Wednesday 21 February 2024

ಜೀವಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಜೀವಗೀತೆ’ ಯ ಪ್ರಸ್ತಾವನೆ

ಜೀವಗೀತೆಯು ಆಂಗ್ಲಭಾಷೆಯ ಕವಿಗಳ್ಲೊಬ್ಬನಾದ ವ್ಹಿಟ್ಟಿಯರ್‍ (J.G.Whittier) ಎಂಬಾತನ “ಮೈಸೋಲ್‍ ಅಂಡ್‍ ಐ” (ನನ್ನ ಜೀವವೂ ನಾನೂ) ಎಂಬ ಕೃತಿಯ ಅನುವಾದ.

ವ್ಹಿಟ್ಟಿಯರನು ಅಮೆರಿಕಾ ಖಂಡದ ಸಂಯುಕ್ತ ರಾಷ್ಟ್ರದಲ್ಲಿ ಕ್ರಿ.ಶ. ೧೮೦೭ ರಿಂದ ೧೮೯೨ರ ವರೆಗೆ ಜೀವಿಸಿದ್ದನು. ಆತನು ಭಕ್ತಿಭರಿತವೂ ನೀತಿಬೋಧಕವೂ ಆದ ಅನೇಕ ಪದ್ಯಾವಳಿಗಳನ್ನು ಬರೆದಿರುತ್ತಾನೆ. ಅವು ಅತಿ ಲಲಿತವಾಗಿಯೂ ರಸವತ್ತಾಗಿಯೂ ಇರುವ ಕಾರಣ ಜನಸಾಮಾನ್ಯಕ್ಕೆಲ್ಲ ಆದರಣೀಯವಾಗಿವೆ. ಇಂಗ್ಲೆಂಡಿನ ಪ್ರಖ್ಯಾತವಾಗ್ಮಿಯೂ ರಾಜನೀತಿಕೋವಿದನೂ ಪ್ರಜಾಭಿಮಾನಿಯೂ ಆಗಿದ್ದ ಜಾನ್‍ ಬ್ರೈಟ್‍ ಮಹಾಶಯನು ವ್ಹಿಟ್ಟಿಯರನ ಕಾವ್ಯಗಳನ್ನು ಪದೇ ಪದೇ ಓದಿ ಸಂತೋಷಪಡುತ್ತಿದ್ದನು.

ವ್ಹಿಟ್ಟಿಯರನು ಧರ್ಮಸೂಕ್ಷ್ಮದರ್ಶಿಯೂ ಲೋಕಹಿತ ಚಿಂತಕನೂ ಆಗಿದ್ದನು. ಸಾಮಾನ್ಯ ಜನರ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಆತನು ತನ್ನ ಕಾವ್ಯಗಳಲ್ಲಿ ವಿಮರ್ಶಿಸಿ, ಅನ್ಯಾಯ ದೂಷಣೆಯನ್ನೂ ನ್ಯಾಯ ಪೋಷಣೆಯನ್ನೂ ಮಾಡಿರುತ್ತಾನೆ. ಪ್ರಜಾಪಕ್ಷವಾದಿಗಳಾದ ಕವಿಗಳಲ್ಲಿ ಆತನು ಅಗ್ರಗಣ್ಯನೆಂದು ಸುಪ್ರಸಿದ್ಧ ಪತ್ರಿಕಾಕರ್ತನೂ ಲೋಕೋಪಕಾರಿಯೂ ಆಗಿದ್ದ ಸ್ಟೆಡ್‍ ಮಹಾಶಯನ ಅಭಿಪ್ರಾಯ.

ಜೀವಗೀತೆಯು ಪ್ರಶ್ನೋತ್ತರ ರೂಪದಲ್ಲಿದೆ; ಮನುಷ್ಯನು ತನ್ನ ಬಾಳಿಕೆಯ ರೀತಿಯನ್ನು ತನ್ನ ಮನಸ್ಸಿನಲ್ಲಿ ತಾನೇ ವಿಚಾರಮಾಡಿಕೊಂಡು, ತನ್ನೊಡನೆ ತಾನೇ ಸಂವಾದ ಬೆಳೆಯಿಸಿದಂತೆ ಇದೆ. ನಮ್ಮ ಪುರಂದರಾದಿ ದಾಸರುಗಳ “ಸಿಕ್ಕಿದೆಯಾ ಎಲೊ ಜೀವ”, “ಮನವೇ ಮರೆಯದಿರೋ ಹರಿಯ” ಮೊದಲಾದ ಆತ್ಮ ಪರಿಶೋಧನೆಯ ಪದಗಳೂ, ಮಹಾರಾಷ್ಟ್ರದ ರಾಮದಾಸ ಸ್ವಾಮಿಗಳ “ಮನಾಚೆ ಶ್ಲೋಕ” ವೂ, ಭರ್ತೃಹರಿಯ ಮನಸ್ಸಂಬೋಧನ ವಾಕ್ಯಗಳೂ ಇದೇ ಜಾತಿಯ ಕವಿತೆಯೆಂದು ಹೇಳಬಹುದು. ಬುದ್ಧಿಯು ಕೇಳುವ ಪ್ರಶ್ನೆಗಳಿಗೆ ಜೀವನು ಹೇಳುವ ಪ್ರತ್ಯುತ್ತರಗಳನ್ನು ವಾಚಕರ ಸೌಕರ್ಯಕ್ಕಾಗಿ (“” ಈ ಬಗೆಯ) ಉದಾಹರಣ ಚಿಹ್ನೆಗಳಿಂದ ಸ್ಪಷ್ಟಪಡಿಸಿದೆ.

ಅಮೆರಿಕದ ವ್ಹಿಟ್ಟಿಯರನು ಪ್ರತಿಪಾದನೆ ಮಾಡಿರುವ ತತ್ತ್ವಗಳು ಭರತಖಂಡದ ಜನರಿಗೆ ಅಪೂರ್ವವಾದುವಲ್ಲ. ಆತನ ವಾಕ್ಯಗಳಿಗೆ ಸಮಾನವಾದ ವಾಕ್ಯಗಳನ್ನು ಭಗವದ್ಗೀತೆಯಲ್ಲಿಯೂ ಪುರಾಣಗಳಲ್ಲಿಯೂ ನಮ್ಮ ಮತಾಚಾರ್ಯರುಗಳ ಉಪದೇಶಗಳಲ್ಲಿಯೂ ದಾಸರ ಕೀರ್ತನೆಗಳಲ್ಲಿಯೂ ಯಥೇಷ್ಟವಾಗಿ ಕಾಣಬಹುದು. ಹೀಗೆ ಪಾಶ್ಚಾತ್ಯ ಮಹಾಕವಿಗಳೂ ಪೌರಸ್ತ್ಯ ಮಹಾಕವಿಗಳೂ ಮಾನವ ಜೀವನದ ಮುಖ್ಯವಿಷಯಗಳಲ್ಲಿ ಏಕವಾಕ್ಯವಾಗಿರುವುದನ್ನು ನೋಡಿದರೆ, ‘ಭಗವಂತನು ತನ್ನ ಮಹಿಮೆಯನ್ನು ಎಲ್ಲ ಜನರಿಗೂ ತೋರಿಕೊಂಡಿರುವನು; ಮಹನೀಯರು ಎಲ್ಲೆಲ್ಲಿಯೂ ಇರುವರು; ಅವರು ಒಮ್ಮುಖದಿಂದ ಹೇಳುವ ತತ್ತ್ವಗಳು ಎಲ್ಲ ಕಾಲ ದೇಶಗಳಲ್ಲಿಯೂ ಎಲ್ಲರಿಂದಲೂ ಮನ್ನಣೆ ಪಡೆಯಲು ಅರ್ಹವಾದುವು’ ಎಂದು ಯಾರ ಮನಸ್ಸಿಗೂ ಹೊಳೆಯದೇ ಇರದು.

ಶ್ರೀಃ

ಪ್ರಣವ ವಿಬೋಧಕ ವದನಂ ।
ಪ್ರಣತ ಶ್ರೇಯೋನಿಕೇತನಂ ಪ್ರಾಜ್ಞಧನಂ ॥
ಗಣನಾಥಂ ಕವಿಗೀತಂ ॥
ಗುಣಸಂಪದವೀಗೆ ಕೃತಿಗೆ ಕರುಣೋಪೇತಂ ॥

ಜೀವಗೀತೆ

ನಿಲ್ಲು ನಿಲ್ಲೆಲೊ, ಜೀವ, ನಿನ್ನನೇಕಾಂತದಲಿ
ದೇವನಿದಿರಲಿ ಮಾತನೊಂದ ಕೇಳ್ವೆಂ ।
ನಿರ್ವಿಚಾರದಿ ಭವದ ಘೋರಾಂಧಕಾರದೊಳು
ನೀನೆತ್ತ ಪೋದಪೆಯೊ ನಿಂತು ನೋಡೈ ।
ಪುರುಷರೂಪವ ಧರಿಸಿ ಧರೆಯೊಳಾದರದಿ ನೀ–
ನಾವ ಕರ್ತವ್ಯಕಾಗಿರುವೆ ತಿಳಿಯೈ ।
ಜೀವ ನಿನ್ನಯ ಜನ್ಮ ಸಾಫಲ್ಯವೆಂತಹುದು
ನಿನ್ನ ಧರ್ಮವದೇನು ಬಗೆದು ಪೇಳೈ ॥

ದೇಹಸೌಖ್ಯವನಾಂತು ಮೆರವುದೋ ಬಂಧುಕುಲದೊಳ್‍ ।
ಮುದವನೊಂದುವುದೊ ಮೇಣತಿಶಯದ ಧನವ ಗಳಿಸಿ ।
ಕೀರ್ತಯೊಂದುವುದೊ ಮತ್ತಾವುದೈ ನಿನ್ನ ಧರ್ಮಂ? ।
– “ತಾನೊಂದುಮಲ್ತಿದರೊಳಾವುದುಂ ಧರ್ಮಮಲ್ತು” ॥೧

ಸರ್ವಲೋಕಕೆ ಸಾಕ್ಷಿಯಾದ ದೇವನು ನಿನ್ನ
ಕರ್ಮಗಳನಾವಗಂ ನೋಳ್ಪನಲ್ತೆ ।
ಆತನಿಚ್ಛೆಯನರಿಯುತದನೆ ಅನುವರ್ತಿಸುತ–
ಲಾತನಂ ಸೇವಿಪುದೆ ಧರ್ಮಮಲ್ತೆ ।
ಅಂತಾದೊಡೀಗಳಾ ದೇವನ ಸನ್ನಿಧಿಯೊ–
ಳೇನ ಪೇಳುವೆ, ಜೀವ, ಭಯವದೇಕೆ ।
ನರರ ಬಳಿಯೊಳು ಹರುಷದಿಂದ ಚರಿಸುವ ನಿನಗೆ
ಪರಮನಿದಿರಲಿ ಬರಲು ಚಿಂತೆಯೇಕೆ ॥
ಸತ್ಯಮಂ ಧರ್ಮಮಂ ನೀನೆಂತು ಕಾಯುತಿರ್ಪೆ ।
ದೇವನಂ ನೀನೆನಿತು ಭಕ್ತಿಯಿಂ ಭಜಿಸುತಿರ್ಪೆ ।
ಭೂತಕೋಟಿಯೊಳೆನಿತು ಮೈತ್ರಿಯಿಂ ನಡೆಯುತಿರ್ಪೆ ।
ಆಯುಷ್ಯವೆಲ್ಲಮಂ ನೀನೆಂತು ಕಳೆಯುತಿರ್ಪೆ? ॥ ೨

“ಅನ್ಯಾಯಮೆಲ್ಲಿರ್ದೊಡಂ ಧೈರ್ಯದಿಂದೆ ನಾ–
ನದರ ಮೂಲವ ನಾಶಗೊಳಿಸುತಿರ್ಪೆಂ ।
ಧರ್ಮಮದು ತಾನೆನಿತು ಬಲಮಿಲ್ಲದಿರ್ದೊಡಂ
ನಾನದರ ಕೈಂಕರ್ಯವೆಸಗುತಿರ್ಪೆಂ ।
ಸ್ವಾತಂತ್ರ್ಯರಿಪು ನಿಹಿತ ಬಂಧನಂಗಳ ಕಳೆವ
ಜನರಿಂಗೆ ನಾಂ ಜಯವ ಬಯಸುತಿರ್ಪೆಂ ।
ಅನೃತಮದು ತಾನೆನಿತು ಶಕ್ತಿವಡೆದಿರ್ದೊಡಂ
ನಾನದನು ಭರದಿಂದ ತಡೆಯುತಿರ್ಪೆಂ” ॥
–ಇಂತುಸಿರ್ವೊಡೆ ನಿನ್ನ ದನಿಯೇಕೆ ನಡುಗುತಿಹುದು ।
ಜೀವ, ನೀನಿಂತು ಮಾಡಿರ್ಪೊಡದೆ ಸುಕೃತಮಲ್ತೆ ।
ಆದೊಡಂ ನೀನಂತು ಮಾಳ್ಪುದಕೆ ಕಾರಣಮದೇಂ ।
ತತ್ತ್ವಚಿಂತೆಯೊ ಯಶಶ್ಚಿಂತೆಯೋ ದಿಟವನುಸಿರೈ ॥ ೩

“ಮಾನಿಸರ ಮೆಚ್ಚಿಕೆಯೆ ನಾನೆಸುತಿರ್ಪೆಲ್ಲ
ಕಾರ್ಯಕಂ ಫಲ” ಮೆಂದು ಪೇಳ್ವೆಯೇನೈ ।
ಅಂತು ನೀನುಸಿರುವೊಡೆ ಬಲುಧನಮನಾರ್ಜಿಸುವ
ಕೃಪಣಗಂ ನಿನಗಮಿಹ ಭೇದಮೇನೈ ।
ಸ್ವಾರ್ಥತೆಯದೇತಕೈ ಕೀರ್ತಿಯೇತಕೆ ನಿನಗೆ
ನಿನ್ನ ಪಯಣದ ಬಗೆಯನರಿಯೆಯೇನೈ ।
ಇಹದಿ ನಿನ್ನಯ ಬಾಳು ಮುಗಿದ ಬಳಿಕೆಲ್ಲಿ ನೀ–
ನಾವಪರಿಯಿರ್ದಪೆಯೊ ಬಲ್ಲೆಯೇನೈ ॥
ಮೃತ್ಯುವಿನ ಕಾರ್ಮುಗಿಲು ನಿನ್ನನಾವರಿಸಿದಂದು ।
ನಿನ್ನ ದೃಷ್ಟಿಯು ನಷ್ಟಮಾಗೆ ನೀನಬಲನಾಗೆ ।
ನಿನ್ನ ಗತಿಯಿಂತೆಂದು ನಿನಗಾರು ತೋರ್ಪರೈಯ ।
ಜೀವ, ನೀಂ ಸಾವೆನ್ನಲೇಕಿಂತು ಭೀತನಾದೆ? ॥ ೪

“ಮೃತ್ಯುವಿನ ಕತ್ತಲೆಯು ಮುತ್ತಲೆತ್ತೆತ್ತಲುಂ
ಹಿಂದುಮುಂದುಗಳ ನಾನೆಂತು ತಿಳಿವೆಂ ।
ಎನಿಬರೋ ಜೀವರ್ಕಳಾ ಮೃತ್ಯುಮುಖವನೇ
ದುಃಖದಿಂ ಪೊಕ್ಕು ಪಿಂದಿರುಗದಿರ್ಪರ್‍ ।
ಮೃತ್ಯು ಬಳಿಸಾರಲಿನ್ನೆನಿಬರೋ ಚಿತ್ತದೊಳು
ಜಗದೊಡೆಯನನು ನೆನೆದು ನಲಿಯುತಿರ್ಪರ್‍ ।
ಮೃತ್ಯುವನು ಮರೆಮರೆತು ಬದುಕಿ ಮತ್ತೆನಿಬರೋ ।
ಮೃತ್ಯುಮುಖವನೆ ಕಡೆಗೆ ಸೇರುತಿರ್ಪರ್‍ ॥
ಅವರೊಳಾರುಂ ತಮ್ಮಹದನೆನಗೆ ತಿಳಿಪಲಾರರ್‍ ।
ಮೃತ್ಯುಭಯದಿಂ ಜಗವು ಗೋಳಿಡುತ ನಡುಗುತಿಹುದು ।
ನಿಚ್ಚಮಾ ಮೃತ್ಯುವಿನ ಬಳಿಗೆ ನಾಂ ನಡೆಯುತಿಹೆನು ।
ಅಲ್ಲಿನೆಲ್ಲಿಗೊ ಮುಂದೆ ನಾನದನದೆಂತು ತಿಳಿವೆಂ” ॥ ೫

ಏನಿದೇನಿಂತು ಪೇಳುವೆ, ಜೀವ, ನಿನ್ನಯಾ
ಬುದ್ಧಿ ಧೈರ್ಯಗಳಿನಿತು ಕುಂದಲೇಕೆ ।
ಲೌಕಿಕೋದ್ಯಮಗಳಲಿ ನಿನಗಿರ್ಪ ಜಾಣ್ಮೆಯದು
ಮೃತ್ಯುಮುಖದಲಿ ಮಾಯವಾಗಲೇಕೆ ।
ಮೋದ ಖೇದಗಳಂತೆ ಭೀತಿಯುಂ ನಿನ್ನಯ
ಸ್ವಾಭಿಮಾನದೆ ಪುಟ್ಟಿ ಬೆಳೆವುದಯ್ಯ ।
ಮತಿಯು ಮಂಕಾಗಲಜ್ಞಾನವಪ್ಪುದು ನಿನ್ನ
ಮತಿವೈಪರೀತ್ಯವೇ ಭೀತಿಯಯ್ಯ ॥
ದೇವದೇವನು ನಿನ್ನ ರಿಪುಗಳಂ ಸದೆವನಲ್ತೆ ।
ಆತನೆಡೆಯೊಳು ಭೀತಿಯೊಂದಿನಿಸುಮಾಗದಲ್ತೆ ।
ಆತನಿಂ ನಿನ್ನ ಕತ್ತಲೆಯೆಲ್ಲ ಪರಿವುದಲ್ತೆ ।
ಆತನಂ ಬಿಟ್ಟು ನೀಂ ಚಿಂತಿಪುದೆ ಮೌಢ್ಯಮಲ್ತೆ ॥ ೬

ಪಿಂತಾದುದಂ ಮುಂದೆ ಬರ್ಪುದಂ ಚಿಂತಿಪುದು
ಮರುಳುತನವೆಂಬುದನು ಮರೆಯಬೇಡೈ ।
ವರ್ತಮಾನದಿ ದೈವಭಕ್ತಿಯಂ ಸ್ಥಿರಗೊಳಿಸಿ
ಧರ್ಮಮಾರ್ಗದಿ ಚರಿಸಿ ಜಾಣನಾಗೈ ।
ಮೃತ್ಯುವಿಂ ನಿನಗಾವ ಹಾನಿಯುಂ ಬಾರದೈ
ಮರಣಭೀತಿಯು ಮೂರ್ಖಜನರಿಗಯ್ಯ ।
ಇಹದೊಳಂ ಪರದೊಳಂ ಪರಮೇಶನೊರ್ವನೇ
ತನ್ನ ಸಂತಾನದೊಡನಿರ್ಪನಯ್ಯ ॥
ಅವನಿನನ್ಯವನೊಂದ ಭಾವಿಪುದೆ ಪಾಪಮಲ್ತೆ ।
ಆತನೊಳೆ ಜೀವಕೋಟಿಗಳು ನಿಂದಿರ್ಪುವಲ್ತೆ ।
ಅವರನಾತಂ ಭ್ರಾತೃವಾತ್ಸಲ್ಯ ಸೂತ್ರದಿಂದಂ ।
ಬಂಧಿಸಿಹನಾ ಸೂತ್ರವಿಭಜನಮೆ ದುಃಖಮೂಲಂ ॥ ೭

ಜಗಮೆಂಬ ವೀಣೆಯಾ ತಂತ್ರಿಗಳೆ ಜೀವಿಗಳ್‍
ಅವರೆಲ್ಲ ಸಮದೊಳಿರೆ ಮಧುರ ನಿನದಂ ।
ಆ ತಂತ್ರಿಗಳೊಳಾವುದೊಂದು ವಿಷಮಿಸಿದೊಡಂ
ನಾದಮೆಲ್ಲಂ ಕೆಡುಗುಮದರ ಕತದಿಂ ।
ಜೀವ, ನೀನದರಿನಾ ಪ್ರೇಮ ಸೂತ್ರವನರಿಯು–
ತದರಂತೆ ಚರಿಸುವುದೆ ಧರ್ಮಸೂಕ್ಷ್ಮಂ ।
ಭೂತಹಿತವಾಚರಿಸೆ ಭೂತಲವೆ ನಾಕವೈ
ತಪ್ಪಿದೊಡೆ ಭೂತಲವೆ ನರಕವಯ್ಯ ॥
ನೀನೆನಿತು ಹಿತವನೆಸಗಿದೊಡೆ ನಿನಗನಿತು ಹಿತವೈ ।
ನೆರೆಹೊರೆಯ ದುಃಖಮೇ ನಿನಗೀಗ ನರಕ ದುಃಖಂ ।
ಅವರ ಸಂತಸಮೆ ನಿನ್ನಾತ್ಮಕ್ಕೆ ಪರಮ ಸುಖದಂ ।
ಅದರಿನಾವಗಮೆಸಗುತಿರು ಜೀವ ಲೋಕಹಿತಮಂ ॥ ೮

ಇಹದೊಳಂ ಪರದೊಳಂ ದಿನದೊಳಂ ನಿಶಿಯೊಳಂ
ಸರ್ವರಂ ಸರ್ವೇಶನೋವುತಿಹನು ।
ಮನಸಿಗಂ ಬುದ್ಧಿಗಂ ಗೋಚರಿಸದೆಡೆಗಳೊಳ್‍
ಸರ್ವ ಕಾಲಂಗಳೊಳಮಾತನಿಹನು ।
ನಿನ್ನಯ ಕ್ಲೇಶಂಗಳಾತನಿಂ ತೊಲಗುವುವು
ಆತನಭಯವನಿತ್ತು ಕಾವನಯ್ಯ ।
ಆತನಂ ನೆರೆನಂಬುತಾತನಾಜ್ಞೆಯನರಿಯು–
ತದರವೊಲು ಚರಿಪವನೆ ಧನ್ಯನಯ್ಯ ॥
ಆತನೊಲವಿಂ ನಿನ್ನ ದುರ್ಬಲವು ಸುಬಲವಹುದು 
ಆತನ ಪ್ರಭೆಯಿಂದೆ ತಮಸೆಲ್ಲ ನಾಶವಹುದು ।
ನೀನಾತನಲ್ಲಿ ನಿಲೆ ಭೂತಭವ್ಯಗಳ ಮಾತೇಂ ।
ಆ ಪರಬ್ರಹ್ಮನೊಳೆ ಸಕಲಮುಂ ಲೀನಮಲ್ತೆ ॥ ೯

ಗುಡಿಗೋಪುರಂಗಳಿಂ ದೀಪಧೂಪಂಗಳಿಂ
ಮಂತ್ರಪುಷ್ಪಂಗಳಿಂ ಪರನೊಲಿಯನೈ ।
ಪ್ರಾಣಿವರ್ಗದೊಳೆಲ್ಲ ಸೋದರತ್ವದಿ ಚರಿಪ
ಧರ್ಮಮಾ ದೇವಂಗೆ ನೈವೇದ್ಯಮೈ ।
ಕರುಣೆಯಿರ್ಪೆಡೆಯೊಳಾತನ ಶಾಂತಿಯಿರ್ಪುದೈ
ಲೋಕೋಪಕಾರಮಾತನ ಪೂಜೆಯೈ ।
ಶೋಕತಪ್ತರನಂಗಹೀನರಂ ದೀನರಂ
ಸಂತೋಷಗೊಳಿಪುದಾತನ ಸೇವೆಯೈ ॥
ಈ ಧರ್ಮತತ್ತ್ವಮಂ ನರರೆಲ್ಲ ತಿಳಿದು ನಡೆಯೆ ।
ದ್ವೇಷಮುಂ ಪಾಪಮುಂ ದುಃಖಮುಂ ದೂರ ತೊಲಗಿ ।
ಪ್ರೀತಿಯುಂ ಪುಣ್ಯಮುಂ ಶಾಂತಿಯುಂ ಸ್ಥಿರದಿ ನೆಲಸಿ ।
ಸ್ವರ್ಗಾಪವರ್ಗಗಳ್‍ ಭೂಮಿಯೊಳೆ ಸಿದ್ಧಿಸುವುವೈ ॥ ೧೦

No comments:

Post a Comment