Wednesday 7 February 2024

ಶಿವನ ಸಮುದ್ರ - ನಿವೇದನ - ಡಿವಿಜಿ

ತರುಗುಲ್ಮಾವೃತ ಶೈಲಮೆ ।
ಮರಕತ ಶಿವಲಿಂಗಮೆನುತೆ ಕಾವೇರಿಯದಂ ॥
ಪರಿಚರಿಸಿ ಲೋಕಕೆಲ್ಲಂ ।
ದೊರೆಯಿಪ ತೀರ್ಥಾಂಬುವಲ್ತೆ ಶಿವನ ಸಮುದ್ರಂ ॥ ೧ ॥

ಒಂದೆಡೆಯೊಳಾದಿಶಕ್ತಿಯ ।
ಸಂಧಾನಾದ್ಭುತ ವಿಶೇಷಮಾರ್ಭಟಿಸಲ್‍ ಮೇ ॥
ಣೊಂದೆಡೆ ಮೆರೆವುದು ಮನುಜನ ।
ಸಂಧಾನಾದ್ಭುತ ವಿಶೇಷಮಾ ಮಂಡಲದೊಳ್‍ ॥ ೨ ॥

ಮೊರೆಯುತೆ ಸರಿಯುತೆ ಭರದಿಂ ।
ಪರಿದೋಡುತೆ ಜಾರಿ ಪಾರಿ ಮುಕ್ತಾಂಜಲಿಯಂ ॥
ಎರಚುತಲೆರಗುತೆ ರಭಸದಿ ।
ಬರುತಿರ್ಪಾ ಜಲವಿಲಾಸಮೇನತಿಶಯಮೋ ॥ ೩ ॥

ಶಿವನೊಡಲ ಹಾರಮೇಂ ನಿಜ ।
ಭವನಕೆ ಸರಿವಾದಿಶೇಷ ಸಂತತಿಯೇನಾ ॥
ಧವಳತರ ಧಾರೆ ಮಾಡುವು ।
ದವಲೋಕನಕೊಂದು ಭೀಷ್ಮ ಸಂಮೋಹನಮಂ ॥ ೪ ॥

ಒಲವೇಂ ಸಂಭ್ರಮವೇಂ ಪ್ರಿಯಾಭಿಸರಮೇಂ ಲಾವಣ್ಯಮೇಂ ಲೀಲೆಯೇಂ ।
ಮುಳಿಸೇಂ ಸಾಹಸಮೇಂ ಮಹಾಗರುವಮೇಂ ಯಾತ್ರಾವ್ರತೋತ್ಸಾಹಮೇಂ ॥
ಬಲಮಂ ತೋರುವ ಠೀವಿಯೇಂ ಚಪಲಮೇಂ ಮಂದಾತ್ಮರಂ ನಿಂದಿಪಾ ।
ಚಲಮೇನೀಪರಿ ಧಾವಿಸುತ್ತಲಿಹುದೇಂ ಕಾವೇರಿ ರಾಜ್ಯೇಶ್ವರೀ ॥ ೫ ॥

ಧೂಮಸ್ತೋಮದ ಮೂಲದತ್ತ ಮೊರೆಗುಂ ಶೀತಾಂಬುಪಾತಂ ಸರಿ ।
ದ್ರಾಮಾನೇತ್ರದಪಾಂಗಮೆತ್ತಲೆನೆ ವಿದ್ಯುಜ್ಜ್ವಾಲೆಯುಜ್ಜೃಂಭಿಕುಂ ॥
ಈ ಮಾಚಿತ್ರದಿ ಕಾಣ್ಗುಮಲ್ತೆ ದಿಟಮಲ್ಲಂ ತೋರ್ಕೆಯೆಂದೆಂಬುದಾ ।
ಭೀಮಾಕಾರವ ತಾಳ್ದೊಡೇಂ ಸದಯೆ ನೀಂ ಕಾವೇರಿ ಭದ್ರಂಕರೀ ॥ ೬ ॥

ಗತಿಯಿಂದದ್ಭುತಮಂ ಜನೋಪಕೃತಿಯಿಂದೌದಾರ್ಯಮಂ ನಿತ್ಯ ಶು ।
ದ್ಧತೆಯಿಂ ಶಾಂತಿಯನುಗ್ರಭಾವವ ಶಿಲಾನಿರ್ಭೇದದಿಂ ಪರ್ವತ ॥
ಚ್ಯುತಿಯಿಂ ರೌದ್ರವ ತಣ್ಪಿನಿಂ ಪ್ರಿಯತೆಯಂ ಗಾಂಭೀರ್ಯಮಂ ಘೋಷದಿಂ ।
ಸತತಂ ಬೋಧಿಸುತಿರ್ಪೆ ದೇವಿ ಸರಸೇ ಕಾವೇರಿ ಕಾವ್ಯಾಶ್ರಯೇ ॥ ೭ ॥

ಗಿರಿಯ ಕೆಲದಿ ಬನದ ನಡುವೆ ಝರಿಯ ತೆರದಿ ಸುಳಿದು ಬರುತೆ ।
ತಲದ ಶಿಲೆಯನಿರಿದು ಕೊರೆದು ಕೆಲದ ನೆಲವನರೆದು ಮುರಿದು ॥ ೮ ॥
ವಿಮಲ ಜಲದ ವಿಪುಲ ಧಾರೆಯಮೃತ ಲಹರಿಯಂತೆ ತೋರೆ ।
ದಣಿವ ಕಳೆಯುವೆಲರ ಬೀರಿ ಮೃದುಲ ರವದಿ ಮುಂದೆ ಸಾರಿ ॥ ೯ ॥

ಅತ್ತಲತ್ತ ಸುಳಿದು ಸುತ್ತಿ ಇತ್ತಲಿತ್ತ ಮೆಲ್ಲನೊತ್ತಿ ।
ಅಲ್ಲಿ ಬಳುಕುತಿಲ್ಲಿ ಬಾಗಿ ಅಲ್ಲಿ ಬಳಸುತಿಲ್ಲಿ ಸಾಗಿ ॥ ೧೦ ॥

ನೊರೆಯ ಸೇಸೆಗಳನು ಸೂಸಿ ತೆರೆಯ ಚವರಗಳನು ಬೀಸಿ ।
ಬಾಲೆಯಂತೆ ನಲಿದು ಕುಣಿದು ಕಾಳಿಯಂತೆ ಕನಲಿ ಮೊರೆದು ॥ ೧೧ ॥

ಉರಗಿಯಂತೆಯುರುಗಿ ತಿರುಗಿ ಛಲದ ಭರದಿ ಸರಿದು ಮಸಗಿ ।
ಬೆಟ್ಟದಿಂದಲುರುಳಿ ಹೊರಳಿ ದಿಟ್ಟತನದಿ ತೊಳಗಿ ಮೊಳಗಿ ॥ ೧೨ ॥

ಘೋರ ವೇಗದಿಂದ ನೆಗೆದು ಭೋರೆನುತ್ತೆ ಮಂಜನೆಸೆದು ।
ಪನಿಯ ಮುಗಿಲ ಕವಿಸಿ ಸರಿದು ಮನುಜ ಸೇವೆಯಿಂದಲೊಲಿದು ॥ ೧೩ ॥

ಬಲವ ಬೆಳಕ ನೀಡುತುಂ ನಿಲದೆ ನಾಟ್ಯವಾಡುತುಂ ।
ನುಗ್ಗಿ ಬೀಳುತೇಳುತುಂ ನೆಗೆದು ಪಾರುತೋಡುತುಂ ॥ ೧೪ ॥

ಭುವನ ರಚನೆಯೆನಿತು ಕುತುಕಮೆನುತ ಜನಕೆ ಸಾರುತುಂ ।
ಭುವನ ಜನನಿಯೆನಿತು ಚತುರಳೆನುತ ಕಣ್ಗೆ ತೋರುತುಂ ॥ ೧೫ ॥

ಪುರುಷ ಬಲವ ಬೆಳಗಿರೆನುತ ಜಡರ ಪಳಿದು ಮೊಳಗುತುಂ ।
ಪರಿವಳೀ ಕವೇರತನಯೆ ಧೀರಜನನಿಯೆನಿಸುತುಂ ॥ ೧೬ ॥

ಕನ್ನಡ ನಾಡಿನ ಕುತುಕಂ ।
ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ ॥
ಕನ್ನಡಿಗರ ಭಾಗ್ಯದ ನಿಧಿ ।
ಯುನ್ನತಿಯಂ ಪಡೆದು ಬಾಳ್ಗೆ ಶಿವನ ಸಮುದ್ರಂ ॥ ೧೭ ॥

ರುಧಿರೋದ್ಗಾರಿ ಸಂ ॥
ಆಶ್ವಯುಜ ಶು ॥
೧೦೧೯ನೆಯ ಅಕ್ಟೋಬರ್‍ ೧೯೨೩

ಪದ್ಯ ೧ : ಗುಲ್ಮ-ಪೊದರು. ನದಿ ಗುಡ್ದವನ್ನು ಬಳಸಿ ಹರಿಯುವ ನೋಟ.
೨ : ಒಂದು ಕಡೆ ಜಲಪಾತ, ಒಂದು ಕಡೆ ವಿದ್ಯುದ್ಯಂತ್ರ.
೬ : ಸರಿತ್‍-ನದಿ; ರಾಮಾನೇತ್ರದಪಾಂಗ-ಚೆಲುವೆಯ ಕಣ್ಕುಡಿ ನೋಟ.
೮ : ಕೆಲದಿ-ಪಕ್ಕದಲ್ಲಿ.
೧೧-೧೨ : ಚವರ-ಚಾಮರ; ಉರಗಿ-ಹೆಣ್ಣು ಹಾವು; ಉರುಗಿ-ದುಡುಕಿ, ಮೊಂಡುತನ ಮಾಡಿ; ಭುವನಜನನಿ-ಪ್ರಕೃತಿ, Nature.
೧೬ : ಕವೇರತನಯೆ-ಕವೇರನೆಂಬ ಋಷಿಯ ಮಗಳಾದ ಕಾವೇರಿ.

No comments:

Post a Comment