Thursday, 7 March 2024

ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ

ಮೋಕ್ಷಗುಂಡಂ ವಿಶ್ವೇಶ್ವರಯ್ಯ  - ವಸಂತ ಕುಸುಮಾಂಜಲಿ - ಡಿವಿಜಿ

ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥

ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ‍್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥

ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥

Wednesday, 6 March 2024

‍ಜಗದೀಶ ಚಂದ್ರ ಬೋಸ್‍ - ವಸಂತ ಕುಸುಮಾಂಜಲಿ - ಡಿವಿಜಿ

‍ಜಗದೀಶ ಚಂದ್ರ ಬೋಸ್‍  - ವಸಂತ ಕುಸುಮಾಂಜಲಿ - ಡಿವಿಜಿ




ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ 
ಲೋಕದೊಳ್‍ ವಿಸ್ತರಿಪ ಕುವರನೆನಿಸಿ । 
ಕಪಿಲ ಕಾಣಾದಾದಿ ಸದಸದ್ವಿಚಾರಕರ 
ಕುಲದ ಕೀರ್ತಿಗೆ ರನ್ನಗಲಶವೆನಿಸಿ । 
ನರನವೊಲೆ ತರುಗಳುಂ ಸುಖದುಃಖಗಳನರಿವ 
ಪರಿಯ ತೋರುವ ಯಂತ್ರಚಯವ ರಚಿಸಿ । 
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ 
ಮರ್ಮವಂ ಲೋಚನಕೆ ವಿಷಯಮೆನಿಸಿ ॥ 

ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ । 
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ । 
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ । 
ಮೆರೆವನೀ ಜಗದೀಶನಾರ್ಯಕುಲತೋಷಂ ॥ 

ಪರತತ್ತ್ವವನರಿವೊಡೆಯುಂ । 
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥ 
ಅರಿಭೀತಿಯ ಕಳೆವೊಡೆಯುಂ । 
ತಿರೆಯೊಳ್‍ ವಿಜ್ಞಾನಮೊಂದೆ ಸಾಧನಮಲ್ತೇ ॥ 

ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– । 
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥ 
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್‍ ಶುಭಂಬೊಂದಲೆಂ– । 
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥

Tuesday, 5 March 2024

ರವೀಂದ್ರನಾಥ ಠಾಕೂರ್‍ - ವಸಂತ ಕುಸುಮಾಂಜಲಿ - ಡಿವಿಜಿ

ರವೀಂದ್ರನಾಥ ಠಾಕೂರ್‍  - ವಸಂತ ಕುಸುಮಾಂಜಲಿ - ಡಿವಿಜಿ




































ರವಿಯರಿಯದ ಮರ್ಮಗಳಂ । 
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥ 
ರವಿ ಬೆಳಗೆ ಬಾಹ್ಯಲೋಕವ । 
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥ 

ಋಷಿಬಲಮಿಲ್ಲದವಂ ಕವಿ । 
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥ 
ಋಷಿಹೃದ್ಗತ ಚಿನ್ಮೂರ್ತಿಯ । 
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥ 

ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ । 
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥ 
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್‍ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥ 

ಜೀವಲೋಕದೊಳಳ್ತಿಯಿಂ ಸಮ । 
ಭಾವದಿಂದಲಿ ವರ್ತಿಸುತ ಪರ । 
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥ 

ಸಾವಧಾನದಿ ವರ್ಣಿಸುತಲದ । 
ತೀವಿದಾನಂದದಲಿ ತನ್ನೊಳು । 
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥ 

ತಾನೆ ಜಗಂಗಳ ಕಲ್ಪಿಸುತುಂ ಸ್ವಾ । 
ಧೀನತೆಯೊಳ್ಮುದಮೊಂದುತಲೆಂದುಂ ॥ 
ಜ್ಞಾನಧನಂ ಕವಿ ಧೀರನುದಾರಂ । 
ಮಾನಸರಾಜ್ಯಕೆ ರಾಜನೆನಿಪ್ಪಂ ॥

Monday, 4 March 2024

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ
 


ತಾಮಸಾವೃತರಾಗಿ ನಿಜಜನರ್‍ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್‍ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್‍ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥

ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ ॥

Sunday, 3 March 2024

ಗೋಪಾಲ ಕೃಷ್ಣ ಗೋಖಲೆ - ವಸಂತ ಕುಸುಮಾಂಜಲಿ - ಡಿವಿಜಿ

ಗೋಪಾಲ ಕೃಷ್ಣ ಗೋಖಲೆ  - ವಸಂತ ಕುಸುಮಾಂಜಲಿ - ಡಿವಿಜಿ














ವರಗುಣಭೂಷಿತನೀತಂ । 
ಪರಹಿತದೊಳೆ ತನ್ನ ಹಿತವ ಕಂಡವನೀತಂ ॥ 
ಗುರುವೀತಂ ನಮಗೆಂಬುದ । 
ಮರೆವುದೆ, ಹಾ ವಿಧಿಯೆ, ನೀನದೇಂ ನಿರ್ದಯನೋ ॥ 

ಧೀರಾಗ್ರಣಿಯಹ ಸುತನಂ । 
ಬೇರೊಂದಂ ಬೇಡದಿರ್ದ ಭಕ್ತಾಗ್ರಣಿಯಂ । 
ಕ್ರೂರಿಯಮಂ ಕರೆದೊಯ್ದಿರೆ । 
ಭಾರತಭೂಮಾತೆಯೆಂತು ಸೈಸುವಳಕಟಾ ॥ 

ಮನ್ನಣೆಯಂ ಸ್ವಾತಂತ್ರ್ಯಮ– । 
ನುನ್ನತಿಯಂ ಭ್ರಾತೃಭಾಮವಂ ವಿದ್ಯೆಯುಮಂ ॥ 
ನಿನ್ನವರೊಳ್‍ ನೆಲೆಗೊಳಿಪಾ । 
ಜನ್ನದ ದೀಕ್ಷೆಯನು ಬಿಟ್ಟು ಪೋದೆಯ, ಸಖನೇ ॥ 

ತ್ಯಜಿಸಿದೊಡಂ ನಿಜತನುವಂ । 
ಸುಜನರ್‍ ಸತ್ಕೀರ್ತಿಕಾಯರಾಗಿರ್ಪುದರಿಂ ॥ 
ನಿಜರೂಪಮದಿಲ್ಲದೊಡಂ । 
ನಿಜಯಶದಿಂ ಬಾಳ್ವನಲ್ತೆ ಗೋಖಲೆಯೆಂದುಂ ॥ 

ದಿನಮಣಿಯಸ್ತಮಿಸಿದೊಡಂ । 
ಪುನರುದಯವನೊಂದಿ ಲೋಕಮಂ ಬೆಳಗುವವೊಲ್‍ ॥ 
ಘನನಹ ಗೋಖಲೆಯುಂ ತಾಂ । 
ಪುನರುದಯವನೊಂದಿ ಬಾರದಿರ್ಪನೆ ನಮ್ಮೊಳ್‍ ॥

Saturday, 2 March 2024

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ಪುಣ್ಯಭೂಮಿಯೆ, ನಿನ್ನ ಪುಣ್ಯಗಂಧವನಖಿಲ
ಭುವನದೊಳ್‍ ಪಸರಿಸುತ ನಲಿವುದೆಂದು ।
ಆರ್ಯಕುಲಜರೆ, ನಿಮ್ಮ ನಿಜಧರ್ಮದೀಪಮಂ
ಮರಳಿ ಬೆಳಗಿಸಿ ಗುರುತೆವಡೆವುದೆಂದು ।
ವೇದಜನನಿಯೆ, ನಿನ್ನ ದಿವ್ಯಗಾನವ ಕೇಳೆ ।
ಜಗವೆಲ್ಲ ತಲೆವಾಗಿ ಬರುವುದೆಂದು ।
ವೇದಾಂತಕೇಸರಿಯೆ, ನಿದ್ರೆಯಂ ತೊರೆದು ನೀಂ
ಗುಹೆಯಿಂದ ಪೊರಮಟ್ಟು ಮೆರೆವುದೆಂದು 

ಇಂತು ನಿಜಜನಪದವನೆಳ್ಚರಂಗೊಳಿಸುತನಿಶಂ ।
ಭರತಮಾತೆಯ ಜೈತ್ರಯಾತ್ರೆಯೊಳ್‍ ಪ್ರಮುಖನೆನಿಸಿ ।
ವಿಬುಧವಂದಿತನಾಗಿ ಲೋಕಸಂಮಾನ್ಯನಾಗಿ ।
ಶ್ರೀ ವಿವೇಕಾನಂದನೆಸೆದನಂದು ॥

Friday, 1 March 2024

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ
 
ನಿಜದೇಶಂ ನಿಜಮಾತೃದೇವಿ ನಿಜದೇಶೀಯರ್‍ ನಿಜಭ್ರಾತೃಗಳ್‍ । 
ನಿಜಸೌಖ್ಯಂ ನಿಜರಾಷ್ಟ್ರಸೌಖ್ಯಮೆ ಎನುತ್ತಂತರ್ಬಹಿಶ್ಶುದ್ಧಿಯಿಂ ॥ 
ಸುಜನಾರಾಧಿತಮಾರ್ಗದೊಳ್‍ ನಡೆದ ದಾದಾಭಾಯಿಯಂ ಧನ್ಯನಂ । 
ಭಜಿಪೆಂ ಮಾನಸಶುದ್ಧಿಯಂ ಬಯಸುತಂ ಶ್ರೀ ಭಾರತೀಸೇವೆಯೊಳ್‍ ॥ 

ತಾತ ನಿವನಾತ್ಮೀಯರಿಗೆ ಸಹ । 
ಜಾತ ನೆಲ್ಲಜನರ್ಗೆ ಭಾರತ । 
ಮಾತೆಗಮಿತ ಶುಭೋದಯ ನವದಿನದ ರವಿಯೆನಿಪಾ ॥ 
ರೀತಿಯಲಿ ಬಾಳ್ದಖಿಲರಿಂ ಸಂ । 
ಪ್ರೀತನಾದ ಯಥಾರ್ಥನಾಮ । 
ಖ್ಯಾತ ದಾದಾಭಾಯಿ ನವರೋಜಿಯ ಸದಾ ನೆನೆವೆಂ ॥ 

ತನುಸೌಖ್ಯವನೆ ಕೋರಿ ಧನದಾಸೆಯಲಿ ಬಳಲು– 
ತೆನಿಬರೋ ಜನನಿಯನೆ ಮರೆಯುತಿಹರು । 
ಘನವೆನಿಪ ಬಿರುದಾವಳಿಯ ಗಳಿಪ ಚತುರತೆಯೊ– 
ಳೆನಿಬರೋ ಜೀವನವ ಕಳೆಯುತಿಹರು । 
ನಿಜಜನರ ಮೇಲ್ಮೆಯಂ ನೆನೆಯದರೆನಿಮಿಷಮುಂ 
ಪಶುಸುಖದೊಳೆನಿಬರೋ ಮುಳುಗುತಿಹರು । 
ಜಾತಿಭೇದವೆ ಸೋದರತ್ವದಿಂ ಮೇಲೆನ್ನು– 
ತೆನಿಬರೋ ವೈರದೊಳ್ಮೆರೆಯುತಿಹರು ॥
 
ದೇಶಹಿತವನೆ ತನ್ನ ಗುರಿಯೊಳಿಡುತೆ । 
ಮುದದಿನಾತ್ಮಾರ್ಪಣೆಯನಾಕೆಗೆಸಗಿ । 
ನಿಲುವ ಮಹನೀಯರತಿವಿರಳರವರೊಳಿಂದು । 
ಪೂಜ್ಯನಾ ನವರೋಜಿ ಮೊದಲೆನಿಪನಲ್ತೆ ॥ 

ಭಾರತೀಯರ ದುಃಖದುರ್ಬಲದೈನ್ಯದಾಸ್ಯಗಳೆಲ್ಲಮಂ । 
ದೂರ ನೀಗುತೆ ವಿದ್ಯೆ ಸೌಖ್ಯ ಸುಸಂಪದಂಗಳನಾಗಿಪಾ ॥ 
ದಾರಿತೋರಿದ ಬಂಧುವಾ ನವರೋಜಿಯಲ್ತೆ ನಿರಂತರಂ । 
ಪ್ರೇರಿಕಾ ಮಹನೀಯನೆನ್ನಯ ಚಿತ್ತವೃತ್ತಿಯ ಧರ್ಮದೊಳ್‍ ॥
 
ಪರಮಶುಭಚರಿತ್ರಂ ಭಾರತೀವೀರಪುತ್ರಂ । 
ಪರಹಿತಕರವೃತ್ತಂ ಸತ್ಯಮಾರ್ಗಪ್ರವೃತ್ತಂ ॥ 
ವಿರಚಿತಬಹುಪುಣ್ಯಂ ದೇಶಭಕ್ತಾಗ್ರಗಣ್ಯಂ । 
ಸ್ಫುರಿಕೆ ಮನದಿ ದಾದಾಭಾಯಿಯೆಂಬಾ ವರೇಣ್ಯಂ ॥
 
ಹನುಮಭೀಷ್ಮರವೊಲದ್ಭುತವೃತ್ತಂ । 
ವಿನಯಶೌರ್ಯಕರುಣಾಗುಣಯುಕ್ತಂ ॥ 
ಜನಪದೋದ್ಧರಣ ಧರ್ಮಕೃತಾರ್ಥಂ । 
ಮನದೊಳಿರ್ಕೆ ನವರೋಜಿ ಮಹಾತ್ಮಂ ॥
 
ಸ್ವರಾಜ್ಯಮಂತ್ರಬೋಧಕಂ ಸುರಾಜನೀತಿಕೋವಿದಂ । 
ಪರೇಶಭಕ್ತಿಪೂರಿತಂ ಪರೋಪಕಾರದೀಕ್ಷಿತಂ ॥ 
ಸ್ಫುರದ್ಯಶಶ್ಶರೀರನಾ ಗುರೂತ್ತಮಂ ಗುಣಾಕರಂ । 
ವಿರಾಜಿಕಾವಗಂ ಮದೀಯ ಮಾನಸಾಬ್ಜಪೀಠದೊಳ್‍ ॥