Showing posts with label DVG DVGundappa. Show all posts
Showing posts with label DVG DVGundappa. Show all posts

Wednesday, 22 November 2023

ಚೋದ್ಯ - ಕೇತಕೀವನ - ಡಿವಿಜಿ

ಹಾಡಿನೊಳಗಿಂಪಿಹುದು; 
ಮೋಡದೊಳು ತಂಪಿಹುದು 
ಆದೊಡಿದು ಚೋದ್ಯಂ. 

ಹಾಡು ಬರುವುದು ತುಟಿಗೆ 
ತುಟಿ ದೊರೆಯದಂದು 
ಮೋಡ ಸುರಿವುದು 
ಧರೆಗೆ ದಿವ ಕರಗುವಂದು 
ಭೇದವಿದು ಹೃದ್ಯಂ.

************************

ಕವಿಸೃಷ್ಟಿಯಾದ ಕಾವ್ಯದೊಳಗೆ ಇಂಪು ಹುದುಗಿರುತ್ತದೆ. ಗಾಯಕನ ಕಂಠದಿಂದ ಹಾಡಾಗಿ ಹೊರಹೊಮ್ಮಿದಾಗ ಕಾವ್ಯದೊಳಗಿನ ಇಂಪು ಕೇಳುಗನಿಗೆ ಅನುಭವವೇದ್ಯ! 
 ವರುಣನ ಕೃಪೆಯಿಂದ ಗಗನವೇರಿದ ಮೋಡದೊಳಗೆ ತಂಪಿದೆ ಎಂಬುದು ಯಾರಿಗೂ ಅನುಭವವಾಗದು. 

ಆಗಸದ ಮೋಡವು ಕರಗಿ ಮಳೆಯಾಗಿ ಭೂಮಿಯನು ಸ್ಪರ್ಶಿಸಿದಾಗ ಮೋಡದೊಳಗಿನ ತಂಪಿನ ಸಾಕ್ಷಾತ್ಕಾರವಾಗುತ್ತದೆ.  ಇದು ಸೋಜಿಗವಲ್ಲವೇ! 

ತುಟಿಗಳ ಸಂಸ್ಪರ್ಶದಿಂದ ಹಾಡು ಜೀವಚೈತನ್ಯದ ಸೃಷ್ಟಿಯಾಗುತ್ತದೆ. ಇಂಪಿನ ಅನುಭವ ಸಾಕ್ಷಾತ್ಕಾರವಾಗುತ್ತದೆ.

ಮಂತ್ರಕ್ಕೆ ಮಾವು ಉದುರುವುದಿಲ್ಲ. ಹಾಡುವುದರಿಂದ ಮೋಡ ಕರಗಿ ಮಳೆಯಾಗಿ ಧರೆಯನ್ನು ತಂಪಾಗಿಸುವುದಿಲ್ಲ. ಮೋಡವು ಮಳೆಯಾಗುವ ಬಗೆಗೆ ಅದೆಷ್ಟು ಬಣ್ಣಿಸಿದರೂ,     ಮಳೆಯಾಗಿ ಸುರಿಯಲಾರದು. ಮೋಡವು ಮಿಂಚಿನ ಸಂಸ್ಪರ್ಷದಿಂದ ಮಳೆಯಾಗಿ ಸುರಿಯುವುದು. ತುಟಿಮೀರಿದ  ಅನುಭವದಿಂದ ದಿವ ಕರಗಿ ಧರೆಗೆ ಸುರಿಯುವುದು‌.
 
ಇನಿಯ ಇನಿಯೆಯರ ಮಾತುಮೀರಿದ ದಿವ್ಯ  ಸಂಸ್ಪರ್ಶದಿಂದ ಮೋಡ ಕರಗುವುದು. ಮಳೆಯು ಸುರಿಯುವುದು. ಅನುಭವೈಕಗೋಚರದಿಂದ ಚೈತನ್ಯವೊಂದರ ಸೃಷ್ಟಿಯಾಗುವುದು ಕೌತುಕವಲ್ಲವೇ! 
ಮೋಡ ಕರಗಿ ಮಳೆಯಾಗಿ ಸುರಿಯುವುದು ದೈವಕೃಪೆ!
 
ದೈವಸಂಬಂಧದ ಕೃಪೆಯಾಗಿ ಮಾತಿಗೆ ಮೀರಿದ ಜೀವಸೃಷ್ಟಿಯೂ ಕೌತುಕವಲ್ಲವೇ!            

ಮಳೆ ಸುರಿಯುವ ನಿಸರ್ಗದ ಪ್ರತಿಮೆಯಿಂದ ಜೀವಸೃಷ್ಟಿಯ  ಕೌತುಕವನ್ನು ಡಿವಿಜಿಯವರು ಅದ್ಭುತವಾಗಿ  ಕಟ್ಟಿಕೊಟ್ಟಿದ್ದಾರೆ. ಕವಿಯ ಕಾವ್ಯಸೃಷ್ಟಿ, ಇಳೆಗೆ ಮಳೆ ಹಾಗೂ ಜೀವಸೃಷ್ಟಿಗಳ ಹಿಂದೆ ದೈವಕೃಪೆಯನ್ನು ಕವಿತೆಯು ಧ್ವನಿಸಿದೆ
     
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Friday, 3 November 2023

ಕಲ್ಯಾಣಮುನಿಯ ಪಶ್ಚಾತ್ತಾಪ - ಕೇತಕೀವನ - ಡಿವಿಜಿ

ಪುಣ್ಯದೇಶವ ತೊರೆದು ಧನ್ಯಚರಿತೆಯ ಮರೆತು
ದೂರ ಬಂದೆ
ವೇದಬಾಹಿರನಾಗಿ ಸಾಧುವರ್ಜಿತನಾಗಿ
ಜಾರಿ ನಿಂದೆ

ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್‍

ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ

ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.

Wednesday, 1 November 2023

ಪೌರವ - ಕೇತಕೀವನ - ಡಿವಿಜಿ

ಮಾಹುತ- ದೊರೆಯೆ ನೋಡುವುದಿತ್ತ ತಕ್ಷಶಿಲೆಯರಸು ಬರುತಿಹರು ಭರದಿಂದಲೋಡಿ ಬರುತಿಹನು.
ಪೌರವ- ಯವನರೂಳಿಗದವನೆ? ತನ್ನವರ ಹಗೆಯೆ?

ಮಾಹುತ- ಬವರದೀ ನಡುವಿನಲಿ ಬಹನೇಕೊ, ತಿಳಿಯೆಂ.

ಪೌರವ- ಬರಲಿ; ಹೇಡಿಗೆ ಸಲುವ ಮನ್ನಣೆಯ ಪಡೆದು ಮರುಗಲಿನಿಸಾದೊಡಂ ತನ್ನ ದುಷ್ಕೃತಿಗೆ.

[ತಕ್ಷಶಿಲೆಯರಸನಾದ ಶಾಂಬರಿಯು ಪ್ರವೇಶಿಸುವನು]

ಶಾಂಬರಿ- ಭಳಿರೆ! ಮೆಚ್ಚಿದೆ ಸಖನೆ ನಿನ್ನ ಸಾಹಸವ. ನಿಲಿಸಿನ್ನು ರಣವ; ಬಲವಂತರೊಳ್‍ ಹಟವೆ?

ಪೌರವ- ತೊಲಗೆಲವೊ ಶಾಂಬರಿಯೆ; ಸಖನಾರು ನಿನಗೆ? ಕುಲವಂಚಕನ ಕೂಡೆ ಸಖ್ಯವೇನೆನಗೆ?

ಶಾಂಬರಿ- ಸೈರಿಸೆಲೆ ಪೌರವೇಂದ್ರನೆ; ನೀಗು ಚಲವ.

ಸಾರಿರುವೆ ಶೂರತನದೆಲ್ಲೆಗದು ಬರಿದೆ.
ಪ್ರತಿಕೂಲನಿರೆ ಕಾಲನವನನೆದುರಿಸುವಚ
ತುರೆಯ ಫಲವೇನು? ಕಷ್ಟವದು ಬಗೆಯೆ.
ತೊರೆಯಿನ್ನು ಸಾಹಸವ; ಬಿಡು ನಿನ್ನ ಹಟವ
ಅರಿಬಲವ ಮರೆತು ನೀನೆನಿತು ಹೋರಿದಡೇಂ?

ಪೌರವ- ತೆರಳು, ತೆರಳೆಲೆ ನೀಚ, ನಿನ್ನೊಡನೆ ನುಡಿಯೇಂ?
ಗರುವ ಬಿಟ್ಟಿಹ ನಿನ್ನ ಬದುಕೊಂದು ಬದುಕೇಂ?
ಕರೆದು ಯವನನ ನಿನ್ನ ಮನೆಗೆ ಬಾರೆಂದು
ತೆರೆದು ಬಾಗಿಲನವನ ಕರೆದಿತ್ತ ತಂದು
ಸೈರಣೆಯ ಬೋಧಿಪೆಯ-ವಂಶಘಾತಕನೆ?
ಸಾರು ಯವನನ ಬಳಿಗೆ, ಸೇರವನ ಪದವಂ.

ಶಾಂಬರಿ- ಲಾಲಿಸೆಲೆ ಧೀರ ನೀಂಮೇಲುಮೆಯ
ಮಾತ-ಸೋಲುಗೆಲುವುಗಳೆಮ್ಮ ಕೈಯೊಳಿಹುವಲ್ಲ;
ಮೆಚ್ಚಿಹನು ಯವನಪತಿ ನಿನ್ನ ಸಾಹಸವ,
ನಚ್ಚಿ ನೀನವನೊಡನೆ ಸಂಧಿಯನು ಬೇಡು;
ನೀಡುವನು ಮನ್ನಣೆಯ; ನೀಡುವನು ಹಿತವ;
ಮಾಡಿಪೆನು ಸಖ್ಯವನು; ಬಿಡು ನಿನ್ನ ಚಲವ.

ಪೌರವ- ಎಲವೆಲವೊ! ಸಾಕು ನಾಣ್ಚಿಲ್ಲದೀ ಜಾಣ್ಮೆ
ಕುಲಗೇಡಿಗಾವ ಹಟ? ನರಿಗಾವ ನಿಯಮ?
ನಾಡಳಿದು ನಾಡಾಣ್ಮನುಳಿದೊಡೇಂ ಸೊಗಮೋ?
ಬೇಡಿ ರಿಪುಭಿಕ್ಷದಿಂ ಬಾಳ್ದೊಡೇಂ ಜಸಮೋ!
ಹರಿಚಿತ್ತದಂತಕ್ಕೆ! ಪುರುಕುಲದ ರಾಜಂಶಿರವ
ಬಾಗಿದನೆಂಬ ಸೊಲ್ಲಿಲ್ಲದಿರ್ಕೆ.
ಲೇಸ ನೀನೆಳಸುವೊಡೆ ಸಾಕು ಪೋಗಿನ್ನು,
ಸೈಸಲಾರೆನು ಧೂರ್ತದರ್ಶನವನಿನ್ನು,
ಸಾರು ಯವನನ ಬಳಿಗೆ; ಸೇರವನ ಮರೆಯಂ
ತೋರದಿರು ವಂಶವಂಚನೆಯನಿನ್ನಾನುಂ.

[ಮಾಹುತನ ಕಡೆ ತಿರುಗಿ-]

ನಡೆ ಮುಂದೆ, ಮಾಹುತನೆ; ಬಿಡು ಕರಿಯ ಭರದಿ.

ಶಾಂಬರಿ- ಸುಡುವೆನೀ ಗರ್ವವನು; ನೋಡೆನ್ನ ಬಿರುಬ.

[ಹೋಗುವನು]

ಮಾಹುತ- ಅತ್ತ ಬರುತಿದೆ ದೇವ ಪಿರಿಯದೊಂದು ಪಡೆ
ಮುತ್ತುತಿಹುವಾಗಸವ ಕರಿಯ ಮೋಡಗಳು
ವಿಷಮ ವೇಳೆಯೊಳೀಗ ಮಾಳ್ಪುದೇಂ, ದೊರೆಯೆ?


ಪೌರವ- ಅಸುವನರ್ಪಿಸುವಂಗೆ ವಿಷಮವೇಂ, ಸಮವೇಂ?
ತ್ವರಿತದಿಂ ನಡಸು ಹಸ್ತಿಯನತ್ತ ನಿಂತು
ಧುರದ ಮಧ್ಯದಿ ಹೋರಿ ಹರಣಗಳ ಕುಡುವಾ.

[ಸಿಡಿಲು ಮಿಂಚುಗಳ ಹೊಡೆತ]

(೨)

ಅಲೆಗ್ಸಾಂಡರ್‍- ವೀರ ನೀನೆಲೆ ಸಖನೆ, ಪೌರವೇಶ್ವರನೆ
ತೋರಿದೈ ಸಾಹಸವ, ಕಡುಪರಾಕ್ರಮವ,
ಈ ನಾಡೊಳಿಹರು ನಿನ್ನಂದದವರೆಂದು
ನಾನರಿಯದಾದೆನಾ ಶಾಂಬರಿಯ ನಚ್ಚಿ.

ಪೌರವ- ಆ ಮಾತದಂತಿರಲಿ, ಯವನಪತಿ ನಿನ್ನ
ಸಮರನೀತಿಯಿದೇನು? ನಿನ್ನ ಭಟರೆನ್ನ
ಗಾಯವಡಿಸೆವೆನುತ್ತಲಾಯುಧವ ಬಿಸುಟು,
ಆಯದಿಂ ಪಿಡಿದಿಲ್ಲಿಗೇಕೆ ತಂದಿಹರು?

ಬಾ, ಬಲದ ಕುರುಹಿರ್ದೊಡದನೆನಗೆ ತೋರು
ಈ ಭುಜದ ಸೋಜಿಗವನಿನಿಸು ನೀಂ ನೋಡು
ಧೀರತನವಲ್ತಿಂತು ಸೆರೆವಿಡಿವುದೆನ್ನ
ಹೋರಿ ಜೀವಕೆ ಜೀವವೀವೆನೈ ಮುನ್ನ.

ಅಲೆಗ್ಸಾಂಡರ್‍- ಎಳಸೆ ನಾಂ ನಿನ್ನಳಿವ; ಪೌರವನೆ ನಿನ್ನ
ಗೆಳೆತನವೆ ಬೇಕೆನಗೆ; ನಾನದರಿನಿವರ
ನಿಯಮಿಸಿದೆ ನಿನ್ನನೈತರಿಪುದೆಂದಿತ್ತ
ಬಯಕೆಯನು ಸಲಿಸುವೆನು; ಬೇಳ್ಬುದೇಂ ಬೆಸಸು.

ಪೌರವ- ಬೇಡುವನು ನಾನಲ್ಲ; ಬೇಳ್ಬುದೇನೆನಗೆ?
ನೀಡುವನು ನೀನಲ್ಲ; ಬೇರೆಯಿರುವನವನ್‍.
ನ್ಯಾಯದಿಂ ನಡೆವೊಡೆಲೆ ಯವನಪತಿ ಕೇಳು
ರಾಯನಂ ರಾಯನಿದಿರ್ಗೊಳುವಂತೆ ಕಾಣು.

ಅಲೆಗ್ಸಾಂಡರ್‍- ಧೀರ ನೀನೆಲೆ ಸಖನೆ, ನೀನೆ ಗಂಡುಗಲಿ.
ಬಾರೆಲೈ ನೀಡು ನೀಂ ಕೈಯನೊಲವಿನಲಿ.

Tuesday, 31 October 2023

ವಿಚಿತ್ರ ಮುತ್ತು - ಕೇತಕೀವನ - ಡಿವಿಜಿ

ನಸೀರ್‍ ಕವಿ-

ಅರಲೊಂದರಿಂ ಪುಟ್ಟಿ
ಬಿರಿದೊಂದು ವಜ್ರವನು
ಎರಗುವುದು ಮಗುಳ್ದೊಂದು ಕುಸುಮದೊಳು ತಾಂ ॥
ಮಿರುಗುವಾ ಮುತ್ತು ತಾ-
ನರೆ ಕರಿಯದಾಗಿರ್ಪು-
ದೊರೆ ನೀನದಾವುದೋ ಜೇಬ ಉನ್ನಿಸಳೇ ॥

ಜೇಬ ಉನ್ನೀಸಾ-

ನಳಿನ ನಯನದಿನೊಗೆದು
ತೊಳಸಿ ನೋಡುವನೆದೆಯ-
ನಿಳಿದ ಕೈಯ ಗುಲಾಬಿಯೊಳಕೆ ಬೀಳ್ವಾ ॥
ಜಳ ಬಿಂದು ಸುಂದರಿಯ-
ಳಳುಗಣ್ಣ ಕಾಡಿಗೆಯ
ತಳೆದಿಹುದನರಿಯೆಯಾ ಪ್ರಿಯ ನಸೀರ್‍ ಕವಿಯೆ? ॥