Sunday, 3 March 2024

ಗೋಪಾಲ ಕೃಷ್ಣ ಗೋಖಲೆ - ವಸಂತ ಕುಸುಮಾಂಜಲಿ - ಡಿವಿಜಿ

ಗೋಪಾಲ ಕೃಷ್ಣ ಗೋಖಲೆ  - ವಸಂತ ಕುಸುಮಾಂಜಲಿ - ಡಿವಿಜಿ














ವರಗುಣಭೂಷಿತನೀತಂ । 
ಪರಹಿತದೊಳೆ ತನ್ನ ಹಿತವ ಕಂಡವನೀತಂ ॥ 
ಗುರುವೀತಂ ನಮಗೆಂಬುದ । 
ಮರೆವುದೆ, ಹಾ ವಿಧಿಯೆ, ನೀನದೇಂ ನಿರ್ದಯನೋ ॥ 

ಧೀರಾಗ್ರಣಿಯಹ ಸುತನಂ । 
ಬೇರೊಂದಂ ಬೇಡದಿರ್ದ ಭಕ್ತಾಗ್ರಣಿಯಂ । 
ಕ್ರೂರಿಯಮಂ ಕರೆದೊಯ್ದಿರೆ । 
ಭಾರತಭೂಮಾತೆಯೆಂತು ಸೈಸುವಳಕಟಾ ॥ 

ಮನ್ನಣೆಯಂ ಸ್ವಾತಂತ್ರ್ಯಮ– । 
ನುನ್ನತಿಯಂ ಭ್ರಾತೃಭಾಮವಂ ವಿದ್ಯೆಯುಮಂ ॥ 
ನಿನ್ನವರೊಳ್‍ ನೆಲೆಗೊಳಿಪಾ । 
ಜನ್ನದ ದೀಕ್ಷೆಯನು ಬಿಟ್ಟು ಪೋದೆಯ, ಸಖನೇ ॥ 

ತ್ಯಜಿಸಿದೊಡಂ ನಿಜತನುವಂ । 
ಸುಜನರ್‍ ಸತ್ಕೀರ್ತಿಕಾಯರಾಗಿರ್ಪುದರಿಂ ॥ 
ನಿಜರೂಪಮದಿಲ್ಲದೊಡಂ । 
ನಿಜಯಶದಿಂ ಬಾಳ್ವನಲ್ತೆ ಗೋಖಲೆಯೆಂದುಂ ॥ 

ದಿನಮಣಿಯಸ್ತಮಿಸಿದೊಡಂ । 
ಪುನರುದಯವನೊಂದಿ ಲೋಕಮಂ ಬೆಳಗುವವೊಲ್‍ ॥ 
ಘನನಹ ಗೋಖಲೆಯುಂ ತಾಂ । 
ಪುನರುದಯವನೊಂದಿ ಬಾರದಿರ್ಪನೆ ನಮ್ಮೊಳ್‍ ॥

Saturday, 2 March 2024

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ಪುಣ್ಯಭೂಮಿಯೆ, ನಿನ್ನ ಪುಣ್ಯಗಂಧವನಖಿಲ
ಭುವನದೊಳ್‍ ಪಸರಿಸುತ ನಲಿವುದೆಂದು ।
ಆರ್ಯಕುಲಜರೆ, ನಿಮ್ಮ ನಿಜಧರ್ಮದೀಪಮಂ
ಮರಳಿ ಬೆಳಗಿಸಿ ಗುರುತೆವಡೆವುದೆಂದು ।
ವೇದಜನನಿಯೆ, ನಿನ್ನ ದಿವ್ಯಗಾನವ ಕೇಳೆ ।
ಜಗವೆಲ್ಲ ತಲೆವಾಗಿ ಬರುವುದೆಂದು ।
ವೇದಾಂತಕೇಸರಿಯೆ, ನಿದ್ರೆಯಂ ತೊರೆದು ನೀಂ
ಗುಹೆಯಿಂದ ಪೊರಮಟ್ಟು ಮೆರೆವುದೆಂದು 

ಇಂತು ನಿಜಜನಪದವನೆಳ್ಚರಂಗೊಳಿಸುತನಿಶಂ ।
ಭರತಮಾತೆಯ ಜೈತ್ರಯಾತ್ರೆಯೊಳ್‍ ಪ್ರಮುಖನೆನಿಸಿ ।
ವಿಬುಧವಂದಿತನಾಗಿ ಲೋಕಸಂಮಾನ್ಯನಾಗಿ ।
ಶ್ರೀ ವಿವೇಕಾನಂದನೆಸೆದನಂದು ॥

Friday, 1 March 2024

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ
 
ನಿಜದೇಶಂ ನಿಜಮಾತೃದೇವಿ ನಿಜದೇಶೀಯರ್‍ ನಿಜಭ್ರಾತೃಗಳ್‍ । 
ನಿಜಸೌಖ್ಯಂ ನಿಜರಾಷ್ಟ್ರಸೌಖ್ಯಮೆ ಎನುತ್ತಂತರ್ಬಹಿಶ್ಶುದ್ಧಿಯಿಂ ॥ 
ಸುಜನಾರಾಧಿತಮಾರ್ಗದೊಳ್‍ ನಡೆದ ದಾದಾಭಾಯಿಯಂ ಧನ್ಯನಂ । 
ಭಜಿಪೆಂ ಮಾನಸಶುದ್ಧಿಯಂ ಬಯಸುತಂ ಶ್ರೀ ಭಾರತೀಸೇವೆಯೊಳ್‍ ॥ 

ತಾತ ನಿವನಾತ್ಮೀಯರಿಗೆ ಸಹ । 
ಜಾತ ನೆಲ್ಲಜನರ್ಗೆ ಭಾರತ । 
ಮಾತೆಗಮಿತ ಶುಭೋದಯ ನವದಿನದ ರವಿಯೆನಿಪಾ ॥ 
ರೀತಿಯಲಿ ಬಾಳ್ದಖಿಲರಿಂ ಸಂ । 
ಪ್ರೀತನಾದ ಯಥಾರ್ಥನಾಮ । 
ಖ್ಯಾತ ದಾದಾಭಾಯಿ ನವರೋಜಿಯ ಸದಾ ನೆನೆವೆಂ ॥ 

ತನುಸೌಖ್ಯವನೆ ಕೋರಿ ಧನದಾಸೆಯಲಿ ಬಳಲು– 
ತೆನಿಬರೋ ಜನನಿಯನೆ ಮರೆಯುತಿಹರು । 
ಘನವೆನಿಪ ಬಿರುದಾವಳಿಯ ಗಳಿಪ ಚತುರತೆಯೊ– 
ಳೆನಿಬರೋ ಜೀವನವ ಕಳೆಯುತಿಹರು । 
ನಿಜಜನರ ಮೇಲ್ಮೆಯಂ ನೆನೆಯದರೆನಿಮಿಷಮುಂ 
ಪಶುಸುಖದೊಳೆನಿಬರೋ ಮುಳುಗುತಿಹರು । 
ಜಾತಿಭೇದವೆ ಸೋದರತ್ವದಿಂ ಮೇಲೆನ್ನು– 
ತೆನಿಬರೋ ವೈರದೊಳ್ಮೆರೆಯುತಿಹರು ॥
 
ದೇಶಹಿತವನೆ ತನ್ನ ಗುರಿಯೊಳಿಡುತೆ । 
ಮುದದಿನಾತ್ಮಾರ್ಪಣೆಯನಾಕೆಗೆಸಗಿ । 
ನಿಲುವ ಮಹನೀಯರತಿವಿರಳರವರೊಳಿಂದು । 
ಪೂಜ್ಯನಾ ನವರೋಜಿ ಮೊದಲೆನಿಪನಲ್ತೆ ॥ 

ಭಾರತೀಯರ ದುಃಖದುರ್ಬಲದೈನ್ಯದಾಸ್ಯಗಳೆಲ್ಲಮಂ । 
ದೂರ ನೀಗುತೆ ವಿದ್ಯೆ ಸೌಖ್ಯ ಸುಸಂಪದಂಗಳನಾಗಿಪಾ ॥ 
ದಾರಿತೋರಿದ ಬಂಧುವಾ ನವರೋಜಿಯಲ್ತೆ ನಿರಂತರಂ । 
ಪ್ರೇರಿಕಾ ಮಹನೀಯನೆನ್ನಯ ಚಿತ್ತವೃತ್ತಿಯ ಧರ್ಮದೊಳ್‍ ॥
 
ಪರಮಶುಭಚರಿತ್ರಂ ಭಾರತೀವೀರಪುತ್ರಂ । 
ಪರಹಿತಕರವೃತ್ತಂ ಸತ್ಯಮಾರ್ಗಪ್ರವೃತ್ತಂ ॥ 
ವಿರಚಿತಬಹುಪುಣ್ಯಂ ದೇಶಭಕ್ತಾಗ್ರಗಣ್ಯಂ । 
ಸ್ಫುರಿಕೆ ಮನದಿ ದಾದಾಭಾಯಿಯೆಂಬಾ ವರೇಣ್ಯಂ ॥
 
ಹನುಮಭೀಷ್ಮರವೊಲದ್ಭುತವೃತ್ತಂ । 
ವಿನಯಶೌರ್ಯಕರುಣಾಗುಣಯುಕ್ತಂ ॥ 
ಜನಪದೋದ್ಧರಣ ಧರ್ಮಕೃತಾರ್ಥಂ । 
ಮನದೊಳಿರ್ಕೆ ನವರೋಜಿ ಮಹಾತ್ಮಂ ॥
 
ಸ್ವರಾಜ್ಯಮಂತ್ರಬೋಧಕಂ ಸುರಾಜನೀತಿಕೋವಿದಂ । 
ಪರೇಶಭಕ್ತಿಪೂರಿತಂ ಪರೋಪಕಾರದೀಕ್ಷಿತಂ ॥ 
ಸ್ಫುರದ್ಯಶಶ್ಶರೀರನಾ ಗುರೂತ್ತಮಂ ಗುಣಾಕರಂ । 
ವಿರಾಜಿಕಾವಗಂ ಮದೀಯ ಮಾನಸಾಬ್ಜಪೀಠದೊಳ್‍ ॥

Thursday, 29 February 2024

ರಾಜಾ ರಾಮಮೋಹನ ರಾಯ್‍ - ವಸಂತ ಕುಸುಮಾಂಜಲಿ - ಡಿವಿಜಿ

ರಾಜಾ ರಾಮಮೋಹನ ರಾಯ್‍ - ವಸಂತ ಕುಸುಮಾಂಜಲಿ - ಡಿವಿಜಿ



ನಿಖಿಲ ಜೀವಂಗಳೊಳ್‍ ನೆರೆದಿರ್ಪ ದೇವನಂ 
ನಿರ್ಜೀವವಸ್ತುಗಳೊಳರಸಲೇಕೆ? । 
ಲೋಕಪಿತನೊರ್ವನಿರೆ ಸೋದರಾದರವಿರದೆ 
ಜಾತಿವಿಷಮತೆಗಳಲಿ ಕುದಿಯಲೇಕೆ? । 
ಬಹುಮಂದಿ ಮಹಿಳೆಯರ ಪುರುಷನುದ್ವಹಿಸುತಿರೆ 
ವಿಧವೆ ತಾನಗ್ನಿಯಲಿ ಬೀಳ್ವುದೇಕೆ? । 
ವಿದ್ಯೆಯಾರಾಧ್ಯವಿರೆ ಪರದೇಶಗಳ ಸಾರ್ದು 
ನೂತ್ನ ಕಲೆಗಳ ಯುವರ್‍ ಕಲಿಯರೇಕೆ? ॥ 

ಇಂತು ನಿಜಜನಕುಲದ ಮೌಢ್ಯಗಳ ತಿರ್ದಿದಾತಂ । 
ಆರ್ಷವೇದಪ್ರಭೆಯ ಜಗಕೆಲ್ಲ ಬೆಳಗಿದಾತಂ । 
ಭಾರತದ ಯಶವನೈರೊಪ್ಯರೊಳು ಸಾರಿದಾತಂ 
ರಾಮಮೋಹನನೆಮ್ಮ ನವಯುಗಕ್ಕರುಣನಾದಂ ॥

Wednesday, 28 February 2024

ರಾಮಕೃಷ್ಣ ಪರಮಹಂಸ - ವಸಂತ ಕುಸುಮಾಂಜಲಿ - ಡಿವಿಜಿ


ರಾಮಕೃಷ್ಣ ಪರಮಹಂಸ - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕಾಳಿಕಾ ಪಾದಪದ್ಮ ಮಧುಕರನಾಗಿ
ತತ್ತ್ವಾನುಸಂಧಾನ ನಿರತನಾಗಿ ।
ನಾಸ್ತಿಕ್ಯತಿಮಿರಹರಚಂಡಭಾಸ್ಕರನಾಗಿ
ವೈರಾಗ್ಯರಾಜ್ಯಾಧಿರಾಜನಾಗಿ ।
ವಿವಿಧ ಮತ ಸಿದ್ಧಾಂತ ಸಾಮ್ಯ ದರ್ಶಕನಾಗಿ
ವೇದಾಂತಮರ್ಮೈಕದೃಷ್ಟಿಯಾಗಿ ।
ಶ್ರೀ ಶಂಕರಾದಿ ಸದ್ಗುರುಪಙ್ಕ್ತಿಯೊಳು ಸೇರ್ದ
ಪರಹಂಸನಾಗಿ ಕರುಣಾಳುವಾಗಿ ॥

ಕ್ರೈಸ್ತ ಮಹಮದ ಮುಖ್ಯ ಮತಗಳುಂ ಸಾರ್ಥಮೆಂದು ।
ಸ್ವಾನುಭವದಿಂ ಬಗೆದು ಸಾರುತ್ತೆ ಲೋಕಹಿತಮಂ ।
ಶ್ರೀ ವಿವೇಕಾನಂದಸಂಪೂಜ್ಯಚರಣಕಮಲಂ ।
ಮೆರೆದನಾ ಶ್ರೀ ರಾಮಕೃಷ್ಣಾಖ್ಯ ಯೋಗಿವರ್ಯಂ ॥

Tuesday, 27 February 2024

ವಂದೇ ಮಾತರಂ - ವಸಂತ ಕುಸುಮಾಂಜಲಿ - ಡಿವಿಜಿ

ವಂದೇ ಮಾತರಂ - ವಸಂತ ಕುಸುಮಾಂಜಲಿ - ಡಿವಿಜಿ

(ಶ್ರೀ ಬಂಕಿಮಚಂದ್ರರ ಪ್ರಖ್ಯಾತ ರಾಷ್ಟ್ರಗೀತೆಯನ್ನನುಸರಿಸಿದ್ದು)

ವಂದೇ ಮಾತರಮಮಲಾಂ ।
ಸುಜಲಾಂ ಸುಫಲಾಂ ಸುಸಸ್ಯ ಸಂಪನ್ನಾಂ ।
ಭರಣೀಂ ಭಾರತಧರಣೀಂ ।
ತ್ವಾಂ ರಿಪುಹರಣೀಂ ಸುತಾರ್ತಿಪರಿಹರಿಣೀಂ ॥ ೧

ವಂದೇ ಮಾತರಮಾರ್ಯಾ ।
ಮಖಿಲೇಡ್ಯಾಮಮಿತರತ್ನಕನಕಾಢ್ಯಾಂ ।
ಶುಭ್ರಜ್ಯೋತ್ಸ್ನಾ ಪುಲಕಿತ ।
ರಜನೀಂ ತ್ವಾಂ ಶ್ರೀಮತೀಂ ಚ ಪುಣ್ಯವತೀಂ ॥ ೨

ದೇಶಮಯೀಂ ಕೋಶಮಯೀಂ ।
ಕುಶಲಮಯೀಂ ಸುಖಮಯೀಂ ಪ್ರಮೋದಮಯೀಂ ।
ಅಯಿ ಮಧುರಾಲಾಪಮಯೀಂ ।
ತ್ವಾಂ ವಂದೇ ಮಾತರಂ ಚ ಸುಗುಣಮಯೀಂ ॥೩

ಕರ್ಮ ತ್ವಂ ಮರ್ಮ ತ್ವಂ ।
ಸದ್ಧರ್ಮಸ್ತ್ವಂ ತಥೈವ ಶರ್ಮ ತ್ವಂ ।
ಭರ್ಮ ತ್ವಂ ವರ್ಮ ತ್ವಂ ।
ತ್ವಾಂ ವಂದೇ ಮಾತರಂ ವಿದ್ಯಾಂ ॥ ೪
ಪ್ರಾಣಾಸ್ತ್ವಮೇವ ದೇಹೇ ।
ಭುಜಯೋಶ್ಶಕ್ತಿಸ್ತ್ವಮೇವ ದೇಹಭೃತಾಂ ।
ಹೃದಯೇ ತ್ವಮೇವ ಭಕ್ತಿ ।
ಸ್ತ್ವಾಂ ವಂದೇ ಮಾತರಂ ದೇವೀಂ ॥ ೫

Monday, 26 February 2024

ಬೇಡಿಕೆ - ವಸಂತ ಕುಸುಮಾಂಜಲಿ - ಡಿವಿಜಿ

ಬೇಡಿಕೆ - ವಸಂತ ಕುಸುಮಾಂಜಲಿ - ಡಿವಿಜಿ

ನಿಷ್ಕಳಂಕನೆ ನಿನ್ನ ಸಂಕಲ್ಪಮಿಲ್ಲದೊಡ–
ದೇನುಮಾಗದು ಮೇಣದೇನುಮಿರದೈ ।
ಅನುಪಮಿತಮಹಿಮನೇ ಅರಿಯಲಾರೆನು ಶುಭದ
ಹಾದಿಯನು ನೀನೊಬ್ಬನರಿಯಬಲ್ಲೈ ।
ಕಾರುಣ್ಯಮೂರುತಿಯೆ ಕಾಯಸುಖವನು ಬಯಸಿ
ಕಡು ಕಷ್ಟಪಡುವೆನ್ನೊಳಿರಿಸು ಕೃಪೆಯಂ ।
ಅಮಿತತೇಜೋಮಯನೆ ಅಜ್ಞಾನತಿಮಿರದಿಂ
ಕುರುಡನಾದೆನಗೆ ನೀಂ ಕಣ್ಣ ನೀಡೈ ।
ಪ್ರೇಮಸ್ವರೂಪನೇ ನೀನೆನ್ನ ಹೃದಯಮರುವೊಳ್‍ ।
ಪ್ರೇಮರಸಮಂ ಪರಿಯಿಸುತ್ತೆ ದೃಢಸತ್ತ್ವವಿತ್ತು ।
ಪ್ರೇರಿಸೆನ್ನನು ಜೀವಕೋಟಿಗಳ ಹಿತದೊಳನಿಶಂ ।
ಸಕಲಜೀವಿಗಳ ಸಂಪ್ರೇರಕನೆ ಪಿತನೆ ಹಿತನೇ ॥ ೧

ಬಿದಿಯೆನ್ನ ಬೆಂಬಿಡಿದು ಬೇಟೆಯಾಡುತಿರೆ ನೀಂ
ಸಿಂಹವಿಕ್ರಮವನೆನ್ನೆದೆಯೊಳಿರಿಸೈ ।
ಭವದುರುಬುಮಳುವುಮೆನ್ನಯ ಕಿವಿಯನಿರಿಯೇ ನೀಂ
ಸವಿಹಾಡುಗಳಿನೆನ್ನ ಮನವ ತಣಿಸೈ ।
ಜಗದುಬ್ಬೆಗದಿ ಜೀವ ಕಾದು ಹೊಗೆಯೊಗೆದಂದು
ಮುಗಿಲಾಗಿ ಬಂದು ನೀಂ ಸುಧೆಯ ನೆರೆಯೈ ।
ಬಾಳು ಬೀಳ್ಬಯಲಾಗಿ ಬರಿದೆಂದು ತೋರ್ದಂದು
ದೊರೆಯ ದಿಬ್ಬಣವ ನೀನತ್ತ ಮೆರಸೈ ॥
ಸೃಷ್ಟಿಮೋಹಿನಿಯೆನ್ನ ಕಣ್ಮುಚ್ಚುವಾಟಕೆಳೆದು ।
ಅಷ್ಟದಿಕ್ಕೋಣಗಳೊಳಲೆಯಿಸುತ ಗಾಸಿಗೊಳಿಸೆ ।
ದೃಷ್ಟಿಯಲಿ ನಿಂತು ನೀಂ ನಿರ್ಭಯದ ಪದವ ತೋರೈ ।
ನಿತ್ಯಪರಿಪೂರ್ಣ ಶಿವ ಸಚ್ಚಿದಾನಂದ ಗುರುವೇ ॥ ೨