Sunday 11 February 2024

ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ

*ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ*

ಶ್ರವಣಕೆ ಸಿಲುಕದ ಲಲಿತಾ । 
ರವ ಸುಖಮಂ ರಸನೆಗೊದವದಮೃತ ದ್ರವಮಂ ॥ 
ಎವೆಯಿಕ್ಕದ ನಯನಗಳಿಂ । 
ಸವಿವುದು ನೀಮೆಂಬ ಮಾಯಗಾತಿಯರಿವರಾರ್‍ ॥ ೧ ॥ 

ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀಂ 
ನೃತ್ಯ ಲಾಸ್ಯದಿನಾರನೊಲಿಸುತಿರುವೆ । 
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ 
ದಾರ ಚರಿತೆಗಳ ಶುಕಿಗುಸಿರುತಿರುವೆ । 
ಮುಗ್ಧ ಮೋಹನ ವದನೆ ಮುಕುರದೊಳ್‍ ನೋಡಿ ನೀ 
ನಾರ ನೆನೆದಿಂತು ನಸುನಗುತಲಿರುವೆ ॥ 
ಪ್ರಣಯ ಪ್ರರೋಹೆ ನೀಂ ಪ್ರಿಯತರಾಕೃತಿಯಿಂದೆ 
ರುಷೆಯನಿಂತಾರೊಳಭಿನಯಿಸುತಿರುವೆ ॥ 
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ । 
ದೇವದೇವನ ಸೇವೆಗೈತರ್ಪ ಸಾಧುಕುಲಮಂ । 
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ 
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ ॥ ೨ ॥ 

ಇನ್ನೆವರಮೊಲಿದು ಬಾರದ ನಿಮ್ಮ ಮನದಿನಿಯ 
ನಿನ್ನು ಬಹನೆಂದು ನೀಂ ತಿಳಿವುದೆಂತು । 
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯೀ 
ವಿಷಮ ಸಮಯದಿ ನಿಮಗೆ ದೊರೆವುದೆಂತು । 
ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ 
ರಸಜೀವಿಯೆನ್ನುತಾದರಿಪುದೆಂತು । 
ನಿಮ್ಮ ನೂಪುರ ರವಕೆ ಬೆರಗಾಗಿ ನಿಲ್ಲದನ 
ಭಾವಜ್ಞನೆಂದು ನೀಂ ಬಗೆವುದೆಂತು ॥ 
ರೂಪಮಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ । 
ರೂಪ ವಿಭವದಿನಿತ್ತಲೈತಂದು ಮೆರೆಯೆ ನಿಮ್ಮ । 
ಲಾಸ ಲಾವಣ್ಯಗಳ್‍ ಧರೆಯಿಂದೆ ಪಾರ್ವುವೆನುತೆ । 
ಮರೆಯಿಂದೆ ಕಂಡು ನಿಮ್ಮೊಲವಿಂದೆ ನಲಿವನೇನೋ ॥ ೩ ॥ 

ಶ್ರುತ ಗಾನಮಭಿರಾಮಮಾದೊಡಶ್ರುತಗಾನ 
ಮಭಿರಾಮತರಮೆನುತೆ ರಸಿಕರೊಸೆವರ್‍ ।
ರಾಮಣೀಯಕ ಕುಲುಮೆ ನಿಮ್ಮೆದೆಯ ನುಡಿ ಕಿವಿಯ 
ನಾನದೊಡಮೆಮ್ಮೆದೆಯ ಸೇರಲರಿಗುಂ । 
ಅದರಿಂದಮಲ್ತೆ ನಿಮ್ಮಭಿಮತಂಗಳನರಿತು 
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್‍ । 
ವರ್ಷಶತಕಗಳಿಂದೆ ಕುಂದದಿಹ ಲಾವಣ್ಯ 
ದಂತರಂಗವನಿಂತು ಬಗೆವೆನೀಗಳ್‍ ॥ 
ಬಿದಿಯ ಕರ ಚಾತುರಿಯೊಳನಿತಿನಿತು ಸುಳಿದು ಸರಿವ । 
ಮನುಜ ಮಾನಸದೊಳತಿ ಚಿತ್ರದಿಂ ಚಲಿಸಿ ಮೆರೆವ । 
ಭುವನ ಜೀವನ ಸಸ್ಯಕಮೃತ ಬಿಂದುಗಳನೆರೆವ । 
ಪರತತ್ತ್ವ ಮಾಧುರಿಯನಿನಿಸು ನೀಂ ತೋರ್ಪಿರಲ್ತೆ ॥ ೪ ॥ 

ಆನಂದನಿಧಿಯಾ ಪರಾತ್ಪರನೆನಲ್‍ 
ಜಗದೊ ಳಾನಂದವೀವರಂ ಕಳೆಯಲಹುದೇಂ । 
ಪ್ರೇಮಮಯ ಮೂರ್ತಿಯಾ ಪರದೇವನೆನುತಿರಲ್‍
ಪ್ರೇಮಾಂಕುರಂಗಳಂ ಮುರಿಯಲಹುದೇಂ । 
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್‍ 
ಸುಂದರಾಕಾರರೊಳ್‍ ಮುಳಿಯಲಹುದೇಂ ॥ 
ಜೀವನಾಧಾರನವನೆನುತೆ ಪೊಗಳುತ್ತಿರಲ್‍ 
ಜೀವನೋಜ್ಜ್ವಲೆಯರಂ ಪಳಿಯಲಹುದೇಂ ॥ 
ಜಗದುದಯಕಾರಣನ ಮೈಮೆಗಳನರಿತು ನೆನೆದು । 
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ । 
ಸೊಗಮಿನಿಸು ತೋರಿ ಸಂಸೃತಿಪಥಂ ಸುಗಮಮೆನಿಸಲ್‍ । 
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ ॥ ೫ ॥ 

ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು 
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ । 
ವಿಗತ ಸೌಮನಸರುಂ ವಿಪರೀತ ಚರಿತರುಂ 
ವಿಮುಖತೆಯನಾನಲದರಿಂದೆ ನಿಮಗೇಂ । 
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು 
ಪದವನನು ಕರಿಪ ವಾದಿತ್ರಗಳ್‍ ಸೂಕ್ಷ್ಮದಿಂದೆ । 
ನೆಳಲನಿತ್ತೀ ಲತಾವಳಿ ನಿಮ್ಮನಾದರಿಸು 
ಗೆಂದಿಗುಂ ತಂಬೆಲರ ಸುರಭಿಯಿಂದೆ ॥ 
ನಗುತ ನಲಿಯುತ ಮೆರೆದು ಹಾವ ಭಾವಗಳಿನೆಸೆದು । 
ಮಂಜು ಜಲ್ಪವ ತೋರಿ ಮುಗ್ಧ ವೀಕ್ಷಣವ ಬೀರಿ । 
ಕಠಿನರಾಗದೆ ಕಾಲ ದೌಷ್ಟ್ಯದಿಂ ಕುಂದುವಡದೆ । 
ಶುಷ್ಕ ಹೃದಯರ್ಗೆ ನೀಂ ಸೌಹೃದವ ನೀಡುತಿಹುದೌ ॥ ೬ ॥ 

ಅವ್ಯಕ್ತ ನಿನದದಿಂದಕಲಂಕಿತಾಂಗದಿಂ 
ದನ್ಯೂನ ತರುಣತೆಯಿನಮಿತಯಶದಿಂ । 
ಚಿರ ಕಾಲಮೆಸೆವುದೌ ಚಿತ್ತವೇಧನಿಯರಿರ 
ಕುದಿವ ಲೋಕಕೆ ಮುದದ ತಣಿವ ಬೀರಿ । 
ಸೌಂದರ್ಯಮೇ ವಿಶ್ವತತ್ತ್ವಮಾ ಪರತತ್ತ್ವ 
ಭಾಸಮೇ ಸೌಂದರ್ಯಮೆನುತ ಸಾರಿ । 
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ 
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ ॥ 
ಪೊಳೆಯಿರೌ ಸರಸ ಜೀವನ ಮಂತ್ರ ಗುರುಗಳೆನಿಸಿ । 
ಪಳಿಯಿರೌ ಮಧುರ ಭಾವವ ಪಳಿವ ವಿಕೃತ ಮತಿಯಂ । 
ಕಳೆಯಿರೌ ರಸಕಲಾವಿಮುಖತೆಯ ಜನದ ಮನದಿಂ । 
ಬೆಳೆಯಿರೌ ಪ್ರೇಮ ಧರ್ಮೋದ್ಧರಣ ವಿಧಿಯೊಳೆಂದುಂ ॥ ೭ ॥ 

೧೧ನೆಯ ಡಿಸೆಂಬರ್‍ ೧೯೨೩

ಪದ್ಯ ೧ : ಶ್ರವಣ-ಕಿವಿ; ಆರವ (ರವ) ಧ್ವನಿ, ನಾದ; ರಸನೆ-ನಾಲಗೆ. ಕಿವಿಗೂ ನಾಲಗೆಗೂ ದೊರೆಯಲಾರದ ಒಂದು ಇಂಪು ಇಲ್ಲಿ ಕಣ್ಣಿನ ಮೂಲಕ ದೊರೆಯುವುದಾಗಿದೆ. 
ಪದ್ಯ ೨ : ವಲ್ಲರಿ-ಹಬ್ಬಿದ ಬಳ್ಳಿ; ಲಾಸ್ಯ-ಗೀತಾಭಿನಯ ಸಮೇತ ನರ್ತನ. ಮಂಜೂಷಾ-ಕೈಪೆಟ್ಟಿಗೆ, ಡಬ್ಬಿ. ಪ್ರರೋಹ-ಮೊಳಕೆ; ರುಷೆ-ರೋಷ. 
ಪದ್ಯ ೩ : ನೂಪುರ-ಕಾಲಂದುಗೆ, ಗೆಜ್ಜೆ. 
ಪದ್ಯ ೪ : ಶ್ರುತ-ಕೇಳಿಸಿದ, ಕಿವಿಮುಟ್ಟಿದ; ಅಶ್ರುತ-ಕೇಳಿಸದ, ಕಿವಿತಾಕದ; ಅಭಿರಾಮತರಮ್‍-ಹೆಚ್ಚು (More) ಮನೋಹರವಾದದ್ದು. “Heard melodies are sweet, but those unheard Are sweeter”. –Keats, Ode on A Grecian Urn. ಎದೆಯ ನುಡಿ–ಅಂತರಂಗದ ಮಾತು, ಹೃದಯವಾಣಿ; ಬಿದಿಯ–ವಿಧಿಯ, ಸೃಷ್ಟಿಕರ್ತನ; ಕರಚಾತುರಿ-ಕೈಚಳಕ. 
ಪದ್ಯ ೫ : ಆನಂದನಿಧಿ... ಪ್ರೇಮಮಯಮೂರ್ತಿ... 
“ತಸ್ಯ ಪ್ರಿಯಮೇವ ಶಿರಃ । ಮೋದೋ ದಕ್ಷಿಣಃ ಪಕ್ಷಃ । ಪ್ರಮೋದ ಉತ್ತರಃ ಪಕ್ಷಃ । ಆನನ್ದ ಆತ್ಮಾ ॥ –ತೈತ್ತಿರೀಯ ಉಪನಿಷತ್ತು II - ೫.

No comments:

Post a Comment