Saturday, 13 January 2024

ಭಾಗ 7 - ಅರಣ್ಯಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಮಹರ್ಷಿ ಶುಶ್ರೂಷಾಸಕ್ತಂ ತದ್ವೈರಿಧ್ವಂಸನೋದ್ಯತಮ್‍ ।
ಜಾನಕೀವಿರಹಾರ್ತಂ ಶ್ರೀರಾಮಂ ನೌಮಿ ಸಲಕ್ಷ್ಮಣಮ್‍ ॥

ಅಯೋಧ್ಯಾಕಾಂಡವನ್ನು ರಾಮಾಯಣಗ್ರಂಥದ ಹೃದಯಭಾಗವೆಂದು ವರ್ಣಿಸುವುದುಂಟಷ್ಟೆ? ಅದೇ ರೂಪಕವನ್ನು ಮುಂದುವರಿಸಬೇಕೆನ್ನಿಸಿದರೆ, ಅರಣ್ಯಕಾಂಡವನ್ನು ರಾಮಾಯಣಹೃದಯದ ಅಂತರಂಗವೆನ್ನುವುದು ಯುಕ್ತವಾಗುತ್ತದೆ. ಹೃದಯಚಕ್ರದ ಹೊರಗಿನ ಸುತ್ತುಕಟ್ಟು ಅಯೋಧ್ಯಾಕಾಂಡದ ಕಥೆ. ಆ ಚಕ್ರದ ನಡುವಣ ನಾಭಿಕುಂಭ ಅರಣ್ಯಕಾಂಡದ ಕಥೆ.

ಈ ಎರಡು ಕಾಂಡಗಳು ಹೃದಯಭೇದಕಗಳಾದವು. ಅಯೋಧ್ಯಾಕಾಂಡದಲ್ಲಿ ಶ್ರೀರಾಮಮೂರ್ತಿಯೊಬ್ಬನು ನಮ್ಮ ಹೃದಯವಿದ್ರಾವಣಕ್ಕೆ ಕಾರಣಭೂತನಾದರೆ, ಅರಣ್ಯಕಾಂಡದಲ್ಲಿ ರಾಮಸೀತೆಯರಿಬ್ಬರಿಗಾದ ಘಟನೆಗಳೂ ಎದೆಯನ್ನು ಬಿರಿಯಿಸುವಂಥವು. ಸೀತೆಗೆ ಬಂದ ವಿಪತ್ತು ಹೆಚ್ಚು ಸಂಕಟಕರವಾದದ್ದೆಂದು ಕೆಲವರಿಗನ್ನಿಸಬಹುದು. ನಾನು ಅಂಥವರಲ್ಲೊಬ್ಬ.

ಎರಡು ಕಾಂಡಗಳಲ್ಲಿಯೂ ಇಬ್ಬರ ಸತ್ತ್ವಪರೀಕ್ಷೆಯೂ ಆಗುತ್ತದೆ. ಅಯೋಧ್ಯಾಕಾಂಡದಲ್ಲಿ ಎದ್ದು ಕಾಣುವ ಸಂಗತಿ ಶ್ರೀರಾಮನ ಸತ್ಯಶ್ರದ್ಧೆ ಮತ್ತು ತ್ಯಾಗಸಿದ್ಧತೆ. ಸಹಜವಾಗಿ ತನಗೆ ಬರಬೇಕಾಗಿದ್ದ ರಾಜ್ಯವನ್ನು ಆತನು ಸತ್ಯದ ಕಾರಣದಿಂದ ಪರಿಗ್ರಹಿಸಲೊಲ್ಲದೆ ವನವಾಸಕ್ಕೆ ತೆರಳಿದ. ಈ ವಿರಕ್ತಿ ಮಹೋದಾರವಾದದ್ದು. ಅರಣ್ಯಕಾಂಡದಲ್ಲಿ ಎದ್ದು ಕಾಣುವ ಸಂಗತಿ ಸೀತೆಯ ವ್ರತಪರಿಪಾಲನೆ ಮತ್ತು ಕಷ್ಟಸಹಿಷ್ಣುತೆ. ಆಕೆ ಎದುರಿಸಬೇಕಾಗಿದ್ದ ಸನ್ನಿವೇಶ ರಾಮನಿಗಿದ್ದುದಕ್ಕಿಂತ ಹೆಚ್ಚು ದಾರುಣವಾದದ್ದು.

ಅಯೋಧ್ಯಾಕಾಂಡದ ಪ್ರಸಂಗವಿಲ್ಲದೆ ರಾಮಾಯಣದ ಕಥಾರಂಭವಿಲ್ಲ. ಅರಣ್ಯಕಾಂಡವಿಲ್ಲದಿದ್ದರೆ ಕಥೆ ಅಲ್ಲಿಗೇ ಕುಂಟುಬೀಳುತ್ತಿತ್ತು. ವನವಾಸಕ್ಕಾಗಿ ಹೊರಟ ಶ್ರಿರಾಮನು ಹದಿನಾಲ್ಕು ವರ್ಷಗಳ ಕಾಲ ನಾನಾ ನದೀಪರ್ವತಗಳನ್ನೂ ನಾನಾ ಅರಣ್ಯಪ್ರದೇಶಗಳನ್ನೂ ನೋಡಿಕೊಂಡು ಪ್ರವಾಸ ಸಂತೋಷಭರಿತನಾಗಿ ಅಯೋಧ್ಯೆಗೆ ಹಿಂದಿರುಗಬಹುದಾಗಿತ್ತು. ಅದು ದೇಶಾಟನೆಯ ವೃತ್ತಾಂತ (Travelogue) ಆಗುತ್ತಿತ್ತು. ಶ್ರೀರಾಮನನ್ನೂ ಸೀತಾಲಕ್ಷ್ಮಣರನ್ನೂ ಮಹಾದೇಶಸಂಚಾರಿಗಳೆಂದು (Great Travellers) ಲೋಕದಲ್ಲಿ ಪರಿಗಣಿಸಲಾಗುತ್ತಿತ್ತು. ಅವರನ್ನು ಮಹಾವೀರಪಂಕ್ತಿಯಲ್ಲಿ ಗಣಿಸಲು ಕಾರಣವಿರುತ್ತಿರಲಿಲ್ಲ. ರಾಮಾಯಣದ ಮುಖ್ಯವಿಷಯ ರಾವಣ ವಿನಾಶ, ಅಥವಾ ಧರ್ಮವಿರೋಧಿಯ ದಂಡನೆ. ಇದಕ್ಕೆ ಕಾರಣವೊದಗಿದ್ದು ರಾವಣನು ಮಾಡಿದ ಸೀತಾಪಹರಣದಿಂದ. ಆದದ್ದರಿಂದ ಕಥೆಯ ಬೀಜಾಂಕುರ ಅರಣ್ಯಕಾಂಡದಲ್ಲಿದೆಯೆಂದಾಗುತ್ತದೆ.

ಹೀಗೆ ವಸ್ತುಸಂಗತಿಯನ್ನೂ ತತ್ತ್ವವನ್ನೂ ಆಲೋಚಿಸಿ ನೋಡಿದರೆ, ಕಾವ್ಯಕ್ಕೆ ತಕ್ಕ ಹೆಸರು ಸೀತಾಯನವೆಂಬುದು ನ್ಯಾಯವಾಗುತ್ತದೆ. ಜಾನಕೀದೇವಿಗೆ ಆ ವಿಪತ್ತು ಬಾರದೆ ಹೋಗಿದ್ದಿದ್ದರೆ, ಅಥವಾ ಆಕೆಯಲ್ಲಿ ಅಂಥ ವ್ರತನಿಷ್ಠೆ ಇಲ್ಲದೆಹೋಗಿದ್ದಿದ್ದರೆ ರಾಮಕಥೆಯ ದಾರಿ ಬೇರೆಯಾಗಬೇಕಾಗಿತ್ತು. ಕಥೆಯ ಲೋಕೋತ್ತರರೂಪಕ್ಕೆ ವಸ್ತುವನ್ನೊದಗಿಸಿದವಳು ಸೀತಾದೇವಿ.

ಹೀಗೆ ಹೇಳಿದ್ದರಿಂದ ಶ್ರೀರಾಮನ ಮಹತ್ತ್ವಕ್ಕೇನೂ ಕುಂದಾಗಲಾರದು. ಆತನು ಮಹಾಧೀರನೆಂಬುದು ಕಥಾರಂಭದಲ್ಲಿಯೇ ನಮಗೆ ಪ್ರತ್ಯಕ್ಷವಾಗಿದೆ. ಆತನು ಹಾಗಾಗದೆ ಸೀತಾವಿರಹಾನಂತರದಲ್ಲಿ ಬೇರೆ ರೀತಿ ನಡೆದುಕೊಂಡಿದ್ದಿದ್ದರೆ ಕಥಾಸರಣಿ ರಾಮಸರಣಿಯಾಗುತ್ತಿರಲಿಲ್ಲ. ಶ್ರೀರಾಮನ ಏಕಪತ್ನೀವ್ರತ ಲೋಕಪೂಜ್ಯವಾದದ್ದು ಸರಿ. ಆದರೆ ಅದೊಂದರಿಂದಲೇ ರಾಮಾಯಣಕಥೆಗೆ ಅದರ ಸಮಗ್ರರೂಪ ಬರುವುದಾಗುತ್ತಿರಲಿಲ್ಲ. ಹೀಗೆ ರಾಮನ ಮಹಾವಿಜಯಕ್ಕೆ ಅವಕಾಶ ದೊರೆತದ್ದು ಸೀತಾದೇವಿಯ ತಪಸ್ವಿತೆಯಿಂದ. ಆ ತಪಸ್ವಿದಂಪತಿಗಳಲ್ಲಿ ಆಕೆಯ ಮಹತ್ತ್ವ ಹೆಚ್ಚಿನದೆಂದು ನನಗನ್ನಿಸುತ್ತದೆ.

ಶ್ರೀರಾಮನ ಮುಖ್ಯ ಗುಣಗಳು ಸತ್ಯಶ್ರದ್ಧೆ, ಭೋಗವಿರಕ್ತಿ. ಸೀತಾದೇವಿಯ ಮುಖ್ಯ ಗುಣಗಳು ವ್ರತನಿಷ್ಠೆ, ಆತ್ಮ ಸಂಯಮ.

ಸೀತೆಯ ಅಂತರಂಗಸ್ವರೂಪ ನಮಗೆ ಅರಣ್ಯಕಾಂಡದ ಪ್ರಾರಂಭದಲ್ಲಿಯೇ ಗೋಚರವಾಗುತ್ತದೆ. ಶ್ರೀರಾಮನು ದಂಡಕಾರಣ್ಯದಲ್ಲಿ ನಾನಾ ಋಷ್ಯಾಶ್ರಮಗಳ ಸಂದರ್ಶನ ಮಾಡಿ ಶರಭಂಗಮುನಿಯ ಆಶ್ರಮಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಋಷಿಗಳು ಶ್ರೀರಾಮನಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ರಾಕ್ಷಸಬಾಧೆಯಿಂದ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರಷ್ಟೆ? (ಸರ್ಗ ೬, ಪುಟಗಳು ೩೧-೩೬). ಶ್ರೀರಾಮನು ಅದನ್ನು ಲಾಲಿಸಿ ಭರವಸೆ ಕೊಟ್ಟ ಮಾತಿನ ವಿನಯ ಆತನ ಸ್ವಭಾವವನ್ನು ವ್ಯಕ್ತಪಡಿಸುತ್ತದೆ (ಪುಟ ೩೫):

ನೈವಮರ್ಹಥ ಮಾಂ ವಕ್ತುಂ
ಆಜ್ಞಪ್ತೋಽಹಂ ತಪಸ್ವಿನಾಮ್‍ ।
ಕೇವಲೇನಾತ್ಮಕಾರ್ಯೇಣ
ಪ್ರವೇಷ್ಟವ್ಯಂ ಮಯಾ ವನಮ್‍ ॥ ಸ. ೬, ಶ್ಲೋ. ೨೨

“ನಿಮ್ಮಿಂದ ನನಗೆ ಬರುವ ಮಾತು ಬೇಡಿಕೆಯಲ್ಲ; ಆಜ್ಞೆ. ನಾನು ಸ್ವಕರ್ತವ್ಯವಶನಾಗಿ ಕಾಡಿಗೆ ಬಂದಿದ್ದೇನೆ. ದುಷ್ಟದಂಡನೆ ನನಗೆ ಕರ್ತವ್ಯವಾಗಿಯೇ ಇದೆ.”

ಶ್ರೀರಾಮನು ಹೀಗೆ ದೀಕ್ಷೆ ಕೈಕೊಂಡಮೇಲೆ ಅದಕ್ಕಾಗಿ ಶಸ್ತ್ರಾಸ್ತ್ರಧಾರಣ ಮಾಡತಕ್ಕದ್ದು ಅವಶ್ಯವಾಯಿತು. ಅದರಂತೆ ಶರಭಂಗಾಶ್ರಮದಿಂದ ಮುಂದೆ ನಡೆದು ಸುತೀಕ್ಷ್ಣಾಶ್ರಮಕ್ಕೆ ಬಂದಾಗ, ಮುಂದಿನ ಪ್ರಯಾಣಕ್ಕೆ ಸಿದ್ಧತೆಯಾಗಿ ರಾಮನು ಧನುರ್ಬಾಣಗಳನ್ನು ಕೈಗೆ ತೆಗೆದುಕೊಂಡಾಗ ಸೀತಾದೇವಿ ಶಂಕಿತಳಾದಳು. ಕೈಯಲ್ಲಿ ಆಯುಧ ಹಿಡಿದವನು ಅದನ್ನು ಉಪಯೋಗಿಸದಿರುವುದು ಅಸಂಭವ; ಶಸ್ತ್ರಸಂಪತ್ತು ಕ್ರೌರ್ಯಕ್ಕೆ ಪ್ರೇರಕವಾಗುತ್ತದೆ; ಕ್ರೌರ್ಯವು ಪಾಪ; ಹೀಗೆ ಪಾಪಪ್ರಚೋದಕವಾದ ಶಸ್ತ್ರಾಸ್ತ್ರಗಳನ್ನು ತಪಸ್ವಿಗಳು ತ್ಯಜಿಸಬೇಕು–ಎಂದು ಆಕೆ ಶ್ರೀರಾಮನಿಗೆ ಉಪದೇಶ ಮಾಡಿ ಒಂದು ಪುರಾತನವಾದ ಆಖ್ಯಾಯಿಕೆಯನ್ನು ಉದಾಹರಿಸುತ್ತಾಳೆ (ಸರ್ಗ ೯, ಪು ೪೫). ಪಾಪಗಳಲ್ಲಿ ಮಹತ್ತಮವಾದವು ಮೂರು: (೧) ಅಸತ್ಯ, (೨) ಪರದಾರಾಭಿಗಮನ, (೩) ನಿಷ್ಕಾರಣವೈರ. ಇವುಗಳಲ್ಲಿ ಮೊದಲ ಎರಡಕ್ಕೂ ರಾಮನು ಅವಕಾಶಕೊಡತಕ್ಕವನಲ್ಲ. ಮೂರನೆಯ ಪಾಪ ಬಂದೀತೇನೋ ಎಂದು ಆಕೆಗೆ ಶಂಕೆ. ಆಕೆ ಹೇಳುತ್ತಾಳೆ (ಪುಟ ೪೬):

ಅಗ್ನಿಸಂಯೋಗವದ್ಧೇತುಃ
ಶಸ್ತ್ರಸಂಯೋಗ ಉಚ್ಯತೇ ।
ಸ್ನೇಹಾಚ್ಚ ಬಹುಮಾನಾಚ್ಚ
ಸ್ಮಾರಯೇ ತ್ವಾಂ ನ ಶಿಕ್ಷಯೇ ॥ ಸ. ೯, ಶ್ಲೋಕಗಳು ೨೩, ೨೪

“ನಾನು ನಿಮಗೆ ಬೋಧನೆ ಮಾಡುತ್ತಿಲ್ಲ. ನೀವು ತಿಳಿದಿರುವುದನ್ನೇ ಜ್ಞಾಪಕಕ್ಕೆ ತರುತ್ತಿದ್ದೇನೆ. ಶಸ್ತ್ರಸಹವಾಸವು ಅಗ್ನಿಯ ಸಹವಾಸದಂತೆ.”

ಸ್ತ್ರೀಚಾಪಲಾದೇತದುದಾಹೃತಂ ಮೇ
ಧರ್ಮಂ ಚ ವಕ್ತುಂ ತವ ಕಸ್ಸಮರ್ಥಃ ।
ವಿಚಾರ್ಯ ಬುದ್ಧ್ಯಾತು ಸಹಾನುಜೇನ
ಯದ್ರೋಚತೇ ತತ್‍ ಕುರು ಮಾ ಚಿರೇಣ ॥ ಸ. ೯, ಶ್ಲೋ. ೩೩

ಇದು ಸೀತೆಯ ಮಾತಿನ ಮರ್ಯಾದೆ. ಆಕೆಯ ಮನಸ್ಸು ಎಷ್ಟು ಕೋಮಲವಾದದ್ದು, ಮತ್ತು ಎಷ್ಟು ಶುಚಿಯಾದದ್ದು–ಎಂಬುದು ಈ ವಾಕ್ಯಗಳಿಂದ ಧ್ವನಿತವಾಗಿದೆ. ಶುಚಿತೆ, ಸರಳತೆ, ಕೋಮಲತೆ–ಇವುಗಳ ಜೊತೆಗೆ ನಿಷ್ಠೆ, ಉದಾತ್ತಚಿಂತನೆ–ಇವು ಸೀತೆಯ ನೈಜ ಗುಣಗಳು. ಈ ಗುಣಗಳನ್ನು ನಾವು ನೆನಪಿನಲ್ಲಿರಿಸಿಕೊಂಡು ಮುಂದಿನ ಕಥೆಯನ್ನು ನೋಡಬೇಕು.

ಶ್ರೀರಾಮನು ಸುತೀಕ್ಷ್ಣಾಶ್ರಮದಿಂದ ಅಗಸ್ತ್ಯಾಶ್ರಮಕ್ಕೆ ಹೊರಡುವ ವೇಳೆಯಲ್ಲಿ ನುಡಿದ ಒಂದು ಮಾತು ಈಗ ಕ್ರಿಸ್ತಶಕ ೧೯೬೮ರಲ್ಲಿ ನಾವು ಗಮನಿಸತಕ್ಕದಾಗಿದೆ (ಪುಟ ೪೨):

ಅಮಾರ್ಗೇಣಾಗತಾಂ ಲಕ್ಷ್ಮೀಂ
ಪ್ರಾಪ್ಯೇವಾನ್ವಯವರ್ಜಿತಃ ॥

“ಕುಲಗೇಡಿಯಾದವನಿಗೆ ಅನ್ಯಾಯಮಾರ್ಗದಲ್ಲಿ ಸಂಪತ್ತು ಬಂದರೆ ಅವನ ದರ್ಪಾಹಂಕಾರಗಳನ್ನು ಸಹಿಸುವುದು ಲೋಕಕ್ಕೆ ಹೇಗೆ ಕಷ್ಟವಾಗುವುದೋ ಹಾಗೆ ಸಹಿಸಲಶಕ್ಯವಾಗುವಂತೆ ಮಧ್ಯಾಹ್ನಕ್ಕೆ ಬರುತ್ತಿರುವ ಸೂರ್ಯನ ತಾಪ.”

ಲಂಚಕೋರರೂ ಕಳ್ಳಪೇಟೆಯವರೂ ಭುಜತಟ್ಟಿಕೊಳ್ಳಲಿ!

ಮುಂದೆ ಶ್ರೀರಾಮನು ಅಗಸ್ತ್ಯಾಶ್ರಮಕ್ಕೆ ಬಂದಾಗ ಅಲ್ಲಿ ನಡೆಯುವ ಮಾತುಕಥೆಗಳು ರಮಣೀಯವಾಗಿವೆ.

ಅಗಸ್ತ್ಯರು ಉಪದೇಶಿಸಿದಂತೆ ಶ್ರೀರಾಮನು ಪಂಚವಟಿಯಲ್ಲಿ ನೆಲಸಿದ್ದಾಗ ನಡೆಯುತ್ತವೆ ಮುಖ್ಯ ಘಟನೆಗಳು. ಶೂರ್ಪಣಖಿ ರಾಮನನ್ನು ಕಂಡು ಮೋಹಿತಳಾಗಿ ಆತನಲ್ಲಿಗೆ ಬಂದು “ಭವ ಮೇ ಭರ್ತಾ” ಎಂದು ಯಾಚಿಸುತ್ತಾಳೆ. ರಾಮನು ಆಕೆಯ ಇಷ್ಟವನ್ನು ನಿರಾಕರಿಸುವಾಗ ಪರಿಹಾಸಚೇಷ್ಟೆಯ ಮಾತನಾಡುತ್ತಾನೆ (ಪುಟ ೧೧೧):

ಅನುಜಸ್ತ್ವೇಷ ಮೇ ಭ್ರಾತಾ
ಶೀಲವಾನ್‍ ಪ್ರಿಯದರ್ಶನಃ ।
ಶ್ರೀಮಾನ್‍ ಅಕೃತದಾರಶ್ಚ
ಲಕ್ಷ್ಮಣೋ ನಾಮ ವೀರ್ಯವಾನ್‍ ॥ ಸ. ೧೮, ಶ್ಲೋ. ೩

ಇಲ್ಲಿಯ “ಅಕೃತದಾರಃ” ಎಂಬ ಮಾತಿಗೆ ಕೆಲಮಂದಿ ವ್ಯಾಖ್ಯಾನಕಾರರು ಯುಕ್ತಿಯಿಂದ ಅರ್ಥಹೇಳಲು ವಿಪರೀತ ಶ್ರಮಪಟ್ಟಿದ್ದಾರೆ. ಮಾತಿನ ಸ್ವಾಭಾವಿಕವಾದ ಅರ್ಥ “ಮದುವೆಯಾಗದವನು” ಎಂದು. ಲಕ್ಷ್ಮಣನಿಗೆ ಮದುವೆಯಾಗಿತ್ತಲ್ಲ?–ಎಂಬುದು ಅವರ ಕಷ್ಟ! ರಾಮನು ಚೇಷ್ಟೆ ಮಾಡುತ್ತಿದ್ದನೆಂಬುದು ವ್ಯಾಖ್ಯಾನಕಾರರ ಮನಸ್ಸಿಗೆ ಬರಲಿಲ್ಲ. ಅಥವಾ ರಾಮನು ಚೇಷ್ಟೆಮಾಡಬಾರದೆಂಬುದು ಅವರ ಉದ್ದೇಶ. ಅಥವಾ, ಹಾಸ್ಯಕ್ಕಾಗಿ ಕೂಡ ಒಂದು ಅಸತ್ಯ ಅವನ ಬಾಯಿಂದ ಬಾರದೆಂಬುದು ಅವರ ತಾತ್ಪರ್ಯ. ಬೇರೆ ಸಂದರ್ಭದಲ್ಲಿ–ವಾಲಿಯ ಪ್ರಕರಣದಲ್ಲಿ–

ವಿವಾಹಕಾಲೇ ರತಿಸಂಪ್ರಯೋಗೇ
ಪ್ರಾಣಾತ್ಯಯೇ ಸರ್ವಧನಾಪಹಾರೇ ।
ವಿಪ್ರಸ್ಯ ಚಾರ್ಥೇ ಹ್ಯನೃತಂ ವದೇತ
ಪಂಚಾನೃತಾನ್ಯಾಹುರಪಾತಕಾನಿ ॥

–ಎಂಬ ಪುರಾತನೋಕ್ತಿಯಿಂದ ಐದು ಅಸತ್ಯಗಳನ್ನು ಸಮರ್ಥನೆ ಮಾಡಿದ ಮಹನೀಯರಿಗೆ ಆ ಪರಿಹಾಸವಾಕ್ಯದ ಆರನೆಯ ಅನೃತ ಅಸಹನೀಯವಾದದ್ದು ಚೋದ್ಯವಾಗಿದೆ. ಪಾಪವಲ್ಲದ ಅನೃತಗಳು ಎಷ್ಟೋ ಇವೆ. ಅಷ್ಟೇ ಅಲ್ಲ; ಅವು ಧರ್ಮಸಾಧಕಗಳೇ ಆಗುತ್ತವೆ. ಇದಕ್ಕೆ ದೃಷ್ಟಾಂತಗಳನ್ನು ಶ್ರೀಕೃಷ್ಣನು ಅರ್ಜುನನಿಗೆ ತೋರಿಸಿದ್ದಾನೆ. ಯಾವ ಮಾತು ಭೂತಹಿತಸಾಧಕವೋ ಅದು ಸತ್ಯ. ಯಾವ ಮಾತು ಮತ್ತೊಬ್ಬರಿಗೆ ಅನ್ಯಾಯಕಾರಿಯೋ ಹಿಂಸಾಕರವೋ ಅದು ಅಸತ್ಯ. ಈ ಮೂಲತತ್ತ್ವವನ್ನು ದೃಷ್ಟಿಯಲ್ಲಿರಿಸಿಕೊಂಡು ನೋಡಿದರೆ ಮೇಲಣ ಪರಿಹಾಸೋಕ್ತಿಯಲ್ಲಿ ದೋಷವೇನೂ ತೋರದು.

ವಾಲ್ಮೀಕಿಗಳಾದರೋ ಪರಿಹಸನಶೀಲರೆಂದು ಹತ್ತಾರು ಕಡೆ ಶ್ರೀಮದ್‍ ರಾಮಾಯಣದಲ್ಲಿ ಕಂಡುಬರುತ್ತದೆ. ನಕ್ಕವರಿಗೆ ಸ್ವರ್ಗವಿಲ್ಲವೇನು?

ಸ್ವರ್ಗಾಯತಿಂ ನ ಪರಿಹಾಸಕಥಾ ರುಣದ್ಧಿ ॥

ಈ ಸಂದರ್ಭವೊಂದರಲ್ಲೇ ಅಲ್ಲ; ಇಂಥ ಅನೇಕ ಕಾವ್ಯಸಂದರ್ಭಗಳಲ್ಲಿ ನಮ್ಮ ಟೀಕಾಕಾರರು ಹಾಸ್ಯಾನುಭವಕ್ಕೆ ಅಸಮರ್ಥರಾಗಿ ನೀರಸವ್ಯಾಖ್ಯಾನಗಳನ್ನು ಮಾಡಿದ್ದಾರೆ.

ಶ್ರೀರಾಮನಿಂದ ಶೂರ್ಪಣಖಿಗೆ ಆದ ಪ್ರತೀಕಾರವನ್ನು ನೋಡಿ ನಗುವವರು ಆಕೆ ಶ್ರೀಕೃಷ್ಣನಲ್ಲಿ ಹಾಗೆ ಪ್ರಣಯಭಿಕ್ಷೆ ಬೇಡಿದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹನತರ್ಕವಿಷಯ ಮಾಡಿಕೊಳ್ಳಬಹುದು. ಕುಬ್ಜೆ ಎಂಬುವಳು ಕುರೂಪಿ. ಶೂರ್ಪಣಖಿಯು ಕುರೂಪಿಯಾಗಿದ್ದರೂ ಕಾಮರೂಪಿ: ರಮಣೀಯ ರೂಪವನ್ನು ತನ್ನ ಇಚ್ಛೆಯಂತೆ ತಾಳಬಲ್ಲವಳು. ತನ್ನನ್ನು ಬೇಡಬಂದ ಕುಬ್ಜೆಗೆ ಕೃಷ್ಣನು ರೂಪಸೌಂದರ್ಯವನ್ನು ಅನುಗ್ರಹಿಸಿ ಅವಳ ಇಷ್ಟವನ್ನು ಪೂರ್ತಿಮಾಡಿದನು:

ಏಷ್ಯಾಮಿ ತೇ ಗೃಹಂ ಸುಭ್ರೂಃ
ಪುಂಸಾಮಾಧಿವಿಕರ್ಶನಮ್‍ ।
ಸಾಧಿತಾಥೋಽಗೃಹಾಣಾಂ ನಃ
ಪಾಂಥಾನಾಂ ತ್ವಂ ಪರಾಯಣಮ್ ॥ ಭಾಗವತ ದಶಮಸ್ಕಂಧ: ಸ. ೪೨, ಶ್ಲೋ. ೧೨

ಶೂರ್ಪಣಖಾ ಪ್ರಕರಣದ ಫಲಿತಾಂಶವೇ ರಾವಣನ ವಿರೋಧೋತ್ಪತ್ತಿ.

ಮುಂದಿನ ಕಥೆಯಾದ ಮಾರೀಚ ಪ್ರಕರಣದಲ್ಲಿ ವಾಲ್ಮೀಕಿಗಳ ನಿರ್ಮಾಣ ಪ್ರತಿಭೆ ಮುಗಿಲು ಮುಟ್ಟುತ್ತದೆ. ಮಾರೀಚ ಕಥಾ ಸಂವಿಧಾನ ಅತ್ಯಂಟ ಕುತುಕವುಳ್ಳದ್ದು. ರಾವಣನ ಅನುಸಂಧಾನದೊಳಕ್ಕೆ ಮಾರೀಚನಂಥ ವ್ಯಕ್ತಿಯನ್ನು ತಂದಿರುವುದೇ ಒಂದು ದೊಡ್ಡ ಕಲ್ಪನೆ. ಕಥೆಯ ಮುಖ್ಯಧಾರೆಗೆ ಇದು ತೀರಾ ಅನಿವಾರ್ಯವಾದದ್ದೇನೂ ಅಲ್ಲ. ಬೇರೆ ಯಾವ ನೆವದಿಂದಲಾದರೂ–ಸ್ನಾನದ ನೆವದಿಂದ, ಪಾಕದ ನೆವದಿಂದ, ಪೂಜೆಯ ನೆವದಿಂದ–ಸೀತೆ ಏಕಾಕಿಯಾಗಿರುವಂತೆ ಕಥಾರಚನೆಯಾಗಬಹುದಿತ್ತು. ಈ ಸಂದರ್ಭದಲ್ಲಿ ಮಾರೀಚನ ಪ್ರವೇಶವು ಸ್ವಾರಸ್ಯಪರಿಪೋಷಕವಾಗಿದೆ.

ಮಾರೀಚನು ಹುಟ್ಟಿನಿಂದ ರಾಕ್ಷಸ. ಆದರೆ ಸ್ವಭಾವದಿಂದ ಅಷ್ಟು ಕೆಟ್ಟವನಲ್ಲ. ವಿಭೀಷಣನಂತೆ ಅವನು. ಅಬರಿಬ್ಬರೂ ರಾವಣನ ಆಲೋಚನೆ ಅಧರ್ಮವಾದದ್ದೆಂದು ಬುದ್ಧಿ ಹೇಳಿದವರು. ಮಾರೀಚನ ಉಪದೇಶ ಹೀಗಿತ್ತು (ಪು ೨೨೭):

ತ್ವದ್ವಿಧಃ ಕಾಮವೃತ್ತೋ ಹಿ
ದುಶ್ಶೀಲಃ ಪಾಪಮಂತ್ರಿತಃ ।
ಆತ್ಮಾನಂ ಸ್ವಜನಂ ರಾಷ್ಟ್ರಂ
ಸ ರಾಜೌ ಹಂತಿ ದುರ್ಮತಿಃ ॥ ಸ. ೩೭, ಶ್ಲೋ. ೭

ಆದರೆ ಮಾರೀಚನ ಧರ್ಮನಿಷ್ಠೆ ವಿಭೀಷಣನದರಷ್ಟು ದೃಢವಾದದ್ದಲ್ಲ. ಮಾರೀಚನು ಪೂರ್ವದಲ್ಲಿ ವಿಶ್ವಾಮಿತ್ರಾಶ್ರಮದಲ್ಲಿ ಬಾಲಕ ರಾಮನ ಬಾಣದ ರುಚಿ ಕಂಡಿದ್ದವನು. ಅವನ ಮನಸ್ಸಿನಲ್ಲಿ ರಾಮನನ್ನು ಕುರಿತು ಭಯ ಇದ್ದಿರಬೇಕು. ಅದರ ಜೊತೆಗೆ ಕೊಂಚ ಈರ್ಷ್ಯೆಯೂ ಇದ್ದಿರಬಹುದು. ಅವನು ರಾವಣನ ಬಲಾತ್ಕಾರಕ್ಕೂ ದಾಕ್ಷಿಣ್ಯಕ್ಕೂ ಒಳಪಟ್ಟು ವಿಧೇಯನಾದ. ಅವನು ಮಾಯಾಮೃಗವಾಗಿ ಸುಳಿದಾಡಿ ಸೀತೆಯನ್ನೂ ರಾಮನನ್ನೂ ಸಹ ಮೋಹಗೊಳಿಸಿದ್ದರ ವರ್ಣನೆ ಶ್ರೀಮದ್ರಾಮಾಯಣದ ಅತ್ಯಂತ ಸುಂದರ ಪ್ರಕರಣಗಳಲ್ಲಿ ಒಂದಾಗಿ ಗಣ್ಯವಾಗಬೇಕಾದದ್ದು (ಪುಟ ೨೫೫–೬):

ರೂಪ್ಯೈರ್ಬಿಂದುಶತೈಶ್ಚಿತ್ರಃ ಭೂತ್ವಾ ಸ ಪ್ರಿಯದರ್ಶನಃ ।
ವಿಟಪೀನಾಂ ಕಿಸಲಯಾನ್‍ ಭಂಕ್ತ್ವಾದನ್‍ ವಿಚಚಾರ ಹ ॥
ಪುನರ್ಗತ್ವಾ ನಿವೃತ್ತಶ್ವ ವಿಚಚಾರ ಮೃಗೋತ್ತಮಃ ।
ಗತ್ವಾ ಮುಹೊರ್ತಂ ತ್ವರಯಾ ಪುನಃ ಪ್ರತಿನಿವರ್ತತೇ ॥
ವಿಕ್ರೀಡಂಶ್ವ ಕ್ವಚಿದ್ಭೂಮೌ ಪುನರೇವ ನಿಷೀದತಿ ।
ಆಶ್ರಮದ್ವಾರಮಾಗಮ್ಯ ಮೃಗಯೂಥಾನಿ ಗಚ್ಛತಿ ॥ ಸ. ೪೨, ಶ್ಲೋಕಗಳು ೨೨, ೨೫, ೨೬

“ಮಾರೀಚವೇಷ”, “ರಾವಣಸಂನ್ಯಾಸ” –ಇವು ಸಾಮಾನ್ಯ ಜನದ ಬಳಕೆಯ ಮಾತಿನಲ್ಲಿ ಬದುಕಿರುವ ಪದಗಳು: ಮಹಾಭಾರತದ ಶಕುನಿಮಾವ, ಮೈಸೂರು ಚರಿತ್ರೆಯ ಮೀರ್‍ ಸಾದಕ್‍–ಎಂಬ ಹೆಸರುಗಳ ಹಾಗೆ. ಕೃತ್ರಿಮ, ವಂಚನೆ, ಮೋಸ, ಠಕ್ಕು ಕಂಡ ಕಡೆ ಮಾರೀಚನ ಸ್ಮರಣೆ ಬರುತ್ತದೆ.

ಆ ಹೆಸರಿನಲ್ಲಿ ಒಂದು ಚೋದ್ಯ ಕಾಣುತ್ತದೆ. “ಮಾರೀಚಿ” ಎಂದರೆ ಸೂರ್ಯಕಿರಣ. ಸೂರ್ಯಕಿರಣವು ಮರುಭೂಮಿಯ ಮರಳಿನ ಹರವನ್ನು ಮುಟ್ಟಿದಾಗ ದೂರದಿಂದ ನೋಡುವವರಿಗೆ ಅಲ್ಲಿ ಒಂದು ಕೆರೆಯೋ ನದಿಯೋ ಇರುವಂತೆ ಭಾಸವಾಗುತ್ತದೆ. ಇದೇ ಬಿಸಿಲ್ಗುದುರೆ ಅಥವಾ ಮರೀಚಿಕೆ ಅಥವಾ ಮೃಗತೃಷ್ಣೆ. ಇದು ಬರಿಯ ಭ್ರಮೆ ಅಥವಾ ಭ್ರಾಂತಿ. ಆದದ್ದರಿಂದ “ಮಾರೀಚ” ಶಬ್ದಕ್ಕೆ ಭ್ರಾಂತಿಕಾರಕವಾದದ್ದು, ಮಾಯಾರೂಪದ್ದು–ಎಂದು ಅರ್ಥ. ಮರೀಚಿಕಾ ಎಂಬ ಅರ್ಥವನ್ನೇ ವಾಲ್ಮೀಕಿಗಳು ಉದ್ದೇಶದಲ್ಲಿರಿಸಿಕೊಂಡು ಮಾರೀಚ ಪಾತ್ರವನ್ನು ರಚಿಸಿದರೋ ಹೇಗೋ.

ಅದ್ವೈತ ವೇದಾಂತದಲ್ಲಿ ಮಾಯೆ ಎಂಬುದಕ್ಕೆ ಮರೀಚಿಕೆ ಅಥವಾ ಮೃಗತೃಷ್ಣೆ ಒಂದು ಪ್ರಸಿದ್ಧ ದೃಷ್ಟಾಂತ

ಮೃಗತೃಷ್ಣಾಂಭಸಿ ಸ್ನಾತಃ
ಖಪುಷ್ಪಕೃತಶೇಖರಃ ।
ಏಷ ವಂಧ್ಯಾಸುತೋ ಯಾತಿ
ಶಶಶೃಂಗಧನುರ್ಧರಃ ॥

“ಈ ಬಂಜೆಯ ಮಗನು ಮರಳ್ಗಾಡಿನ ಬಿಸಿಲ್ಗುದುರೆಯ ನೀರಿನಲ್ಲಿ ಸ್ನಾನ ಮಾಡಿ, ಗಗನಕುಸುಮದಿಂದ ಅಲಂಕೃತನಾಗಿ, ಮೊಲದ ಕೊಂಬಿನ ಬಿಲ್ಲುಬಾಣಗಳನ್ನು ಹಿಡಿದು ಬರುತ್ತಿದ್ದಾನೆ.”

ಇದರಲ್ಲಿ ಎಲ್ಲವೂ ಕಾಲ್ಪನಿಕ ಪದಾರ್ಥಗಳು; ವಾಸ್ತವಿಕಗಳಲ್ಲ. ಬರಿಯ ತೋರಿಕೆಗಳು, ಗಟ್ಟಿ ತಿರುಳಲ್ಲ. ಜಗತ್ತೂ ಹಾಗೆ ಒಂದು ಬಗೆಯ ತೋರಿಕೆ ಅಥವಾ ಭ್ರಾಂತಿ ಪರಂಪರೆಯೆಂದು ಭಾವ.

ಮಾರೀಚವಧೆಯ ಕಾಲದಲ್ಲಿಯೇ ಪಂಚವಟಿಯ ಮತ್ತೊಂದು ಪ್ರದೇಶದಲ್ಲಿ ರಾಮನ ಪರ್ಣಶಾಲೆಯಲ್ಲಿ ರಾವಣನಿಂದ ಸೀತಾಪಹಾರವಾಯಿತು. ಆಗ ಸೀತಾರಾವಣರಿಗೆ ನಡೆದ ವಾಗ್ವಾದದ ರೀತಿ ಗಮನವಿರಿಸಿ ಓದಬೇಕಾದದ್ದು (ಸರ್ಗಗಳು ೪೭, ೪೮).

ಶ್ರೀರಾಮನು ತನ್ನ ಆಶ್ರಮಕ್ಕೆ ಹಿಂದಿರುಗಿ ಸೀತಾದೇವಿಯನ್ನು ಕಾಣದೆ ಕಳವಳಗೊಂಡು ಲಕ್ಷ್ಮಣನನ್ನು ಆಕ್ಷೇಪಿಸಿದ ಸಂದರ್ಭ ನಮ್ಮ ದೃಷ್ಟಿಯಲ್ಲಿರಬೇಕಾದದ್ದು. ಆಗ ಲಕ್ಷ್ಮಣನಿಗಾದ ಉಭಯಸಂಕಟದ ಸ್ಮರಣೆ ಅನೇಕ ಮಂದಿಗೆ ಅವರವರ ಜೀವಿತಸಂದರ್ಭಗಳಲ್ಲಿ ಬಂದಿವೆ. ಲಕ್ಷ್ಮಣನಿಗೆ ಒಂದು ಕಡೆ ಅತ್ತಿಗೆಯ ಮುನಿಸು, ಇನ್ನೊಂದು ಕಡೆ ಅಣ್ಣನ ಮುಳಿಸು. ಆತ ಯಾರ ಮಾತಿನಂತೆ ನಡೆಯಬೇಕಾಗಿತ್ತು? ಆ ಇಬ್ಬರೆ ವಾದಗಳೂ ಅವರವರ ದೃಷ್ಟಿಗಳಿಂದ ಯುಕ್ತಗಳಾಗಿಯೇ ಇವೆ. ಅವರ ಉದ್ವೇಗದಲ್ಲಿ, ಅವನ ದೃಷ್ಟಿಯೂ ಒಂದಿರಬಹುದೆಂದು ಅವರಿಬ್ಬರಿಗೂ ತೋರದೆಹೋಯಿತು. ಧರ್ಮಸೇವಕನಾದವನು ಹೀಗೆ ಉಭಯ ಪಕ್ಷದ ನಿಷ್ಠುರಕ್ಕೆ ಸಿಕ್ಕುವುದು ಎಷ್ಟೋ ವೇಳೆ ಅನಿವಾರ್ಯವಾಗುತ್ತದೆ. ಧರ್ಮೈಕದೃಷ್ಟಿಯುಳ್ಳವನು ಪೂಜ್ಯರಾದ ಇಬ್ಬರ ಮಾತನ್ನೂ ಬದಿಗಿರಿಸಿ ತನಗೆ ಯುಕ್ತವೆನಿಸಿದ ದಾರಿಯನ್ನೇ ಹಿಡಿಯಬೇಕಾಗುತ್ತದೆ. ಇಬ್ಬರು ಪೂಜ್ಯರಿಗೂ ತಲೆಬಾಗಿ ಹಾಗೆಯೇ ಅವರನ್ನು ಎದುರಿಸಿ ತನ್ನ ಮನಸ್ಸಾಕ್ಷಿಯಂತೆ ನಡೆದದ್ದು ಲಕ್ಷ್ಮಣನ ಮಹಾಗುಣ. ಆತನ ಸ್ವಾತಂತ್ರ್ಯವೂ ಧೈರ್ಯಸ್ಥೈರ್ಯಗಳೂ ಧರ್ಮನಿಷ್ಠೆಯುಳ್ಳವರಿಗೆ ಸರ್ವದಾ ನೆನಪಿನಲ್ಲಿರಬೇಕಾದದ್ದು.

ಅಲ್ಲಿಂದ ಮುಂದಕ್ಕೆ ಸೀತಾನ್ವೇಷಣೆಯ ಕಥೆ. ಆ ಪ್ರಕರಣದಲ್ಲಿ ರಾಮಲಕ್ಷ್ಮಣರು ಅರಣ್ಯದಲ್ಲಿ ಕಂಡ ಪ್ರಕೃತಿಸೌಂದರ್ಯಗಳನ್ನು ವಾಲ್ಮೀಕಿಗಳು ಮನೋಹರವಾದ ಶ್ಲೋಕಗಳಲ್ಲಿ ಚಿತ್ರಿಸಿದ್ದಾರೆ. ರಾಮಲಕ್ಷ್ಮಣರು ಕರ್ನಾಟಕ ದೇಶದ ಪಂಪಾಸರೋವರದ ಬಳಿ ಬಂದು ಸೇರಿದುದರ ಕಥನದೊಡನೆ ಅರಣ್ಯಕಾಂಡ ಸಮಾಪ್ತವಾಗುತ್ತದೆ.

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾರವರು ಈ ರಸವತ್ತಾದ ಅರಣ್ಯಕಾಂಡವನ್ನು ತಮಗೆ ಸಹಜವಾಗಿ ಬಂದಿರುವ ಸರಳ ಸುಂದರ ಶೈಲಿಯಲ್ಲಿ ಅನುವಾದ ಮಾಡಿದ್ದಾರೆ. ಅನೇಕ ವ್ಯಾಖ್ಯಾನಗಳನ್ನು ಶೋಧಿಸಿ ರಸಪುಷ್ಟಿಗೆ ಅನುಕೂಲವಾಗುವ ಅರ್ಥವನ್ನು ಹಿಡಿದಿದ್ದಾರೆ. ಅನುವಾದವನ್ನು ನಾನು ಅಲ್ಲಲ್ಲಿ ಓದಿಸಿ ಕೇಳಿ ಮೆಚ್ಚಿಕೊಂಡಿದ್ದೇನೆ. ಕನ್ನಡ ಮಹಾಜನಗಳು ಇದನ್ನು ಕೃತಜ್ಞತೆಯಿಂದ ಸ್ವೀಕರಿಸುವರೆಂದು ನಂಬಿದ್ದೇನೆ.

ಒಟ್ಟಿನಲ್ಲಿ ಅರಣ್ಯಕಾಂಡವು ಕರುಣಪ್ರಧಾನವಾದ ಪ್ರಕರಣ. ಇತರ ರಸಗಳು ಅಲ್ಲಿಲ್ಲವೆಂದಲ್ಲ; ವೀರಾದ್ಭುತ ಶೃಂಗಾರಗಳು ಅಷ್ಟಿಷ್ಟು ಇವೆ.

ಕರುಣವು ಇತರ ಕಾಂಡಗಳಲ್ಲಿ ಇಲ್ಲವೆಂದೂ ಅಲ್ಲ. ಅಯೋಧ್ಯಾಕಾಂಡದಲ್ಲಿಯೂ ಉತ್ತರಕಾಂಡದಲ್ಲಿಯೂ ಕರುಣವು ಹೊಳೆಹೊಳೆಯಾಗಿ ಹರಿಯುತ್ತದೆ. ಆದರೆ ಅರಣ್ಯಕಾಂಡದಲ್ಲಿ ಕರುಣದ ಹೊಳೆಯಲ್ಲಿ ನೆರೆ ಬಂದಿದೆ.

ಕರುಣವೆಂದರೆ ಏನು? ಇನ್ನೊಬ್ಬರ ಕಷ್ಟವನ್ನು ನಾವು ಕಂಡಾಗ “ಅಯ್ಯೋ ಪಾಪ!” ಎನ್ನುವಂತೆ ಮಾಡುವ ಗುಣ. ಅದೇ ಕನಿಕರ.

ಕರುಣಪ್ರೇರಣೆಯಲ್ಲಿ ಎರಡು ಅಂತರಂಗಪ್ರವೃತ್ತಿಗಳು ಮಿಳಿತವಾಗಿರುತ್ತವೆ. ಅವೆರಡೂ ಪ್ರತಿಯೊಬ್ಬ ಮನುಷ್ಯನಲ್ಲಿಯೂ ನೈಜವಾಗಿರುವ ಪ್ರವೃತ್ತಿಗಳೇ. ಒಂದು ಸಹಾನುಭವದ್ದು; ಇನ್ನೊಂದು ನ್ಯಾಯವಿಚಾರದ್ದು.

ಒಂದಾನೊಂದು ಸನ್ನಿವೇಶದಲ್ಲಿ ನಮಗೆ ಸುಖವೋ ದುಃಖವೋ ಆದಾಗ ಆ ಅಥವಾ ಅಂಥ ಸನ್ನಿವೇಶದಲ್ಲಿ ಸುಖವೋ ದುಃಖವೋ ಆಗುತ್ತದೆಂದು ಭಾವಿಸಿಕೊಳ್ಳುತ್ತೇವೆ. ಈ ಸ್ವಾನುಭವಪರಾವರ್ತನೆಯೇ ಎಲ್ಲ ಲೋಕಬಾಂಧವ್ಯಕ್ಕೂ ತಳಹದಿ. ನಮ್ಮ ಮೈ ನೋಯಿಸಿದ್ದು ಇತರರನ್ನೂ ನೋಯಿಸುತ್ತದೆ. ನಮ್ಮ ಬಾಯಿಗೆ ಸಿಹಿಯಾದದ್ದು ಇನ್ನೊಬ್ಬರ ಬಾಯಿಗೂ ಸವಿಯಾಗುತ್ತದೆ. ನಮ್ಮ ಬೆನ್ನು ಸವರಿಕೊಂಡು ಇನ್ನೊಬ್ಬರ ಬೆನ್ನು ತಡುವುತ್ತೇವೆ, ನಮ್ಮ ಮೈ ಚಿವುಟಿಕೊಂಡು ಇನ್ನೊಬ್ಬರ ಮೈ ಚಿವುಟಹೊರಡುತ್ತೇವೆ. ಈ ಸ್ವಾನುಭವಪರಾವರ್ತನೆಯೆ ನಮ್ಮ ಲೋಕಪರಿಜ್ಞಾನದಲ್ಲಿ ಪ್ರಥಮ ಭಾಗ. ಅದರ ಪ್ರತಿಚ್ಛಾಯೆಯಾದ ಪರಾನುಭವಸ್ವಯಮಂಗೀಕಾರವೇ ಎರಡನೆಯ ಭಾಗ. ಇನ್ನೊಬ್ಬರು ನೋವುಪಡುತ್ತಿರುವಾಗ ನಾವು ಅವರೊಡನೆ ಕೂಡಿ ನೋವುಪಡುತ್ತೇವೆ. ಅನ್ಯರ ದುಃಖವನ್ನು ನಮ್ಮದು ಮಾಡಿಕೊಳ್ಳುತ್ತೇವೆ. ಅನ್ಯರ ಸಂತೋಷ, ವ್ಯಸನಗಳಲ್ಲಿ ನಾವು ಭಾಗಿಗಳಾಗುತ್ತೇವೆ. ಇದೇ ಸಹಾನುಭೂತಿ. ಅದೇ ಅನುಕಂಪೆ, ದಯೆ, ಕನಿಕರ, ಸ್ವಾನುಭವದ ಮೂಲಕ ಅನ್ಯಾನುಭವದ ಅರಿವು. ಅನ್ಯಮನೋಭಾವದ ಅರಿವಾದ ಮೇಲೆ ಅನ್ಯರೊಡನೆ ಅನುಭವಸಹಭಾಗಿತೆ. ಇದು ಆತ್ಮೌಪಮ್ಯವರ್ತನೆಯ ಮೂಲ. ಆತ್ಮೌಪಮ್ಯವೇ ಲೋಕಸಂಗ್ರಹನೀತಿಯ ಆಂತರ್ಯ.

ಆತ್ಮೌಪಮ್ಯೇನ ಸರ್ವತ್ರ
ಸಮಂ ಪಶ್ಯತಿ ಯೋಽರ್ಜುನ ।
ಸುಖಂ ವಾ ಯದಿ ವಾ ದುಃಖಂ
ಸ ಯೋಗೀ ಪರಮೋ ಮತಃ ॥ ಭಗವದ್ಗೀತೆ: ಅ.೬, ಶ್ಲೋ, ೩೨

ಅನುಭೂತಿಯೂ ಅನುಕಂಪೆಯೂ ಹೃದಯದ ಕಾರ್ಯ. ಅದರ ಜೊತೆಗೆ ಸೇರತಕ್ಕದ್ದು ಬುದ್ಧಿಯ ಕಾರ್ಯವಾದ ಯುಕ್ತಾಯುಕ್ತವಿವೇಚನೆ. ಯಾವ ಸಂದರ್ಭದಲ್ಲಿ ಕರುಣವು ಯುಕ್ತವಾಗುತ್ತದೆ? ಅದು ಎಷ್ಟರಮಟ್ಟಿಗೆ?–ಇದು ನ್ಯಾಯವಿಚಾರ. ಕರುಣವು ನ್ಯಾಯಸಮ್ಮತವಾಗಬೇಕು. ನ್ಯಾಯವು ಪಾತ್ರಾಪಾತ್ರ ವಿವೇಕದಿಂದ ಬರುತ್ತದೆ. ಹಸಿವು ಎಲ್ಲರಿಗೂ ಕಷ್ಟವೇ. ಆದರೆ ಮೂರು ವರ್ಷದ ಮಗು, ಮುವ್ವತ್ತು ವರ್ಷದ ಬಲಿಷ್ಠ–ಈ ಇಬ್ಬರಲ್ಲಿ ಯಾರ ಕಷ್ಟ ಹೆಚ್ಚಿನದು? ಸಹಿಸುವ ಸಾಮರ್ಥ್ಯ ಯಾರಿಗೆ ಕಡಮೆಯೋ ಅವರಿಗೆ ಹೆಚ್ಚು ಕನಿಕರ ಸಲ್ಲುತ್ತದೆ. ಅಡವಿಯ ಅಲೆದಾಟ ಎಲ್ಲರಿಗೂ ಆಯಾಸವೇ. ಆದರೆ ಅರಮನೆಯ ಅಭ್ಯಾಸವಿರುವವರಿಗೆ ಆಯಾಸ ಹೆಚ್ಚು. ಹೀಗೆ ಪ್ರಸಕ್ತ ಮನುಷ್ಯನ ಬಲಾಬಲಗಳಿಂದ ಅವನಿಗಿರುವ ಆವಶ್ಯಕತೆಯನ್ನನುಸರಿಸಿ ಕರುಣವನ್ನು ಹಂಚುತ್ತೇವೆ.

ಸೀತಾದೇವಿಯ ವಿಷಯದಲ್ಲಿ ಕರುಣೋತ್ಪಾದಕಗಳಾದ ಸಂಗತಿಗಳು ಅನೇಕವಿವೆ. ಹೆಂಗಸು, ಅಬಲೆ, ಆಕೆಗೆ ಕನಿಕರ ಸಲ್ಲಬೇಕಾದದ್ದು–ಎಂಬುದು ಸರ್ವಸಾಮಾನ್ಯವಾದ ಮಾತು. ಅದನ್ನು ಬದಿಗಿರಿಸಿ ಮಿಕ್ಕ ಸಂಗತಿಗಳನ್ನು ನೋಡೋಣ.

ಆಕೆ ಮಹಾರಾಜನ ಮಗಳು; ಮಹಾರಾಜನ ಸೊಸೆ. ಕಷ್ಟನಿಷ್ಠುರಗಳನ್ನರಿಯದವಳು. ಅಂಥವಳಿಗೆ ಈ ಪಾಡು ಬರಬಹುದೆ?

ಆಕೆ ತಪಸ್ವಿನಿ: ಸತ್ಯ, ಇಂದ್ರಿಯಶೌಚ, ಅಹಿಂಸೆ–ಈ ಮೂರು ವ್ರತಗಳನ್ನು ಹಿಡಿದಿದ್ದವಳು. ಅಂಥವಳಿಗೆ ಕಷ್ಟವೆ?

ಅದೂ ಒಬ್ಬ ದುರಾತ್ಮನ ಕೈಯಿಂದ ಕಷ್ಟವೆ?

ಆ ಕಷ್ಟವಾದರೂ ಎಂಥಾದ್ದು? ಆಕೆಯ ಆಜನ್ಮ ವ್ರತಕ್ಕೆ ಭಂಗದ ಭಯ ಬರಬಹುದೆ? ಶಿವಶಿವ ಎನ್ನುತ್ತದೆ ಮನಸ್ಸು. ಶ್ರೀರಾಮನ ಆರ್ತಪ್ರಲಾಪಗಳಲ್ಲಿ ನಾವೂ ಸೇರಿಸಿಕೊಳ್ಳುತ್ತೇವೆ.

ಎಲ್ಲ ಕರುಣಪ್ರಸಂಗಗಳಲ್ಲಿಯೂ ಒಂದು ನ್ಯಾಯಾಪೇಕ್ಷೆಯ ಅಂಕುರ ಸೇರಿಕೊಂಡಿರುತ್ತದೆ–ಎಂದು ಮೇಲೆ ಹೇಳಿದೆ. ಶ್ರೀರಾಮನಲ್ಲಿ ಅಂಥ ನ್ಯಾಯಾಕಾಂಕ್ಷೆ ತುಂಬಿತ್ತು. ಆತನು ಸ್ವಭಾವದಿಂದ ಸರಸಿ, ಪ್ರಕೃತಿಯ ಸೌಮ್ಯಸೌಂದರ್ಯಗಳಲ್ಲಿ ಲೀನವಾದ ಮನಸ್ಸುಳ್ಳವನು. ಅಂಥವನ ಮನಸ್ಸು ಹೇಗಿತ್ತೆಂಬುದನ್ನು ವಾಲ್ಮೀಕಿಗಳು ಮನೋಹರವಾದ ವಾಗ್ವರ್ಣಗಳಿಂದ ಚಿತ್ರಿಸಿದ್ದಾರೆ.

ತತೋ ಮಹದ್ವರ್ತ್ಮ ಸುದೂರಸಂಕ್ರಮಃ
ಕ್ರಮೇಣ ಗತ್ವಾ ಪ್ರತಿಕೂಲಧನ್ವನಮ್‍ ।
ದದರ್ಶ ಪಂಪಾಂ ಶುಭದರ್ಶಕಾನನಾಮ್‍
ಅನೇಕ ನಾನಾವಿಧಪಕ್ಷಿಜಾಲಕಾಮ್‍ ॥ ಸ. ೭೫, ಶ್ಲೋ ೩೦

ಕರುಣದಲ್ಲಿ ಅನ್ಯಕಷ್ಟಸಹಾನುಭವ, ಅನ್ಯಾರ್ಥಕ ನ್ಯಾಯಚಿಂತನೆ–ಇವು ಅಂತರ್ಗತವಾಗಿರುತ್ತವೆಂದು ಹೇಳಿದ. ಆ ಕಾರಣದಿಂದಲೇ ಕರುಣವು ಶೋಕವಾಗುತ್ತದೆ. “ಅಯ್ಯೋ! ಸೀತಮ್ಮನಿಗೆ ಹೀಗಾಯಿತೆ? ಎಂಥ ಅನ್ಯಾಯ! ಎಂಥ ಘೋರ!” ಎಂದು ನಾವು ಅನುತಾಪಪಡುತ್ತೇವೆ. ಈ ಶೋಕದಲ್ಲಿ ಬಂದು ಮಾನವೀಯತೆಯ ಉತ್ಕೃಷ್ಟ ಭಾವ ಅಡಗಿದೆ. ಆದದ್ದರಿಂದಲೇ ಅದು ಹೃದ್ಯವಾಗಿ ರಸವೆನಿಸಿಕೊಳ್ಳುತ್ತದೆ. ನಾವು ಇಂಥ ಪ್ರಸಂಗವನ್ನು ಮತ್ತೆ ಮತ್ತೆ ಕುತೂಹಲದಿಂದ ನೋಡುತ್ತೇವೆ. ಹೀಗೆ ಕಾವ್ಯದ ಶೋಕರಸವು ಜೀವಶೋಧಕವಾಗುತ್ತದೆ. ಬಹುಶಃ ಇದನ್ನು ನೆನೆದೇ ಅರಿಸ್ಟಾಟಲ್‍ ತಾತ್ತ್ವಿಕನು ಕಾವ್ಯದಲ್ಲಿಯ ಶೋಕರಸವನ್ನು (Tragedy) ಅಂತರಂಗವಿರೇಚಕ (Catharsis) ಎಂದು–ಜೀವಮಲಶೋಧಕ–ಎಂದು ಕರೆದಿದ್ದಾನೆ. ಸೀತೆಯನ್ನು ನೆನೆದು ನಾವು ಕನಿಕರಪಟ್ಟಷ್ಟೂ ಅದು ನಮ್ಮ ಹೃದಯಕ್ಕೆ ಪಾವಕವಾಗುತ್ತದೆ. (೧೯೬೮)


Thursday, 11 January 2024

ಭಾಗ 6 - ಅಯೋಧ್ಯಾ ಕಾಂಡ - ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ವಾಲ್ಮೀಕಿಪ್ರಪಂಚದಲ್ಲಿಯ ಮತ್ತೊಬ್ಬ ಆದರ್ಶ ವ್ಯಕ್ತಿಯೆಂದರೆ ಭರತ. ಭರತನ ತ್ಯಾಗ ದೊಡ್ಡದೋ ರಾಮನ ತ್ಯಾಗ ದೊಡ್ಡದೋ ನಿರ್ಧಾರ ಮಾಡುವುದು ಸುಲಭವಲ್ಲ. ವಾಲ್ಮೀಕಿ ಚಿತ್ರಿಸಿರುವ ಜಗತ್ತಿನಲ್ಲಿಯ ರಾಮ, ಸೀತೆ, ಲಕ್ಷ್ಮಣ, ಭರತ, ಆಂಜನೇಯ–ಈ ಐವರೂ ತ್ಯಾಗವೀರರು. ಅವರಲ್ಲಿ ಅತ್ಯುನ್ನತರಾರು? ನಾವು ಒಂದು ದೊಡ್ಡ ಕಾಡಿನಲ್ಲಿ ನಿಂತು ತಲೆಯೆತ್ತಿ ನೋಡಿದರೆ ವೃಕ್ಷಾಗ್ರಗಳು ಎಲ್ಲೆಲ್ಲೂ ಮುಗಿಲನ್ನು ಮುಟ್ಟುವಂತೆ ಕಾಣುತ್ತವೆ, ಅವುಗಳಲ್ಲಿ ಹೆಚ್ಚು ದೊಡ್ಡದು ಯಾವುದು? ಅವೆಲ್ಲವೂ ನಮಗಿಂತ ದೊಡ್ಡವೇ. ಒಂದು ಮಟ್ಟದವರೆಗೆ–ನಮ್ಮ ಕೈಗೆ ಎಟುಕುವಷ್ಟು ಎತ್ತರದವರೆಗೆ–ನಾವು ಬೇರೆ ವಸ್ತುವಿನ ಎತ್ತರವನ್ನು ಅಳೆಯಲಾಗುತ್ತದೆ. ಆ ಮಟ್ಟದಿಂದ ಮೇಲೆ ನಾಲ್ಕಾರು ಆಳುದ್ದಕ್ಕಿಂತ ಹೆಚ್ಚಾಗಿ ಮರವೋ ಬೆಟ್ಟವೋ ಬೆಳೆದಿದ್ದರೆ ಆ ಹೆಚ್ಚಿನ ಅಳತೆಯನ್ನು ಗೊತ್ತುಮಾಡುವುದು ನಮ್ಮ ಬರಿಯ ಕಣ್ಣುಗಳಿಗೆ ಶಕ್ಯವಾಗದು. ಮಹಾಪುರುಷರ ಸ್ವಭಾವದ ಔನ್ನತ್ಯವೂ ಹಾಗೆ ನಮ್ಮ ಅಳತೆಗೋಲಿನ ತಾರತಮ್ಯ ನಿರ್ಣಯಕ್ಕೆ ಸಿಕ್ಕಲಾರದು. ನಾವು ಆ ಎಲ್ಲ ಮೂರ್ತಿಗಳಿಗೂ ದೂರದಿಂದ ತಲೆಬಾಗಿ ಕೈಮುಗಿಯತಕ್ಕವರು.

ರಾಮನಿಗೆ ಕೋಸಲರಾಜ್ಯವು ಹಿಂದಿನ ಕುಲಸಂಪ್ರದಾಯದಿಂದ ತಾನಾಗಿ ಬರತಕ್ಕದ್ದಿತ್ತು. ದಶರಥನು ಆ ವಿಚಾರಕ್ಕೆ ಕೈಹಾಕದೆ ಇದ್ದಿದ್ದರೆ, –ಕೈಕೇಯಿಗೆ ಮಂಥರೆ ಹೇಳಿಕೊಡದೆ ಇದ್ದಿದ್ದರೆ, –ಆ ಆತುರ ವಾಗ್ದಾನದ ನಿಮಿತವಿಲ್ಲದೆಹೋಗಿದ್ದಿದ್ದರೆ, –ಕೋಸಲ ರಾಜ್ಯವು ಯಾರ ಪ್ರಯತ್ನವೂ ಇಲ್ಲದೆ, –ಯಾರ ಮಾತೂ ಬೇಕಿಲ್ಲದೆ, –ರಾಮನದಾಗುತ್ತಿತ್ತು. ಹೀಗೆ ದೇಶಸಂಪ್ರದಾಯದಿಂದ ತನ್ನದೇ ಆಗಿಬಂದಿದ್ದ ರಾಜ್ಯವನ್ನು ಸತ್ಯಪಾಲನೆಯ ನಿಯಮಕ್ಕೆ ತಾನಾಗಿ ತಲೆಬಾಗಿ ತ್ಯಾಗಮಾಡಿದವನು ರಾಮ.

ಭರತನಿಗಾದರೋ ರಾಜ್ಯವು ಎರಡುಸಾರಿ ಪ್ರದತ್ತವಾಗಿ ಬಂದಿತ್ತು, –ಮೊದಲು ತಾಯತಂದೆಯರ ಮಾತಿನಿಂದ; ಬಳಿಕ ರಾಮನ ಸ್ವಂತ ಮಾತಿನಿಂದ. ಹೀಗೆ ಪುನಃಪುನಃ ತನ್ನ ಪಾಲಿಗೆ ಬಂದದ್ದನ್ನು ಬಿಟ್ಟುಕೊಟ್ಟವನು ಭರತ. ಅಷ್ಟು ಮಾತ್ರವೇ ಅಲ್ಲ. ಶ್ರೀರಾಮನು ರಾಜ್ಯವನ್ನಂಗೀಕರಿಸದೆ ಅದನ್ನು ಭರತನೇ ಆಳತಕ್ಕದ್ದೆಂದು ಒತ್ತಾಯ ಪಡಿಸಿದಾಗ ಭರತನು ಸಿಂಹಾಸನವನ್ನೇರಿದನೆ? ಇಲ್ಲ. ಅವನು ರಾಮಪಾದುಕೆಯನ್ನು ರಾಮಲಾಂಛನವಾಗಿ ಗ್ರಹಿಸಿ, ಅದೇ ಪ್ರತ್ಯಕ್ಷ ರಾಮಮೂರ್ತಿ ಎಂಬಂತೆ ಅದನ್ನು ಗೌರವಿಸಿ, ಪೂಜಿಸಿ, ತನ್ನ ಆಡಳಿತವನ್ನು ಬೇರೊಬ್ಬ ಯಜಮಾನನಿಗೆ ಒಪ್ಪಿಸುವ ಕಾರಕೂನನಂತೆ ತನ್ನ ರಾಜ್ಯಕಾರ್ಯಗಳನ್ನು ರಾಮಪಾದುಕೆಗೆ ಒಪ್ಪಿಸಿ ರಾಜ್ಯನಿರ್ವಾಹಮಾಡಿದ. ಅದು ಲೋಕೋತ್ತರವಾದ ಕರ್ತವ್ಯನಿಷ್ಠೆಯ ಪ್ರಕರಣ.

ಯದಾ ಹಿ ಯತ್ಕಾರ್ಯಮುಪೈತಿ ಕಿಂಚಿತ್‍

ಉಪಾಯನಂ ಚೋವಹೃತಂ ಮಹಾರ್ಹಮ್‍ ।

ಸ ಪಾದುಕಾಭ್ಯಾಂ ಪ್ರಥಮಂ ನಿವೇದ್ಯ ಚಕಾರ ಪಶ್ಚಾದ್ಭರತೋ ಯಥಾವತ್‍ ॥ 

ರಾಜ್ಯದ ವೈಭವವನ್ನು ತೊರೆದು ರಾಜ್ಯದ ಭಾರವನ್ನು ಮಾತ್ರ ಹೊತ್ತವನು ಭರತ. ಅವನು ತಪಸ್ವಿ; ಆದರೆ ಕರ್ತವ್ಯನಿಷ್ಠನಾದ ತಪಸ್ವಿ. ಲೋಕವನ್ನೂ ಲೋಕವಿರಕ್ತಿಯನ್ನೂ ಸಮನ್ವಯಪಡಿಸಿಕೊಂಡಿದ್ದ ಮಹಾನುಭಾವ ಭರತ.

ಈಶಾವಾಸ್ಯೋಪನಿಷತ್ತಿನ–

“...ತೇನ ತ್ಯಕ್ತೇನ ಭುಂಜೀಥಾಃ... ।

ಕುರ್ವನ್ನೇವೇಹ ಕರ್ಮಾಣಿ ॥

ಜಿಜೀವಿಷೇಚ್ಭತಗ್ಂ ಸಮಾಃ ॥” 

ಈ ಉಪದೇಶವನ್ನು ಅನುಸರಿಸಿದವನು ಭರತ. ವೈರಾಗ್ಯ ಮತ್ತು ಇಹಜೀವನ–ಈ ಎರಡರ ಸಮರಸ ಸಮ್ಮೇಳನಾಭ್ಯಾಸವನ್ನು ತೋರಿಸಿದ್ದು ಭರತನ ಅಪೂರ್ವ ಮಾಹಾತ್ಮ್ಯೆ.

ಭರತನು ಶ್ರೀರಾಮಪಾದುಕೆಗಳನ್ನು ತಲೆಯಮೇಲೆ ಧರಿಸಿ ಅದರ ಕೀರ್ತಿಯನ್ನು ರಾಜ್ಯದಲ್ಲಿ ಘೋಷಿಸಿ, ಶ್ರೀರಾಮನ ಪುನರಾಗಮನದವರೆಗೂ ಯತಿಯಾಗಿ, ಕೃಶನಾಗಿ, ಭಕ್ತನಾಗಿ, ವಿನೀತನಾಗಿ, ಸತ್ಯಧರ್ಮನಿಷ್ಠನಾಗಿ ವ್ರತಪರಿಪೂರಣೆ ಮಾಡಿದ ಪ್ರಸಂಗಗಳ ವರ್ಣನೆ ಎಂಥವರಿಗಾದರೂ ಹೃದಯವನ್ನು ಕಲಕಿ ಕರಗಿಸಿ ಜೀವವನ್ನು ಜಾಲಾಡಿಸತಕ್ಕದ್ದಾಗಿದೆ.

೯೯ನೆಯ ಸರ್ಗದಿಂದ ೧೧೪ನೆಯ ಸರ್ಗದವರೆಗಿನ ಗ್ರಂಥವನ್ನು–ಕನ್ನಡ ಅನುವಾದವನ್ನೂ ಸಂಸ್ಕೃತ ಮೂಲವನ್ನೂ ಜೋಡಿಸಿಕೊಂಡು–ಒಂದು ಸಾರಿ ನೋಡಿದವರು ಮತ್ತೆ ಮತ್ತೆ ನೋಡಿಯಾರೆಂದು ನನಗೆ ನಂಬಿಕೆಯಿದೆ. ಅಲ್ಲಿಯ ಸನ್ನಿವೇಶಗಳೂ ಅಲ್ಲಲ್ಲಿಯ ಉಕ್ತಿ ಪ್ರತ್ಯುಕ್ತಿಗಳೂ ಅಷ್ಟು ಸುಂದರಗಳಾಗಿವೆ.

ಅಯೋಧ್ಯಾಕಾಂಡವು ಸೀತಾರಾಮರ ರಸಿಕಜೀವನ ಚಿತ್ರದಲ್ಲಿ ಪರಿಸಮಾಪ್ತವಾಗಿ ಮಂಗಳಕರವಾಗಿದೆ. ಅನಸೂಯೆಯು ಸೀತೆಯನ್ನು ಕುರಿತು ಹೇಳಿದಳಂತೆ: “ದೇವಿ, ರಾತ್ರಿಯು ರಮಣೀಯವಾಗಿದೆ. ಮೃಗಪಕ್ಷಿಗಳು ನಿದ್ದೆಹೋಗುವ ಹೊತ್ತು ಇದು. ಬೆಳದಿಂಗಳು ಹರ್ಷಪ್ರದವಾಗಿದೆ. ನೀನು ಶುಭಾಲಂಕಾರಗಳನ್ನು ಧರಿಸಿ ಶ್ರೀರಾಮನ ಬಳಿಯಲ್ಲಿರಲು ಮನಸ್ಸು ಮಾಡು.”

ಪುನಃ ಸೀತೆಯನ್ನು ನೋಡಿ ಹೀಗೆಂದಳು:

ಅಲಂಕುರು ಚ ತಾವತ್ತ್ವಂ

ಪ್ರತ್ಯಕ್ಷಂ ಮಮ ಮೈಥಿಲಿ ।

ಪ್ರೀತಿಂ ಜನಯ ಮೇ ವತ್ಸೇ

ದಿವ್ಯಾಲಂಕಾರಶೋಭಿತಾ ॥ 

ಶ್ರೀಸೀತಾರಾಮರ ಅನುಗ್ರಹದಿಂದ ವಾಚಕರು ಶ್ರೇಯೋಭಿವೃದ್ಧಿ ಪಡೆಯಲಿ. (೧೯೬೭)

ಭಾಗ 5 - ಅಯೋಧ್ಯಾಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಶ್ರೀ ಸೀತಾರಾಮರ ಕೃಪಾಬಲದಿಂದ ನಮ್ಮ ಸ್ನೇಹಿತರು ಸಂಕಲ್ಪಿಸಿದ ಶ್ರೀಮದ್ರಾಮಾಯಣ ಪ್ರಕಟನಕಾರ್ಯವು ಈವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ:

1) ಮೊದಲು ಸುಂದರಕಾಂಡವು ಜನವರಿ ೧೯೬೫ರಲ್ಲಿ ಪ್ರಕಟವಾಯಿತು.

2) ಎರಡನೆಯದಾಗಿ ಬಾಲಕಾಂಡವು ಮಾರ್ಚಿ ೧೯೬೬ರಲ್ಲಿ ಪ್ರಕಟವಾಯಿತು.

3) ಅಯೋಧ್ಯಾಕಾಂಡದ ಪೂರ್ವಾರ್ಧ ಈಗ ಪ್ರಕಟವಾಗುತ್ತಿದೆ.

4) ಅಯೋಧ್ಯಾಕಾಂಡದ ಉತ್ತರಾರ್ಧ ಕೆಲವು ತಿಂಗಳೊಳಗಾಗಿ ಪ್ರಕಟವಾಗುವ ಭರವಸೆಯಿದೆ.

ರಾಮಾಯಣದ ಏಳು ಕಾಂಡಗಳಲ್ಲಿ ಯುದ್ಧಕಾಂಡವನ್ನು ಬಿಟ್ಟರೆ ಅಯೋಧ್ಯಾಕಾಂಡವೇ ಬಹಳ ದೊಡ್ಡದು. ಪುಸ್ತಕ ಬೇಕೆಂದು ಕೇಳುವವರು ಅವಸರಪಡಿಸುತ್ತಿರುವುದರಿಂದಲೂ ಕೈ ಹಿಡಿತದ ಸೌಕರ್ಯವನ್ನು ಯೋಚಿಸಿಯೂ ಈ ಕಾಂಡವನ್ನು ಎರಡು ಸಂಪುಟಗಳಾಗಿ ಪ್ರಕಟಗೊಳಿಸುವುದು ಉಚಿತವೆಂದು ತೋರಿತು.

ಪ್ರಕಟನಕಾರ್ಯ ಉಪಕ್ರಮವಾದಂದಿನಿಂದ ಈವರೆಗೆ ದೇಶದ ಆರ್ಥಿಕಸ್ಥಿತಿ ಮತ್ತಷ್ಟು ಕೆಟ್ಟಿದೆ. ಒಂದು ಕಡೆ ಕಾಗದದ ಬೆಲೆಯೂ ಮುದ್ರಣದ ವೆಚ್ಚವೂ ಹೆಚ್ಚಿ ಹಣದ ಜವಾಬ್ದಾರಿ ಪ್ರಕಾಶಕರಿಗೆ ಇಮ್ಮಡಿಯಾಗಿದೆ. ಇನ್ನೊಂದು ಕಡೆ ಗ್ರಾಹಕರ ಸ್ಥಿತಿಯೂ ದುರ್ಬಲವಾಗಿದೆ. ಆಹಾರವಸ್ತುಗಳ ಬೆಲೆಗಳು, ಇತರ ಜೀವನಸಾಮಾಗ್ರಿಯ ವೆಚ್ಚ–ಇವು ಒಂದಕ್ಕೆ ನಾಲ್ಕಾಗಿವೆ. ಹೀಗೆ ಉಭಯತ್ರ ಕಷ್ಟವಾಗಿದೆ.

ಆದರೂ, ದೇಹಜೀವನಕ್ಕೆ ಅನ್ನವಸ್ತ್ರಗಳು ಹೇಗೋ ಆತ್ಮದ ಜೀವನಕ್ಕೆ ರಾಮಾಯಣ ಭಾರತಗಳು ಹಾಗೆ ಅವಶ್ಯ ಸಾಮಾಗ್ರಿಗಳಾಗಿರುತ್ತವೆ. ಈ ನಂಬಿಕೆಯಿಂದ ಪ್ರಕಾಶಕರು ಮುಂದುವರಿಯುತ್ತಿದ್ದಾರೆ. ಅವರ ಉತ್ಸಾಹವನ್ನು ಸಫಲಗೊಳಿಸುವುದು ಮಹಾಜನರ ಮೇಲಿರುವ ಕರ್ತವ್ಯಭಾರ.

***********

ಅಯೋಧ್ಯಾಕಾಂಡವನ್ನು ಶ್ರೀಮದ್ರಾಮಾಯಣದ ಹೃದಯಾಂಗಣವೆನ್ನಬಹುದು. ಇಲ್ಲಿ ಶ್ರೀರಾಮನ ಯೌವರಾಜ್ಯಕ್ಕೆ ವಿಘ್ನ ಬಂದದ್ದು ಮೊದಲು ಶ್ರೀರಾಮನ ಅರಣ್ಯವಾಸದ ಪ್ರಾರಂಭದವರೆಗಿನ ಕಥೆಯಿರುತ್ತದೆ. ಈ ಕಥಾಭಾಗದಲ್ಲಿ ಹೃದಯವಿದ್ರಾವಕವಾದ ಘಟನೆಗಳು ನಾಲ್ಕಾರು ನಡೆಯುತ್ತವೆ. ಈ ಘಟನೆಗಳು ಶ್ರೀರಾಮನಿಗೂ ಸೀತಾದೇವಿಗೂ ಭರತಲಕ್ಷ್ಮಣರಿಗೂ ದಶರಥ ಕೌಸಲ್ಯೆ ಸುಮಿತ್ರೆಯರಿಗೂ ಸಹ ಒದಗಿದ ಧರ್ಮಪರೀಕ್ಷೆಗಳನ್ನು ನಮ್ಮ ಕಣ್ಣ ಮುಂದೆ ತರುತ್ತವೆ. ಗ್ರಂಥವನ್ನೋದುತ್ತ ಆಯಾ ಸಂದರ್ಭಪಾತ್ರಗಳಲ್ಲಿ ತನ್ಮಯರಾದರೆ ದುಃಖಾವೇಗದಿಂದ ಎದೆಯುಕ್ಕಿ ಕಣ್ಣೀರು ಬರುವುದನ್ನು ಯಾವ ಸಾಮಾನ್ಯ ಮನುಷ್ಯರೂ ತಡೆಯಲಾಗದು.

ವಾಲ್ಮೀಕಿಗಳ ಕಾವ್ಯವನ್ನು ನೋಡಹೊರಡುವವರಿಗೆ ಒಂದು ಎಚ್ಚರಿಕೆ ಅವಶ್ಯವಾಗಿದೆ. ವಾಲ್ಮೀಕಿಗಳು ಹೇಳುವುದು ಕಥೆಯನ್ನಲ್ಲ, ಕಾವ್ಯವನ್ನು. ಕಥೆಯ ಸಂಗತಿಗಳಿಗಿಂತ ಬೇರೆಯಾದ, ಅದಕ್ಕಿಂತ ಹೆಚ್ಚಿನ ಒಂದು ಸೂಕ್ಷ್ಮದ್ರವ್ಯ ಕಾವ್ಯದಲ್ಲಿರುತ್ತದೆ. ಅದನ್ನು ಒಟ್ಟಿನಲ್ಲಿ ರಸ ಎಂದು ಹೇಳಬಹುದು. ಇನ್ನೂ ವಿಶದಪಡಿಸಬೇಕಾದರೆ ಭಾವ ಎನ್ನಬಹುದು; ಭಾವಧ್ವನಿ ಎನ್ನಬಹುದು; ಇಂಗ್ಲೀಷಿನಲ್ಲಿ “Reading between the lines” ಎಂದು ಹೇಳುವುದುಂಟು ಧ್ವನಿತಾರ್ಥವನ್ನು. ಬರೆಹದ ಅಥವಾ ಅಚ್ಚಾದ ಪದಪಂಕ್ತಿಗಳಲ್ಲಿ ಇರುವುದಕ್ಕಿಂತ ಆ ಪಂಕ್ತಿಗಳ ಒಂದು ಸಾಲಿಗೂ ಇನ್ನೊಂದಕ್ಕೂ ನಡುವೆ ಹುದುಗಿಕೊಂಡಿರುತ್ತದೆ ಒಂದು ವಿಶೇಷ ಭಾವಭಕ್ತಿ. ಅದನ್ನು ನಾವು ಜಾಗರೂಕತೆಯಿಂದ ಕಂಡುಕೊಂಡು ಗ್ರಹಿಸಿದಾಗ ನಮ್ಮ ಕಾವ್ಯಪಾಠ ಸಾರ್ಥಕವಾಗುತ್ತದೆ.

ವಾಲ್ಮೀಕಿಗಳ ಬರವಣಿಗೆ ಮೇಲ್ನೋಟಕ್ಕೆ ಸುಲಭವೆನಿಸುತ್ತದೆ. ಅವರ ಮಾತುಗಳು ಸಾಮಾನ್ಯ ಬಳಕೆಯವು. ಅವನ ವಾಕ್ಯರಚನೆ ಸರಳವಾದದ್ದು. ಅದರ ಓಟ ಸುಂದರವಾದದ್ದು. ಹೀಗೆ ಕಷ್ಟ ಕೊಡದೆ ಲಲಿತವಾದ ಧಾಟಿಯಲ್ಲಿ ಓಡುತ್ತದೆ ಅವರ ಕಾವ್ಯ. ಆದದ್ದರಿಂದ ನಾವು ಮೇಲ್ಮೇಲೆ ಸುಲಭವಾದದ್ದನ್ನು ಮಾತ್ರ ಕಂಡು ತೃಪ್ತರಾಗಿ ಆಳವಾಗಿರುವುದನ್ನು ಮರೆಯುವ ಅಪಾಯವುಂಟು. ಈ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು. ಅಗ್ಗದ ಕಥೆ ಕಾದಂಬರಿಗಳನ್ನು ಓದುವ ಲಘುಮನೋಭಾವದಿಂದ ವಾಲ್ಮೀಕಿಗಳ ಕಾವ್ಯವನ್ನು ನೋಡತಕ್ಕದ್ದಲ್ಲ. ವಾಲ್ಮೀಕಿಗಳ ಮಾತಿನ ಅಕ್ಷರಸೌಂದರ್ಯದಲ್ಲಿ ಅರ್ಥದ ಆಳವಿದೆ. ನಾವು ಸುಂದರವಾದ ಮೇಲ್ಮುಖವನ್ನು ನೋಡಿ ಗಂಭೀರವಾದ ಅರ್ಥಸತ್ತ್ವವನ್ನು ಮರೆತರೆ ತೆಂಗಿನಕಾಯ ಹಸಿರುತೊಗಟೆಯ ಮೇಲ್ನುಣುಪಿಗೆ ಮನಸೋತು ಒಳಗಿನ ಕೊಬ್ಬರಿಯನ್ನು ಬಿಟ್ಟಂತೆ ಆಗುತ್ತದೆ.

ಅಯೋಧ್ಯಾಕಾಂಡದ ಪಟ್ಟಾಭಿಷೇಕವಿಘ್ನದ ಪ್ರಕರಣದಲ್ಲಿ (ಸರ್ಗ ೮, ೯) ಮಂಥರೆ–ಕೈಕೇಯಿಯರ ಸಂವಾದವು ನೋಡತಕ್ಕದ್ದಾಗಿದೆ. ವಾಲ್ಮೀಕಿಗಳು ಅಲ್ಲಿ ನಮ್ಮನ್ನು ಬಾಯಾರ ನಗಿಸುತ್ತಾರೆ. ಕೈಕೇಯಿಗೆ ಮಂಥರೆ ಮೊದಮೊದಲು ಇಷ್ಟಳಾಗಲಿಲ್ಲ. ಮಂಥರೆ ಕೈಕೇಯಿಯ ಸ್ವಾರ್ಥವನ್ನು ಕೆರಳಿಸುತ್ತಾಳೆ. ಆಗ ಹುಟ್ಟಿ ಹರಿಯುತ್ತದೆ ನೋಡಿ ಮಂಥರೆಯ ವಿಷಯದಲ್ಲಿ ಶ್ಲಾಘನೆ ತರಂಗತರಂಗವಾಗಿ ಕೈಕೇಯಿಯ ಬಾಯಿಂದ (ಪುಟ ೭೦-೭೩). ಅನಂತರ ದಾರುಣವಾದ ಪ್ರಸಂಗಗಳು: ದಶರಥ–ರಾಮರ ಮಾತುಕಥೆ, ಕೌಸಲ್ಯೆ–ಸುಮಿತ್ರೆಯರ ಶೋಕ ಸಾಂತ್ವನಗಳು, ಲಕ್ಷ್ಮಣನ ಆವೇಶ, ಶ್ರೀರಾಮನ ಸಮಚಿತ್ತತೆ, ಸೀತಾದೇವಿಯ ವೀರವ್ರತನಿಷ್ಠೆ–ಈ ವೀಚೀಪರಂಪರೆ.

ವಾಲ್ಮೀಕಿಗಳ ಭಾವಗರ್ಭಿತವಾದ ವಾಕ್ಪ್ರಕಾರಕ್ಕೆ ಒಂದು ಉದಾಹರಣೆ: ದಶರಥನು ರಾಮವನವಾಸದ ಪ್ರಸ್ತಾವವನ್ನು ಶ್ರೀರಾಮನಿಗೆ ತಿಳಿಸಬೇಕಾಗಿ ಬಂದಾಗ ಶ್ರೀರಾಮನನ್ನು ಕರೆಯಿಸಿಕೊಂಡ, ರಾಮಚಂದ್ರನು ತಂದೆಯ ದರ್ಶನ ಮಾಡಿದಾಗ ಏನಾಯಿತು? (ಪುಟ ೧೫೨-೩)

ರಾಮೇತ್ಯುಕ್ತ್ವಾಚ ವಚನಂ ಬಾಷ್ಪಪರ್ಯಾಕುಲೇಕ್ಷಣಃ ।

ಶಶಾಕ ನೃಪತಿರ್ದೀನೋ ನೇಕ್ಷಿತುಂ ನಾಭಿಭಾಷಿತುಮ್‍ ॥ (ಸ. ೧೮-ಶ್ಲೋ. ೩)

ದಶರಥನ ಬಾಯಿಂದ ‘ರಾಮ’ ಎಂಬ ಎರಡಕ್ಷರ ಮಾತ್ರ ಹೊರಟಿತು. ಹೆಚ್ಚು ಮಾತಿಗೆ ಗಂಟಲು ಕಟ್ಟಿತು. ಆಗ ಶ್ರೀರಾಮಮೂರ್ತಿ, ಸಂದರ್ಭವು ತನ್ನ ತಂದೆಗೆ ದುಃಖಕರವಾದದ್ದಿರಬೇಕೆಂದು ಊಹಿಸಿಕೊಂಡು ತನ್ನ ಮನಸ್ಸಿನಲ್ಲಿ ಹೇಗೆ ಹೇಗೋ ನೊಂದುಕೊಂಡ. ಇದನ್ನು ಗಮನಿಸಿ ನೋಡಬೇಕು. ಅದನ್ನು ವಿಸ್ತರಿಸಿ ಇಪ್ಪತ್ತು ಪುಟ ಬೇಕಾದರೂ ಬರೆಯಬಹುದು. ಇಂಥಾದ್ದು ವಾಲ್ಮೀಕಿಗಳ ಸಂದರ್ಭರಚನೆ ಮತ್ತು ನಿರೂಪಣಕೌಶಲ.

ಇನ್ನೊಂದು ಉದಾಹರಣೆ (ಪುಟ ೧೬೫):

ಲೋಕಕಾಂತಸ್ಯ ಕಾಂತತ್ವಾಚ್ಛೀತರಶ್ಮೇರಿವ ಕ್ಷಪಾ ॥ (ಸ. ೧೯–ಶ್ಲೋ. ೨೩)

ಶ್ರೀರಾಮನು ರಾಜ್ಯವನ್ನು ತೊರೆದುಹೋಗುವುದರಿಂದ ಆತನ ಕಾಂತಿ ಕುಂದುತ್ತದೆಯೇ? ಪ್ರಪಂಚಕ್ಕೆ ಇಂಪಾದ ಬೆಳದಿಂಗಳನ್ನು ಕೊಡುವ ಚಂದ್ರನು ಆಕಾಶದಲ್ಲಿ ಸೂರ್ಯನಿರುವಾಗ ಕಾಣಿಸಿಕೊಳ್ಳುತ್ತಾನೆ. ಆದರೆ ಸೂರ್ಯನು ಮುಳುಗಿ ಚಂದ್ರನನ್ನು ಕತ್ತಲೆ ಆವರಿಸಿದಾಗ ಚಂದ್ರನ ಕಾಂತಿ ತಗ್ಗುತ್ತದೆಯೆ? ಇಲ್ಲ; ತಗ್ಗುವುದು ಹೋಗಿ ಇನ್ನೂ ಹೆಚ್ಚಾಗುತ್ತದೆ.

ಇಂಥವು ವಾಲ್ಮೀಕಿಗಳ ವಾಕ್ಪ್ರಯೋಗಗಳು. ಓದುಗರು ಪದಪದದ ಮೇಲೂ, ಅಕ್ಷರಕ್ಷರದಮೇಲೂ ಒಂದೊಂದು ಕ್ಷಣ ನಿಂತು ಸ್ವಾರಸ್ಯವನ್ನುಂಡು ಮುಂದಕ್ಕೆ ಹೋಗಬೇಕು. ಗಬಗಬನೆ ನುಂಗಬಾರದು. ಸಾವಕಾಶವಾಗಿ ಚಪ್ಪರಿಸಿ ಸವಿಯಬೇಕು.

ನಮ್ಮ ವ್ಯಾಪಾರಗಳು ಫಲದೃಷ್ಟಿಯಿಂದ ಎರಡು ಬಗೆಯಾಗಿರುತ್ತವೆ: ಕೆಲವು ಸದ್ಯಃ ಫಲಿತಗಳು; ಕೆಲವು ಕಾಲಾಂತರಫಲದವು. ಬೆಳಗ್ಗೆ ಯಾರಾದರೂ ಬಂದು ಸಹಾಯ ಬೇಡುತ್ತಾರೆ. “ಸಂಜೆಗೆ ಬನ್ನಿ” ಎನ್ನುತ್ತೇವೆ. ವಾಗ್ದಾನ ಬೇರೆ; ವಸ್ತುದಾನ ಬೇರೆ. ಬೆಳಗ್ಗೆ ಅಡಿಗೆಯಾಗುತ್ತದೆ; ಮಧ್ಯಾಹ್ನ ಊಟ. ಪಾಕ ಬೇರೆ; ಭೋಜನ ಬೇರೆ. ಇವು ಕಾಲಾಂತರಫಲಿತ ವ್ಯಾಪಾರಗಳು. ಪಾಯಸವನ್ನು ನಾಲಗೆಯ ಮೇಲಿಡುತ್ತೇವೆ; ಆ ಕ್ಷಣವೇ ಅದರ ಸವಿಯನ್ನನುಭವಿಸುತ್ತೇವೆ. ಇದು ಸದ್ಯಃ ಫಲ. ಕಾರ್ಯಕ್ಕೂ ತತ್ಫಲಕ್ಕೂ ನಡುವೆ ಬಿಡುವಿಲ್ಲ. ಶ್ರೀಮತಿ ಸುಬ್ಬಲಕ್ಷ್ಮಮ್ಮನ ಹಾಡನ್ನು ಕೇಳುತ್ತೇವೆ; ಆ ಧ್ವನಿ ಕಿವಿ ಸೋಕಿದ ಒಡನೆಯೇ ಮೈಮರೆಯುತ್ತೇವೆ. ಒಂದು ಸುಂದರಾಕಾರವನ್ನು ಕಾಣುತ್ತೇವೆ; ಕಾಣುತ್ತಿದ್ದಂತೆಯೇ ಮೋಹಕ್ಕೋ ಉದ್ರೇಕಕ್ಕೋ ಸಿಕ್ಕಿಕೊಳ್ಳುತ್ತೇವೆ. ನಡೆದ ಘಟನೆಗಳು ಕಾರ್ಯಕಾರಣದೃಷ್ಟಿಯಿಂದ ಎರಡು; ಸ್ವಾನುಭವದಲ್ಲಿ ಏಕಮಾತ್ರ. ಬ್ರಹ್ಮಾನುಭವವೂ ಹಾಗೆಂದು ವೇದಾಂತಿಗಳು ಹೇಳುವುದುಂಟು. ಬ್ರಹ್ಮವನ್ನು ತಿಳಿದುಕೊಳ್ಳುವುದು ಬೇರೆ, ಅನುಭವಿಸುವುದು ಬೇರೆ ಅಲ್ಲ. ಎರಡೂ ಒಂದೇ. ತಿಳಿವಳಿಕೆಯೇ ಅನುಭವ; ಅನುಭವವೇ ತಿಳಿವಳಿಕೆ. ಕಾವ್ಯವ್ಯಾಸಂಗದಲ್ಲಂತೂ ಈ ಮಾತು ನಿಜ. ರಾಮಾಯಣವನ್ನು ಓದುವುದು ಬೇರೆ ಅಲ್ಲ, ಭಾವಪರವಶನಾಗುವುದು ಬೇರೆ ಅಲ್ಲ. ಓದೋಣವೇ ಭಾವಾನುಭವ. ಓದು ಎಂದರೆಯೇ “ಗಂಗಾತೀರ್ಥದಲ್ಲಿ ಓಲಾಡು, ಅಂತರಂಗವನ್ನು ಜಾಲಾಡು” –ಎಂದರ್ಥ. ಶ್ಲೋಕಕ್ಕೂ ಶೋಕಕ್ಕೂ ನಡುವೆ ಅಂತರವಿರದು–ಅವಧಾನವಿಟ್ಟು ಓದುವ ಸಹೃದಯನ ಪಾಲಿಗೆ.

ಅಂಥ ಜಾಗರೂಕರಾದ ಓದುಗರಿಗೆ ತೃಪ್ತಿ ಕೊಡುವಂಥಾದ್ದು ವಿದ್ವಾನ್‍ ಶ್ರೀರಂಗನಾಥಶರ್ಮರವರ ಕನ್ನಡ ಅನುವಾದ. ಅವರು ಮೂಲದ ಸ್ವಾರಸ್ಯವನ್ನು ಪೂರ್ತಿಯಾಗಿ ಹಿಡಿದು ಕನ್ನಡಕ್ಕೆ ಭಟ್ಟಿ ಇಳಿಸುವುದರಲ್ಲಿ ನಿಪುಣರಾಗಿದ್ದಾರೆ. ಅವರು ಎಷ್ಟು ಶ್ರಮಪಟ್ಟಿದ್ದಾರೆಂಬುದನ್ನು ನಾನು ಸ್ವತಃ ಕಂಡಿದ್ದೇನೆ. ಕನ್ನಡ ವಾಚಕರ ಪರವಾಗಿ ನನ್ನ ವಂದನೆಗಳನ್ನು ಅವರಲ್ಲರ್ಪಿಸುತ್ತೇನೆ. ಶ್ರೀಸೀತಾರಾಮರು ಅವರಲ್ಲಿ ಸರ್ವದಾ ಅನುಗ್ರಹಮಾಡಲಿ.

ನಮ್ಮ ವಿದ್ವಾಂಸರು ತಮ್ಮ ಅನುವಾದಕಾರ್ಯವನ್ನು ಕುರಿತು ಹೇಳುವಲ್ಲಿ ಕ್ಷಮೆ ಬೇಡುವ ಧ್ವನಿಯಿಂದ ನುಡಿದಿದ್ದಾರೆ. ಅದು ತೀರಾ ಅನವಶ್ಯವೆಂದು ನನಗನ್ನಿಸುತ್ತದೆ. ಪ್ರತಿಯೊಬ್ಬ ಪ್ರಾಮಾಣಿಕ ಲೇಖಕನಿಗೂ ಇಂಥಾ ಆತ್ಮವಿಶ್ವಾಸ ಶೈಥಿಲ್ಯ ತಪ್ಪಿದ್ದಲ್ಲ. ಕಾಳಿದಾಸನೇ–

ಆತ್ಮನ್ಯಪ್ರತ್ಯಯಂ ಚೇತಃ ॥

–ಎಂದಿದ್ದಾನಲ್ಲವೆ? ಒಂದಾನೊಂದು ಹೃದಯಭಾವವನ್ನೋ ಬುದ್ಧಿವಿಚಾರವನ್ನೋ ತಿಳಿಯಪಡಿಸ ಹೊರಟಾಗ ಲೇಖಕನಿಗೆ ಒಂದಲ್ಲ, ಎರಡು ಮೂರು ನಾಲ್ಕು ವಾಕ್ಪ್ರಕಾರಗಳು ಆ ಕ್ಷಣದಲ್ಲಿ ತೋರಿಬರುತ್ತವೆ. ವಿಮರ್ಶಿಸಿ ನೋಡಿದರೆ ಒಂದೊಂದು ವಾಕ್ಪ್ರಕಾರದಲ್ಲಿ ಒಂದೊಂದು ಬಗೆಯ ಗುಣ ಕಾಣಬರುತ್ತದೆ. ಆ ಘಳಿಗೆಯಲ್ಲಿ ಯಾವ ಒಂದು ವಾಕ್ಯರೀತಿ ಅವನ ಮನಸ್ಸಿಗೆ ಹೆಚ್ಚು ರುಚಿಸುತ್ತದೆಯೋ ಆ ವಾಗ್ರಚನೆಯನ್ನು ಅವನು ಬಳಸಿಕೊಳ್ಳುತ್ತಾನೆ. ಬಳಿಕ ಇನ್ನೊಂದು ವೇಳೆ ನೋಡಿದಾಗ ನಾನು ಕೈಬಿಟ್ಟಿದ್ದ ವಾಕ್ಪ್ರಯೋಗವೇ ಇನ್ನೂ ಸೊಗಸಿನದೆಂದು ಅವನ ಮನಸ್ಸಿಗೆ ತೋರಬಹುದು. ಈ ಬಗೆಯ ಅದೃಢತೆ ಲೇಖನಕರ್ಮದಲ್ಲಿ–ಎಲ್ಲ ಕಲಾಕರ್ಮದಲ್ಲಿಯೂ–ಅನಿವಾರ್ಯವಾದದ್ದು. ಇದು ಚೆನ್ನೆ, ಅದು ಚೆನ್ನೆ? ಇಂಥ ಸಂದೇಹ ಬಂದಾಗ ಲೇಖಕನಿಗೆ ವಾಚಕನ ಯೋಗ್ಯತೆಯೇ ಶರಣ–ಸ್ಥಾನ. ವಾಚಕನು ದಕ್ಷನೂ ಸಹಾನುಭೂತಿವಂತನೂ ಆಗಿದ್ದಲ್ಲಿ ಅವನು ಲೇಖಕನ ಆಶಯವನ್ನು ತಾನೇ ಗ್ರಹಿಸಿಯಾನು. ವಾಚಕನ ಸಹಕಾರದಿಂದ ಲೇಖಕನಲ್ಲಿ ಅನಿವಾರ್ಯವಾಗಿ ನಿಂತುಹೋದ ಲೋಪಗಳು ತಿದ್ದಿಕೆ ಪಡೆದು ಸರಿಯಾಗುತ್ತವೆ. ಆದದ್ದರಿಂದ ನಮ್ಮ ವಿದ್ವನ್ಮಿತ್ರರೂ ನಾನೂ ವಾಚಕರನ್ನು ಶರಣುಹೋಗೋಣ.

ಶ್ರೀರಂಗನಾಥಶರ್ಮರವರಲ್ಲಿ ನನಗೆ ಕಾಣುವ ಒಂದು ವಿಶೇಷ ಗುಣವೆಂದರೆ ಅವರ ಋಜ್ವರ್ಥಗ್ರಹಣ. ರಾಮಾಯಣ ವ್ಯಾಖ್ಯಾನಕರ್ತರೂ ಇತರ ಕಾವ್ಯ ವ್ಯಾಖ್ಯಾತರೂ ಎಷ್ಟೋ ವೇಳೆ ಅತಿಯುಕ್ತಿಗೆ ಹೋಗಿದ್ದಾರೆ. ಅಕ್ಷರವನ್ನು ಹಿಗ್ಗಾಮುಗ್ಗಾ ಎಳೆದಾಡಿ ಅಪೂರ್ವ ಸ್ವಾರಸ್ಯ, ವಿಚಿತ್ರ ರಹಸ್ಯಗಳನ್ನು ಹೊರಕ್ಕೆ ತರಲು ಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವಶ್ಯವಾದ ಶಬ್ದಪಾಂಡಿತ್ಯವೂ ತರ್ಕಚಮತ್ಕಾರವೂ ಮೂಲಗ್ರಂಥದ ಸರಳವೂ ಅಕೃತಕವೂ ಆದ ಭಾವವನ್ನು ಮುಳುಗಿಸಿ ಕೈಗೆ ದೊರೆಯದಂತೆ ಮಾಡುತ್ತವೆ. ಶರ್ಮಾ ಅವರ ವಿದ್ವತ್ತಿಗೆ ಇಂಥಾ ಕೃತಕ ವ್ಯಾಖ್ಯಾನ ಅಸಾಧ್ಯವಾದದ್ದಲ್ಲ. ಆದರೆ ಅವರ ಸ್ವಭಾವದ ಒಲವು ಋಜುತೆಯ ಕಡೆಗೆ. ಅವರು ಒಣ ವಿದ್ವಾಂಸರಲ್ಲ; ವಿದ್ವದ್ರಸಿಕರು, ಆರ್ದ್ರ–ಹೃದಯರು, ಆಳಬಲ್ಲವರು, ನಗಬಲ್ಲವರು ಕನಿಕರಿಸಬಲ್ಲವರು, ಮತ್ತೊಬ್ಬರ ಹೃದ್ಭಾವವನ್ನು ಊಹಿಸಿ ಅನುಭವಿಸಬಲ್ಲವರು. ಇಂಥವರು ಮಾಡಿದ ವಾಲ್ಮೀಕಿ ಕಾವ್ಯಾನುವಾದವು ಭಾವವೈಶದ್ಯದಿಂದಲೂ ರಸಪುಷ್ಟಿಯಿಂದಲೂ ಆದರಣೀಯವಾಗುವುದು ಸ್ವಾಭಾವಿಕವೇ ಆಗಿದೆ. ಇದು ನನ್ನ ನಂಬಿಕೆ.

***********

ಪ್ರಭಾ ಮುದ್ರಣಾಲಯದ ಶ್ರೀ ಡಿ.ಎಸ್‍. ಕೃಷ್ಣಾಚಾರ್ಯರವರು ಸ್ವಯಂ ವಿದ್ವಾಂಸರು, ಮಹಾವಿದ್ವತ್‍ ಕುಲಪ್ರಸೂತರು, ಸದಾಚಾರಶೀಲರು. ಇಷ್ಟನ್ನು ಹೇಳಿದ ಮೇಲೆ ಅವರು ಈ ಕಾರ್ಯವನ್ನು ಶ್ರದ್ಧಾಸಕ್ತಿಗಳಿಂದ ನಿರ್ವಹಿಸಿದ್ದಾರೆಂದು ಹೇಳುವುದು ಪುನರುಕ್ತಿಯಾದೀತು.(೧೯೬೭)

ಶ್ರೀರಾಮಚಂದ್ರನು ಮಿಥೆಲೆಯಿಂದ ಸೀತಾಸಮೇತನಾಗಿ ಅಯೋಧ್ಯೆಗೆ ಬಂದು, ಸುಖಸಂತೋಷಗಳಲ್ಲಿದ್ದ ದಿನಗಳಲ್ಲಿ ಪ್ರಾರಂಭಿಸುತ್ತದೆ ಅಯೋಧ್ಯಾಕಾಂಡದ ಕಥೆ.

ಜೀವತ್ಸು ತಾತಪಾದೇಷು ನೂತನೇ ದಾರಸಂಗ್ರಹೇ । 

ಮಾತೃಭಿಶ್ಚಿಂತ್ಯಮಾಽನಿನಾಂ ತೇ ಹಿ ನೋ ದಿವಸಾ ಗತಾಃ ॥ ಉತ್ತರರಾಮಚರಿತೆ, ೧.೧೯

ತಂದೆ ದಶರಥರಾಯನು ರಾಜ್ಯದ ಭಾರವನ್ನೂ ಕುಟುಂಬದ ಭಾರವನ್ನೂ ನಿರ್ವಹಿಸಿಕೊಂಡು ಮಕ್ಕಳಿಗೆ ನಿಶ್ಚಿಂತೆಯಾಗುವಂತೆ ಅನುಕೂಲಪಡಿಸಿದ್ದಾನೆ. ರಾಮಸಹೋದರರು ಪತ್ನಿಯರು ಹೊಸದಾಗಿ ಮನೆಗೆ ಬಂದಿದ್ದಾರೆ; ಆ ದಂಪತಿಗಳು ಯೌವನದಲ್ಲಿದ್ದಾರೆ; ಪ್ರಣಯಾಂಕುರ ಸಂಭ್ರಮದಲ್ಲಿದ್ದಾರೆ; ತಾಯಂದಿರು–ಕೌಸಲ್ಯೆ, ಸುಮಿತ್ರೆ, ಕೈಕೇಯಿ ಇವರು ಮೂವರೂ–ಆ ನವದಂಪತಿಗಳ ಸರಸಸಲ್ಲಾಪಗಳನ್ನು ನೋಡಿ ಹಿಗ್ಗುತ್ತ ಅವರ ಸಂತೋಷ ಇನ್ನೂ ಹೆಚ್ಚಲು ಏನೇನು ಮಾಡಬಹುದು–ಯಾವ ಯಾವ ಭಕ್ಷ್ಯಭೋಜ್ಯಗಳು, ಯಾವ ಯಾವ ವಸ್ತ್ರಾಲಂಕಾರಗಳು, ಎಂಥೆಂಥ ವಿನೋದಗಳು, ಎಂಥೆಂಥ ಆಟಪಾಟಗಳು ಇದ್ದರೆ ಆ ನವದಂಪತಿಗಳ ಮನಸ್ಸಿಗೆ ಮತ್ತೂ ಉಲ್ಲಾಸವುಂಟಾದೀತು–ಎಂದು ಯೋಚಿಸುತ್ತಿದ್ದಾರೆ. ಇದು ಸೀತಾರಾಮರು ಆಯೋಧ್ಯೆಗೆ ಬಂದ ಹೊಸತಿನಲ್ಲಿ ನಡಸುತ್ತಿದ್ದ ಜೀವನದ ಚಿತ್ರ. ಅವರ ಸಂತೋಷವೈಭವಗಳನ್ನು ಮತ್ತೂ ಅಭಿವೃದ್ಧಿಪಡಿಸಬೇಕೆಂಬ ದಶರಥನ ಆಲೋಚನೆಯೇ ಆ ಇದ್ದ ಸಂತೋಷಕ್ಕೂ ಕೊನೆಯನ್ನು ತಂದಿತು. ಪಟ್ಟಾಭಿಷೇಕದ ಆಲೋಚನೆ ಆವರೆಗೆ ಸಿದ್ಧವಾಗಿದ್ದ ಗೃಹಸೌಖ್ಯವನ್ನು ನುಂಗಿತು. ಇಂಥ ವಿಷಪರಿಪಾಕವು ಮನುಷ್ಯಸಂಕಲ್ಪದ ಚರಿತ್ರೆಯಲ್ಲಿ ಅಪರೂಪವೇನೂ ಅಲ್ಲ.

ಅಯೋಧ್ಯಾಕಾಂಡದಲ್ಲಿ ಹೀಗೆ ಎದೆಮುಟ್ಟುವ ಸಂಗತಿಗಳು ನಾಲ್ಕಾರು ಇವೆ. ಪಟ್ಟಾಭಿಷೇಕಕ್ಕಾದ ವಿಘ್ನ, ಮಂಥರೆ–ಕೈಕೇಯಿಯರ ಸಂವಾದಸರಣಿ, ದಶರಥ ಕೌಸಲ್ಯಾದಿಗಳೊಡನೆ ರಾಮಲಕ್ಷ್ಮಣಾದಿಗಳ ಮಾತುಕಥೆ, ವನವಾಸಕ್ಕೆ ಮಾಡಿದ ಸಿದ್ಧತೆ, ಬೀಳ್ಕೊಡುಗೆ, ಪುರಜನರ ಆಕ್ರೋಶಪ್ರಲಾಪಗಳು, ಅನಂತರ ಕಂಡ ನದೀಪರ್ವತ ವರ್ಣನೆಗಳು, ಋಷ್ಯಾಶ್ರಮ ಚಿತ್ರಗಳು, ಚಿತ್ರಕೂಟದ ಪರ್ಣಾಶಾಲೆ–ಹೀಗೆ ಬರುತ್ತವೆ ಹೃದಯವೇಧಕಗಳಾದ ಕಥಾಪ್ರಸಂಗಗಳು. ಅಯೋಧ್ಯಾಪುರವನ್ನು ಬಿಟ್ಟಂದಿನಿಂದ ದಂಡಕಾರಣ್ಯ ಪ್ರವೇಶದವರೆಗಿನ ಕಥಾವಾಹಿನಿ ಅಯೋಧ್ಯಾಕಾಂಡದ್ದು.

ಒಳ್ಳೆಯ ಕಾವ್ಯದಲ್ಲಿ ಸೊಗಸುಗಳು ನಾಲ್ಕಾರು ಸೇರಿರುತ್ತವೆ. ಕಥಾ ಸಂವಿಧಾನ, ಸಂಭಾಷಣೆ, ವರ್ಣನೆ, ಶಬ್ದಸೌಂದರ್ಯ, ಪದ್ಯದ ಧಾಟಿ–ಇವೆಲ್ಲ ಸ್ವಾರಸ್ಯಗಳೇ. ಈ ಅನೇಕ ಸ್ವಾರಸ್ಯಗಳ ಅನುಭಾವದಿಂದ ವಾಚಕನ ಮನಸ್ಸಿನಲ್ಲಿ ರಸೋದಯವಾಗುತ್ತದೆ. ಇಷ್ಟೂ ಕಾವ್ಯದಲ್ಲಿ ದೊರೆಯುವ ಇಷ್ಟಫಲಗಳಾದರೂ, ಮಹಾಕಾವ್ಯದಲ್ಲಿ ರಸಫಲಕ್ಕಿಂತ ಮೇಲಾದ ಪ್ರಯೋಜನ ಬೇರೆ ಒಂದು ದೊರೆಯುತ್ತದೆ. ಅದು ಮಹತ್ತ್ವದ ದರ್ಶನ. ಮಹಾಕಾವ್ಯದಿಂದ ನಮಗಾಗುವ ಮಹೋಪಕಾರವು ಮಹತ್ತ್ವ ಸಂದರ್ಶನ.

ಮನುಷ್ಯತ್ವದಲ್ಲಿರಬಹುದಾದ ದೊಡ್ಡತನವನ್ನು ಹೃದಯದ ಮೂಲಕ ನಮಗೆ ಅನುಭವಮಾಡಿಸುವುದು ಮಹಾಕಾವ್ಯದ ಕಾರ್ಯ. ಅದು ನಮ್ಮ ಕಣ್ಣ ಮುಂದೆ ತರುವ ನಾನಾ ಪಾತ್ರಸ್ಥರಲ್ಲಿ ನಾನಾ ತೆರದ ಮಹತ್ತ್ವಗಳನ್ನು ಹೊರಹೊಮ್ಮಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ನಾವು ನಮ್ಮ ಸುತ್ತ ಮುತ್ತಲಿನ ಪ್ರಪಂಚದಲ್ಲಿ ದಿನದಿನವೂ ನೋಡುತ್ತಿರುತ್ತೇವೆ. ಆದರೆ ಒಬ್ಬ ಮಹಾವ್ಯಕ್ತಿ, ಒಂದು ವಿಶೇಷಸಂದರ್ಭವೊದಗಿದಾಗ ಹೇಗೆ ನಡೆದುಕೊಂಡಾನು ಎಂಬುದನ್ನು ನಾವು ರಾಮಾಯಣ ಭಾರತಗಳಲ್ಲಿ ಕಾಣುತ್ತೇವೆ. ಅಂಥಾ ಮಹಾವ್ಯಕ್ತಿಚಿತ್ರಣವೇ ಮಹಾಕವಿಯ ಕೃತಿ. ಅವನ ಮುಖ್ಯ ರಚನೆ ಕೇವಲ ಭಾಷಾ ಚಮತ್ಕಾರದ್ದಲ್ಲ; ಸಣ್ಣ ಸಣ್ಣ ಭಾವವಿಲಾಸಗಳದ್ದಲ್ಲ; ಅಲಂಕಾರ ಚಿತ್ರಗಳದ್ದಲ್ಲ. ಅದು ಮಹಾವ್ಯಕ್ತಿ ನಿರ್ಮಾಣದ್ದು. ಮನುಷ್ಯಸ್ವಭಾವವನ್ನು ಪರೀಕ್ಷೆಮಾಡುವ ಒಂದು ವಿಶೇಷ ಸನ್ನಿವೇಶವನ್ನು ಕಲ್ಪಿಸಿ, ಅದರಲ್ಲಿ ಮಹಾವ್ಯಕ್ತಿಯನ್ನು ನಿಲ್ಲಿಸಿ, ಅಲ್ಲಿ ಅವನ ಅಥವಾ ಅವಳ ಪ್ರತಿವರ್ತನೆ ಹೇಗಿರುತ್ತದೆ-ಅಲ್ಲಿಯ ಪ್ರಶ್ನೆಗೆ ಅವನ ಪ್ರತ್ಯುತ್ತರವೇನು–ಎಂಬುದನ್ನು ತೋರಿಸುತ್ತಾನೆ ಮಹಾಕವಿ. ಈ ಸ್ವಭಾವಾಭಿವ್ಯಕ್ತಿಯೇ ಕಾವ್ಯವಾಚಕನ ಲಕ್ಷ್ಯದಲ್ಲಿರಬೇಕಾದ ಮುಖ್ಯ ವಿಷಯ. ಸಂದರ್ಭವು ಕೇಳುವ ಪ್ರಶ್ನೆಗೆ ಮನುಷ್ಯ ಕೊಡುವ ಉತ್ತರದಲ್ಲಿ ಅವನ ಶೀಲಸ್ವಭಾವಗಳು–ಅವನ ಚಾಲುಚಲನ್ನುಗಳು–ಹೊರಪಡುತ್ತವೆ. ಇದನ್ನು ಇಂಗ್ಲಿಷಿನಲ್ಲಿ “ಕ್ಯಾರಕ್ಟರ್‍ ಸ್ಟಡಿ” (Character Study) ಎನ್ನುತ್ತಾರೆ. ರಾಮಾಯಣದಲ್ಲಿಯಾಗಲಿ, ಮಹಾಭಾರತದಲ್ಲಿಯಾಗಲಿ, ಷೇಕ್ಸ್‍ಪಿಯರ್‍ ಕವಿಯ ನಾಟಕಗಳಲ್ಲಿಯಾಗಲಿ, ಡಿಕೆನ್ಸ್‍, ಜಾರ್ಜ್‍ ಎಲಿಯೆಟ್‍ ಮೊದಲಾದವರ ಕಾದಂಬರಿಗಳಲ್ಲಿಯಾಗಲಿ ಹೆಚ್ಚು ಪ್ರಶಸ್ತವಾದ ಲಕ್ಷಣ ಅಲ್ಲಲ್ಲಿಯ ಪಾತ್ರಾಭಿವ್ಯಕ್ತಿ–ಅಲ್ಲಲ್ಲಿ ಪ್ರಕಾಶಕ್ಕೆ ಬರುವ ಶೀಲಸ್ವಭಾವ ಲಕ್ಷಣಗಳು.

ಹೀಗೆ ಮಹಾಕಾವ್ಯವು ಮನುಷ್ಯಸ್ವಭಾವ ಸಂದರ್ಶನ ಶೋಧನೆಗಳಿಗೆ ಒಂದು ಸಮರ್ಥ ಸಾಧಕವಾಗುತ್ತದೆ.

ಶ್ರೀರಾಮಚಂದ್ರನು ರಾಜ್ಯತ್ಯಾಗಕ್ಕೆ ಮನಸ್ಸು ಮಾಡಿದ್ದಾನೆ. ದಶರಥ ಕೌಸಲ್ಯೆ ಮೊದಲಾದವರು ದುಃಖದಿಂದ ತುಂಬಿದ ಅರೆಮನಸ್ಸಿನಿಂದ ಆ ಅಗಲಿಕೆಗೆ ಸಿದ್ಧರಾಗುತ್ತಿದ್ದಾರೆ. ರಾಮನು ಪ್ರತಿಜ್ಞೆಯಿಂದ ಕದಲತಕ್ಕವನಲ್ಲವೆಂದು ಎಲ್ಲರಿಗೂ ತಿಳಿದಿದೆ. ಕಡೆಗೆ ದಶರಥರಾಯನು ಒಂದು ಸಣ್ಣ ಕೋರಿಕೆಯನ್ನು ತಿಳಿಸುತ್ತಾನೆ: “ಅಪ್ಪ, ನೀನು ದೃಢ ಪ್ರತಿಜ್ಞನು. ನಿನ್ನನ್ನು ಹಿಂತಿರುಗಿಸುವುದು ಯಾರಿಗೂ ಸಾಧ್ಯವಾಗದು. ಒಳ್ಳೆಯದು. ನಿನ್ನನ್ನು ನಾನು ತಡೆಯುವುದಿಲ್ಲ. ಆದರೆ ಒಂದು ಮಾತು: ನಿನ್ನ ಪ್ರಯಾಣವನ್ನು ಈ ಒಂದು ರಾತ್ರಿ ಮುಂದಕ್ಕೆ ತಳ್ಳು. ಈ ರಾತ್ರಿ ನೀನು ಇಲ್ಲಿದ್ದರೆ, ನಾನೂ ನಿನ್ನ ತಾಯಿಯೂ ಇನ್ನು ಕೊಂಚ ಹೊತ್ತಾದರೂ ನಿನ್ನೊಡನೆ ಇದ್ದಂತಾಗಿ, ನಮಗೆ ಕೊಂಚವಾದರೂ ನೆಮ್ಮದಿ ಬಂದೀತು. ಇಷ್ಟು ಮಾತ್ರಕ್ಕೆ ಒಪ್ಪಿಕೋ.”

ಇದು ದಶರಥರಾಯನ ಕೋರಿಕೆ. ಅದಕ್ಕೆ ಶ್ರೀರಾಮನು ಹೇಳಿದ ಪ್ರತ್ಯುತ್ತರವೇನು?

ಪ್ರಾಪ್ಸ್ಯಾಮಿ ಯಾನದ್ಯ ಗುಣಾನ್‍

ಕೋ ಮೇ ಶ್ವಸ್ತಾನ್‍ ಪ್ರದಾಸ್ಯತಿ ।

ಅಪಕ್ರಮಣಮೇವಾತಃ

ಸರ್ವಕಾಮೈರಹಂ ವೃಣೇ ॥ ಸ. ೩೪, ಶ್ಲೋ. ೪೦

“ತಂದೆಯೆ, ಈಗ ನನ್ನಲ್ಲಿ ಯಾವ ಗುಣಗಳಿವೆಯೋ–ಯಾವ ಸತ್ಯಶ್ರದ್ಧೆ, ಯಾವ ಪಿತೃಗೌರವನಿಷ್ಠೆ, ಯಾವ ತ್ಯಾಗಸಿದ್ಧತೆ ಇವು ಇವೆಯೋ–ಈ ಗುಣಗಳನ್ನು ನಾಳೆ ನನ್ನಲ್ಲಿ ಉಂಟುಮಾಡುವವರು ಯಾರು? ಬೆಳಗಾದಾಗ ನನ್ನ ಮನಸ್ಸು ಬುದ್ಧಿಗಳು ಬೇರೆಯಾಗಬಹುದು. ಈ ರಾತ್ರಿ ಮತ್ತಾರಾದರೂ ಬಂದು ನನಗೆ ಬೋಧನೆಮಾಡಿ ನನ್ನ ಮನಸ್ಸನ್ನು ತಿರುಗಿಸಬಹುದು. ಧರ್ಮಕ್ಕೆ ಅಂಥ ಅಪಾಯಗಳುಂಟು. ಮನುಷ್ಯ ಸ್ವಭಾವವು ಕ್ಷಣದಿಂದ ಕ್ಷಣಕ್ಕೆ ಬದಲಾಯಿಸಬಲ್ಲದ್ದು. ಯಾವ ಕ್ಷಣದಲ್ಲಿ ಮನಸ್ಸಿಗೆ ಧರ್ಮ ನಿಶ್ಚಯವಾಗುತ್ತದೆಯೋ ಆ ಕ್ಷಣವೇ ಅದನ್ನು ನೆರವೇರಿಸುವುದು ನಿರಪಾಯ ಮಾರ್ಗ. ಆದದ್ದರಿಂದ ಈ ಘಳಿಗೆಯಲ್ಲಿಯೇ ನಾನು ಇಲ್ಲಿಂದ ಹೊರಡಬೇಕಾದದ್ದು. ಅದು ಸರ್ವ ಪ್ರಕಾರಗಳಿಂದಲೂ ನನಗೆ ಇಷ್ಟವಾಗಿದೆ.”

ಇದು ಶ್ರೀರಾಮನ ಅಂತರಂಗದ ಅಭಿವ್ಯಕ್ತಿ.

ದಶರಥನು ಕೈಕೇಯಿಗೆ ವಾಗ್ದಾನ ಮಾಡಿದ್ದದ್ದು ನಿಜ. ಆದರೆ ಆ ವಾಗ್ದಾನದಲ್ಲಿ ನ್ಯಾಯದ ಬಲ ಇದ್ದದ್ದೆಷ್ಟು? ದಾನಮಾಡಿದಾಗ ಮಾಡಿದವನ ಮನಸ್ಸು ಹೇಗಿತ್ತು? ಅದು ಸಮಾಧಾನದಲ್ಲಿತ್ತೆ? ಅರ್ಹವಾಗಿತ್ತೆ? ಭಯಮೋಹಗಳಿಂದ ವಿಹ್ವಲವಾಗಿರಲಿಲ್ಲವೆ? ಆ ವಾಗ್ದಾನ ವಿವೇಕಪೂರ್ವಕವಾದದ್ದೆ? ಅಥವಾ ಆತುರದ್ದೆ? ವಿಚಾರಸಿದ್ಧವಲ್ಲದ ವಾಗ್ದಾನಕ್ಕೆ ಬೆಲೆ ಸಲ್ಲದು. ಎರಡನೆಯದಾಗಿ, ಅದರ ಅಕ್ಷರಾರ್ಥವನ್ನು ನೋಡಬೇಕೆ, ಅಥವಾ ತಾತ್ಪರ್ಯವನ್ನೆ? ದಶರಥನ ಮನಸ್ಸಿನಲ್ಲಿದ್ದ ಆಶಯವೆಂಥಾದ್ದು? ಜ್ಯೇಷ್ಠಪುತ್ರನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಬೇಕೆಂಬುದೆ? ಮೂರನೆಯದಾಗಿ, ಕೈಕೇಯಿ ಬೇಡಿದ ಬೇಡಿಕೆ ಕುಲಧರ್ಮ ದೇಶಧರ್ಮಗಳಿಗೆ ಸಮ್ಮತವಾಗಿದ್ದದ್ದೆ? ಆಕೆ ಏನು ಬೇಕೆಂದರೆ ಅದನ್ನು ಕೊಡುವುದು ಧರ್ಮವಾಗುತ್ತಿತ್ತೆ? “ಕೌಸಲ್ಯೆಯನ್ನು ಪರಿತ್ಯಾಗಮಾಡು” ಎಂದು ಆಕೆ ಕೇಳಿದ್ದಿದ್ದರೆ ಅದು ಊರ್ಜಿತವಾಗತಕ್ಕದ್ದಿತ್ತೆ?

ಈ ವಿಧವಾದ ತರ್ಕಯುಕ್ತಿಗಳು ಸಂಗತವಾಗುತ್ತವೆ–ಈ ಪ್ರಸಂಗದಲ್ಲಿ. ಆದರೆ ಅವು ರಾಮನಿಗೆ ಬೇಕಾಗಿರಲಿಲ್ಲ. ದಶರಥನ ವಾಗ್ದಾನದ ಯುಕ್ತಾಯುಕ್ತತೆಗಳನ್ನು ವಿಚಾರಿಸುವ ಆವಶ್ಯಕತೆ ರಾಮನಿಗೆ ಇರಲಿಲ್ಲ. ತಾನು ರಾಜ್ಯ ಪಡೆಯಬೇಕೆಂಬ ಇಚ್ಛೆ ಆತನಲ್ಲಿ ಕೊಂಚವಾದರೂ ಇದ್ದಿದ್ದರಲ್ಲವೆ ಆತನು ತಕರಾರಿನ ಕಾರಣಗಳನ್ನು ಹುಡುಕಬೇಕಾಗಿದ್ದದ್ದು? ಆತನಿಗೆ ಅಂಥ ಇಚ್ಛೆ ಸರ್ವಥಾ ಇರಲಿಲ್ಲ. ರಾಜ್ಯಕ್ಕಿಂತ ವನವಾಸವೇ ತನಗೆ ಇಷ್ಟವೆಂದು ಆತನು ಅಂತರಂಗದಲ್ಲಿ ಭಾವಿಸಿಕೊಂಡಿದ್ದನೋ ಎನ್ನಿಸುವಷ್ಟು ಮಟ್ಟಿನ ಸಿದ್ಧತೆಯಿಂದಲೂ ಉತ್ಸಾಹದಿಂದಲೂ ಶ್ರೀರಾಮನು ನಡೆದುಕೊಂಡ. ತ್ಯಾಗಸಿದ್ಧತೆಯೇ ಅಂದಿನ ಪ್ರಶ್ನೆಗೆ ಆತನ ಪ್ರತ್ಯುತ್ತರವಾಯಿತು.

ಮತ್ತೊಂದು ಉದಾಹರಣೆಯನ್ನು ನೋಡೋಣ: ಶ್ರೀರಾಮನು ಕಾಡಿನಲ್ಲಿದ್ದಾನೆ. ದಶರಥನು ಪುತ್ರವಿರಹದಿಂದ ದುಃಖಿತನಾಗಿ ತನ್ನ ರಾಣಿಯೊಡನೆ ಪ್ರಲಾಪಿಸುತ್ತಿದ್ದಾನೆ:

ಮನ್ಯೇ ಖಲು ಮಯಾ ಪೂರ್ವಂ

ವಿವತ್ಸಾ ಬಹವಃ ಕೃತಾಃ ।

ಪ್ರಾಣಿನೋ ಹಿಂಸಿತಾ ವಾಪಿ

ತಸ್ಮಾದಿದಮುಪಸ್ಥಿತಮ್‍ ॥  ಸ. ೩೯, ಶ್ಲೋ. ೪

“ನನಗೆ ಹೀಗೆ ತೋರುತ್ತದೆ. ಹಿಂದೆ ನಾನು ಯಾವಾಗಲೋ ಅನೇಕ ಮಂದಿ ತಂದೆತಾಯಿಯನ್ನು ಅವರವರ ಮಕ್ಕಳಿಂದ ಅಗಲಿಸಿರಬೇಕು; ಅಥವಾ ಪ್ರಾಣಿಹಿಂಸೆ ಮಾಡಿರಬೇಕು. ಆ ಪಾಪದ ಫಲವಾಗಿ ನನಗೆ ಈ ಸಂಕಟ ಒದಗಿದೆ.”

ಯದಾಚರತಿ ಕಲ್ಯಾಣಿ

ಶುಭಂ ವಾ ಯದಿವಾಽಶುಭಮ್‍ ।

ತದೇವ ಲಭತೇ ಭದ್ರೇ

ಕರ್ತಾ ಕರ್ಮಜಮಾತ್ಮನಃ ಸ. ೬೩, ಶ್ಲೋ. ೬

“ಎಲೌ ಕೌಸಲ್ಯೆ, ಮನುಷ್ಯನು ಶುಭವನ್ನಾಗಲಿ ಅಶುಭವನ್ನಾಗಲಿ ಯಾವುದನ್ನು ಮಾಡುತ್ತಾನೆಯೋ ಅದನ್ನೇ ಹಿಂದಕ್ಕೆ ಪಡೆಯುತ್ತಾನೆ.”

ಈ ತತ್ತ್ವಕ್ಕೆ ದೃಷ್ಟಾಂತವಾಗಿ ದಶರಥನು ತನ್ನ ಹಿಂದಿನ ಚರಿತ್ರೆಯೊಂದನ್ನು ಜ್ಞಾಪಕಕ್ಕೆ ತಂದುಕೊಳ್ಳುತ್ತಾನೆ. ಆತನು ಹಿಂದೆ ಎಂದೋ ಬೇಟೆಯಾಟಕ್ಕೆ ಹೋಗಿದ್ದಾಗ ರಾತ್ರಿಯಾಯಿತು. ಆ ಕತ್ತಲಿನಲ್ಲಿ ಅವನಿಗೆ ಒಂದು ಶಬ್ದ ಕೇಳಬಂತು. ಅದು ನೀರಾಡುತ್ತಿರುವ ಕಾಡಾನೆಯ ಶಬ್ದವೆಂದು ಆತನು ಭ್ರಾಂತಿಪಟ್ಟು ಆ ಕಡೆಗೆ ಬಾಣವನ್ನೆಸೆದ. ಆದರೆ ಆ ಬಾಣ ತಗುಲಿದ್ದು ಒಬ್ಬ ಋಷಿಪುತ್ರನಿಗೆ. ಅವನು ಸರಯೂನದಿಯಲ್ಲಿ ಪಾತ್ರೆಯನ್ನು ಮುಣುಗಿಸುತ್ತಿದ್ದ. ಹಾಗೆ ಹುಟ್ಟಿದ ಸದ್ದನ್ನು ದಶರಥನು ಮೃಗದ ಶಬ್ದವೆಂದು ಭ್ರಮಿಸಿ ಬಾಣಪ್ರಯೋಗಮಾಡಿದ. ಋಷಿಕುಮಾರನು ಪೆಟ್ಟು ತಗುಲಿ ಪ್ರಾಣಬಿಟ್ಟ. ಯೋಚಿಸಿದ್ದು ಒಂದು; ಆದದ್ದು ಇನ್ನೊಂದು.

ದಶರಥನು ಆತುರದ ಮನುಷ್ಯ–ದುಡುಕಿನ ಸ್ವಭಾವದವನು–ಎಂದು ಇದರಿಂದ ತೋರುತ್ತದೆ. ಅವನು ಕೈಕೇಯಿಗೆ ವರಕೊಟ್ಟದ್ದೂ ದುಡುಕಿಯೇ ತಾನೆ? ಹಿಂದು ಮುಂದು ನೋಡದೆ, ಬೇಡಿದ್ದನ್ನು ಕೊಡುತ್ತೇನೆಂದು ಹೇಳಿದನಲ್ಲದೆ? ವಾಗ್ದಾನಮಾಡುವಾಗ ವಸ್ತು ನಿಜವಾಗಿ ನನ್ನದೆ; ನನ್ನದಾದ ಮೇಲೆ ನಾನು ಸ್ವತಂತ್ರನು, ಮಿಕ್ಕದ್ದನ್ನು ಕೇಳಲಾಗದು–ಎಂದು ನಿಬಂಧನೆ ಮಾಡಿದನೆ? ಇಲ್ಲ. ಈ ಮುನ್ನಾಲೋಚನೆಯೇ ಇಲ್ಲ. ಆಮೇಲೆ ಕೈಕೇಯಿ ಬೇಡಿದಾಗ ಆ ಬೇಡಿಕೆ ಉಚಿತವೆ, ಅನುಚಿತವೆ ಎಂಬ ವಿಚಾರಕ್ಕೆ ಅವನು ಅವಕಾಶವನ್ನುಳಿಸಿಕೊಂಡಿದ್ದನೆ? ಅಂಥ ಯಾವ ಸಂಭವವನ್ನೂ ಆತನು ಆಲೋಚಿಸಲಿಲ್ಲ. ಮೋಹಿನಿ ಏನನ್ನೋ ಕೇಳಿದಳು; ಮುಗ್ಧನು “ಅದೇನಾದರೂ ನಿನ್ನದು” ಎಂದ. ದಶರಥನಿಗೆ ಯುದ್ಧಕಾಲದಲ್ಲಿ ಹೆಂಡತಿಯನ್ನು ಮೆಚ್ಚಿಕೊಳ್ಳುವ ಆತುರ; ಬೇಟೆಯ ಕಾಲದಲ್ಲಿ ಬುಟ್ಟಿ ತುಂಬಿಸಿಕೊಳ್ಳಬೇಕೆಂಬ ಆತುರ. ಬೇರೆ ಸದ್ಗುಣಗಳು ಸಾವಿರವಿದ್ದರೇನು? ಧೈರ್ಯದಿಂದಲೂ ಔದಾರ್ಯದಿಂದಲೂ ಮೆರೆದ ಆ ಮಹಾರಾಯನಲ್ಲಿ ದುಡುಕುಬುದ್ಧಿ ಒಂದು ದುರ್ಬಲತೆಯಾಯಿತು. ಪೂರ್ವಾಪರ ವಿಚಾರವಿಲ್ಲದೆ ನಡೆದ ನಡವಳಿಕೆ ಪ್ರಮಾದವಾದೀತು.


Wednesday, 10 January 2024

ಭಾಗ 4 - ಬಾಲಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಪ್ರಕೃತಕ್ಕೆ ನಮ್ಮ ಮುಂದಿರುವ ರಾಮಾಯಣಭಾಗವನ್ನು ನೋಡೋಣ. ಬಾಲಕಾಂಡದ ಎಪ್ಪತ್ತೇಳು ಸರ್ಗಗಳಲ್ಲಿ ಮೊದಲ ನಾಲ್ಕು ವಾಲ್ಮೀಕಿಯವಲ್ಲ, ಶಿಷ್ಯರೊಬ್ಬರು ರಚಿಸಿ ಅಂಟಿಸಿದ್ದು–ಎಂದು ಕೆಲವರ ಊಹೆ. ಈ ಊಹೆ ಯುಕ್ತಿಯುಕ್ತವಾಗಿದೆಯೆಂದು ನನಗನ್ನಿಸುತ್ತದೆ. ಈ ನಾಲ್ಕು ಸ್ವರ್ಗಗಳು ಪೀಠಿಕೆಯಾಗಿವೆ, ಕಥಾಂಗವಾಗಿಲ್ಲ. ಕಥೆ ಪ್ರಾರಂಭವಾಗುವುದು ಐದನೆಯ ಸರ್ಗದಿಂದ:

ಸರ್ವಾ ಪೂರ್ವಮಿಯಂ ಯೇಷಾಮಾಸೀತ್ಕೃತ್ಸ್ನಾ ವಸುಂಧರಾ ॥

–ಹೀಗೆ. ಆದರೆ ಮೊದಲನೆಯ ನಾಲ್ಕು ಸರ್ಗಗಳನ್ನು ನಾನು ಬಿಡಲಾರೆ. ಅವುಗಳ ವಿಷಯ ಹೀಗಿದೆ: 

ಸರ್ಗ (೧) ನಾರದ–ವಾಲ್ಮೀಕಿ ಸಂವಾದ: ಸಮಗ್ರ ಕಥಾಸಂಕ್ಷೇಪ. 
ಸರ್ಗ (೨) ಬ್ರಹ್ಮನಿಂದ ವಸ್ತುಸಂದರ್ಶನಾನುಗ್ರಹ. 
ಸರ್ಗ (೩) ಕವಿಯ ಕಾವ್ಯವಸ್ತು ಸಾಕ್ಷಾತ್ಕಾರ. 
ಸರ್ಗ (೪) ಕೃತಿಪ್ರಚಾರವಿಧಾನ–ಕಾವ್ಯಗಾನ. 

ಈ ನಾಲ್ಕೂ ರಮಣೀಯಗಳು. 

ಗ್ರಂಥೋಪಕ್ರಮವೇ ಸೊಗಸು. ಮೊದಲ ವಾಕ್ಯವೇ ಭಾವೋನ್ನತಿಕಾರಕವಾಗಿದೆ:

ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್‍ ॥ 

ತಪಸ್ಸು, ವೇದಾಧ್ಯಯನ, ವಿದ್ಯಾಪ್ರಭಾವ, ಮಹಾಪುರುಷಲಕ್ಷಣ ಸ್ಮರಣೆ–ಈ ಗಂಭೀರ ಪವಿತ್ರ ವಾತಾವರಣಕ್ಕೆ ಕವಿ ನಮ್ಮನ್ನು ಕಂಡೊಡನೆಯೇ ಕರೆದೊಯ್ದು ಮೈಮರೆಯಿಸುತ್ತಾನೆ. ತಾನು ನಾರದರಿಗೆ ಅರಿಕೆ ಮಾಡಿಕೊಂಡ ಕುತೂಹಲಾತಿಶಯವನ್ನು (“ಪರಂ ಕೌತೂಹಲಂ ಹಿ ಮೇ”) ಕವಿ ನಮ್ಮಲ್ಲಿ ಕೆರಳಿಸುತ್ತಾನೆ. ಆ ಕುತೂಹಲದ ಮೊದಲ ಆತುರ ತೀರುವಂತೆ ಸಮಗ್ರ ರಾಮವೃತ್ತಾಂತದ ಛಾಯಾರೇಖೆಯನ್ನು ತೋರಿಸುತ್ತಾನೆ. ಹೀಗೆ ಕೌತುಕದ ಜೊತೆಗೆ ನೆಮ್ಮದಿ ಸೇರಿ ನಮ್ಮ ಮನಸ್ಸು ಅವಧಾನ ಸಮರ್ಥವಾಗುತ್ತದೆ. 

ಎರಡನೆಯ ಸರ್ಗದಲ್ಲಿ ಕವಿಯ ಮನಸ್ಸು ಹೇಗೆ ಕೆರಳಿ ಕಾವೇರಿತೆಂಬುದರ ಕಥೆ ಇದೆ. ಕವಿಯ ಅಂತರಂಗಾವೇಶದ ಕಥೆ ಕುತುಕವನ್ನುಂಟುಮಾಡತಕ್ಕದೇ ಸರಿ. ಆದರೆ ಇಲ್ಲಿ ಮಾತ್ರ ನನ್ನದೊಂದು ತಕರಾರಿದೆ. ಬೇಡನನ್ನು ಕುರಿತು ಕವಿ ನುಡಿದನೆಂದು ಹೇಳಿರುವ ಶಾಪವಾಕ್ಯ ವಾಲ್ಮೀಕಿಯ ಶೈಲಿಯಲ್ಲಿಲ್ಲ: 

ಮಾ ನಿಷಾದ ಪ್ರತಿಷ್ಠಾಂ ತ್ವಮ್‍ ಅಗಮಃ ಶಾಶ್ವತೀಃ ಸಮಾಃ । 
ಯತ್ಕ್ರೌಂಚಮಿಥುನಾದೇಕಮ್‍ ಅವಧೀಃ ಕಾಮಮೋಹಿತಮ್‍ ॥ (ಬಾಲಕಾಂಡ: ೨–೧೫) 

ರತಿಭಂಗದ ದೃಶ್ಯದಿಂದ ಸಹೃದಯರಲ್ಲಿ ಮರುಕ ಹುಟ್ಟುವುದು ಸ್ವಾಭಾವಿಕ. ಎಳೆ ಮಕ್ಕಳು ಆಟವಾಡಿಕೊಂಡು ನಲಿಯುತ್ತಿರುವಾಗ ಯಾರಾದರೂ ಬಂದು ಅವಕ್ಕೆ ಏಟು ಕೊಟ್ಟರೆ ಎಂಥವರಿಗೂ ರೋಷವೇರುತ್ತದೆ. ಸನ್ನಿವೇಶ ಹೀಗೆ ಯುಕ್ತವೇ. ಆದರೆ ದಂಪತಿಪಕ್ಷಿಗಳಲ್ಲಿ ಒಂದನ್ನು ಮಾತ್ರ ಕೊಂದದ್ದು ಅಪರಾಧವೆ? “ಏಕಮವಧೀಃ” ಎರಡನ್ನೂ ಒಟ್ಟಿಗೆ ಕೊಂದುಹಾಕಿದ್ದಿದ್ದರೆ ದುಃಖವಾಗುತ್ತಿರಲಿಲ್ಲವೆ? 

“ಪ್ರತಿಷ್ಠಾಂ ಶಾಶ್ವತೀಃ ಸಮಾಃ ಮಾ ಆಗಮಃ” 
“ನೀನು ಲೋಕದಲ್ಲಿ ನೆಲೆಯನ್ನು ಶಾಶ್ವತವಾಗಿ ಪಡೆಯದವನಾಗು” 

ಇದೆಂಥ ಶಾಪ? ನಿರಪರಾಧಿಗಳಾದ ಜನಕ್ಕೆ ಮಾತ್ರ ಲೋಕವೇನು ಶಾಶ್ವತವೆ? “ನೀನು ಶಾಶ್ವತವಾಗಿ ಬದುಕಬೇಡ” –ಎಂಬುದರಲ್ಲಿ ಉದ್ವೇಗವುಂಟೆ? “ಶಾಶ್ವತವಾದ ಬದುಕು ನನಗೂ ಬೇಡ, ಸ್ವಾಮಿ. ಇನ್ನೈವತ್ತು ವರ್ಷಸಾಕು” ಎಂದು ಬೇಡನೆಂದಿದ್ದರೆ ಅದಕ್ಕೆ ವಾಲ್ಮೀಕಿಯ ಉತ್ತರವೇನು? 

ಇದು ಕೃತಕವಾದ ಶ್ಲೋಕ–ಎರಡರ್ಥಗಳು ಸಾಧ್ಯವಾಗಬೇಕೆಂಬ ಉದ್ದೇಶದಿಂದ ತಯಾರಾದದ್ದು. ನಿಷಾದನನ್ನು ಶಪಿಸುವುದು ಮೊದಲಿನ ಅರ್ಥ. ಇನ್ನೊಂದರ್ಥ ಹೀಗೆ: “ಎಲೋ ಕ್ರೂರಿಯಾದ ರಾವಣ, ನೀನು ಮಹಾಲಕ್ಷ್ಮೀ ವಿಷ್ಣುಸ್ವರೂಪವಾದ ಸೀತಾರಾಮ ದಂಪತಿಗಳಲ್ಲಿ ಒಬ್ಬರನ್ನು ಅಪಹರಿಸಿದೆ. ಆ ಕಾರಣದಿಂದ ಬೇಗ ಮೃತ್ಯುವಶನಾಗು.” ಹೀಗೆ ವ್ಯಾಜಾಂತರದಿಂದ ವಸ್ತುನಿರ್ದೇಶ ಮಾಡುವುದು ಕವಿಯ ಆಶಯವೆಂದು ವ್ಯಾಖ್ಯಾನಕಾರರು ವಾದಿಸಿದ್ದಾರೆ. ಕಾವ್ಯಾರಂಭದಲ್ಲಿ– 

ಆಶೀರ್ನಮಸ್ಕ್ರಿಯಾ ವಸ್ತುನಿರ್ದೇಶೋ ವಾ ॥ (ದಂಡಿ, ಕಾವ್ಯಾದರ್ಶ) 

–ಎಂದು ಸೂತ್ರವಿರುವುದು ದಿಟ. ಆದರೆ ಅದು ವಾಲ್ಮೀಕಿಯ ಕಾಲದಿಂದೀಚಿನದು. ವಾಲ್ಮೀಕಿ ಅದಕ್ಕೆ ಕಟ್ಟುಬಿದ್ದಿದ್ದನೆಂದು ನಾನು ನಂಬಲಾರೆ. ವಾಲ್ಮೀಕಿಯು ಶ್ಲೇಷಕವಿಯೆನ್ನಲು ಇನ್ನೊಂದುದಾಹರಣೆಯಿಲ್ಲ. ವ್ಯಾಕರಣ ಚಮತ್ಕಾರಪ್ರಯಾಸದಿಂದ ಕಲ್ಪಿಸಿದ ಅರ್ಥವು ಪ್ರತಿವಾದಿಗೆ ಬಾಯಿ ಮುಚ್ಚಿಸಬಹುದು; ಸರ್ಕಸ್ಸಿನ ಅಂಗಂಗಾವಿನ್ಯಾಸಸಚಿತ್ರದಂತೆ ಬೆರಗು ಮಾಡಬಹುದು; ಆದರೆ ಅಂತರಂಗದಲ್ಲಿ ಸಮಾಧಾನವನ್ನು ನೆಲಗೊಳಿಸಲಾರದು. ಈ ಒಂದು ಶ್ಲೋಕವನ್ನು ವಿನಾಯಿಸಿದರೆ ಬಾಲಕಾಂಡದ ಎರಡನೆಯ ಸರ್ಗವು ಕವಿಯ ಸಹೃದಯತೆಗೆ ದೃಷ್ಟಾಂತವನ್ನು ಕೊಡಬಲ್ಲದ್ದಾಗಿದೆ.

ಮೂರನೆಯ ಸರ್ಗವು ಕವಿ ಮಾಡಿಕೊಂಡ ಮನಶ್ಶುದ್ಧಿ ಮನಸ್ಸಿದ್ಧತೆಗಳನ್ನು ತಿಳಿಸುತ್ತದೆ. ಸತ್ಕಾವ್ಯರಚನೆ ಎಂಥ ಅಂತರಂಗಸಂಪತ್ತನ್ನಪೇಕ್ಷಿಸುತ್ತದೆ, ಅದು ಎಷ್ಟು ಪ್ರತ್ಯುತ್ತರ ಗೌರವವುಳ್ಳ ಪ್ರಯತ್ನ, ಅದು ಎಂಥ ತಪಶ್ಚರ್ಯ–ಎಂಬುದನ್ನು ಇಲ್ಲಿ ಕಾಣಬಹುದು. 

ನಾಲ್ಕನೆಯ ಸರ್ಗವು ಅತ್ಯಂತ ರಮಣೀಯವಾದದ್ದು. ಕುಶಲವರು ಹಾಡಿದ್ದು, ಋಷಿಗಳು ಮೆಚ್ಚಿ ಇನಾಂ ಕೊಟ್ಟದ್ದು ಇಲ್ಲಿಯ ವಿಷಯ. ವಾಲ್ಮೀಕಿಯ ಹಸನಚ್ಛಾಯೆ ಇಲ್ಲಿ ಕಾಣುತ್ತದೆ. 

ಹೀಗೆ ಶಿಷ್ಯಕಲ್ಪಿತಗಳೆಂದು ಊಹಿಸಲಾಗುವ ನಾಲ್ಕು ಸರ್ಗಗಳೂ, ಸುಂದರವಾಗಿ ಸ್ಥಾನೋಚಿತವಾಗಿವೆ. ಅವತಾರದ ಅದ್ಭುತ ಸನ್ನಿವೇಶ ಬಾಲಕಾಂಡದಲ್ಲಿಯ ಕಥೆ ಮೂರು ಪ್ರಕರಣಗಳುಳ್ಳದ್ದು: 

(೧) ಶ್ರೀ ರಾಮಾದಿಜನನ, (೨) ವಿದ್ಯಾರ್ಜನೆ, (೩) ವಿವಾಹ. 

ರಾಮಾದಿಗಳ ಅವತಾರಸಂದರ್ಭದಲ್ಲಿ ಕೆಲವು ಅದ್ಭುತಘಟನೆಗಳ ಪ್ರಸ್ತಾಪವಿದೆ: ಋಷ್ಯಶೃಂಗರು ಬಂದು ಮಾಡಿಸಿದ ಯಜ್ಞ, ಯಜ್ಞಪುರುಷನು ಕೊಟ್ಟ ಪಾಯಸ- ಇವು ಮುಖ್ಯವಾದವು. ದೈವಾಂಶಸಂಭೂತನಾದ ಮಹಾಪುರುಷನ ಜನನವು ಸಾಮಾನ್ಯ ಜನರ ಜನನದಂತಲ್ಲ, ಗರ್ಭಕ್ಕೆ ಹಿಂದಿನಿಂದಲೇ ಕೆಲವು ಮಹತ್ತ್ವದ ಲಕ್ಷಣಗಳು ಅವನಿಗೆ ಸೇರಿಕೊಂಡು ಬಂದಿರುತ್ತವೆ–ಎಂಬ ನಂಬಿಕೆ ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿದ್ದದ್ದೆಂದು ತೋರುತ್ತದೆ. ಪುರಾತನ ಗ್ರೀಕರ ಪುರಾಣಗಳಲ್ಲಿ ಅದು ಕಾಣಬರುತ್ತದೆ. ಮಹಾಪುರುಷನ ಜನ್ಮಸಮಯದಲ್ಲಿ ಆಕಾಶವಾಣಿ ಮೊಳಗುತ್ತದೆ; ನಕ್ಷತ್ರ ಗ್ರಹಗಳು ಸೂಚನೆ ಕೊಡುತ್ತವೆ; ಹುಟ್ಟಲಿರುವವನ ವಿಷಯದಲ್ಲಿ ಭಯಭಕ್ತಿಗಳಿಂದ ನಡೆದುಕೊಳ್ಳತಕ್ಕದ್ದೆಂದು ದೈವವು ಜನವನ್ನು ಹೇಗೆಹೇಗೋ ಎಚ್ಚರಿಸುತ್ತದೆ. ವಿಶೇಷಾಕಾರದ ಸಿದ್ಧತೆ ನಡೆಯುತ್ತದೆ. ಮಹಾಮಹಿಮರು ಅದರಲ್ಲಿ ಸೇರಿರುತ್ತಾರೆ. ಋಷ್ಯಶೃಂಗನು ಹಾಗೆ ರಾಮಾವತಾರಕ್ಕೆ ಸಂಬಂಧಪಟ್ಟ ಮಹಿಮವಂತ. 

ದಿವ್ಯಪಾಯಸದ ಪ್ರಸಕ್ತಿಯೂ ಅಂಥಾದ್ದೇ. ಮಹಾಪುರುಷನು ಮನುಷ್ಯಬೀಜಫಲಿತನಲ್ಲ. ಕೌಸಲ್ಯೆ ಸುಮಿತ್ರೆ ಕೈಕೇಯಿಯರಂತೆ ಕುಂತಿ ಮಾದ್ರಿಯರೂ ದಿವ್ಯಪ್ರಸಾದದಿಂದ ಗರ್ಭವತಿಯರಾದರೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಬಹುದು. 

ಇಂಥಾ ಅದ್ಭುತಗಳು ವಾಸ್ತವಿಕಗಳೆ?–ಎಂದು ಕೇಳತಕ್ಕದ್ದಲ್ಲ. ನಾವು ಓದುತ್ತಿರುವುದು ಕಾವ್ಯವನ್ನ, ಕೋರ್ಟು ಕೈಫಿಯತ್ತನಲ್ಲ. ಕಾವ್ಯದ ಮುಖ್ಯವಸ್ತುವನ್ನು ನಾವು ಗೌರವಗಂಭೀರ ಬುದ್ಧಿಯಿಂದ ನೋಡಬೇಕೆಂಬುದು ಕವಿಯ ಆಶಯ. ಅಂಥಾ ಬುದ್ಧಿಯನ್ನು ನಮ್ಮಲ್ಲಿ ಉತ್ಪಾದನೆ ಮಾಡುವುದಕ್ಕಾಗಿ ಅವನು ಅದ್ಭುತಘಟನೆಗಳ ವಾತಾವರಣವನ್ನು ನಿರ್ಮಿಸುತ್ತಾನೆ. 

ಋಷ್ಯಶೃಂಗೋಪಾಖ್ಯಾನವು ಒಂದು ಹಳೆಯ ನಂಬಿಕೆಯನ್ನು ತೋರಿಸುತ್ತದೆ. ತಪಸ್ವಿ ಇರುವಲ್ಲಿ ಸಮೃದ್ಧಿ; ವ್ರತಶೀಲನಿರುವಲ್ಲಿ ಜನಕ್ಷೇಮ. 

ಇನ್ನೊಂದು ಹಳೆಯ ನಂಬಿಕೆ; ಗಣಿಕಾವೃತ್ತಿ ತ್ರೇತಾಯುಗದಲ್ಲಿಯೇ ಒಂದು ನಿಯತವಾದ ಕುಲವೃತ್ತಿಯಾಗಿತ್ತು. ಸಮಾಜವು ಆ ವೃತ್ತಿಯ ಅವಶ್ಯಕತೆಯನ್ನು ಅಂಗೀಕರಿಸಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಆಗಿನ ಜನ ಮಾಡಲಿಲ್ಲ. ಊರಿಗೊಂದು ಕೆರೆ, ಕಾಮಿಗೊಂದು ಶೃಂಗಾರಪೇಟೆ, ಕೊಳ್ಳುವವರಿಗೆ ಒಂದು ಗೊತ್ತಾದ ಪೇಟೆಯಿಲ್ಲದಿದ್ದರೆ ಅವರು ಮನೆಮನೆಯೂ ಅಂಗಡಿ ಎಂದು ತಿಳಿದಾರು. ಇದು ಇಂದಿನ ನವನಾಗರೀಕ ಸುಧಾರಕರು ಆಲೋಚಿಸಬೇಕಾದ ವಿಷಯ.

ಶ್ರೀರಾಮನ ವಿದ್ಯಾವಿಕಾಸಕ್ಕಾಗಿ ವಿಶ್ವಾಮಿತ್ರನನ್ನು ಕರೆತಂದದ್ದು ವಾಲ್ಮೀಕಿಯ ಸಂಧಾನಕೌಶಲದ ಒಂದು ಶಿಖರಾಗ್ರ. ಮಹಾಪುರುಷನನ್ನು ಮಹಾಕಾರ್ಯಕ್ಕೆ ಸಿದ್ಧಪಡಿಸಲು ಮಹಾಪುರುಷನೇ ಬೇಕು. ವಿಶಾಮಿತ್ರನು ಅಸಾಧಾರಣಪುರುಷ. ಕ್ಷತ್ರಿಯನಾಗಿದ್ದು ಬ್ರಹ್ಮತ್ವವನ್ನು ಸಂಪಾದಿಸಿಕೊಂಡವನು; ಮನುಷ್ಯ ಸ್ವಭಾವದ ಆಳವನ್ನೂ ತುದಿಯನ್ನೂ ಕಂಡಿದ್ದವನು; ಲೋಕಮೋಹಗಳಲ್ಲಿ ಪಾಡುಪಟ್ಟು ಪಾರಾಗಿದ್ದವನು; ಸಾಹಸ ಮಾಡಿ ಸೋತು ಎದೆಗುಂದದೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಕೃತಾರ್ಥನಾದವನು; ಪರಾಕ್ರಮಿ, ಶರಣಾಗತರಕ್ಷಕ. ಇಂಥವನಲ್ಲವೆ ಜೀವನ ಮಾರ್ಗದಲ್ಲೊದಗುವ ಅಪಾಯಗಳನ್ನು ಕುರಿತು ಎಚ್ಚರಿಕೆ ಕೊಡಬಲ್ಲವನು–ಭಯ ಬಿಡಿಸಿ ಉತ್ಸಾಹ ತುಂಬಬಲ್ಲವನು? ಆತನಿಂದ ಶ್ರೀರಾಮನಿಗಾದ ಪ್ರಯೋಜನಗಳು ಐದು ತೆರದವು: 

1) ಅಸ್ತ್ರಶಸ್ತ್ರೋಪದೇಶ, 
2) ರಾಕ್ಷಸ ಪರಿಚಯ, 
3) ಪೂರ್ವೇತಿಹಾಸಶ್ರವಣ, 
4) ಮನಃಪ್ರಸನ್ನತಾ ಸಾಧಕವಾದ ನಾನಾದೇಶಸಂಚಾರ, 
5) ಸಾನುರೂಪ ವಿವಾಹ. 

ಶ್ರೀರಾಮನಿಗೆ ವಿಶ್ವಾಮಿತ್ರನು ಹೇಳಿದ ಆಖ್ಯಾಯಿಕೆಗಳಲ್ಲಿ ಮುಖ್ಯವಾದ ಅಂಶಗಳು ತನ್ನ ಜೀವಿತಕಥೆ, ರಾಮಪೂರ್ವಿಕಕಥೆ, ಷಣ್ಮುಖಕಥೆ, ಭಗೀರಥಕಥೆ, ಅಹಲ್ಯಾಕಥೆ. ಇವುಗಳಲ್ಲಿ ಕೆಲವು ದೇಶಚರಿತ್ರೆಯ ಅಂಶಗಳು, ಕೆಲವು ಎಷ್ಟೋ ಹಿಂದಿನಿಂದ ಬಂದಿದ್ದ ಐತಿಹ್ಯಗಳು. ಅಹಲ್ಯೋಪಾಖ್ಯಾನವು ವೇದದಿಂದ ಬಂದಿದ್ದದ್ದು. 

ಗೌರಾವಸ್ಕನ್ದಿನ್ನಹಲ್ಯಾಯೈ ಜಾರ । 
ಕೌಶಿಕಬ್ರಾಹ್ಮಣ ಗೌತಮಬ್ರುವಾಣ ॥ (ತೈತ್ತಿರೀಯಾರಣ್ಯಕ: ೧–೧೨) 

ದೇವೇಂದ್ರನು ಮಹಾತೇಜಸ್ವಿ, ಆದರೆ ವಿಷಯಲಂಪಟ. ಅವನನ್ನು ಬಿಟ್ಟು ಬಾಳಲಾಗದು; ನಂಬಿ ಮೈಮರೆತಿರಬಾರದು. ಭೂಲೋಕದಲ್ಲಿ ಯಾರಾದರೂ ಯಜ್ಞ ಮಾಡುತ್ತಾರೆ, ತಪಸ್ಸು ಮಾಡುತ್ತಾರೆ–ಎಂದರೆ, ಅವರು ಯಾವ ವರ ಸಂಪಾದಿಸಿ ತನಗೆ ಏನು ಊನ ತಂದಾರೋ ಎಂದು ಇಂದ್ರನಿಗೆ ಭಯ. ಕೂಡಲೆ ಅವನು ವಿಘ್ನ ತರುತ್ತಾನೆ. ವಿಶ್ವಾಮಿತ್ರನ ತಪಸ್ಸನ್ನು ಕೆಡಿಸಲು ರಂಭೆಯನ್ನು ಸಂಕಲ್ಪಿಸಿ ಯಜ್ಞಾಶ್ವವನ್ನು ದಿಗ್ವಿಜಯಕ್ಕೆ ಕಳುಹಿಸಿದಾಗ, ಇಂದ್ರನು ಆ ಅಶ್ವವನ್ನು ಕದ್ದು ಪಾತಾಳದಲ್ಲಿ ಬಚ್ಚಿಟ್ಟು, ಸಗರಪುತ್ರರ ವಿನಾಶಕ್ಕೆ ಕಾರಣನಾದ. ಇಂಥ ಕಥೆಗಳು ಶ್ರೀರಾಮನಿಗೆ ಬುದ್ಧಿವಿಚಾರ ಪ್ರಚೋದಕವಾಗಿದ್ದಿರಬೇಕು. 

ಶ್ರೀರಾಮಚಂದ್ರನಿಗೆ ಬೇಕಾಗಿದ್ದದ್ದು ಪುಸ್ತಕಪಾಠವಲ್ಲ, ಲೋಕಪರಿಜ್ಞಾನ, ಯುಕ್ತಾಯುಕ್ತ ವಿವೇಚನಾಭ್ಯಾಸ, ಧರ್ಮಸೂಕ್ಷ್ಮಗ್ರಹಣಕುಶಲತೆ, ಆತ್ಮವಿಶ್ವಾಸ, ಸ್ವಕರ್ತವ್ಯ ಗೌರವ. ಈ ಗುಣಗಳನ್ನು ಅವನಲ್ಲಿ ಕೃಷಿಮಾಡಿ ಬೆಳಸಲು ವಿಶ್ವಾಮಿತ್ರನು ಹೇಳಿದ ಉಪಾಖ್ಯಾನಗಳು ಸಾಧಕವಾದವು. ಮಹರ್ಷಿಯ ಸಹವಾಸದಲ್ಲಿ ಮಾಡಿದ ದೇಶಸಂಚಾರದಿಂದ ಬಾಲಕನಾದ ಶ್ರೀರಾಮನ ದೇಹಪಾಟವವೂ ಧನುರ್ದಕ್ಷತೆಯೂ ಮನೋವಿಕಾಸವೂ ಬುದ್ಧಿ ಜಾಗರ್ಯವೂ ಬೆಳೆದವು. ಆತನು ಹಾಗೆ ಪ್ರಬುದ್ಧಜೀವನಭಾರನಿರ್ವಾಹಕ್ಕೆ ಅರ್ಹನಾದನೆಂಬ ನಂಭಿಕೆ ವಿಶ್ವಾಮಿತ್ರನಲ್ಲುದಿಸಿತು. ಆ ವೇಳೆಗೆ ಮಿಥಿಲಾ ನಗರದಲ್ಲಿ ಜನಕರಾಜನು ಮಗಳಿಗಾಗಿ ವರಾನ್ವೇಷಕ್ಕೆ ಸಜ್ಜು ಮಾಡಿಕೊಂಡಿದ್ದ. ಸಕಾಲದಲ್ಲಿ ದಶರಥ ಜನಕ ಬಾಂಧವ್ಯದ ಅನ್ಯೋನ್ಯಾರ್ಹತೆಯನ್ನು ಕಂಡುಕೊಂಡದ್ದು ವಿಶ್ವಾಮಿತ್ರನ ಭವಿಷ್ಯದ್ದೃಷ್ಟಿ. ಆ ಮಹರ್ಷಿಯ ರಂಭಾ ಮೇನಕಾ ಪ್ರಸಂಗಗಳನ್ನು ನೆನೆಸಿಕೊಳ್ಳುವವರು ಶ್ರೀ ಸೀತಾರಾಮವಿವಾಹ ಸಂಧಾನಿಯೂ ಆತನೇ ಎಂಬುದನ್ನು ಮರೆಯಬಾರದು. ಹಾಗೆಯೇ ವಿಶ್ವಾಮಿತ್ರಸಂಧಾನದಿಂದ ಯಾವ ಅಹಲ್ಯೆಗೆ ಶ್ರೀರಾಮಸಂದರ್ಶನಮಹಿಮೆಯಿಂದ ಶಾಪವಿಮೋಚನೆಯಾಯಿತೋ ಆಕೆಯ–ಆ ಗೌತಮಪತ್ನಿಯ–ಮಗ ಶತಾನಂದನೇ ಜನಕಪುರೋಹಿತನೂ ಶ್ರೀ ಸೀತಾಕಲ್ಯಾಣದಲ್ಲಿ ಶಾಸ್ತ್ರಕಾರ್ಯಪ್ರವರ್ತಕನೂ ಆದನೆಂಬುದನ್ನೂ ಮರೆಯಬಾರದು. ಹೀಗೆ ಎಲ್ಲಕ್ಕೂ ಶುಭ್ರದಲ್ಲಿ ಪರಿಸಮಾಪ್ತಿ. 

ಪರಶುರಾಮನು ಕ್ರಾಂತಿಪುರುಷ (Revolutionary) ಲೋಕದಲ್ಲಿ ಒಂದು ಅನ್ಯಾಯ ಪ್ರಬಲಿಸಿದಾಗ ಎಲ್ಲೋ, ಯಾರ ಮನಸ್ಸಿನಲ್ಲೋ, ಒಂದು ಪ್ರತಿಭಟನೆಯ ವೀರಾವೇಶವೇಳುತ್ತದೆ. ಅದು ಕ್ರಾಂತಿ. ಅದು ಮನುಷ್ಯ ಸ್ವಭಾವದಲ್ಲಿರುವ ಸತ್ತ್ವಗುಣದ ಉದ್ರೇಕ, –ಆದರೆ ರಜೋಮಿಶ್ರಿತವಾದ ಉದ್ರೇಕ. ಕ್ರಾಂತಿಕಾರನ ರೋಷದಲ್ಲಿ ದಯೆ ದಾಕ್ಷಿಣ್ಯಗಳಿಗೆಡೆಯಿಲ್ಲ, ಸಾವಧಾನವಾದ ಯುಕ್ತಾಯುಕ್ತ ವಿವೇಚನೆಗೂ ಎಡೆಯಿಲ್ಲ; ಎಲ್ಲವೂ ಹಠ–ವಿಚಾರನಿಗ್ರಹಿಯಾದ ಹಠ. ಇಂಥ ಹಠೋದ್ವೇಗಕ್ಕೂ ಮನುಷ್ಯಚರಿತ್ರೆಯಲ್ಲಿ ಸ್ಥಲವುಂಟು, ಏಕೆಂದರೆ ಮನುಷ್ಯ ಸ್ವಭಾವದಲ್ಲಿ ಅನ್ಯಾಯಾವಕಾಶವುಂಟು. ಅನ್ಯಾಯವು ಅತ್ಯುತ್ಕಟವಾದಾಗ ನ್ಯಾಯತತ್ಪರವಾದ ಕ್ರಾಂತಿಯೇ ಅದಕ್ಕೆ ತಕ್ಕ ಪ್ರತೀಕಾರವಾಗುತ್ತದೆ. ರೋಗ ಎಂಥಾದ್ದೋ ಔಷಧ ಅಂಥಾದ್ದು. ಶೀತಕ್ಕೆ ಶುಂಠಿ, ಸನ್ನಿಪಾತಕ್ಕೆ ಜ್ವರಕುಠಾರ. ಕ್ರಾಂತಿಗೆ ಕಾರಣ ಹುಟ್ಟದಿರುವುದು ಸಮಾಜಕ್ಷೇಮದ ಮೊದಲನೆಯ ಲಕ್ಷಣ. ಕ್ರಾಂತಿ ಹುಟ್ಟಿದ ಮೇಲೆ ಅದನ್ನು ಕೂಡಿದಷ್ಟು ಬೇಗ ಶಮನ ಮಾಡುವುದು ಎರಡನೆಯ ಕ್ಷೇಮಲಕ್ಷಣ. ಪರಶುರಾಮನ ಕ್ರಾಂತಿಯ ಕಾರ್ಯ ಮುಗಿದಿತ್ತು, ಆ ಕ್ರೋಧದ ಜ್ವಾಲೆ ಮಾತ್ರ ಇಳಿದಿರಲಿಲ್ಲ. ನೃಸಿಂಹಸ್ವಾಮಿ ಮಾಡಬೇಕಾಗಿದ್ದ ಕೆಲಸ ಮುಗಿದಮೇಲೂ ಆ ಕೋಪದ ಬೆಂಕಿ ಉರಿಯುತ್ತಿರಲಿಲ್ಲವೆ? ಅಡಿಗೆಯಾಗಿ ಪಾತ್ರೆಯನ್ನಿಳಿಸಿದಮೇಲೂ ಒಲೆಯಲ್ಲಿ ಕೆಂಡವಾರದೆ ಇರುತ್ತದಲ್ಲವೆ? ಪರಶುರಾಮನ ಕೋಪದ ಬಿಸಿಯಿಳಿದಲ್ಲದೆ ಲೋಕಕ್ಕೆ ನೆಮ್ಮದಿಬಾರದು. ಮನೆಯಲ್ಲಿ ಒಲೆ ಉರಿಯಬೇಕಾದದ್ದು ದಿನದ ಇಪ್ಪತ್ತುನಾಲ್ಕು ಘಂಟೆಗಳಲ್ಲಿ ಒಂದೆರಡರ್ಧಘಂಟೆಗಳ ಕಾಲ ಮಾತ್ರ. ಸಮಾಜಕ್ಕೆ ಕ್ರಾಂತಿ ಬೇಕಾಗಬಹುದಾದದ್ದು ಒಂದು ಯುಗದಲ್ಲಿ ಒಂದೆರಡು ದಿನವಿರಬಹುದು. ಮಿಕ್ಕ ದಿವಸ ಬೇಕಾದದ್ದು ಸಮಾಧಾನ–ಸುವ್ಯವಸ್ಥೆಯ ಶಾಂತಿ. ಅದನ್ನು ನೆಲೆಗೊಳಿಸಬಲ್ಲವನು ದಶರಥರಾಮನು. 

ಕಾಲಾಗ್ನಿ ಸದೃಶಃ ಕ್ರೋಧೇ ಕ್ಷಮಯಾ ಪೃಥಿವೀಸಮಃ ॥ 

ಆಪಾತವಿರುದ್ಧಗಳಾದ ಗುಣಗಳನ್ನು ಲೋಕಕ್ಷೇಮಸಾಧನೆಯಲ್ಲಿ ಸಮರಸಕ್ಕೆ ತರಬಲ್ಲ ಧರ್ಮಸೂಕ್ಷ್ಮಸಮರ್ಥನು ಬೇಕಾಗಿದ್ದ ಕಾಲದಲ್ಲಿ ಅಂಥ ಮಹೋಪಕಾರಿ ಶ್ರೀರಾಮರೂಪದಲ್ಲಿ ಸಿದ್ಧನಾಗಿದ್ದನೆಂದು ಸೂಚಿಸಿ ಬಾಲಕಾಂಡವು ಸಮಾಪ್ತವಾಗುತ್ತದೆ. 

ಬಾಲಕಾಂಡವು ಶ್ರೀರಾಮನ ಸ್ವಭಾವಪರಿಪಾಕವಿಧಾನದ ನಿರೂಪಣೆ. 

ಅದರ ಬೇರೆ ಬೇರೆ ಪ್ರಕರಣಗಳು ಸಮಂಜಸವಾಗಿ ಹೊಂದಿಕೊಂಡು, ಕಥಾಧಾರೆಯನ್ನು ಮನೋಹರವಾಗುವಂತೆ ಹರಿಯಿಸಿ, ಅಯೋಧ್ಯಾಕಾಂಡದಲ್ಲಿ ಶ್ರೀರಾಮನನ್ನು ಹಠಾತ್ತಾಗಿ ಎದುರಿಸಿದ ಕಠೋರಪ್ರಶ್ನೆಗೆ ಆತನು ಹೇಗೆ ಸಿದ್ಧಪಟ್ಟಿದ್ದನೆಂಬುದನ್ನು ತೋರಿಸುತ್ತದೆ. 

ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇಃ । 
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಲಮ್‍ ॥ 

ಯಾವ ಸರಸಾಗ್ರವಾದ ಲೇಖನಿ ಸುಂದರಕಾಂಡವನ್ನು ಕನ್ನಡಜನಕ್ಕೆ ಎರಡು ವರ್ಷಗಳ ಹಿಂದೆ ಒದಗಿಸಿತೋ ಅದೇ ಕೃತಕೃತ್ಯಲೇಖನಿ ಈಗ ಬಾಲಕಾಂಡವನ್ನು ಬರೆದು ಕೊಟ್ಟಿರುವ ಸಂಗತಿ ಸಮಸ್ತರಿಗೂ ಸಂತೋಷಪ್ರದವಾಗುತ್ತದೆಯೆಂದು ನಾನು ನಂಬಿಕೊಂಡಿದ್ದೇನೆ. ರಾಮಾಯಣವನ್ನು ಭಾಷಾಂತರ ಮಾಡುವುದು ಸುಲಭದ ಕೆಲಸವಲ್ಲ. ಮೂಲಗ್ರಂಥದ ಪಾಠಾಂತರಗಳಲ್ಲಿ ಉತ್ತಮವಾವುದೆಂಬುದನ್ನು ನಿಶ್ಚಯಮಾಡುವುದು ಮೊದಲನೆಯ ಕಷ್ಟ. ಆರಿಸಿಕೊಂಡ ಪಾಠಕ್ಕೆ ನಾನಾ ವ್ಯಾಖ್ಯಾನಗಳು ನಾನಾವಿಧವಾಗಿ ಅರ್ಥ ಹೇಳುವಾಗ ಯಾವುದು ಗ್ರಾಹ್ಯವೆಂಬುದು ಎರಡನೆಯ ಕಷ್ಟ. ಇದೂ ಆದ ಮೇಲೆ ಅದಕ್ಕೆ ತಕ್ಕ ಕನ್ನಡ ಶಬ್ದ–ಸಾಮಾಗ್ರಿಯನ್ನೂ ವಾಕ್ಯಶೈಲಿಯನ್ನೂ ಅಳವಡಿಸಿಕೊಳ್ಳುವುದು ಬಲುದೊಡ್ಡ ಕಷ್ಟ. ಮಾತಿಗೆ ಪ್ರತಿಮಾತನ್ನಿಡುವುದು ಭಾವಾನುವಾದವಲ್ಲ. ಸಂಸ್ಕೃತ ಬಲ್ಲವರಿಗೆ ಸಂಸ್ಕೃತ ಮೂಲದಿಂದ ಎಂಥ ಸರಳತೆಯ, ಎಂಥ ಪದಮಾಧುರ್ಯದ, ಯಾವ ಸನ್ನಿವೇಶಚಿತ್ರದ, ಯಾವ ಗಂಭೀರಾರ್ಥದ ಅನುಭವವಾಗುತ್ತದೆಯೋ ತತ್ಸದೃಶವಾದ ಅನುಭವವು ಕನ್ನಡಿಗರಾದ ಓದುಗರಿಗೆ ಅಷ್ಟು ಸುಲಭವಾಗಿ ಆಗಬೇಕೆಂಬುದಲ್ಲವೆ ಉದ್ದೇಶ? ಇದು ಬಹುವಾಗಿ ಬುದ್ಧಿಪರಿಶ್ರಮವನ್ನಪೇಕ್ಷಿಸುತ್ತದೆ; ರಸವಿವೇಕವನ್ನಪೇಕ್ಷಿಸುತ್ತದೆ. ಕಾವ್ಯವನ್ನು ಕಾವ್ಯವಾಗಿ ಪರಿವರ್ತಿಸುವುದಲ್ಲವೆ ನಮಗೆ ಬೇಕಾದದ್ದು? ವಿದ್ವಾನ್‍ ರಂಗನಾಥಶರ್ಮರವರು ಸುಮಾರು ಆರು ವ್ಯಾಖ್ಯಾನಗಳನ್ನು ಪರಿಶೀಲಿಸಿ, ಅಲ್ಲಿ ದೊರೆತದ್ದನ್ನು ಸ್ವತಂತ್ರವಿಮರ್ಶೆಯಿಂದ ನೋಡಿ, ಅರ್ಥ ನಿಷ್ಕರ್ಷೆಮಾಡಿದ್ದಾರೆ. ಎಷ್ಟೋ ಸಾರಿ ತಮಗೆ ಶಂಕೆ ಉಳಿದುಕೊಂಡಾಗ ನನ್ನೊಡನೆಯೂ ಇತರ ಮಿತ್ರರೊಡನೆಯೂ ವಿಚಾರ ನಡೆಸಿದ್ದಾರೆ. ಹೀಗೆ ಪ್ರಯಾಸಸಿದ್ಧವಾದದ್ದು ಈ ಗ್ರಂಥದಲ್ಲಿರುವ ಭಾಷಾನುವಾದ. ಶ್ರೀರಂಗನಾಥ ಶರ್ಮರವರ ಕನ್ನಡ ಬರಿಯ ತರ್ಜುಮೆಯದಲ್ಲ, ಸ್ವತಂತ್ರ ಪ್ರಸನ್ನವಾದದ್ದು. ಕನ್ನಡದಲ್ಲಿ ವ್ಯಾಕರಣದ ಕಡೆ ಹೆಚ್ಚು ಗಮನವಿಟ್ಟರೆ ವಾಕ್ಯವು ಪೆಡಸಾಗುತ್ತದೆ; ಸುಲಭತೆಯ ಕಡೆ ನೋಡಿದರೆ ವಾಕ್ಯವು ದುರ್ಬಲವಾಗುತ್ತದೆ. ಪಾಂಡಿತ್ಯದ ಅತಿಯೂ ಪಾಮರತೆಯ ಅತಿಯೂ ಇಲ್ಲದಂತೆ ಬರೆಯುವುದು ಕನ್ನಡದಲ್ಲಿ ಬಲುಕಷ್ಟ. ನಾಲ್ಕು ಬಗೆಯ ವಾಕ್ಯರಚನೆ ಸಾಧ್ಯವಾಗಿರುವಾಗ ಅದರಲ್ಲಿ ಯಾವುದು ರಸಪೋಷಕವೆಂದು ಶ್ರೀ ರಂಗನಾಥಶರ್ಮರವರು ಹುಡುಕಿ ತಿಳಿದಿದ್ದಾರೆ. ಅವರ ವಾಕ್ಪ್ರವಾಹದಲ್ಲಿ ಸಹಜತೆ, ಲಾಲಿತ್ಯ, ವೈಶದ್ಯ, ಗಾಂಭೀರ್ಯ, ಓಜಸ್ಸು–ಈ ಗುಣಗಳು ಪ್ರಕಾಶಮಾನವಾಗಿದೆ. ಅವರ ಮುಖ್ಯದೃಷ್ಟಿ ರಸಪುಷ್ಟಿಯ ಕಡೆ. ಮಾತುಮಾತೂ ಅದಕ್ಕೆ ಸಹಾಯವಾಗಿದೆ. ಒಳ್ಳೆಯ ಕನ್ನಡ ಹೇಗಿರುತ್ತದೆಂದು ಕೇಳುವವರಿಗೆ ಇದು ನಾನು ತೋರಿಸುವ ಮಾದರಿ. ಶ್ರೀರಂಗನಾಥಶರ್ಮರವರು ತಮ್ಮ ಭಗವದನುಗೃಹೀತವಾದ ಲೇಖನಿಯಿಂದ ಶ್ರೀಮದ್ರಾಮಾಯಣದ ಉಳಿದ ಐದು ಕಾಂಡಗಳನ್ನು ಕನ್ನಡಿಗರಿಗೆ ದೊರಕಿಸಿ ಯಶಸ್ವಿಯಾಗುವಂತೆ ಭಗವಾನ್‍ವಾಲ್ಮೀಕಿ ಮಹರ್ಷಿಗಳು ಆಶೀರ್ವದಿಸಬೇಕೆಂದು ಬೇಡುತ್ತೇನೆ. 

ಈ ವಾಲ್ಮೀಕಿಸೇವಾಪ್ರಯತ್ನದಲ್ಲಿ ನನಗೆ ಅವಕಾಶ ಕೊಡಿಸಿದವರು ಮುಖ್ಯವಾಗಿ ನನ್ನ ಮಿತ್ರರಾದ ಇಂಜಿನೀಯರ್‍ ಶ್ರೀ ಡಿ.ಸಿ. ಅನಂತರಾಮಯ್ಯನವರು. ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಟ್ಟಡದ ಸಂಬಂಧದಲ್ಲಿ ನನಗೆ ಉಪಕಾರಿಗಳಾಗಿ ನನ್ನ ಕೃತಜ್ಞತೆಯನ್ನು ಸಂಪಾದಿಸಿಕೊಂಡು ಇತರ ಕಾರಣಗಳಿಂದಲೂ ಇಷ್ಟರಾಗಿದ್ದಾರೆ. ಶ್ರೀರಾಮಮಂದಿರದ ಇತರ ಕಾರ್ಯಕರ್ತರುಗಳಾದ ಶ್ರೀ ಎಚ್‍.ಎಸ್‍. ಕೃಷ್ಣಸ್ವಾಮಿ, ಶ್ರೀ ಎಸ್‍.ಎನ್‍. ಮೂರ್ತಿ ಮೊದಲಾದ ಮಿತ್ರರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಸಮಗ್ರ ರಾಮಾಯಣವನ್ನೂ ಇದೇ ರೀತಿ ಪ್ರಕಾಶಪಡಿಸುವ ಭಾಗ್ಯವನ್ನು ಶ್ರೀ ಸೀತಾರಾಮಪ್ರಭುವು ಈ ಸನ್ಮಿತ್ರರಿಗೆ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. 

ಜಗನ್ಮಂಗಲಕಾರಕವಾದ ವಾಲ್ಮೀಕಿಪ್ರಸಾದವು ವಿಸ್ತರಿಸಿ ಸಂವರ್ಧಿಸಲಿ. ಸರ್ವಂ ಶಿವಂ.

 ಶ್ರೀಮದ್ಧರ್ಮಾತ್ಮಸಂಸಕ್ತಲೋಕಚಾರಿತ್ರದರ್ಶನಃ । 
ರಾಜತಾಂ ಸತತಂ ಸ್ವಚ್ಛೋ ವಾಲ್ಮೀಕೇಃ ಕಾವ್ಯದರ್ಪಣಃ ॥ (೧೯೬೬)

Tuesday, 9 January 2024

ನಲ್‍ಬಾಳು - ಕೇತಕೀವನ - ಡಿವಿಜಿ

೧ ಹೊಳೆಯಲ್ಲಿ ಮಿಂದು ನೀಂ 
ಕೊಳೆ ಬಿಡುವೆಯದರೊಳ್‍ 
ಆ ಕೊಳೆಯದೇನಾಯ್ತು 
ಸಾಗರಕೆ ಹೋಯ್ತು 
ಮೀನು ಮಕರಂಗಳಿಗೆ 
ತೀನಿ ಸೊಗಸಾಯ್ತು. 

೨ ಇಳೆ ನಿನ್ನ ಬಾಳ್ಗೆ 
ಹೊಳೆಯವೊಲಿರಲಿ; 
ಬಾಳ ಜಲ ಕೊಳೆಯ 
ಜಾಲಿಸುತ್ತಿರಲಿ. 
ಬಂಧು ರಿಪು ನಿನಗೆ 
ಸಿಂಧೂರ್ಮಿಯಕ್ಕೆ. 

೩ ಲೋಕಸಂಪರ್ಕವಭಿ- 
ಷೇಕಜಲ ಜೀವಕ್ಕೆ 
ಮಲವ ನಿರ್ಮಲವಡಿಪ 
ಜಲಧಿ ಪರಬೊಮ್ಮಂ 
ಹೊನಲಿನಲಿ ಮೀವಂದು 
ನೆನಪಿರಲಿ ಕಡಲು.

* ಭಾಗ 3 - ವೇದವು ಕಾವ್ಯವಲ್ಲವೆ? * (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ವಾಲ್ಮೀಕಿಮಹರ್ಷಿ ಯಾವ ಕಾಲದಲ್ಲಿದ್ದವನು, ಯಾವ ಪ್ರದೇಶದವನು ಮೊದಲಾದ ಜೀವನವೃತ್ತಾಂತವಿವರಗಳನ್ನು ನಿಷ್ಕರ್ಷೆಯಾಗಿ ತಿಳಿಯಲು ಆಧಾರಗಳಿಲ್ಲ. ಶ್ರೀರಾಮಾವತಾರವು ತ್ರೇತಾಯುಗದಲ್ಲಿ ಆದದ್ದು. ವಾಲ್ಮೀಕಿಯು ರಾಮಸಮಕಾಲಿಕನೆಂದು ರಾಮಾಯಣದಿಂದ ಗೊತ್ತಾಗುತ್ತದೆ.

ಶ್ರೀರಾಮಾವತಾರಕಾಲದಿಂದ ಇಂದಿನವರೆಗೆ–ಎಂದರೆ ಕ್ರಿಸ್ತಶಕ ೧೯೬೬ಕ್ಕೆ ಸರಿಯಾದ ವಿಶ್ವಾವಸು ಸಂವತ್ಸರದ ವೇಳೆಗೆ–ಎಂಟು ಲಕ್ಷ ತೊಂಬತ್ತೊಂಬತ್ತು ಸಾವಿರದ ಅರುವತ್ತಾರು ವರ್ಷಗಳಷ್ಟು ಕಾಲ ಆಗಿದೆಯೆಂದು ನಮ್ಮ ಸಾಂಪ್ರದಾಯಿಕವಾದ ಲೆಕ್ಕ. ಅದು ಹೀಗೆ:

ತ್ರೇತಾಯುಗದ ಅವಶಿಷ್ಟ ೩೦, ೦೦೦ ವರ್ಷ
ದ್ವಾಪರಯುಗ ೮, ೬೪, ೦೦೦ ವರ್ಷ 
ಕಲಿಯುಗ ೫, ೦೬೬ ವರ್ಷ 
ಒಟ್ಟು ೮, ೯೯, ೦೬೬ ವರ್ಷ

ಪಾಶ್ಚಾತ್ಯ ಶೋಧಕರು ರಾಮಾಯಣ ಅಷ್ಟು ಪ್ರಾಚೀನವೆಂದು ಒಪ್ಪಲಾರರು. ತಮ್ಮ ಸಂಸ್ಕೃತಿ ನಾಗರೀಕತೆಗಳಿಗಿಂತ ಇಂಡಿಯದ್ದು ಬಹು ಪುರಾತನವೆನ್ನಲು ಅವರಿಗೆ ಮನಸ್ಸು ಬಾರದು. ಅವರು ರಾಮಾಯಣ ಮಹಾಭಾರತ ಗ್ರಂಥಗಳ ರಚನೆಯ ಕಾಲವು ಕ್ರಿಸ್ತಪೂರ್ವದ ೫೦೦ರಿಂದ ಕ್ರಿಸ್ತಾನಂತರದ ೨೦೦ರ ಒಳಗೆ ಎಂದು ಅಂದಾಜು ಮಾಡಿದ್ದಾರೆ. ಈ ಏಳು ಶತಾಬ್ದಗಳಲ್ಲಿ ರಾಮಾಯಣದ ರಚನೆ ಮೊದಲು ಆಯಿತೆಂದೂ ಭಾರತವು ಆಮೇಲಿನದೆಂದೂ ಒಂದು ಊಹೆ. ವಿಂಟರ್‍ನಿಟ್ಸ್‍ (Winternitz) ಪಂಡಿತನು ಹೀಗೆ ಹೇಳಿದ್ದಾನೆ:

“It is probable that the Ramayana had its present extent and contents as early as towards the close of the second century A.D... It is probable that the original Ramayana was composed in the third century B.C. by Valmiki on the basis of ancient ballads.”

ಏನೋ ಇದ್ದೀತು ಇರಲಾರದುಗಳ ಅರೆಮರೆಯ ಅಂದಾಜು ಇದು. ಇದನ್ನು ನಾವು ಒಪ್ಪಿಕೊಳ್ಳಲೇಬೆಕೆಂದೆನ್ನಿಸುವಷ್ಟರ ಪ್ರಮಾಣ ಕಾರಣಗಳೇನೂ ಇಲ್ಲ. ಪ್ರಶ್ನೆ ಎಷ್ಟು ಅಸಾಧ್ಯವೆಂಬುದನ್ನು ತೋರಿಸಲು ಅದನ್ನಿಲ್ಲಿ ಪ್ರಸ್ತಾವಿಸಿದ್ದಾಗಿದೆ. ನಮ್ಮ ದೇಶದ ಪೂರ್ವಚರಿತ್ರೆಯ ಆಧಾರಸಾಮಾಗ್ರಿ ಎಷ್ಟೊ ಭಾಗ ಭೂಮಿಯಲ್ಲೂ ಸಮುದ್ರದಲ್ಲೂ ಆಳವಾಗಿ ಮುಚ್ಚಿಹೋಗಿವೆ. ಅದನ್ನೆಲ್ಲ ಎತ್ತಿ ತೆಗೆದು ಶೋಧಿಸುವ ಕೆಲಸ ಈಚೀಚೆಗೆ ಕೊಂಚಕೊಂಚ ನಡೆದಿದೆ. ಹರಪ್ಪ ಮೊಹೆಂಜೊದಾರೋ ಪ್ರದೇಶಗಳ ಪೂರ್ವಾವಶೇಷಗಳು ಕ್ರಿಸ್ತಪೂರ್ವ ೩೦೦೦ಕ್ಕೆ ಹಿಂದೆ ಹೋಗುತ್ತವೆ. ಇಂಥ ಶೋಧನೆ ನಡೆದಂತೆಲ್ಲ ನಮ್ಮ ನಾಗರಿಕತೆಯ ಪ್ರಾಚೀನತೆ ಹೆಚ್ಚೆನಿಸುವ ಸೂಚನೆ ಬರುತ್ತದೆ. ಕಾದು ನೋಡೋಣ.

ವಾಲ್ಮೀಕಿಯ ಆಶ್ರಮವಿದ್ದದ್ದು ತಮಸಾನದಿಯ ಬಳಿ, ಗಂಗಾನದಿಯ ಪ್ರದೇಶದಲ್ಲಿ ಎಂದು ರಾಮಾಯಣದಿಂದಲೇ ಗೊತ್ತಾಗುತ್ತದೆ.

ಆತ ಪ್ರಚೇತಸನೆಂಬ ಋಷಿಯ ವಂಶದಲ್ಲಿ ಹುಟ್ಟಿದವನಾದದ್ದರಿಂದ ಪ್ರಾಚೇತಸನೆಂದು ಹೆಸರು ಪಡೆದಿದ್ದನು. ಆ ಋಷಿಯು ಸೃಷ್ಟಿಕರ್ತಬ್ರಹ್ಮನಿಂದ ಮೊದಲು ಉತ್ಪನ್ನರಾದ ಹತ್ತುಮಂದಿ ಋಷಿಗಳಲ್ಲೊಬ್ಬ.

ಪತೀನ್‍ ಪ್ರಜಾನಾಮಸೃಜಂ ಮಹರ್ಷೀನಾದಿತೋ ದಶ ॥
ಮರೀಚಿಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್‍ ।
ಪ್ರಚೇತಸಂ ವಸಿಷ್ಠಂ ಚ ಭೃಗುಂ ನಾರದಮೇವ ಚ ॥ (ಮನುಸ್ಮೃತಿ: ೧–೩೫)

ಹರಿಕಥೆ ಮಾಡುವವರು–ಬಹುಶಃ ಕನ್ನಡಿಗರು–ವಾಲ್ಮೀಕಿಯನ್ನು ಕುರಿತು ಕಟ್ಟಿರುವ ಒಂದು ಕಥೆ ಪ್ರಚಾರದಲ್ಲಿದೆ. ವಾಲ್ಮೀಕಿ ಹೇಗೋ ಕಳ್ಳರ ಸಹವಾಸಕ್ಕೆ ಬಿದ್ದು, ದಾರಿ ಹೋಕರನ್ನು ಹಿಡಿದು ಬಡಿದು ಸುಲಿಗೆ ಮಾಡಿ ಹೊಟ್ಟೆ ಹೊರಕೊಳ್ಳುತ್ತಿದ್ದ. ಒಂದು ದಿನ ನಾರದರು ಅವನ ಕೈಗೆ ಸಿಕ್ಕಿಬಿದ್ದಾಗ ಅವನಲ್ಲಿ ಕನಿಕರವುಳ್ಳವರಾಗಿ, ಅವನು ಮಾಡುತ್ತಿದ್ದ ಪಾಪವನ್ನು ಅವನ ತಿಳಿವಳಿಕೆಗೆ ತಂದು, ಅವನು ಪಶ್ಚಾತ್ತಾಪಪಟ್ಟು ಕ್ಷಮೆ ಬೇಡಿದಾಗ, ಅವನಿಗೆ ಒಂದು ಮರವನ್ನು ತೋರಿಸಿ ‘ಇದನ್ನು ನಂಬಿ ಜಪಿಸು’ ಎಂದು ಉಪದೇಶಿಸಿದರು. ಅವನು ಅದರಂತೆ ‘ಮರಾ, ಮರಾ’ ಎಂದು ಜಪಿಸುತ್ತಿದ್ದಾಗ ‘ರಾಮ, ರಾಮ’ ಎಂದು ಅವನ ಮನಸ್ಸಿಗೆ ಹೊಳೆಯಿತಂತೆ! ಹಾಗೆ ಅವನು ರಾಮನನ್ನು ಧ್ಯಾನಿಸಿದ್ದರಿಂದ ಅವನಿಗೆ ರಾಮನು ಪ್ರತ್ಯಕ್ಷನಾದ. ಬಳಿಕ ಅವನು ರಾಮಾಯಣಕವಿಯಾದ. ಇದು ಕಥೆ. ವಾಲ್ಮೀಕಿಯೂ ನಾರದರೂ ಮಾತನಾಡಿದ್ದು ಯಾವ ಭಾಷೆಯಲ್ಲಿ? ಸಂಸ್ಕೃತದಲ್ಲಾದರೆ ಆ ಭಾಷೆಯಲ್ಲಿ ವೃಕ್ಷಕ್ಕೆ ‘ಮರ’ ಎಂಬ ಪರ್ಯಾಯ ಪದವಿಲ್ಲ. ಬೆಳೆದ ಗಿಡ ಎಂಬರ್ಥದಲ್ಲಿ ‘ಮರ’ ಎಂಬ ಮಾತಿರುವುದು ಕನ್ನಡದಲ್ಲಿ, ತಮಿಳಿನಲ್ಲಿ; ತೆಲುಗಿನಲ್ಲಲ್ಲ, ಹಿಂದಿಯಲ್ಲಿಯೂ ಅಲ್ಲ. ವಾಲ್ಮೀಕಿ ನಾರದರು ಕನ್ನಡಿಗರೋ, ತಮಿಳರೋ? ಕಥೆಯನ್ನು ಕಥೆಯೆಂದುಕೊಂಡು ಅಲ್ಲಿಗೆ ಬಿಡಬಹುದು.

ಕವಿಯ ಕಾಲದೇಶಾದಿ ಜೀವನಸಂಗತಿಗಳನ್ನು ಕುರಿತು ಹೆಚ್ಚು ಶ್ರಮಪಡುವುದು ಪಾಶ್ಚಾತ್ಯ ಶೋಧಕರ ಪದ್ಧತಿ. ನಮಗೆ ಕವಿಗಿಂತ ಕಾವ್ಯ ಮುಖ್ಯ. ಕಾವ್ಯ ಕಾರಣದಿಂದ ಕವಿ ಬೇಕಾದವನೇ ಹೊರತು ಕವಿಯ ಕಾರಣದಿಂದ ಕಾವ್ಯ ಬೇಕಾದದ್ದೆಂದಲ್ಲ.

ವಾಲ್ಮೀಕಿಯ ವಾಸಸ್ಥಲವೆನಿಸಬಯಸುವ ಊರುಗಳು ನೂರಿವೆ. ಮುಳಬಾಗಲು ಬಳಿಯ ಆವನಿಯ ಜನ ಅದೇ ಅವಂತೀಕ್ಷೇತ್ರವೆಂದೂ ಅಲ್ಲಿಯೇ ಸೀತಮ್ಮ ಬಾಣಂತಿಯಾಗಿದ್ದದ್ದೆಂದೂ ಹೇಳಿ, ಗುಡ್ಡದಲ್ಲಿ ಒಂದು ಹೊಂಡವನ್ನು ತೋರಿಸಿ ಅದೇ ಆಕೆ ಮಕ್ಕಳ ಬಟ್ಟೆ ಒಗೆಯುತ್ತಿದ್ದ ಜಾಗವೆನ್ನುತ್ತಾರೆ. ಅದು ಅವರ ಸ್ವಸ್ಥಲಾಭಿಮಾನ. ನಮಗೆ ಸಂತೋಷ. ಅದನ್ನು ಹಾಗಲ್ಲವೆನ್ನದೆ, ನಕ್ಕು ಒಪ್ಪಿಕೊಂಡಂತೆ ಇದ್ದರೆ ಅದರಿಂದ ನಮ್ಮ ಕಾವ್ಯಾನುಭವಕ್ಕೆ ಎಷ್ಟು ಮಾತ್ರವೂ ಭಂಗಬಾರದು. ವಾಲ್ಮೀಕಿ ಆವನಿಯವನಲ್ಲ. ಮದ್ರಾಸ್‍ ಬಳಿಯ ವನ್ಮಿಯೂರಿನವನು ಎನ್ನುತ್ತಾರೆ ಅಲ್ಲಿಯವರು. ಹಾಗೂ ಆಗಲಿ. ವಾಲ್ಮೀಕಿ ಎಲ್ಲಿಯವನಾದರೂ ನಮ್ಮವನೇ–ನಮಗೆ ಅವನ ಕಾವ್ಯ ಬೇಕೆನಿಸಿದ ಪಕ್ಷದಲ್ಲಿ. ಶ್ರೀಮದ್ರಾಮಾಯಣದ ಗ್ರಂಥಗಾತ್ರವು ಅದು ಈಗ ಪ್ರಚಾರದಲ್ಲಿರುವಷ್ಟೆಲ್ಲ- ಮೊದಲಿನಿಂದ ಕೊನೆಯವರೆಗೂ ಒಂದೊಂದಕ್ಷರವೂ–ವಾಲ್ಮೀಕಿಯಿಂದ ಬಂದದ್ದೆ? ಅಥವಾ ಮಾಲ್ಮೀಕಿಯಿಂದ ಮೊದಲು ಒಂದಷ್ಟು ಗ್ರಂಥ ಬಂದಿದ್ದು, ಬಳಿಕ ಈಚಿನವರು ಯಾರುಯಾರೋ ಆ ಮೂಲಾಂಶಕ್ಕೆ ತಮ್ಮ ತಮ್ಮ ಕೈಕೆಲಸವನ್ನು ಸೇರಿಸಿದ್ದಾರೆಯೇ? ಇತರರ ಕೈವಾಡ ಅಷ್ಟಿಷ್ಟು ಸೇರಿದ್ದರೂ ಇರಬಹುದು.

ಗ್ರಂಥದ ಪ್ರಚಾರವಾದದ್ದು ಲಿಖಿತಪುಸ್ತಕದಿಂದ ಅಲ್ಲ, ಬಾಯ ಹಾಡಿಕೆಯಿಂದ. ಲವಕುಶರ ತರುವಾಯ ಸೂತಪುರಾಣಿಕರು ತಾವಿದ್ದ ಕಡೆ, ತಾವು ಹೋದ ಕಡೆ ರಾಮಾಯಣವನ್ನು ಹಾಡುತ್ತಿದ್ದರು. ಕೆಲಕೆಲ ಕಡೆ ಕೆಲಕೆಲ ದಿವಸ ಹೊಸ ಶ್ರೋತರು ಬರುತ್ತಿದ್ದರು. ಅಂಥವರ ಪ್ರಯೋಜನಕ್ಕಾಗಿ ಹಿಂದಿನ ಸಾರಿ ಹೇಳಿದ್ದನ್ನು ಸಂಗ್ರಹಿಸಿ ಪುನರಾವರ್ತನ ಮಾಡಬೇಕಾಗಿತ್ತು. ಹಳೆಯ ಶ್ರೋತೃಗಳಿಗೆ ಹೊಸ ರುಚಿ ತೋರಿಸುವುದಕ್ಕಾಗಿ ಒಂದೆರಡು ವಾಕ್ಯಗಳನ್ನು ಹೊಸದಾಗಿ ಸೇರಿಸಿದರೆ ಕಳೆಯೇರೀತೆಂದು ಪುರಾಣಿಕರಿಗೆ ತೋರಿರಬಹುದು. ಕಥೆ ಹೇಳುವವರಿಗೆ ಅಭ್ಯಾಸ ಹೆಚ್ಚಿದಂತೆಲ್ಲ ಹೊಸಹೊಸ ಸೊಗಸುಗಳು ತೋರಿ ಕುಸುರಿಯ ಕೆಲಸ ನಡೆದಿರಬಹುದು. ಇದು ನಮಗೆಲ್ಲ ಅನುಭವದಲ್ಲಿರುವುದು ತಾನೆ? ಕಥೆ ಹೇಳ ಹೇಳ ಅದರ ಕೈ ಕಾಲು ಬೆಳೆಯುತ್ತದೆ. ಹೋಮರ್‍ ಕವಿಯ “ಇಲಿಯಡ್‍” ಮಹಾಕಾವ್ಯ ಹೀಗೆ ಬೆಳದದ್ದೆಂದು ವಿದ್ವಾಂಸರು ಅನುಮಾನಿಸಿದ್ದಾರೆ. ಅದರಂತೆ ವಾಲ್ಮೀಕಿಗಳ ಕೃತಿಯು ಪುರಾಣಿಕರು ಹಾಡಿಹಾಡಿದಂತೆ ಕಾಲಾಂತರದಲ್ಲಿ ಗಾತ್ರವೃದ್ಧಿ ಪಡೆದಿರಬಹುದು.

ಜನಪ್ರಿಯವಾದ ಕಥೆಯಲ್ಲಿ ಭಕ್ತಿಬೋಧನೆಗೆ ಅವಕಾಶ ಚೆನ್ನಾಗಿರುತ್ತದೆ. ಶ್ರಿರಾಮನು ಸಾಕ್ಷಾದ್ವಿಷ್ಣುವೆಂದು ನಂಬಿದ್ದವರು ಆ ನಂಬಿಕೆಯನ್ನು ಪರಿಪೋಷಿಸುವುದಕ್ಕಾಗಿ ಇಲ್ಲೊಂದು ಅಲ್ಲೊಂದು ವಾಕ್ಯ ಸೇರಿಸಿರಬಹುದು. ಒಟ್ಟಿನಲ್ಲಿ ಬಾಲಕಾಂಡದ ಬಹುಭಾಗವೂ ಉತ್ತರಕಾಂಡದ ಎಲ್ಲವೂ ಪ್ರಕ್ಷಿಪ್ತಗಳೆಂದು ಕೆಲಮಂದಿಯ ಮತ. ಹಾಗಾಗಿದ್ದರೆ ಅದಿದ್ದುಕೊಳ್ಳಲಿ. ಪ್ರಕ್ಷಿಪ್ತಗಳೆಂದು ಹೇಳುವ ಗ್ರಂಥಭಾಗಗಳನ್ನು ಪ್ರಕ್ಷಿಪ್ತಗಳೇ ಎಂದು ಸಾಧಿಸುವುದು ಸುಲಭವಲ್ಲ. ಅದೆಲ್ಲ ಸಂದೇಹ–ಭೂಮಿ. ನಮಗೆ ವಿವಾದ ಬೇಕಿಲ್ಲ. ನಾವು ಕಾವ್ಯರಸೈಕದೃಕ್ಕುಗಳು. ಶ್ಲೋಕವು ರಮ್ಯವಾಗಿದ್ದರೆ ಅದು ಅಲ್ಲಿ ಹೇಗೆ ಬಂತೆಂದು ನಾವು ಕೇಳಬೇಕಾಗಿಲ್ಲ. ವಾಕ್ಯರಚನೆ ಸುಂದರವಾಗಿದೆಯೆ? ಭಾವ ಉಚಿತವಾಗಿದೆಯೇ? ಹಾಗಿದ್ದರೆ ಬೇರೆ ತಕರಾರು ನಮಗೆ ಬೇಕಿಲ್ಲ.

Monday, 8 January 2024

* ಭಾಗ 3 - ವೇದವು ಕಾವ್ಯವಲ್ಲವೆ? * (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಕಾವ್ಯಲಕ್ಷಣಗಳು ವೇದದಲ್ಲಿ ಯಥೇಷ್ಟವಾಗಿವೆ. ಚಿತ್ತಾಕರ್ಷಕವಾದ ವಾಗ್ಗುಂಫನ, ವರ್ಣನಾವೈಖರಿ, ಛಂದೋಧಾಟಿ. ಇವೆಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಹೃದಯದ ಆರ್ತಸ್ವರ–ಇವು ವೇದದ ಸಂಹಿತಾಧ್ಯಾಯಗಳಲ್ಲಿರುವಂತೆ ಯಾವ ಕಾವ್ಯದಲ್ಲಿಯೂ ಇರಲಾರದೆಂದು ಹೇಳಬಹುದು. ಆದರೂ ವೇದವು ಕಾವ್ಯವಾಗದು. ಏಕೆಂದರೆ ಕಾವ್ಯದಲ್ಲಿ ಕೇಂದ್ರಸ್ಥಾನ ಮನುಷ್ಯನದು, ವೇದದಲ್ಲಿ ಕೇಂದ್ರಸ್ಥಾನ ದೇವತೆಯದು. ಸಮಸ್ತಜಗತ್ತಿಗೂ ಯಾವ ರಹಸ್ಯ ಚೈತನ್ಯವು ನಿಯಾಮಕವೋ, ಹಾಗೆಯೇ ಪರಿಪಾಲಕವೋ, –ಯಾವುದರ ನಿಗ್ರಹಾನುಗ್ರಹ ಶಕ್ತಿಗಳು ಮನುಷ್ಯಜೀವನವನ್ನು ಆಗಿಸುತ್ತವೆಯೋ, ಹೋಗಿಸುತ್ತವೆಯೋ, –ಆ ಸರ್ವಶಕ್ತಿಸ್ವರೂಪನಾದ ಈಶ್ವರನೇ ವೇದದಲ್ಲಿ ಕಥಾನಾಯಕ. ಮನುಷ್ಯನು ಅಲ್ಲಿ ಶರಣಾಗತನಾದ ಉಪಜೀವಿ. “ಹೇ ಇಂದ್ರ, ನನಗೆ ಮಳೆ ಬೆಳೆಗಳನ್ನು ಕೊಡು; ಹೇ ಅಗ್ನಿ, ನನ್ನ ಮನೆಮಂದಿಯನ್ನು ಕಾಪಾಡು; ಹೇ ವರುಣ, ನನ್ನ ಪಾಪಗಳನ್ನು ಕ್ಷಮಿಸು; ಹೇ ರುದ್ರ, ನನ್ನಲ್ಲಿ ಕೋಪಮಾಡಬೇಡ, ನನ್ನ ಶತ್ರುಗಳಲ್ಲಿ ಕೋಪ ತೋರು” –ಈ ಪ್ರಕಾರ ಬೇಡುವವನು ಮನುಷ್ಯ. ಅವನ ಆ ಬೇಡಿಕೆಯ ಸಮಯದಲ್ಲಿ ಅವನು ನಾನಾ ದೇವತೆಗಳ ಮಹಿಮೆಗಳನ್ನು ಬಗೆಬಗೆಯಾಗಿ ಬಣ್ಣಿಸುತ್ತಾನೆ. ಹೀಗೆ ವೇದದಲ್ಲಿ ಮನುಷ್ಯನ ಆವೇಗಾಕಾಂಕ್ಷೆಗಳು ನಿಮಿತ್ತ, ಭಗವತ್ಪ್ರಸಾದವು ಉದ್ದೇಶ. ವೇದದಲ್ಲಿ ದೈವವು ಮುಖ್ಯ, ಮನುಷ್ಯನು ಪ್ರಾಸಂಗಿಕ. ಕಾವ್ಯದಲ್ಲಾದರೋ ಮನುಷ್ಯನು ಮುಖ್ಯ, ದೈವವು ಪ್ರಾಸಂಗಿಕ. ಹೀಗೆ ವೇದವೂ ಕಾವ್ಯವೂ ಪರಸ್ಪರ ಪರಿಪೂರಕಗಳು. 

ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್‍ ।
ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರೇದಿತಿ ॥ 
(ಮಹಾಭಾರತ, ಆದಿಪರ್ವ: ೧–೨೭೩) 

ಇತಿಹಾಸಾದಿ ಮಾನುಷಸಾಹಿತ್ಯವ್ಯಾಸಂಗದಿಂದ ವೇದವಿದ್ಯೆಗೆ ಪುಷ್ಟಿ ಬರುತ್ತದೆ. ಕಾವ್ಯಾನುಭವವಿಲ್ಲದವನು ತನ್ನನ್ನು ಹೊಡೆದಾನೆಂದು ವೇದಕ್ಕೆ ಹೆದರಿಕೆಯಂತೆ! ಎಂದರೆ, ವೇದದ ಅರ್ಥವನ್ನು ಸರಿಯಾಗಿಯೂ ಸಮಗ್ರವಾಗಿಯೂ ತಿಳಿಯಬೇಕೆನ್ನುವವನು ಲೋಕಪರಿಜ್ಞಾನವನ್ನು ಸಂಪಾದಿಸಿಕೊಂಡಿರಬೇಕು. ಲೋಕಾನುಭವಕ್ಕೂ ಲೋಕಪರಿಜ್ಞಾನಕ್ಕೂ ಸಾಧನವು ಸತ್ಕಾವ್ಯ. ಯಾರು ಶ್ರೀಮದ್ರಾಮಾಯಣವ್ಯಾಸಂಗದಿಂದ ಲೋಕಜೀವನದ ಮರ್ಮಗಳನ್ನು ಕಂಡಿರುತ್ತಾನೋ ಅವನಿಗೆ ವೇದಾರ್ಥವು ಸುಲಭ ಲಭ್ಯವಾಗುತ್ತದೆ. 

* ಎರಡು ದೃಷ್ಟಿಗಳು *

ಶ್ರೀಮದ್ರಾಮಾಯಣದ ವಿಷಯದಲ್ಲಿ ಎರಡು ದೃಷ್ಟಿಗಳು ಸಾಧ್ಯವಾಗಿವೆ. 

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ । 
ವೇದಃ ಪ್ರಾಚೇತಸಾದಾಸೀತ್‍ ಸಾಕ್ಷಾದ್ರಾಮಾಯಣಾತ್ಮನಾ ॥ 

1. ಮಹಾವಿಷ್ಣುವು ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದನು; ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು. 
2. ಶ್ರೀರಾಮನು ಮನುಷ್ಯನಾಗಿ ಹುಟ್ಟಿ ಮಹಾವಿಷ್ಣು ಪದವಿಗೆ ಏರಿದನು; ತದನುಸಾರವಾಗಿ ವಾಲ್ಮೀಕಿಪ್ರಣೀತ ರಾಮಾಯಣವು ವೇದಪ್ರಾಯವಾಯಿತು. 

ಮೊದಲನೆಯದು ಅನುಗ್ರಹಾಪೇಕ್ಷೆಯ ದೃಷ್ಟಿ; ಎರಡನೆಯದು ಅರ್ಹತಾ ಸಂಪಾದನೆಯ ದೃಷ್ಟಿ.

ಇವೆರಡೂ ಬೇರೆಬೇರೆ ದೃಷ್ಟಿಗಳು, ಆದರೆ ಪರಸ್ಪರ ವಿರೋಧಿಗಳಲ್ಲ. ಹಾಲೂ ತುಪ್ಪವೂ ಬೇರೆಬೇರೆ, ಆದರೆ ವಿರೋಧಿಗಳಲ್ಲ. ಹಲಸೂ ಜೇನೂ ಬೇರೆಬೇರೆ, ಆದರೆ ವೈರಿಗಳಲ್ಲ. ಎರಡೂ ಒಟ್ಟಿಗೆ ಇರಲಾಗುತ್ತದೆ. 

ಮೊದಲನೆಯ ದೃಷ್ಟಿಯಲ್ಲಿ ಪ್ರಸಾದನಿರೀಕ್ಷೆ ಮುಖ್ಯಾಶಯ. ಶ್ರೀರಾಮನು ಭಗವಂತನ ಪ್ರತ್ಯಕ್ಷಮೂರ್ತಿ. ಆತನು ಕೃಪಾಳು, ಆತನನ್ನು ಆಶ್ರಯಿಸಿದವನಿಗೆ ಇಷ್ಟಾರ್ಥಲಾಭವು ಸ್ವತಸ್ಸಿದ್ಧ. ಆದದ್ದರಿಂದ ರಾಮಭಕ್ತಿಯು ಪರಮಶ್ರೇಯಸ್ಸಾಧಕ. ಅಲ್ಲಿ ಮತ್ತೆ ವಿಚಾರಣೆಗಳಿಗೆಡೆಯಿಲ್ಲ. ದೃಢವಾದ ಶ್ರದ್ಧೆಯೇ ಕರ್ತವ್ಯ.

ಎರಡನೆಯ ದೃಷ್ಟಿಯಲ್ಲಿ ಪ್ರಯತ್ನದಾರ್ಢ್ಯವು ಮುಖ್ಯಾಶಯ. ಶ್ರೀರಾಮನು ಮಾನುಷಸತ್ವಕ್ಕೆ ಆದರ್ಶಮೂರ್ತಿ. ಭಗವದವತಾರವಾದರೂ ಮನುಷ್ಯಬೋಧೆಗಾಗಿ ಆದ ಅವತಾರ, ಮನುಷ್ಯನು ಹೇಗೆ ಆತ್ಮಸಂಯಮದಿಂದ ಆತ್ಮಪರೀಕ್ಷಣದಿಂದ, ಆತ್ಮಶಿಕ್ಷಣದಿಂದ, ಆತ್ಮಪ್ರಯತ್ನದಿಂದ, ಆತ್ಮಶೌರ್ಯದಿಂದ ಲೋಕಜೀವನದ ಕಷ್ಟಪರೀಕ್ಷೆಗಳಿಂದ ಪಾರಾಗಿ ಪರಮಪದವಿಗೇರಬಹುದು–ಎಂಬುದಕ್ಕೆ ನಿದರ್ಶನ ರಾಮಚರಿತೆ. ರಾಮನು ಮನುಷ್ಯನಿಗೆ ಅನುಕರಣೀಯನಾದ ಧರ್ಮಗುರು, “ಉದ್ಧರೇದಾತ್ಮನಾತ್ಮಾನಂ” –ಎಂಬ ಗೀತೋಕ್ತಿಗೆ ನಿದರ್ಶನಮೂರ್ತಿ. 

ಈ ಎರಡು ದೃಷ್ಟಿಗಳಲ್ಲಿ ಯಾವುದು ತಪ್ಪು? ಯಾವುದೂ ತಪ್ಪಲ್ಲ. ಯಾವುದು ಸರಿ? ಎರಡೂ ಸರಿ. ದೈವವು ಗುರುವಾಗಲಾರದೆ? ಗುರುವು ದೈವವಾಗಬಾರದೆ? 

ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ ॥ (ಶ್ವೇತಾಶ್ವತರೋಪನಿಷತ್ತು: ೬–೨೩) 

ಭಕ್ತನ ಅಂತರಂಗಪ್ರವೃತ್ತಿಯಂತೆ, ಅವನಿಗೆ ಪ್ರಾತಃಕಾಲದಲ್ಲಿ ಪ್ರತ್ಯಕ್ಷದೈವವಾಗಿದ್ದ ಶ್ರೀರಾಮನು ಮಧ್ಯಾಹ್ನ ಒಂದು ಧರ್ಮಸಂಕಟದಲ್ಲಿ ನಡವಳಿಕೆಗೆ ಗುರುವಾಗಬಹುದು; ರಾತ್ರಿ ಏಕಾಂತಧ್ಯಾನದಲ್ಲಿ ಪರಬ್ರಹ್ಮಪ್ರತೀಕವಾಗಬಹುದು. 

ರಮನ್ತೇ ಯೋಗಿನೋಽನನ್ತೇ ನಿತ್ಯಾನನ್ದೇ ಚಿದಾತ್ಮನಿ । 
ಇತಿರಾಮಪದೇನಾಸೌ ಪರಂಬ್ರಹ್ಮಾಭಿಧೀಯತೇ ॥ (ರಾಮಪೂರ್ವತಾಪಿನ್ಯುಪನಿಷತ್ತು) 

“ರಾಮ” ಶಬ್ದವು ಮೊದಲು ಪರಬ್ರಹ್ಮವಾಚಕವಾಗಿತ್ತೆಂದೇ ನನ್ನ ನಂಬಿಕೆ. ಅದನ್ನು ದಶರಥನ ಕಾಲಕ್ಕೆ ಹಿಂದೆಯೇ ಮನುಷ್ಯನ ಹೆಸರಾಗಿ ಬಳಸುತ್ತಿದ್ದಿರಬೇಕು. ಜಮದಗ್ನಿಯ ಮಗನಾದ ಪರಶುರಾಮನು ರಘುರಾಮನಿಗಿಂತ ಪುರಾತನನು. ರಾಮ ಎಂಬ ಹೆಸರಿನವರು ಬೇರೆಯವರೂ ಹಿಂದೆ ಇದ್ದಿರಬಹುದು.

ರಾಮಃ ಕ್ರಾತುಜಾತೇಯೋ ವೈಯಾಘ್ರಪದ್ಯಃ (ಜೈಮಿನೀಯೋಪನಿಷತ್ತು) 

ವಾಲ್ಮೀಕಿಯು ನಾರದನಿಂದ ತಿಳಿಯಬಯಸಿದ್ದು ಮನುಷ್ಯವಿಷಯವನ್ನು: 

ಮಹರ್ಷೇ ತ್ವಂ ಸಮರ್ಥೋಽಸಿ ಜ್ಞಾತುಮೇವಂವಿಧಂ ನರಮ್‍ ॥ (ಬಾಲಕಾಂಡ: ೧–೫) 

ನಾರದನು ಹೇಳಿದ್ದು ಮನುಷ್ಯವಿಷಯವನ್ನು: 

ತೈರ್ಯುಕ್ತಃ ಶ್ರೂಯತಾಂ ನರಃ ॥ (ಬಾಲಕಾಂಡ:೧–೭) 

ಶ್ರೀರಾಮಚಂದ್ರನು ತನ್ನನ್ನು ತಾನು ಮನುಷ್ಯನೆಂದೇ ತಿಳಿದುಕೊಂಡಿದ್ದ: 

ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್‍ ॥ (ಯುದ್ಧಕಾಂಡ:೧೨೦–೧೦) 

ಇಂಥಾ ಶ್ರೀರಾಮನನ್ನು ಸಾಕ್ಷಾದ್ವಿಷ್ಣುವೆಂದು ಭಾವಿಸಿ ಸ್ತುತಿಸಿದವರು ಬ್ರಹ್ಮಾದಿ ದೇವತೆಗಳು.

ಮನುಷ್ಯರಿಗೆ ಸ್ವಾಭಾವಿಕವಾಗಿ ತಗಲುವ ಮನೋವೇಧೆ ವಿಕಾರಗಳನ್ನು ತಾನು ಪಟ್ಟವನೆಂದು ಶ್ರೀರಾಮನು ಸ್ವತಃ ಹೇಳಿಕೊಂಡದ್ದು ಆತನನ್ನು ನಮಗೆ ಸಮೀಪಗೊಳಿಸಿ ಆತನು ನಮಗೆ ಅಷ್ಟಿಷ್ಟಾದರೂ ಅನುಕರಣಸಾಧ್ಯನೆಂದು ತೋರಿಸುತ್ತದೆ.