Monday 5 February 2024

ಕೃಷ್ಣರಾಜ ಸಾಗರ - ನಿವೇದನ - ಡಿವಿಜಿ

ಕ್ರೀಡಾವಸ್ತು ವಿನೋದ ಪೇಟಿಕೆಯೆನಿಪ್ಪೀ ವಿಶ್ವಮಂ ಕೊಂಡು ನೀ ।
ವಾಡುತ್ತಗ್ಗದ ಜಾಣ್ಮೆಯಿಂದಮೊಲಿಸಲ್‍ ನಾಂ ಪಾರಿತೋಷಂಗಳಂ ॥
ನೀಡುತ್ತಿರ್ಪೆನೆನುತ್ತಲಾ ಪ್ರಕೃತಿ ಸಂಕೇತಗಳಿಂ ಪುತ್ರರಂ ।
ಬೇಡುತ್ತಿರ್ಪಳು ಕಾಡುತಿರ್ಪಳವಳಾ ತಂತ್ರಗಳೇಂ ಚೋದ್ಯಮೋ ॥ ೧ ॥

ಆ ವಿವಿಧ ವಸ್ತು ನಿಕರದೊ ।
ಳಾವಿಷ್ಟ ಮನಸ್ಕರಾಗಿ ತದ್ಯೋಜನೆಯೊಳ್‍ ॥
ಭಾವಿತ ಸುತಂತ್ರರಾದಾ ।
ಕೋವಿದರೀ ಭುವಿಗೆ ಮಾನ್ಯರವರೆ ವದಾನ್ಯರ್‍ ॥ ೨ ॥

ಶೀತಲ ಕಾವೇರೀ ಜಲ ।
ಪಾತದೆ ನಗರಗಳ ಬೆಳಗಿ ಕಜ್ಜಗಳೆಸಪಾ ॥
ಜ್ಯೋತಿಯ ನಿರ್ಮಿಸಿ ಭುವನ ।
ಖ್ಯಾತಿಯನೊಂದಿದನದೊರ್ವನತಿಶಯ ಚತುರಂ ॥ ೩ ॥

ಪರಿವಾ ಕಾವೇರಿಗೆ ನಾಂ ।
ಗಿರಿಯಂದದೊಳಡ್ಡವಿಟ್ಟು ಸರಸಿಯನತ್ತಲ್‍ ॥
ವಿರಚಿಸುವೆನೆಂದೊರ್ವಂ ।
ಪರಮೋತ್ಸಾಹದಿ ನೆಗಳ್ಚಿ ಮುಂದಡಿಯಿಟ್ಟಂ ॥ ೪ ॥

ಅವನಿಂದಾದುದು ನಯನೋ ।
ತ್ಸವಮಿದು ಶ್ರಿ ಕೃಷ್ಣರಾಜ ವಿಮಲ ಯಶೋ ವೈ ॥
ಭವಮಿದು ಜನಪದ ಸುಕೃತೋ ।
ದ್ಭವಮಿದು ಮೇಣ್‍ ಪುರುಷಕಾರ ಮಹಿಮಾನುಭವಂ ॥ ೫ ॥

ಪದ್ಯ ೧: ಕ್ರೀಡಾ... ಪೇಟಿಕೆ-ಆಟದ ಸಾಮಾನಿನ ಪೆಟ್ಟಿಗೆ Toy Box. ಕಾಡುತಿರ್ಪಳ್‍- Teases.
ಪದ್ಯ ೨: ವದಾನ್ಯರ್‍-ದೊಡ್ಡ ಮನಸುಳ್ಳವರು, ಉದಾರಿಗಳು.
ಪದ್ಯ ೩: ಮೈಸೂರಿನ (೧೮೮೩-೧೯೦೦) ದಿವಾನರಾಗಿದ್ದ ರಾಜ್ಯಧುರಂಧರ ಸರ್‍.ಕೆ. ಶೇಷಾದ್ರಯ್ಯರವರು.
ಪದ್ಯ ೪: ಮೈಸೂರಿನ (೧೯೧೨-೧೯೧೮) ದಿವಾನರಾಗಿದ್ದ ಸರ್‍. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

No comments:

Post a Comment