Saturday 17 February 2024

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

(ಮೋಹನ ರಾಗ)

ದಾರಿಹೋಕರು ನಾವು-ಊರ ತೊಡಕಿಗೆ ನಮ್ಮ ।
ಸೇರಿಸದೆ ಬಿಡಿರಿ ಸಖರೇ ॥ ಪ ॥

ದೂರದಿಂದಲಿ ಬಂದು–ಊರ ಸತ್ರದಿ ನಿಂದು । 
ಸಾರುವೆವು ಮುಂದಕಿಂದು-ಸಖರೇ ॥ ಅ–ಪ ॥ 

ಗುರುಗಳಾಣತಿಯಂತೆ ಚರಿಸುತಿರುವರು ನಾವು । 
ಇರಲಾಗದೆರಡುದಿನಮೊಂದೆಡೆಯೊಳಂ ॥ 
ಕೊರತೆ ಕನಲಿಕೆಗಳನು ಮರೆಯಿಪೆಮ್ಮಯ ಬಗೆಯ । 
ನೊರೆವೆವದನಾಲಿಪುದು ನೀಂ–ಸಖರೇ ॥ ೧ ॥ 

ಹೊರಟು ಮುಂಬೆಳಗಿನಲಿ ಶಿರದಿ ಭಾರವ ತಳೆದು । 
ಬಿರುಗಾಳಿ ಬೀಸುತಿರೆ ಭರದಿಂದ ನಡೆದು ॥ 
ತರುಣಿಯೊಲುಮೆಯ ಪಡೆದು ಹರುಷದಿಂ ಮುಂಬರಿದು । 
ತೊರೆಯೊಂದ ಕಂಡೆವತ್ತ–ಸಖರೇ ॥ ೨ ॥ 

ತೊರೆಯ ನೀರೊಳು ಮಿಂದು ಮರದ ನೆರಳಲಿ ಕುಳಿತು । 
ಶಿರದ ಬುತ್ತಿಯ ತಂಗಳೂಟವುಂಡು ॥ 
ಬಳಿಯ ತರುಗಳ ಬಳಸಿ ದೊರೆತ ಫಲಗಳ ಭುಜಿಸಿ । 
ಬಳಲಿ ಮಲಗಿದೆವತ್ತಲೇ–ಸಖರೇ ॥ ೩ ॥ 

ಖಗಕುಲದ ಕಲರವಂ ಬಗೆಬಗೆಯ ಪರಿಮಳಂ । 
ಮಿಗೆ ಸಂತಸವ ಸೂಸೆ ಮೈಯ ಮರೆತು ॥ 
ಸೊಗದಿ ನಿದ್ರಿಸಿ ಬಳಿಕಲೆಚ್ಚತ್ತು ನೀರ್ಗುಡಿದು । 
ಮಗುಳೆ ನಡೆದೆವು ಮುಂದಕೆ–ಸಖರೇ ॥ ೪ ॥ 

ತೆರಳಿ ಮುಂದಕೆ ಮುನ್ನ ಕರುಣಿಸಿದ ದಿನಪತಿಯ । 
ಕಿರಣಗಳು ಕನಲಿ ಬೇಯಿಸೆ ನಮ್ಮ ತನುವ ॥ 
ಮರದ ನೆರಳನು ಬಯಸಿ ಮುಗಿಲ ರಾಶಿಯನರಸಿ । 
ನಿರುಕಿಸಿದೆವಾಗಸವನು–ಸಖರೇ ॥ ೫ ॥ 

ಮುಗಿಲು ತಾನೊಂದೊಗೆದು ತಂಬೆಲರುಗಳನೆಸೆದು । 
ಗಗನವೆಲ್ಲವ ಕವಿಯೆ ನಲಿದು ನಡೆದು ॥ 
ಮಿಂಚೆಸೆದು ಸಿಡಿಲಿರಿದು ಮಳೆಗರೆಯೆ ನಾವಾಗ । 
ನಡನಡುಗೆ ನಡೆನಡೆದೆವೈ–ಸಖರೇ ॥ ೬ ॥ 

ನಡೆದು ಬಂದೀಯೂರ ಗುಡಿಯ ಸತ್ರವ ಸೇರಿ । 
ಬಡದಾರಿಗರ ಹಲವರನು ಕಂಡೆವು ॥ 
ಕೂಡಿ ನಾವವರೊಡನೆ ಪಾಡಿ ಸುದ್ದಿಗಳಾಡಿ । 
ಬಿಡುವೆವಿಲ್ಲಿಯೆ ನಿಶಿಯನು–ಸಖರೇ ॥ ೭ ॥ 

ಹೊರಟು ನಾವಿಲ್ಲಿಂದಲರುಣೋದಯದಿ ಮರಳಿ । 
ಭರದಿಂದ ಕಾಲಿಡುತ ಮರೆತು ಬಳಲಿಕೆಯ ॥ 
ಪರಿಪರಿಯ ನೋಟಗಳ ನೋಡಿ ರಾಗದಿ ಪಾಡಿ । 
ಸರಿವೆವಿನ್ನೊಂದೂರಿಗೈ–ಸಖರೇ ॥ ೮ ॥ 

ಪಯಣವನು ನಾವಿಂತು ಗೈಯುತಿಹೆವನುದಿನವು । 
ಬಯಕೆಗಳು ನಿಲವೆಮ್ಮೊಳರೆಗಳಿಗೆಯುಂ ॥ 
ಭಯವನರಿಯೆವು ಸಾಹಸಕ್ಕೆ ತೊಡಗೆವು ನಿಮ್ಮ । 
ದಯೆಯೊಂದೆ ಸಾಕು ನಮಗೈ–ಸಖರೇ ॥ ೯ ॥ 

ಊರುಗಳ ಸುತ್ತಿಹೆವು ಕೇರಿಗಳ ತಿರುಗಿಹೆವು । 
ಊರಿಗರ ಜಪ ತಪಂಗಳನರಿತೆವು ॥ 
ಊರಿನಲ್ಲಿರುವೆಲ್ಲುದಾರತೆಯ ಸವಿದಿಹೆವು । 
ಊರು ಸಾಕಿನ್ನು ನಮಗೈ–ಸಖರೇ ॥ ೧೦ ॥ 

ಅಳುವವರ ಕಂಡಿಹೆವು ನಗುವವರ ಕಂಡಿಹೆವು । 
ಕಂಡಿರುವೆವಳುಕಿಪರನಳುಕದರನು ॥ 
ದುರುಳರನು ಕಂಡಿಹೆವು ಮರುಳರನು ಕಂಡಿಹೆವು । 
ಕಂಡಿಹೆವು ಬಲ್ಲವರನು-ಸಖರೇ ॥ ೧೧ ॥ 

ನೋಡಿಹುದೆ ಸಾಕು ನಿನ್ಮೋಡಾಟಗಳನಿನ್ನು । 
ಗೂಡ ಸೇರುವ ಹಕ್ಕಿಯಂತೆ ನಾವು ॥ 
ಸಾರಿ ಮುಂದಕೆ ಜವದಿ ಸೇರಿ ನಮ್ಮಾಲಯವ । 
ಭಾರಗಳನಿಳುಹಬೇಕೈ–ಸಖರೇ ॥ ೧೨ ॥ 

ಹಳ್ಳಗಳ ಮುಚ್ಚುತ್ತ ಮುಳ್ಳುಗಳ ಬಿಸುಡುತ್ತ । 
ಒಳ್ಳೆದಾರಿಯ ತೋರಿ ಯಾತ್ರಿಕರಿಗೆ ॥ 
ಒಳ್ಳೊಳ್ಳೆ ಕಥೆಗಳನು ಪೇಳುತ್ತ ಕೇಳುತ್ತ । 
ತಳ್ಳುವೆವು ಚಿಂತೆಗಳನು–ಸಖರೇ ॥ ೧೩ ॥ 

ಇಂತೆಸಗಬೇಕೆಂಬ ಹಟದ ಬಂಧನವಿಲ್ಲ । 
ಪಂಥವಿದು ಕಡಿದೆಂಬ ಭೀತಿಯಿಲ್ಲ ॥ 
ಅಂತರಂಗದೊಳು ನಾವಾಂತು ಗುರುಗಳ ಪದವ । 
ಸಂತಸಿಪೆವವರ ನುಡಿಯಿಂ–ಸಖರೇ ॥ ೧೪ ॥ 

ಬಿದಿಯಣಕಿಪುದ ಕಂಡು ಹೆದರುವರು ನಾವಲ್ಲ । 
ಎದುರುಗೊಳ್ಳುವೆವದನು ವಿನಯದಿಂದೆ ॥ 
ಎದೆಯೊಳಿಹುದೆಮಗೊಂದು ಸುಧೆಯ ಸಾರದ ಬಿಂದು । 
ಅದ ಸವಿಯುತಳುಕದಿಹೆವೈ–ಸಖರೇ ॥ ೧೫ ॥ 

ಕಂಡುಕಂಡುದನೆಲ್ಲ ಬೇಡುವರು ನಾವಲ್ಲ । 
ಉಂಡು ಸುಖಿಪೆವು ಕೈಗೆ ಬಂದ ಫಲವ । 
ಎಮ್ಮ ಸುಖವೆಮಗಿಹುದು ನಿಮ್ಮ ದುಗುಡವು ನಿಮಗೆ । 
ನಿಮ್ಮೂರು ನಮಗೆ ಸಾಕೈ–ಸಖರೇ ॥ ೧೬ ॥

No comments:

Post a Comment