ ಮುಕ್ತಿ ನೀಡಿತು‌. ಸೆರೆಯಾಳಿಗೆ ಕನಸಲ್ಲಿ ಬಿಡಗಡೆಯಾದಂತೆ ನನಗೆ ನಿನ್ನ ಪತ್ರವು ಬೇನೆಬೇಸರಗಳಿಂದ ಒಂದಿನಿತು ಮುಕ್ತವಾದಂತೆ ಹಾಯೆನ್ನಿಸಿತು. ಗೆಳೆಯಾ, ನಿನ್ನ ಗೆಳೆತನದಲ್ಲಿ ಮುಳುಗೆದ್ದ  ಮೀಹದಿಂದ  ಆನಂದದ ಸವಿ ಉಕ್ಕೇರಿತು. ಸುತ್ತಮುತ್ತ ಚೆಲ್ಲಿರುವ ರಾಡಿ ಕೊಚ್ಚೆಕೆಸರಲ್ಲೂ 
ಕೆಸರನೆಲ್ಲ ಒಂದೇ ನಿಮಿಷದಲ್ಲಿ  ಹೊರಚೆಲ್ಲಿದಂತೆ  ಬೇನೆ ಬೇಸರಗಳು ದೂರಸರಿದವು. ದುಗುಡವೆಲ್ಲವನು ನಿನ್ನ ಓಲೆ ಮರೆಯಿಸಿತು‌.

ಗೆಳೆಯಾ! ನಿನ್ನ ಪ್ರೀತಿಯ ಕೊಳದಲ್ಲಿ ಜೀವಹಂಸವನ್ನು ಆಗಸಸರಸಿಯಲಿ ತೇಲಿಬಿಟ್ಟೆ. ಈ ಜೀವಹಂಸವು ಸರಸಿಯಿಂದ  ನಭದೆತ್ತರಕ್ಕೆ ಜಿಗಿಯಿತು. ನಭದಿಂದ ಮೆದುವಾಗಿ ಇಳಿದು ನನ್ನ  ಬಳಿಗೆ ಮಂದಹಾಸ ಬೀರುತ್ತಾ ಬಂತು!  ನಿನ್ನ ಕ್ಷಮೆಯ ಭಾರವನ್ನು ಹೊತ್ತುಕೊಂಡೇ ಒಲವಿನ ಓಲೆ ಎನ್ನ ಬಳಿಸಾರಿತು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣವಭಟ್ ಮಂಡ್ಯ

No comments:

Post a Comment