Saturday 23 March 2013

ಕಗ್ಗ ರಸಧಾರೆ ಹರಿಸಿದ ಮಹಾಶಯ ಡಿ.ವಿ.ಗುಂಡಪ್ಪನವರು

ಕಗ್ಗ ರಸಧಾರೆ ಹರಿಸಿದ ಮಹಾಶಯ ಡಿ.ವಿ.ಗುಂಡಪ್ಪ

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡು ಮೊಳೆನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ ||

ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿನ ಒಳಗೆ ಮತ್ತು ಹೊರಗೆ ಅದು ಜಡವಸ್ತುವೋ, ಜೀವ ಉಳ್ಳದ್ದೋ ಎಲ್ಲವುಗಳಲ್ಲಿ ಏನೋ ಒಂದು ವಿಶೇಷತೆಯ ಚೈತನ್ಯ ತುಂಬಿಕೊಂಡಿರುತ್ತದೆ. ಅದು ಯಾವುದೇ ರೀತಿಯ ಭಾವನೆಗೆ ಒಳಪಡದೆ ಪ್ರತಿಯೊಂದು ಜೀವಜಂತುವಿಗೂ ಶಕ್ತಿಯನ್ನು ನೀಡುತ್ತಲೇ ಇದೆ.

ಈ ಲೋಕದಲ್ಲಿ ನೆಡೆವ ಎಲ್ಲ ವಿಸ್ಮಯಗಳಿಗೆ ಜಗತ್ತು ಜಡವಾಗಿರುತ್ತದೆ ಅಂತೆಯೇ ಯಾವುದನ್ನೂ ನಾವು ತೂಗಲಾರದಂತ ವಿಶೇಷ ಶಕ್ತಿಯನ್ನೂ ಹೊಂದಿರುತ್ತದೆ ಇಂತಹ ಚೈತನ್ಯಕ್ಕೆ ತಲೆಬಾಗಿ ನಮಿಸು. ಡಿ. ವಿ ಗುಂಡಪ್ಪನವರ ಈ ಕಗ್ಗದ ಸಾಲುಗಳಂತೆ ಪ್ರಕೃತಿ ನಮಗೆ ನೀಡಿದ ಎಲ್ಲಾ ಚೈತನ್ಯಗಳಿಗೆ ನಮಿಸಲೇಬೇಕು
, ಅಂತೆಯೇ ನಮ್ಮೊಂದಿಗೆ ಇಂತಹ ಅದ್ಭುತ ಸಾಲುಗಳನ್ನು ಕೊಟ್ಟಿರುವಂತಹ ಆಧುನಿಕ ಸರ್ವಜ್ಞರಿಗೆ ನಮ್ಮ ನಮನ ಸಲ್ಲಿಸಲೇಬೇಕು.

ಸಾಹಿತ್ಯ ಒಂದು ರೀತಿ ಮನುಷ್ಯನಿಗೆ ಆದರ್ಶಗಳಿದ್ದಂತೆ ಅಲ್ಲದೆ ಯಾವುದೇ ಶತ ಶತಮಾನಗಳ ಸಾಹಿತ್ಯವನ್ನು ನೋಡಿದರೂ ಅಲ್ಲಿ ನಾವು ಕಾಣುವುದು ಸಂಸ್ಕೃತಿ, ಆಧ್ಯಾತ್ಮ, ದಾರ್ಶನಿಕ ಚಿಂತನೆ, ಒಳಿತಲ್ಲಿ ನಡೆಸುವ ಹಾದಿಯ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಇದೇ ರೀತಿ ಆಧುನಿಕ ಬದುಕಿನಲ್ಲಿ ’ಮಂಕುತಿಮ್ಮನ ಕಗ್ಗ’ ಇಂತಹ ಕೃತಿಯ ಮೂಲಕ ನಮ್ಮೆಲ್ಲರಲ್ಲಿ ಸುಸಂಸ್ಕೃತ ಮೌಲ್ಯವನ್ನು ಬಿತ್ತಿದವರು ಡಿ.ವಿ. ಗುಂಡಪ್ಪ.

ತಾಯಿ ಅಲಮೇಲು, ತಂದೆ ವೆಂಕಟರಮಣಯ್ಯನವರ ಮಗನಾಗಿ ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ, ದೇವನಹಳ್ಳಿಯಲ್ಲಿ ಜನಿಸಿದರು.  ಇವರು ತಮ್ಮ ಬಾಲ್ಯದಲ್ಲಿಯೇ ಸಂಸ್ಕೃತಾಭ್ಯಾಸದ ಜೊತೆಗೆ  ಇಂಗ್ಲೀಷ್ ಪಾಠವನ್ನು ಕೆ.ವಿ.ರಾಮಸ್ವಾಮಿ ಅಯ್ಯರ್ ಎಂಬುವರ ಬಳಿ ಕಲಿತರು. ಅವರು ಎಲ್. ಎಸ್ ತೇರ್ಗಡೆಯಾದ ನಂತರ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು.

ಆದರೆ ಅವರು ತಮ್ಮ ಮೆಟ್ರಿಕುಲೇಷನ್ ನಲ್ಲಿ ನಪಾಸಾದರು ಅಲ್ಲದೇ ಅದೇ ಸಮಯದಲ್ಲೇ ಅವರ ಅಜ್ಜ ಮತ್ತು ಅಜ್ಜಿ ಸಾವಿನಿಂದ ಊರಿಗೆ ಬಂದವರು ತಿರುಗಿ ಮೈಸೂರಿಗೆ ತೆರಳಲೇ ಇಲ್ಲ. ತದನಂತರ ತಮ್ಮ ವಿದ್ಯಾಭ್ಯಾಸವನ್ನು ಕೋಲಾರದ ಹೈಸ್ಕೂಲಿನಲ್ಲಿ ಕಳೆದರು. ಕೋಲಾರದ ವಿದ್ಯಾಭ್ಯಾಸ ಸಮಯದಲ್ಲಿ ಅಲ್ಲಿ ಚರಿತ್ರೆ ಪಾಠ ಮಾಡುತ್ತಿದ್ದಂತ ಕೃಷ್ಣಸ್ವಾಮಿ ಅಯ್ಯರ್ ರವರು "ಲಾರ್ಡ್ ಮಾರ್ಲ” ಬರೆದಿರುವಂತ ’ಗ್ಲಾಡ್ ಸ್ಟನ್’ ಜೀವನ ಚರಿತ್ರೆಯನ್ನು ಓದಲು ತಿಳಿಸಿದ್ದರು.

ಅಂತೆಯೇ ಡಿ.ವಿ.ಜಿಯವರು ಆ ಪುಸ್ತಕದ ಓದುವಿಕೆಯಿಂದಲೇ ತಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಂಡವರು. ಇದೇ ರೀತಿ ತಮ್ಮ ಜ್ಞಾನದ ಬೆಳಕನ್ನು ಬೆಳೆಸುತ್ತ ಬಂದ ಡಿ.ವಿ.ಜಿಯವರು ನಂತರದ ದಿನಗಳಲ್ಲಿ ಎಷ್ಟೋ ಸಂಸ್ಥೆಗಳಿಗೆ ತರ್ಜುಮೆ ಕೆಲಸವನ್ನು ಮಾಡಿ ಬಂದಿದ್ದ ಹಣದಿಂದ ಮತ್ತಷ್ಟು ಪುಸ್ತಕಗಳನ್ನು  ಕೊಂಡು ಓದಲು ಪ್ರಾರಂಭಿಸಿದರು.

ಇನ್ನೂ ಫ್ರೌಢಶಾಲೆಯಲ್ಲಿರುವಾಗ ಗುಂಡಪ್ಪನವರಿಗೆ ಭಾಗೀರಥಿ ಎಂಬವರೊಂದಿಗೆ ಮದುವೆಯಾಗುತ್ತಿದ್ದಂತೆ ಸಂಸಾರದ ಹೊರೆ ಹೊರಬೇಕಾದ ಕಾರಣ ಮುಳಬಾಗಿಲು ಶಾಲೆಯಲ್ಲಿ ಬದಲಿ ಉಪಾಧ್ಯಾಯರಾಗಿ ಸೇರಿಕೊಂಡರು. ಆನಂತರ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಮುಂದೆ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತ ಬಂದವರು ಪತ್ರಿಕೋದ್ಯಮ ವೃತ್ತಿಯನ್ನು ಆಯ್ದುಕೊಂಡರು. ಅಂದಿನ ಸೂರ್ಯೋದಯ ಪ್ರಕಾಶಿಕ, ಮೈಸೂರ್ ಟೈಮ್ಸ್, ವೀರಕೇಸರಿ, ಈವಿನಿಂಗ್ ಮೆಯಿಲ್, ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸಮಾಡಿದರು.

೧೯೦೮ ರಲ್ಲಿ ಪತ್ರಿಕಾ ದಿಗ್ಭಂಧನ ವಿಧಿಸಿದ್ದರಿಂದ ಮದರಾಸಿಗೆ ಹೋಗಿ "ಹಿಂದೂ"  ಮುಂತಾದ ಪತ್ರಿಕೆಗಳಿಗೆ  ಲೇಖನಗಳನ್ನು ಬರೆದರು. ನಂತರ ಬೆಂಗಳೂರಿಗೆ ಹಿಂದಿರುಗಿ ಕನ್ನಡ ಪತ್ರಿಕೆ ‘ಭಾರತಿ’ಯ ಸಹಸಂಪಾದಕತ್ವದಲ್ಲಿ ಕಾರ್ಯ ನಿರ್ವಹಿಸಿದರು. ೧೯೧೨ ರಲ್ಲಿ ಬೆಂಗಳೂರು ನಗರ ಸಭೆಯ ಸದಸ್ಯರಾದರು. ೧೯೧೩ ರಲ್ಲಿ  ವಾರಪತ್ರಿಕೆ ‘ಕರ್ನಾಟಕ’ ಪ್ರಾರಂಭಿಸಿ ನಂತರ ಹೊರ ತಂದ ಪತ್ರಿಕೆ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್‌. ೧೯೨೩ ರಲ್ಲಿ ಹೊರತಂದ ಪತ್ರಿಕೆ ‘ಕರ್ನಾಟಕ ಜನಜೀವನ ಮತ್ತು ’ಅರ್ಥ ಸಾಧಕ’. ಹೀಗೆ ಅಂದಿನ ರಾಜಕೀಯ ವಿದ್ಯಮಾನಗಳ ಕುರಿತು ಸತತವಾಗಿ ಪತ್ರಿಕೆಗಳಿಗೆ ಬರೆಯುತ್ತಲೇ ಬಂದರು.

 ಡಿ.ವಿ.ಜಿ ಅವರು ೧೯೨೬ ರಿಂದ ೧೯೪೦ವರೆಗೆ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಇಷ್ಟೆಲ್ಲಾ ಕೆಲಸಗಳ ಒತ್ತಡವಿದ್ದರೂ ತಮ್ಮ ಸಾಹಿತ್ಯಾಸಕ್ತಿಯನ್ನು ಮಾತ್ರ ಕಡೆಗಣಿಸಲಿಲ್ಲ ಇದೇ ಸಮಯದಲ್ಲಿ ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧಗಳು, ಕವನ ಸಂಕಲನಗಳು, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಕೃತಿಗಳನ್ನು ಹೊರತಂದಿದ್ದಾರೆ.

೧೯೩೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಇಲ್ಲಿ ಹಲವು ಬದಲಾವಣೆಗಳನ್ನು ತಂದರು. ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಮುಂತಾದ ಹಲವಾರು ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದರು. ಕರ್ನಾಟಕ ವೃತ್ತ ಪತ್ರಕರ್ತರ ಸಂಘ, ಶೀಘ್ರಲಿಪಿಕಾರರ, ಬರಹಗಾರರ ಸಂಘ, ಪಂಡಿತ ಮಂಡಲ, ರಾಮಾಯಣ ಮಹಾಭಾರತಾದಿ ಪ್ರಕಾಶನ ಸಮಿತಿ ಮುಂತಾದವುಗಳು ಇವರ ನೇತೃತ್ವದಲ್ಲಿ ನಡೆಯತೊಡಗಿದವು.
ಡಿ.ವಿ.ಜಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸು ಕಂಡಂತಹವರು. ಇವರು ಆಧುನಿಕ ಸರ್ವಜ್ಞ ಎಂದೇ ಜನಮನ್ನಣೆ ಪಡೆದವರು.

ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಶ್ರೀರಾಮ ಪರೀಕ್ಷಣಂ, ಅಂತಃಪುರಗೀತೆ, ಗೀತಾ ಶಾಕುಂತಲಾ, ನಿವೇದನ, ಉಮರನ ಒಸಗೆ, ವಸಂತ ಕುಸುಮಾಂಜಲಿ ಕವನಸಂಕಲನಗಳನ್ನುಹೊರತಂದಿದ್ದಾರೆ.ಮಕ್ಕಳ ಸಾಹಿತ್ಯವಾಗಿ ಬೆಕ್ಕೋಜಿ, ನಾಟಕಗಳಾಗಿ ಕನಕಾಲಕಾ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ ಮುಂತಾದ ನಿಬಂಧಗಳು, ಕನ್ನಡ ಮ್ಯಾಕ್‌ಬೆತ್‌, ವಿದ್ಯಾರಣ್ಯ ವಿಜಯ, ಜಾಕ್‌ಕೇಡ್, ಪ್ರಹಸನತ್ರಯೀ, ಪರಶುರಾಮ, ತಿಲೋತ್ತಮ ಹಾಗೂ ವಿದ್ಯಾರಣ್ಯ ವೃತ್ತಾಂತದಾದಾಬಾಯಿ ನವರೋಜಿ ಮುಂತಾದ ಜೀವನ ಚರಿತ್ರೆಗಳನ್ನು ಸಹ ಬರೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ೧೯೭೪ರಲ್ಲಿ "ಪದ್ಮಭೂಷಣ" ಪ್ರಶಸ್ತಿ ಹೀಗೆ ಹಲವು ಸನ್ಮಾನಗಳನ್ನು ಡಿ.ವಿ.ಜಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಯುತ ಡಿ.ವಿ. ಗುಂಡಪ್ಪನವರು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಈ ಮಂಕುತಿಮ್ಮನ ಕಗ್ಗದಲ್ಲಿ ತುಂಬಿದ್ದಾರೆ. ಅವರ ಈ ಕೃತಿಯು "ಕನ್ನಡದ ಭಗವದ್ಗೀತೆ" ಎಂದೇ ಪ್ರಸಿದ್ಧವಾಗಿದೆ.

ಆರ್ಥಿಕವಾಗಿ ಕಷ್ಟದಲ್ಲಿದ್ದಾಗ
, ಅನಾರೋಗ್ಯವಾಗಿದ್ದಾಗಲೂ ಡಿವಿಜಿಯವರು ವಿನೋದ ಭಾವದಲ್ಲೇ ಬೆಳೆದವರು. ಒಮ್ಮೆ ಸಾರ್ವಜನಿಕರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಅವರಿಗೆ ಕೊಡಲು ಸಮಾರಂಭ ಏರ್ಪಡಿಸಿದ್ದರು. ಅದನ್ನು ಮುಟ್ಟದೆ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಇದು ಡಿವಿಜಿಯವರ ದೊಡ್ಡತನ.

"ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳ ಸಮಹಿತವಾದ ಸಾಹಿತ್ಯ" ಎಂದು ಹಾ.ಮಾ.ನಾಯಕರು ಹೇಳಿದ್ದಾರೆ. ಡಿ.ವಿ.ಜಿಯವರು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷವಿದ್ದಂತೆ ತಮ್ಮನ್ನು ತಾವು ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಸಮಗ್ರವಾಗಿ ಸಮದೂಗಿಸಿಕೊಂಡು ಬಂದವರು. ತಮ್ಮ ೧೭ನೇ ವಯಸ್ಸಿನಲ್ಲಿ ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಿ ಅದೇ ಭಾಷೆಯಿಂದ ಹಲವು ಲೇಖನಗಳ ತರ್ಜುಮೆ ಮಾಡಬೇಕೆಂದರೆ ಒಂದು ಸಾಹಸದ ಕೆಲಸವೇ ಸರಿ.

ಡಿ.ವಿ. ಗುಂಡಪ್ಪನವರು ೧೯೭೫ ಅಕ್ಟೋಬರ್ ೭ರಂದು ಇಹಲೋಕ ತ್ಯಜಿಸಿದರೂ ಅವರ ಸಾಹಿತ್ಯ ಮುಖೇನ ಎಲ್ಲ ಮನಮನೆಗಳಲ್ಲಿ ನೆಲೆಸಿದ್ದಾರೆ.

ವಿಶದಮಾದೊಂದು ಜೀವನಧರ್ಮದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು – ಮಂಕುತಿಮ್ಮ ||

ಜೀವನ ಎಂದ ಮೇಲೆ ಕಷ್ಟ-ಸುಖ, ಒಳಿತು-ಕೆಡುಕು ಎಲ್ಲವೂ ಇದ್ದೇ ಇರುತ್ತದೆ. ಕಷ್ಟವನ್ನು ಸುಖವನ್ನಾಗಿ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಪ್ರಯತ್ನವೇ ಜೀವನದ ಜೀವಾಳವಾಗಬೇಕು ಎಂದು ಹೇಳುತ್ತಾರೆ ಅಂತೆಯೇ ಡಿ.ವಿ.ಜಿಯವರ ಬದುಕಿನ ದೃಷ್ಟಿಯೂ ಕೂಡ ಅದೇ. ಇಂತಹ ದಾರ್ಶನಿಕರ ಉಪದೇಶಗಳು ಸದಾ ಮನುಕುಲದ ಯಶಸ್ಸಿಗೆ ಕಾರಣವಾಗುತ್ತವೆ.


-ಸುಗುಣ ಮಹೇಶ್, ಕುವೈತ್

No comments:

Post a Comment