Tuesday, 10 October 2023

ಧರ್ಮಶ್ರವಣ - ಕೇತಕೀವನ - ಡಿವಿಜಿ

ಅರ್ಥವಾಗದ ಭಾಷೆ ಅಗಿಯಲಾಗದ ಭೋಜ್ಯ
ವೇದವೇದಾಂತಗಳ ಕಂತೆಯೆನಗೆ ಧರ್ಮಶ್ರವಣ 
ತತ್ವೋಪದೇಶವೆಂಬುದು ಬಾಯ ಬಡಿದಾಟ
ನೆಲಕಿಳಿಯದಿರುವ ಮೋಡಗಳ ಗಡಣೆ.

ಮನಸು ವಾಯುವಿನಂತೆ ಚಲಿಪುದೆತ್ತೆತ್ತಲೋ
ಒಂದೆಡೆಯೊಳಿರಲೊಲದು ನೆಲೆಯರಿಯದು
ಶಾಂತಿಯನೆ ಬಯಸಿದೊಡಮಲೆವುದದ ಗಳಿಸದೆಯೆ
ಗೆಲಲೆಳಸಿ ಕಲಿಯದಿಹ ಬಾಲನಂತೆ.

ಮನವೇನು ಪಶುವಲ್ಲ, ಮಾತೇನು ಹುರಿಯಲ್ಲ
ಮನವ ತಿದ್ದುವ ಯುಕುತಿ ಕೊರಲೊಳಿಲ್ಲ
ಮನವೊಂದು ಬಳಿನಿಂದು ಶಮವೊಂದಲದೆ ಸುಕೃತ
ಶಮವಿಲ್ಲದಗೆ ಶಾಸ್ತ್ರವಣಕು, ಮರುಳೆ.

Monday, 9 October 2023

ಬಾಳ್ಕೆಯ ತೋಟ - ಕೇತಕೀವನ


ಧರೆಯ ಜೀವನವೆಲ್ಲ
ಮರಣದೋಲಗವೆನುತ
ನರಳಿ ಫಲವೇನು ಸಖನೆ?
ಪಾಳಡವಿ ಧರೆಯೆಂದು
ಬಾಳು ಬರಿ ಕನಸೆಂದು
ಗೋಳಿಟ್ಟೊಡೇನು ಸುಖವೆ?

ಆದನಿತು ಸಂದನಿತು
ಕಾದಲ್ಮೆ ನಲ್ಮೆಗಳ
ಸಾದಿಪನ ಬದುಕು ಬರಿದೆ?
ಬಂದನಿತು ಸೊಗದಿನಾ
ನಂದವಡುವುದ ಬಿಟ್ಟು
ದಂದುಗದೊಳಿಹುದು ಸರಿಯೆ?

ಸಂತಸವದೇಕೆನುತ
ಚಿಂತೆಗೆಲ್ಲವ ತೆರಲು
ಪಂತವೇಂ ಬೊಮ್ಮನೊಡನೆ?
ಒಣಗು ಬಾಳ್ವೆಯಿದೆಂಬ
ಉಣಲಿಹುದ ಕಹಿಯೆಂಬ
ಒಣ ವಿರತಿಯವಗೆ ಮುಡುಪೆ?

ತವಿಸಿ ನೀಂ ಬಾಯ್ಬಿಡಲು
ಕಿವಿಗುಡುವರಾರದಕೆ?
ಕಿವುಡನಾ ಬಿದಿಯರಿಯೆಯಾ?
ಏಸುಜನರಳಲುವರು
ಏಸೇಸು ಬಳಲುವರು
ಗಾಸಿಯೇ ಗೆಲವೆನುವೆಯಾ?

ಸಾವ ಬೆದರಿನ ಸೆಕೆಗೆ
ಜೀವ ಸುಮವನು ಬಿಸುಟು
ಏವೈಪುದೊಂದು ಸಯ್ಪೆ?
ಒದಗಿ ಬಂದುದ ಕೊಳುತೆ
ಬಿದಿಯನಿದಿರಿಸಿ ನಗುತೆ
ಬದುಕ ಮೇಲೆನಿಸೆ ತಪ್ಪೆ?

ಇಳೆಯ ಬಾಳ್ಕೆಯ ತೋಟ-
ದೊಳಗೆ ಮುಳ್ಳಿಹುವು, ದಿಟ,
ಬಳಸಿಹುದು ಮಿತ್ತು ಪೊನಲು;
ಇರಲಿ, ನೀನಿತ್ತಲುಳಿ-
ದಿರುವಂದು ಮರೆಯದಿರು
ಸರಸಕಲ ಸುಮ ಫಲಗಳ.

ಮರಣ ತಪ್ಪದೆನುತ್ತೆ
ಇರುವನ್ನ ಮತ್ತತ್ತು
ದೊರೆತಿನಿಸುಮಂ ಬಿಡುವುದೇಂ?
ಮೃತ್ಯುವಿನ ಕಡಲ ತಡಿ
ನೃತ್ಯಭುವಿಯಾದೊಡೇಂ
ನರ್ತನಂ ರಮ್ಯವಲ್ತೆ?

Sunday, 8 October 2023

ತಾಜ್‍ಮಹಲ್‍ - ಕೇತಕೀವನ

ಯಾಮುನೆಯು ಮೆಲುಮೆಲನೆ ಕುಲುಕಿ ಸರಿಯುತಿರೆ
ಯಾಮಿನೀಪತಿಯೊಲಿದು ನೋಡಿ ನಗುತಲಿರೆ
ಆ ಸರಸ ಸಡಗರದ ಸುದ್ದಿಯನು ಪವನಂ
ಆಸೆಯಿಂ ಪೊತ್ತು ಬೆಳ್ಬೆಳಗುವರಮನೆಯ
ಪೂದೋಟದಲಿ ಸಾರಿ ಸುಳಿಸುಳಿದು, ಸರಿದು
ಮೋದದಿಂ ಮಲ್ಲಿಗೆಯ ನಸುನಗಿಸುತಿರ್ದಂ.

ಈ ಬಗೆಯ ಸರಸ ಸಲ್ಲಾಪಮಮರುತಿರೆ
ಆ ಬಳಿಯೊಳೊಂದು ಬೆಳ್ಗದ್ದುಗೆಯ ಮೇಲೆ-
ಕೆರೆಯ ನಡುವೊಳದೊಂದೆ ಮರವು ನಿಂತಂತೆ-
ಹರೆಯದುಕ್ಕೆವದ ಬಳಿ ಜರೆಯು ಸುಯ್ದಂತೆ-
ಬಿಳ್ಪುತಣ್ಪುಗಳ ಆ ಕಡಲ ನಡುನೆಲೆಯೊಳ್‍
ಕುಳ್ಳಿರ್ದನಾ ಮೊಗಲದೊರೆ ಷಾಜಹಾನಂ.

ಕುಳ್ಳಿರುತೆ ಮಲಗುತ್ತೆ ಮತ್ತೆ ಕುಳ್ಳಿರುತೆ
ತಲ್ಲಣವ ಕಳೆಯಲ್ಕೆ ಪಕ್ಕ ತಿರುಗುವನು.
ಅಂತಿರುತಲೋರೊರ್ಮೆ ಕಣ್ಣನರೆತೆರೆದು
ಮುಂದೆಸೆಯಲೀಕ್ಷಿಸುವನರೆ ನಗುತಲೊಮ್ಮೆ
ಮತ್ತೊಮ್ಮೆ ನಿಟ್ಟುಸಿರ ಬಿಡುವನಿನ್ನೊಮ್ಮೆ
ಎತ್ತಿ ಶಿರವನು ಮೆಲ್ಲನೇನನೋ ನುಡಿವಂ.

ಮುಂದೆಸೆಯಲೀಕ್ಷಿಸಲು ನದಿಯೆದುರು ಕರೆಯೊಳ್‍
ಇಂದುವಿಂ ಬೀಳ್ದೊಂದು ಸೊದೆಯೊಟ್ಟಿಲಂತೆ-
ಪಾಲ್ಗಡಲೊಳಿಟ್ಟ ಬೆಣ್ಣೆಯ ಬೊಂಬೆಯಂತೆ
ಬೆಳ್ದಿಂಗಳೊಳ್‍ ರಂಜಿಸಿತ್ತೊಂದು ಸೌಧಂ.
ಆಗಸದ ನೀಲದಲಿ ಮುಗಿಲ ಚೂರುಗಳು
ಸಾಗರದ ನೊರೆಯಂತೆ ತೇಲಾಡುತಿರಲು
ಆ ಪ್ರಕೃತಿ ಕಜ್ಜಲದ ಪಟಕಂದವಾಗಿ
ಶುಭ್ರ ಸೌಧದ ರೂಪಮೆಸೆವುದನುವಾಗಿ.

ಎತ್ತರದಿ ಕಂಗೊಳಿಸೆ ಶಿಖರಗೋಪುರಗಳ್‍
ಅತ್ತಿತ್ತಲೆದ್ದೆಸೆಯಲುದ್ಯಾನ ತರುಗಳ್‍
ಮಾತಿಗೆಟುಕದದೊಂದು ಸೊಗಸಿನತಿಶಯದಿಂ
ನೇತುರ ವನಗಲಗೊಳಿಸಿಡುವೊಂದು ಚೆಲುವಿಂ
ಮನವ ಮರುಳುಗೊಳಿಪ್ಪ ಭಾವದೊಂದಿಂಬಿಂ
ತನುವ ಮರೆಯಿಪದೊಂದು ಮೋಹನದ ತಣ್ಪಿಂ
ರಮ್ಯತೆಯ ಬೀಡಾಗಿ ಸೊಗದ ನಾಡಾಗಿ
ಸೌಮ್ಯಕಾಗರಮಾಗಿ ಶಾಂತಿಗೆಡೆಯಾಗಿ
ಪ್ರೀಯತೆಯ ಸನ್ನಿಧಿಯೊ ಸರಸತೆಯ ನೆಲೆಯೊ
ಮಾಯೆಯಂತಃಪುರಮೊ ಗಂಧರ್ವ ಗೃಹಮೊ
ಬಿರಯಿಗಳ ಕಾವಿನಿಂ ಕುದಿವಿಳೆಯ ತಣಿಸೆ
ಮರುಕದಿಂ ಗಗನವೆರಚಿದ ತುಹಿನಚಯಮೊ
ಧರೆ ತನ್ನವರ ನಲ್ಮೆಯತಿಶಯವ ದಿವಕೆ
ಅರಿಪೆ ಪಿಡಿದೊಂದು ಕೋಮಲ ಧವಳ ಸುಮಮೋ
ಎನ್ನಿಪವೊಲೆಸೆಯುತಿಹುದಾ ಗೌರಭವನಂ
ಬಣ್ಣಿಸಲ್ಕಾಗದಾ ಶಿಲ್ಪಿಗಳ ಕವನಂ.

ಅದ ದಿಟ್ಟಿಸಿದನದಕೆ ಬಾಳನಿತ್ತರಸಂ
ಮೃದುಹೃದಯನಾ ಷಾಜಹಾನ್‍ ಪರಮ ಸರಸಂ
ನೋಡುತ್ತ ಬಿಸಸುಯ್ಯುತೊರ್ಮೆ ಬಾಯ್ದೆರೆದು
ಗೂಢವನುಸಿರ್ದನಾ ದ್ಯುತಿಗೆ ಮನಸೋತು :-

“ಏಸು ಜನ ಘಾಸಿಸಿದರೀ ಸೊಬಗಿಗಾಗಿ
ಏಸು ದಿನ ದುಡಿದರವರೀ ಬೆಡಗಿಗಾಗಿ
ಏಸು ದೂರದೊಳಲೆದು ಸೊದೆಯದುರನಾಯ್ದು
ಬೇಸರದೆ ಕೊರೆದರೆದು ಬಗೆ ಬಗೆದು ಬಿಗಿದು
ಏಸು ಸಹನೆಯ ತಾಳಿ ಸಾಹಸವ ತೋರಿ
ಸಾಸಿರರ್‍ ತಾಮೊಂದು ಮನದಂತೆ ಪೂಡಿ
ನಿರವಿಸಿದರೀ ಜಗದ ಕಣ್ಣ ಹಬ್ಬವನು-
ಮರುಕ ಹರಿಸಗಳ ಬೆರೆಸಿರುವ ಕಬ್ಬವನು!
ಆಹ! ಸುಕೃತಿಗಳವರು ಧನ್ಯಾತ್ಮರವರು
ನೇಹದಳಿಯದ ಕುರುಹ ಲೋಕಕಿತ್ತವರು!

ನರನಾರಿಯರ ನಿರ್ಮಲಾನುರಾಗವನು
ಸ್ಥಿರಹೃದಯರುನ್ನತ ಪ್ರೇಮವೇಗವನು
ವಿಶ್ವವೆಲ್ಲವ ಬಿಗಿವ ದಿವ್ಯಸೂತ್ರವನು
ಶಾಶ್ವತದಿ ಸೃಷ್ಟಿಯೊಳು ಕಾಂಬ ತತ್ತ್ವವನು
ಜಗದಿ ಸುಖಸಾರಮೆನಿಪೊಲುಮೆಯನದೆಂದುಂ
ಪೊಗಳುತ್ತೆ ಬಗೆಗೊಳಿಪುದಲ್ತೆಯೀ ಸದನಂ.


ಆಹ! ಇದರಿಂದೆನ್ನ ಬಾಳಹುದು ಸಫಲಂ
ಆಹ! ಇದರಿಂದೆನಗೆ ದೊರೆವುದಿನಿಸು ಜಸಂ
ಉಳಿದುದೇನಿಹುದಿನ್ನು-ಅಳಿಯದಿಹುದೇನು?
ಕಳೆದುಪೋದುವದೆಂದೊ ಧರೆಯ ಭಾಗ್ಯಗಳು
ಎನ್ನೊಡಲಿನಿಂದೊಗೆದು ಎನ್ನುಣಿಸನುಂಡು
ಎನ್ನೊಲುಮೆಯಿಂ ಬೆಳೆದರೆನ್ನನೇ ಮರೆತು
ಎನ್ನೆದುರಿನಲಿ ಕಾದುತೆನ್ನವರ ಕೊಲಿಸಿ
ಎನ್ನ ರಾಜ್ಯವನೆನಗೆ ನರಕವೆನಿಸಿಹರು.
ಅವರೊಳಣ್ಣದಿರನಹ! ಕೊಲೆಗೈಸಿ ನೀಚಂ
ಆವರಂಗನಕಟಕಟ! ತಂದೆಯಿವನೆನದೆ
ಎನ್ನ ಮನೆಯೊಳೆ ಎನ್ನ ಬಂದಿಯಾಗಿಸಿಹಂ
ಬನ್ನವಿದರಿಂದದೇಂ? ಜೀವದಿಂದಿನ್ನೇಂ?
ಜರೆಯೊಡಲನಿರಿಯುತಿರೆ ಹರಣ ಕುಗ್ಗುತಿರೆ
ಮರುಜೀವದಂತಿದ್ದ ಸತಿ ದಿವವನಡರೆ
ಸುತನೆ ತಾನರಿಯಾಗೆ ಹಿತರಿಲ್ಲದಾಗೆ
ಮೃತಿಯಿಂದೆ ಸೌಖ್ಯಗತಿ ಯಾವುದುಂಟೆನಗೆ?
ಸಿರಿಯಿಲ್ಲ ತಿರೆಯಿಲ್ಲ ಮಿತ್ರರಿಲ್ಲೆನಗೆ
ನಲವಿಲ್ಲ ಒಲವಿಲ್ಲ ಮಾನವಿಲ್ಲೆನಗೆ
ಇಹುದದೊಂದೊಳ್ನೆನಪು ನಲ್ಮೆಯೊಂದೊಲಪು
ಇಹುದದಾ ಬೆಳ್ಸರಿಯೊಳಾಸರೆಯ ಪಡೆದು.


ಅವಳ ಬೆಳ್ಜಸವ ತೋರ್ಪಾ ಬೆಳ್ಪಿನಲ್ಲಿ
ಅವಳ ಸೊಬಗನು ತೋರಿಪಾ ಸೊಬಗಿನಲ್ಲಿ
ಅವಳಿಗಾನಿಟ್ಟ ಆ ಬಾಷ್ಪಕಣದಲ್ಲಿ
ಅವಳು ನೆರೆನಿದ್ರಿಪಾ ಸಿತಶಯನದಲ್ಲಿ
ಅಲ್ಲಿಹುದುಸುಖವೆನಗೆ ಅಲ್ಲಿಹುದು ಶಮವು
ಅಲ್ಲಿಗೆಂದಿಗೆ ಪೋಪೆನೆಂದಲ್ಲಿ ಶಯಿಪೆಂ?


ಇನ್ನೇಸು ದಿನವಿತ್ತಲಿರಲಿ ನಾಂ-ದೇವ?
ಇನ್ನಾವುದನು ಕಾಣಲಿರುವುದೀ ಜೀವ?
ತನುವಿತ್ತ, ಮನವತ್ತ; ಬೇವ ಬಿಸಿಯಿತ್ತ,
ತಣಿಪು ಸೂಸುವ ಕೂರ್ಮೆಯಮೃತರಸವತ್ತ;
ಇಹವಿತ್ತ, ಪರವಿತ್ತ; ಜಗದ ಮುಳಿಸಿತ್ತ,
ಅಹಿತರಂ ಮರೆಯಿಪಾ ಸೊಗದ ನೆಲೆಯತ್ತ.
ಅತ್ತಲೆಂದಿಗೆ-ದೇವ-ಕರೆದೊಯ್ವೆಯೆನ್ನ?
ಅತ್ತಲಾ ಸನ್ನಿಧಿಗೆ ಸಾರುವುದೆ ಪುಣ್ಯ
ತಡೆಯೆನೀ ಸಂಕಟವ, ದಯೆ ತೋರು, ವಿಧಿಯೆ.
ಒಡಲ ತೊಡಕನು ಬಿಡಿಸಿ ಸೇರಿಸವಳೆಡೆಗೆ.


ಆಹ! ಅವಳಿರಲು ನಾಂ ಕೊರಗಿ ಕರಗುವೆನೆ?
ಮೋಹನೆಯ ಬಳಿಸಾರಿ ಮಿಕ್ಕುದೆಣಿಸುವೆನೆ?
ಕಿರುನಗೆಯ ಆ ಮೊಗವೊ! ಆ ಕಣ್ಣ ಹೊಳಪೋ!
ಅರುಮೆಯಾ ನಸುಬಿಸಿಯ ಮಿದುಕೈಯ ಸೋಂಕೋ
ಆ ಹರುಷದಪ್ಪಿಕೆಯೊ ಅ ಸರಸವಾಕ್ಕೊ
ಆಹ! ಅದನೆಲ್ಲ ನಾಂ ಮರೆತಿಹೆನೆ? ಮರೆಯೆಂ.
ಅದನೆ ಬಯಸುವುವೆನ್ನ ಕರಣಂಗಳಿನ್ನುಂ
ಅದರ ನೆನಪೊಂದೆನಗೆ ಸಗ್ಗ ಸುಖವಿಂದುಂ."

ಇಂತು ದೊರೆ ಷಾಜಹಾನನ ಕುಗ್ಗುಕೊರಲಿಂ-
ದಂತರಂಗದ ಶಿಖಿಯ ಕಣಗಳುಣ್ಮುತಿರೆ
ಇಂಗಡಲ ಕಡೆಯೆ ಸಿರಿಯೇಳ್ದು ಬಂದಂತೆ
ಮಂಗಡೆಯ ಸಿತಸೌದ ಕಲಶದಿಂದೊಂದು
ಪರಮಕಾಂತಿಯ ರೂಪು ಸೌಂದರ್ಯದೊಡಲು
ದರ ಹಸಿತವನು ತೋರಿ ದಯೆ ಬೀರಿತಾಗಳ್‍.
ಬೆರಗಾದನದ ಕಂಡು; ಪುಲಕಮೊಂದಿದನು;
ಕರಗಳನು ಚಾಚಿದನು; ಮರೆತನೆಲ್ಲವನು,
ಪನಿಯುಣ್ಮೆ ಕಂಗಳಲಿ, ಮನದಾಸೆಯುಣ್ಮೆ
ಅನುನಯದ ದನಿಯಿಂದಲಿಂತೆಂದನವನು :-


“ಹಾ! ಪ್ರಿಯಳೆ, ಬಂದೆಯ? ಅದೆತ್ತಣಿಂ ಬಂದೆ?
ಹಾ! ಪ್ರಿಯಳೆ, ತಂದೆಯ? ಅದೇಂ ಮುದವ ತಂದೆ?
ಬಾರೆನ್ನ ಜೀವಿತವೆ, ಬಾರೆನ್ನ ಸಿರಿಯೆ.
ಬಾರೆನ್ನ ಮಮ್‍ತಾಜೆ, ಬಾರೆನ್ನ ನಿಧಿಯೆ.
ಬಂದೆನಗೆ ಕೈ ನೀಡು, ಮೈದಡವು, ನೋಡು;
ನೊಂದಿಹೆನು, ಬೆಂದಿಹೆನು; ಬಂದು ಕಾಪಾಡು."


ಈ ತೆರದಿ ಹಂಬಲಿಸಿ ದೊರೆ ಕರವ ಮುಗಿದು
ಮಾತುಗಳ ನಿಲಿಸಿದನು, ಕಣ್ಣ ಮುಚ್ಚಿದನು
ಕನಸಿನಲಿ ಸೊಗವಡುವನಂತೆ ಮೊಗದೊಳಗೆ
ಇನಿಸು ತಳೆದನು ಶಾಂತಿಯರೆನಗೆಯ ಕಳೆಯ.


ನೋಡಿರಾ ಕನಸಿನೈಸಿರಿಯ ಬೆಳ್ಸರಿಯ
ನೋಡಿರಾಗ್ರಾಪುರದ ಗರುವದಾಸರೆಯ
ನೋಡಿರೊಲವಿನ ಪರಿಯನದರಳಲ ನೊರೆಯ
ನೋಡಿರಾ ಬಿದಿಯನೆದುರಿಪ ನಗೆಯ ನೆರೆಯ
ಪ್ರೇಮಿಗಳ ಮಾನ್ಯತೆಯ ಶಿಲ್ಪಧನ್ಯತೆಯ
ಭೂಮಿಯೊಂದುನ್ನತಿಯ ಕಣ್ಣ ಪುಣ್ಯತೆಯ.

Saturday, 7 October 2023

ಹಂಪೆ - ಕೇತಕೀವನ

ಈ ಮುರಿದ ಗೋಪುರಗಳೀ ಬಿರಿದ ಗುಡಿಗಳ್‍
ಈ ಮೆರೆದ ಕೋಟೆಗಳ ಪಾಳ್ಗೋಡೆ ಕಲ್ಗಳ್‍
ಈ ಭಗ್ನ ರಾಜಗೃಹ ಶಿಷ್ಟ ವೇದಿಕೆಗಳ್‍
ಈ ಬಿತ್ತರದ ಬೀದಿಸಾಲ್ಗಳೀ ಪಥಗಳ್‍

ಈ ನಷ್ಟದೇಗುಲಗಳೀ ಸೌಧಕಣಗಳ್‍
ಈ ನೂರು ಕಾಲುವೆಗಳೀ ಶಿಲ್ಪದಣುಗಳ್
ಇಂದೆನ್ನೊಳೊಗೆಯಿಸುತ್ತಿರ್ಪೊಂದು ಬೆರಗಂ
ಅಂದು ತಮ್ಮಂದಚಂದದಿನೊಗೆಯಿಸಿದುವೇಂ?

ಆಗಳಾ ವಿಜಯಸಾಮ್ರಾಜ್ಯಮಿರ್ದಂದು
ಭೋಗಸೌಭಾಗ್ಯಂಗಳಟ್ಟಹಾಸಂಗಳ್‍
ಬಣ್ಣಿಸಲ್ಕಾಗದವೊಲಿರ್ದವದರಿಂದೇಂ–
ಮನ್ನಣೆಯ ಗೆಲಿಸುವೀ ಬೆರಗಂದುಮಾಯ್ತೇಂ?
ತರುಣತೆಯೊಳಿಲ್ಲದಿಹ ಪೆರ್ಮೆ ತಾನೊಂದು
ದೊರೆಕೊಳ್ವುದಲ್ತೆ ಜೀರ್ಣತೆಯೊಳೆಲ್ಲರ್ಗಂ?

ವಂದಿಸುವೆನ್‍, ಎಲೆ ಕಾಲಪುರುಷ, ನಿನಗಿಂದು
ಸಂದ ನಿನ್ನಿರಿತಗಳಿನಳಿದುಳಿದು ನಿಂದು
ಅರ್ಚ್ಯತೆಯನಚ್ಚರಿಯನುಚ್ಚಚರಿತೆಯನುಂ
ಪೆರ್ಚಿಸಿಕೊಳುತ್ತಿರ್ಪುವೀ ಶಿಲೆಗಳಿನ್ನುಂ.

ರಾಜಾಧಿರಾಜರುಗಳಿತ್ತ ಮೆರೆದಂದು
ವಾಜಿ ಗಜ ತೇರುಗಳು ಪರಿದೋಡಿದಂದು
ಜನಪದದ ಸಿರಿಯಿತ್ತ ನಲಿದಾಡಿದಂದು
ಜನದ ಸಂದಣಿಯಿತ್ತ ಕಳಕಳಿಸಿದಂದು
ಆರಿಂತು ಪರಿಕಿಸಿದರೀ ಶಿಲೆಯ ತೊಲೆಯ
ಆರರಸಿ ಬಳಸಿದರು ಮಂಟಪದ ಕಲೆಯ?

ಮನವಲೆವುದೊರ್ಮೆ, ದಿಟ, ಪಿಂತಿನೊಳ್ಗತೆಗೆ
ನೆನಪೋಡುತಿಹುದಂದಿನುತ್ಸವದ ಕಡೆಗೆ
ಆದೊಡೇನೀತೆರದಿ ಕಾಲಲೀಲೆಯನು
ಬೋಧಿಪುವೆ ನೂತನದ ಪುರಗೋಪುರಗಳು?
ಮಾನವನ ಮನದಿಂಬು ಕಾಲನ ಕರುಂಬು
ಮಾನವನ ಕೈಮಾಳ್ಕೆ ಕಾಲನ ಕನಲ್ಕೆ
ಈ ರಭಸಗಳ್‍ ಮೊರೆಯುತಿಹುವು ಹಂಪೆಯೊಳು
ಹೋರುತಾ ಪ್ರಾಕ್ತನದ ಶಕಲರಾಶಿಯೊಳು.

ಓ ಪೊನಲೆ, ಓ ಬನವೆ, ಓ ಮಲೆಯ ಸಾಲೆ
ಆ ಪೊಳಲು ನುಂಗಿದಿರೆ! ನುಂಗಿ ಬೆಳೆದಿಹಿರೆ!

Friday, 6 October 2023

ಇಂದ್ರಿಯ ಜಯ - ಕೇತಕೀವನ

ತನುವೇಂ ಮಣ್ಕೊಡವೆಂದೆನ್‍ ಈ ಧರೆಯ ಮೋಹಂಮತ್ತಿನೀಡೆಂದೆನೀ ।
ಮನಮಂ ಸುಟ್ಟಪೆನೆಂದೆನುಗ್ರತಪದಿಂ ಜಾಣಿಂದೆ ಮಾಯಾವಗುಂ– ॥
ಠನಮಂ ಸೀಳ್ಚುವೆನೆಂದೆನಂದಹಹ ನೋಡಲ್ಕೀಗಳಾ ವಿಶ್ವಮೋ- ।
ಹಿನಿ ತಾನೆನ್ನೊಳೆ ಸುಯ್ಯುತಿರ್ಪಳಡಗಿರ್ದಂಭೋಧಿಯೌರ್ವಾಗ್ನಿವೋಲ್‍ ॥

ಕಿವಿಯಂ ಮುಚ್ಚಿದೆನಕ್ಷಿಯಂ ಬಿಗಿದೆನಾಘ್ರಾಣಕ್ಕೆ ಕಟ್ಟಿಕ್ಕಿದೆಂ ।
ಸವಿಯಂ ದಂಡಿಸಿದೆಂ ತ್ವಗಿಂದ್ರಿಯಮಂ ಪಾಳ್ಗಟ್ಟಿದೆಂ ಗೆಲ್ದುದೇಂ ॥
ಶವದಂತಿರ್ದೊಡಮೆನ್ನ ಸಂಸ್ಮೃತಿಯೊಳಾ ಸಂಮೋಹನಾಕಾರಮು– ।
ದ್ಭವಿಸುತ್ತೆನ್ನಯ ಚಿತ್ತಕುಬ್ಬೆಗವ ಗೆಯ್ಸುತ್ತಿರ್ಪುದೇವೇಳ್ವುದೋ ॥

Thursday, 5 October 2023

ಮಾಟಗಾರ - ಕೇತಕೀವನ

ಮಾಟಗಾರನೆ ನಿನ್ನ ಮಾಟಂಗಳಿನಿಸಿರಲು
ಪಿರಿದಿದೆನುತರಿವುದೆಂತೋ ।
ಕೋಟಿ ಬೆರಗುಗಳೆನ್ನ ಮರುಳುವಡಿಸಲದೊಂದ
ಮಿಗಿಲೆನುತ ಬಗೆವುದೆಂತೋ ॥

ಒಡಲ ತಣಿಪುದೆ ಪಿರಿದೊ ಮನವಲೆಪುದೆ ಪಿರಿದೊ
ಮತಿಯ ಮರಿಯಿವುದೆ ಪಿರಿದೋ ।
ಪೊಡವಿಯೊಳು ಬೆಳೆದಿಹುದೊ ಬಾಂದಳದಿ ಬೆಳಗಿಹುದೊ
ಜೀವಿಗಳ ಕೆರಳಿಸಿಹುದೋ ॥

ಪೊಂಬಿಸಿಲೊ ತಂಬೆಲರೊ ತಾರಗೆಯೊ ಕಾರಿರುಳೊ
ಸುರಿಮಳೆಯೊ ಸುಳಿವ ಮುಗಿಲೋ ।
ಪೊನಲ ತೆರೆಗಳ ಪೆಂಪೊ ಬನದ ಪೂಗಳ ಕಂಪೊ
ಪಕ್ಕಿಗಳ ಪಾಡಿನಿಂಪೋ ॥

ಪಸುಳೆಗಳ ಪೊಸನುಡಿಯೊ ಮುಗುದೆಯರ ಮೆಲುನಡೆಯೊ
ಕಲಿತರೋದುಗಳ ಪಡೆಯೋ ।
ಚೆಂದುಟಿಯೊ ನುಣ್ದನಿಯೊ ಕಂಬನಿಯೊ ಕಿರುನಗೆಯೊ
ಪಿರಿಯರಿವಿನ ನಲುಮೆಯೋ ॥

ಮಲೆಯ ಸಾಲಿನ ಬಲುಹೊ ಕಡಲಿನಲೆಗಳ ಸೆಡಕೊ
ಸಿಡಿಲು ಮಿಂಚುಗಳ ಬೆಡಗೋ ।
ಚೆಂದಳಿರೊ ತಣ್ಗದಿರೊ ಪಸಿರೆಲೆಯೊ ಬಿಸಿಬೆಳಕೊ
ಮಿಸುಮಣಲೊ ಮುಸುರ್ವ ನೆರಲೋ ॥

ಚೆಲುಮೊಗದ ಪುಸಿಮುನಿಸೊ ಒಲುಮೆನೋಟದ ಮಿನಿಸೊ
ಬಲುಮೆಯುಬ್ಬರದ ಸೆಣಸೋ ।
ನಲಿದು ಕುಣಿದಾಡುವುದೊ ಮುಳಿದು ಪರಿದೋಡುವುದೊ
ಅಲುಗದುಲಿಯದೆ ಬಾಳ್ವುದೋ ॥

ಇಳೆಯ ಮೈಸಿರಿ ಪಿರಿದೋ ಗಗನದೈಸಿರಿ ಪಿರಿದೊ
ನರನೆದೆಯ ಸುಯಿಲೆ ಪಿರಿದೋ ।
ತಿಳಿಯಲರಿಯದೆ ಮತಿಯು ತೊಳಲುತಿಹುದಿಲ್ಲಲ್ಲಿ
ನೆಲೆ ತೊರೆದ ಮರುಳನಂತೆ ॥

ಒಂದು ಗಳಿಗೆಯಲೊಂದು ದೆಸೆ ತೋರುತಿದೆ ನಿನ್ನ
ಬೆರಳ ಯುಕುತಿಗಳನೆನಗೆ
ಚಿತ್ರಿಗರ ಚಿತ್ರಿಗನೆ ಕವಿಕುಲದ ಕವಿಕಲೆಯೆ
ಸೊಗಸುಗಳ ಸೊಗದ ನೆಲೆಯೇ ॥

To receive the posts on your personal email, pls subscribe to https://groups.google.com/g/todayskagga

Wednesday, 4 October 2023

ಬಿನ್ನಹ - ಕೇತಕೀವನ

 [ನನ್ನ ತಾಯ ಅಣ್ಣಂದಿರು ಸಂಪ್ರದಾಯಸ್ಥರು. ಅವರು ಪ್ರತಿ ಸಾರಿಯೂ ಭೋಜನಾರಂಭದಲ್ಲಿ ಆಪೋಶನ ತೆಗೆದುಕೊಳ್ಳುವುದಕ್ಕೆ ಮುನ್ನ ಒಂದು ತೆಲುಗು ಪದ್ಯ ಹೇಳುತ್ತಿದ್ದರು. ಅದರ ಅನುವಾದ ಹೀಗೆ:]


ಒಂದು ಚಣ ಮುಂದಿಲ್ಲ,
ಒಂದು ಚಣ ಹಿಂದಿಲ್ಲ,
ತಂದೆ, ನೀಂ ಪೇಳ್ದ ದಿನ ಬದುಕಿ;

ಒಂದಗಳು ಹೆಚ್ಚಿಲ್ಲ,
ಒಂದಗಳು ಕೊರೆಯಿಲ್ಲ,
ತಂದೆ, ನೀನಿಟ್ಟೂಟವುಂಡು;

ಒಂದುಸಿರು ಮೇಲಿಲ್ಲ,
ಒಂದುಸಿರು ಕೀಳಿಲ್ಲ,
ತಂದೆ, ನೀಂ ಕೊಟ್ಟುಸಿರನುಸಿರಿ;

ಎಂದು ನೀಂ ಕರೆವೆ ನಾ-
ನಂದು ಬಹೆನಾದರದಿ
ತಂದೆ, ನಿನ್ನಡಿಯೆನ್ನ ನೆಲಸು.