Sunday, 10 March 2024

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

(ಗೋಖಲೆಯವರ ದೇಶಸೇವಕ ಸಂಘದ ನಿಬಂಧನೆಗಳಿಂದ)

ಎನ್ನಯ ಮಾನಸ ಭವನದೊ– ।
ಳುನ್ನತ ವೇದಿಯಲಿ ದೇಶಮಾತೆಯನಿರಿಸು– ।
ತ್ತೆನ್ನಯ ಸರ್ವಸ್ವಮನಾ ।
ಪುಣ್ಯೋರ್ವೀದೇವಿಯಂಘ್ರಿಗರ್ಪಿಸಿ ಮಣಿವೆಂ ॥ ೧

ಭಾರತರೊಳ್‍ ವಂಶಮತಾ– ।
ಚಾರಂ ನೂರಿರೆಯುಮವರದೊಂದೆ ಕುಟುಂಬಂ ॥
ಬೇರೆಣಿಕೆಗಳವರೆಡೆಯೊಳ್‍ ।
ತೋರದವೊಲ್‍ ಸೋದರೈಕ್ಯಮಂ ನೆಲೆವಡಿಪೆಂ ॥ ೨

ಕಲಹಿಸೆನಾರೊಳಮ್‍ ಅರ್ಥದ ।
ಕಲುಷಂಗಳ ದೂರವಿಟ್ಟು ಧೀರಸ್ಮೃತಿಯಂ ॥
ತಳೆದುರದೊಳವರ ಚರಿತೆಯ ।
ಬೆಳಕಿಂದಾಂ ನಡೆದು ಬಾಳ ನೋಂಪಿಯ ಮಾಳ್ಪೆಂ ॥ ೩

ರಾಜಕಟಾಕ್ಷ ಮನುಂ ಜನ– ।
ತಾಜಲ್ಪಶ್ಲಾಘನೆಗಳನುಂ ಗಣಿಸದೆ ನಾಂ ॥
ಭೂಜನನಿಯನೊಮ್ಮನದಿಂ ।
ಪೂಜಿಸುವೆಂ ಸತ್ಯಧರ್ಮಸಂಯಮವಿಧಿಯಿಂ ॥ ೪

ಜನಪದಸೇವೆಯೆ ದೈವಾ ।
ರ್ಚನೆಯದು ನಮಗಾತ್ಮಭಾವವಿಸ್ತಾರನಯಂ ॥
ಅನುಗೊಳುವೆಂ ರಾಷ್ಟ್ರಿಕ ಜೀ– ।
ವನ ಕಾರ್ಯಂಗಳ್ಗೆ ದೀಕ್ಷಿತೋಚಿತ ಮತಿಯಿಂ ॥ ೫

ಮಾನವ ಸಂಸ್ಕಾರಕ ಧ ।
ರ್ಮಾನುವ್ರತಮಕ್ಕೆ ಸಾರ್ವಜನಿಕ ವಿಚಾರಂ ॥
ಜ್ಞಾನಿಯಿನಕ್ಕುಂ ಶುಭ ಸಂ– ।
ಧಾನಂ ರಾಜ್ಯಾದಿಲೌಕಿಕ ವ್ಯವಹೃತಿಯೊಳ್‍ ॥ ೬

Saturday, 9 March 2024

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ


ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥

ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್‍ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್‍ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥

Friday, 8 March 2024

ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ














ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ

ಇಂದ್ರಿಯಂಗಳ ಜಯಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ರೋಷವ ವರ್ಜಿಸಿ ।
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥

ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥

Thursday, 7 March 2024

ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ

ಮೋಕ್ಷಗುಂಡಂ ವಿಶ್ವೇಶ್ವರಯ್ಯ  - ವಸಂತ ಕುಸುಮಾಂಜಲಿ - ಡಿವಿಜಿ

ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥

ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ‍್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥

ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥

Wednesday, 6 March 2024

‍ಜಗದೀಶ ಚಂದ್ರ ಬೋಸ್‍ - ವಸಂತ ಕುಸುಮಾಂಜಲಿ - ಡಿವಿಜಿ

‍ಜಗದೀಶ ಚಂದ್ರ ಬೋಸ್‍  - ವಸಂತ ಕುಸುಮಾಂಜಲಿ - ಡಿವಿಜಿ




ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ 
ಲೋಕದೊಳ್‍ ವಿಸ್ತರಿಪ ಕುವರನೆನಿಸಿ । 
ಕಪಿಲ ಕಾಣಾದಾದಿ ಸದಸದ್ವಿಚಾರಕರ 
ಕುಲದ ಕೀರ್ತಿಗೆ ರನ್ನಗಲಶವೆನಿಸಿ । 
ನರನವೊಲೆ ತರುಗಳುಂ ಸುಖದುಃಖಗಳನರಿವ 
ಪರಿಯ ತೋರುವ ಯಂತ್ರಚಯವ ರಚಿಸಿ । 
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ 
ಮರ್ಮವಂ ಲೋಚನಕೆ ವಿಷಯಮೆನಿಸಿ ॥ 

ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ । 
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ । 
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ । 
ಮೆರೆವನೀ ಜಗದೀಶನಾರ್ಯಕುಲತೋಷಂ ॥ 

ಪರತತ್ತ್ವವನರಿವೊಡೆಯುಂ । 
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥ 
ಅರಿಭೀತಿಯ ಕಳೆವೊಡೆಯುಂ । 
ತಿರೆಯೊಳ್‍ ವಿಜ್ಞಾನಮೊಂದೆ ಸಾಧನಮಲ್ತೇ ॥ 

ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– । 
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥ 
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್‍ ಶುಭಂಬೊಂದಲೆಂ– । 
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥

Tuesday, 5 March 2024

ರವೀಂದ್ರನಾಥ ಠಾಕೂರ್‍ - ವಸಂತ ಕುಸುಮಾಂಜಲಿ - ಡಿವಿಜಿ

ರವೀಂದ್ರನಾಥ ಠಾಕೂರ್‍  - ವಸಂತ ಕುಸುಮಾಂಜಲಿ - ಡಿವಿಜಿ




































ರವಿಯರಿಯದ ಮರ್ಮಗಳಂ । 
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥ 
ರವಿ ಬೆಳಗೆ ಬಾಹ್ಯಲೋಕವ । 
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥ 

ಋಷಿಬಲಮಿಲ್ಲದವಂ ಕವಿ । 
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥ 
ಋಷಿಹೃದ್ಗತ ಚಿನ್ಮೂರ್ತಿಯ । 
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥ 

ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ । 
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥ 
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್‍ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥ 

ಜೀವಲೋಕದೊಳಳ್ತಿಯಿಂ ಸಮ । 
ಭಾವದಿಂದಲಿ ವರ್ತಿಸುತ ಪರ । 
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥ 

ಸಾವಧಾನದಿ ವರ್ಣಿಸುತಲದ । 
ತೀವಿದಾನಂದದಲಿ ತನ್ನೊಳು । 
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥ 

ತಾನೆ ಜಗಂಗಳ ಕಲ್ಪಿಸುತುಂ ಸ್ವಾ । 
ಧೀನತೆಯೊಳ್ಮುದಮೊಂದುತಲೆಂದುಂ ॥ 
ಜ್ಞಾನಧನಂ ಕವಿ ಧೀರನುದಾರಂ । 
ಮಾನಸರಾಜ್ಯಕೆ ರಾಜನೆನಿಪ್ಪಂ ॥

Monday, 4 March 2024

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ
 


ತಾಮಸಾವೃತರಾಗಿ ನಿಜಜನರ್‍ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್‍ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್‍ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥

ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ ॥